< ಪ್ರಕಟಣೆ 21 >
1 ತರುವಾಯ, “ನೂತನ ಆಕಾಶವನ್ನೂ ನೂತನ ಭೂಮಿಯನ್ನೂ” ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಇಲ್ಲದಂತಾದವು. ಇನ್ನು ಸಮುದ್ರವು ಇರಲಿಲ್ಲ.
೧ತರುವಾಯ ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಗತಿಸಿ ಹೋದವು. ಇನ್ನು ಸಮುದ್ರವು ಇಲ್ಲ.
2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ನೂತನ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾದ ವಧುವಿನಂತೆ ಶೃಂಗರಿಸಲಾಗಿತ್ತು.
೨ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.
3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು.
೩ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, “ಇಗೋ ದೇವರ ನಿವಾಸವು ಮನುಷ್ಯರೊಂದಿಗೆ ಇದೆ. ಆತನು ಅವರೊಡನೆ ವಾಸಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು.
4 ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.
೪ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು” ಎಂದು ಹೇಳಿತು.
5 ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಇಗೋ, ನಾನು ಎಲ್ಲವನ್ನೂ ನೂತನಗೊಳಿಸುತ್ತೇನೆ!” ಎಂದರು ಮತ್ತು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ ಸತ್ಯವಾದವೂ ಆಗಿವೆ!” ಎಂದು ಹೇಳಿದನು.
೫ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಇಗೋ, ನಾನು ಎಲ್ಲವನ್ನು ನೂತನಗೊಳಿಸುತ್ತೇನೆ” ಎಂದನು. ಮತ್ತು ಒಬ್ಬನು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ, ಸತ್ಯವಾದವೂ ಆಗಿವೆ” ಎಂದು ಹೇಳಿದನು.
6 ಆಗ ಸಿಂಹಾಸನದ ಮೇಲೆ ಕುಳಿತಿದ್ದವರು, “ಎಲ್ಲಾ ನೆರವೇರಿತು, ನಾನು ಆದಿಯೂ ಅಂತ್ಯವೂ ಆರಂಭವೂ ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಉಚಿತವಾಗಿ ಕೊಡುವೆನು.
೬ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಎಲ್ಲಾ ನೆರವೇರಿತು, ನಾನೇ ಆದಿಯು, ಅಂತ್ಯವೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಕ್ರಯವಿಲ್ಲದೆ ಕುಡಿಯುವುದಕ್ಕೆ ಕೊಡುವೆನು.
7 ಜಯಹೊಂದುವವರು ಇವುಗಳಿಗೆ ಬಾಧ್ಯನಾಗುವರು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಮಕ್ಕಳಾಗಿರುವರು.
೭ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು. ಅವನು ನನಗೆ ಮಗನಾಗಿರುವನು.
8 ಆದರೆ ಹೇಡಿಗಳು, ನಂಬದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ, ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು!” ಎಂದು ನನಗೆ ಹೇಳಿದರು. (Limnē Pyr )
೮ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಪಾಳುಗಾರರಾಗಿರುವವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು” ಎಂದು ನನಗೆ ಹೇಳಿದನು. (Limnē Pyr )
9 ಅಂತಿಮ ಏಳು ಉಪದ್ರವಗಳಿಂದ ತುಂಬಿದ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳುಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ, ಯಜ್ಞದ ಕುರಿಮರಿಯಾದವವರಿಗೆ ಹೆಂಡತಿಯಾಗತಕ್ಕ ವಧುವನ್ನು ನಿನಗೆ ತೋರಿಸುವೆನು!” ಎಂದು ಹೇಳಿ,
೯ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ,
10 ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಪರಿಶುದ್ಧ ಪಟ್ಟಣವಾದ ಯೆರೂಸಲೇಮು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದು ಬರುವುದನ್ನು ನನಗೆ ತೋರಿಸಿದನು.
೧೦ದೇವರಾತ್ಮನಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ, ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ಪರಲೋಕದೊಳಗಿಂದ, ದೇವರ ಬಳಿಯಿಂದ ಇಳಿದುಬರುವುದನ್ನು ನನಗೆ ತೋರಿಸಿದನು.
11 ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು.
೧೧ಅದು ದೇವರ ತೇಜಸ್ಸಿನಿಂದ ಕೂಡಿತ್ತು. ಪಟ್ಟಣವು ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು, ಸ್ವಚ್ಛವಾದ ಸ್ಫಟಿಕದಂತೆ ಶುಭ್ರವಾಗಿತ್ತು.
12 ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ ಪುತ್ರರ ಹನ್ನೆರಡು ಕುಲಗಳ ಹೆಸರುಗಳು ಬರೆದಿದ್ದವು.
೧೨ಆ ಪಟ್ಟಣಕ್ಕೆ ಎತ್ತರವಾದ ದೊಡ್ಡ ಗೋಡೆ ಇತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಅವುಗಳ ಮೇಲೆ ಇಸ್ರಾಯೇಲ್ಯರ ಹನ್ನೆರಡು ಕುಲಗಳ ಹೆಸರುಗಳು ಬರೆಯಲ್ಪಟ್ಟಿದ್ದವು.
13 ಪೂರ್ವದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು.
೧೩ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು.
14 ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಕುರಿಮರಿಯಾದವರ ಹನ್ನೆರಡು ಜನ ಅಪೊಸ್ತಲರ ಹೆಸರುಗಳಿದ್ದವು.
೧೪ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.
15 ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆಗೋಲನ್ನು ಹಿಡಿದಿದ್ದನು.
೧೫ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು.
16 ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು, ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು 2,200 ಕಿಲೋಮೀಟರ್ ಆಗಿತ್ತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿದ್ದವು.
೧೬ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು ಸುಮಾರು 2,200 ಕಿಲೋಮೀಟರುಗಳಷ್ಟಿತ್ತು. ಅದರ ಉದ್ದವು, ಅಗಲವು, ಎತ್ತರವು ಸಮವಾಗಿದ್ದವು.
17 ಅವನು ಅದರ ಗೋಡೆಯನ್ನೂ ಅಳತೆ ಮಾಡಿದನು. ಅದು 65 ಮೀಟರ್ ಆಗಿತ್ತು. ಮನುಷ್ಯನ ಅಳತೆಯಂತೆ ದೇವದೂತನು ಅಳೆದನು.
೧೭ಅವನು ಅದರ ಗೋಡೆಯನ್ನು ಅಳತೆ ಮಾಡಿದನು. ಅದು ನೂರನಲ್ವತ್ತು ನಾಲ್ಕು ಮೊಳವಾಗಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಎಂದರೆ ದೇವದೂತನ ಮೊಳ.
18 ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲಾಗಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
೧೮ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲ್ಪಟ್ಟಿತ್ತು ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
19 ಪಟ್ಟಣದ ಗೋಡೆಯು ಮತ್ತು ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತ, ಎರಡನೆಯದು ವೈಡೂರ್ಯ, ಮೂರನೆಯದು ಪಚ್ಚೆ, ನಾಲ್ಕನೆಯದು ಪದ್ಮರಾಗ,
೧೯ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತಶಿಲೆ ಎರಡನೆಯದು ನೀಲಮಣಿ ಮೂರನೆಯದು ಪಚ್ಚೆ. ನಾಲ್ಕನೆಯದು ಪದ್ಮರಾಗ,
20 ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಬತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲ ಸ್ಪಟಿಕ.
೨೦ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲಸ್ಫಟಿಕ,
21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
೨೧ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಶುದ್ಧವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
22 ಪಟ್ಟಣದಲ್ಲಿ ನಾನು ಆಲಯವನ್ನೇ ಕಾಣಲಿಲ್ಲ. ಏಕೆಂದರೆ ಕರ್ತ ಆಗಿರುವ ಸರ್ವಶಕ್ತ ದೇವರೂ, ಕುರಿಮರಿಯಾಗಿರುವವರೂ ಆಲಯವಾಗಿದ್ದಾರೆ.
೨೨ಪಟ್ಟಣದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ. ಏಕೆಂದರೆ ಸರ್ವಶಕ್ತನಾಗಿರುವ ದೇವರಾದ ಕರ್ತನೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ.
23 ಪಟ್ಟಣವನ್ನು ಬೆಳಗಿಸಲು ಸೂರ್ಯನಾಗಲಿ, ಚಂದ್ರನಾಗಲಿ ಅವಶ್ಯವಿಲ್ಲ. ಏಕೆಂದರೆ ದೇವರ ಮಹಿಮೆಯೇ ಅದಕ್ಕೆ ಬೆಳಕಾಗಿತ್ತು. ಕುರಿಮರಿಯಾದಾತನೇ ಅದರ ದೀಪವು.
೨೩ಪಟ್ಟಣಕ್ಕೆ ಬೆಳಕು ಕೊಡಲು ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ, ಏಕೆಂದರೆ ಅದಕ್ಕೆ ದೇವರ ಮಹಿಮೆಯೇ ಪ್ರಕಾಶವನ್ನು ಕೊಡುತ್ತಿತ್ತು. ಯಜ್ಞದ ಕುರಿಮರಿಯಾದಾತನೇ ಅದರ ದೀಪವು.
24 ಅದರ ಬೆಳಕಿನಲ್ಲಿ ಎಲ್ಲಾ ಜನರು ನಡೆಯುವರು. ಭೂರಾಜರು ತಮ್ಮ ಮಹಿಮೆಯನ್ನು ಅಲ್ಲಿಗೆ ತರುವರು.
೨೪ಅದರ ಬೆಳಕಿನಿಂದ ಜನಾಂಗಗಳವರು ನಡೆದಾಡುವರು. ಭೂರಾಜರು ತಮ್ಮ ವೈಭವವನ್ನು ಅದರೊಳಗೆ ತರುವರು.
25 ಅದರ ಹೆಬ್ಬಾಗಿಲುಗಳು ಒಂದು ದಿನವೂ ಮುಚ್ಚುವುದೇ ಇಲ್ಲ. ಇರುಳಂತೂ ಇರುವುದೇ ಇಲ್ಲ.
೨೫ಅದರ ಹೆಬ್ಬಾಗಿಲುಗಳನ್ನು ಹಗಲಿನಲ್ಲಿ ಮುಚ್ಚುವುದೇ ಇಲ್ಲ. ಅಲ್ಲಿ ರಾತ್ರಿಯಂತೂ ಇಲ್ಲವೇ ಇಲ್ಲ.
26 ಜನಾಂಗಗಳ ಮಹಿಮೆಯೂ ಗೌರವವೂ ಅಲ್ಲಿಗೆ ತರಲಾಗುವವು.
೨೬ಜನಾಂಗಗಳ ವೈಭವವೂ ಗೌರವವೂ ಅಲ್ಲಿಗೆ ತರಲ್ಪಡುವವು.
27 ಅಶುದ್ಧವಾದದ್ದು ಅದರಲ್ಲಿ ಸೇರುವುದಿಲ್ಲ. ಅಸಹ್ಯವಾದದ್ದನ್ನೂ ವಂಚಕವಾದದ್ದನ್ನೂ ನಡೆಸುವವನು ಅದರಲ್ಲಿ ಪ್ರವೇಶಿಸಲಾರನು. ಕುರಿಮರಿಯ ಜೀವ ಪುಸ್ತಕದಲ್ಲಿ ಯಾರ ಯಾರ ಹೆಸರುಗಳು ಬರೆದಿವೆಯೋ ಅವರು ಮಾತ್ರ ಸೇರುವರು.
೨೭ಅದರಲ್ಲಿ ಅಶುದ್ಧವಾದದ್ದೊಂದು ಸೇರುವುದಿಲ್ಲ. ಅವಮಾನವಾದದ್ದಾಗಲಿ ವಂಚನೆಯಾಗಲಿ ಮಾಡುವವನು ಅದರೊಳಗೆ ಪ್ರವೇಶಿಸಲಾರನು. ಆದರೆ ಯಜ್ಞದ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆಯಲ್ಪಟ್ಟಿವೆಯೋ ಅವರು ಮಾತ್ರ ಸೇರುವರು.