< ಅರಣ್ಯಕಾಂಡ 21 >

1 ನೆಗೆವನಲ್ಲಿ ವಾಸಿಸುವ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಇಸ್ರಾಯೇಲರು ಅತಾರೀಮ್ ಮಾರ್ಗವಾಗಿ ಬರುತ್ತಿದ್ದಾರೆಂದು ಕೇಳಿ, ಅವರ ಸಂಗಡ ಯುದ್ಧಮಾಡಿ, ಅವರಲ್ಲಿ ಕೆಲವರನ್ನು ಸೆರೆಹಿಡಿದನು.
ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದಲ್ಲಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಅತಾರೀಮ್ ಮಾರ್ಗವಾಗಿ ಇಸ್ರಾಯೇಲರು ಬರುತ್ತಾರೆಂಬ ವರ್ತಮಾನವನ್ನು ಕೇಳಿದಾಗ, ಅವನು ಅವರ ಮೇಲೆ ಯುದ್ಧಮಾಡಿ ಕೆಲವರನ್ನು ಸೆರೆಹಿಡಿದನು.
2 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಪ್ರಮಾಣಮಾಡಿ, “ನೀನು ಈ ಜನರನ್ನು ನಮ್ಮ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ, ನಾವು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆವು,” ಎಂದರು.
ಇಸ್ರಾಯೇಲರು ಯೆಹೋವನಿಗೆ ಪ್ರಮಾಣಮಾಡಿ, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಸಂಪೂರ್ಣವಾಗಿ ನಾಶಮಾಡುತ್ತೇವೆ” ಎಂದು ಹೇಳಿದರು.
3 ಆಗ ಯೆಹೋವ ದೇವರು ಇಸ್ರಾಯೇಲರ ಧ್ವನಿಯನ್ನು ಕೇಳಿ ಕಾನಾನ್ಯರನ್ನು ಒಪ್ಪಿಸಿಕೊಟ್ಟನು. ಇಸ್ರಾಯೇಲರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
ಯೆಹೋವನು ಇಸ್ರಾಯೇಲರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸುವಂತೆ ಮಾಡಿದನು. ಅವರನ್ನು ಮತ್ತು ಅವರ ಪಟ್ಟಣಗಳನ್ನು ಇಸ್ರಾಯೇಲರು ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಾಯಿತು.
4 ಅವರು ಹೋರ್ ಎಂಬ ಬೆಟ್ಟದಿಂದ ಹೊರಟು, ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಆದರೆ ಜನರು ಈ ಪ್ರಯಾಣದಿಂದ ಆಯಾಸವಾಗಿ ಬಹಳ ಕುಂದಿಹೋದರು.
ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡುವಾಗ, ದಾರಿಯಲ್ಲಿ ಆಯಾಸದಿಂದ ಅವರಿಗೆ ಬೇಸರವಾಯಿತು.
5 ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ, “ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಈಜಿಪ್ಟ್ ದೇಶದಿಂದ ಏಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ. ನಾವು ಈ ನಿಸ್ಸಾರವಾದ ರೊಟ್ಟಿಯನ್ನು ತಿಂದು ನಮಗೆ ಬೇಸರವಾಗಿದೆ,” ಎಂದರು.
ಆಗ ಅವರು ದೇವರಿಗೂ ಮತ್ತು ಮೋಶೆಗೂ ವಿರುದ್ಧವಾಗಿ ಮಾತನಾಡಿ, “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ರುಚಿ ಇಲ್ಲದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.
6 ಆಗ ಯೆಹೋವ ದೇವರು ಜನರೊಳಗೆ ವಿಷಸರ್ಪಗಳನ್ನು ಕಳುಹಿಸಿದರು. ಅವು ಜನರನ್ನು ಕಚ್ಚಿದ್ದರಿಂದ, ಇಸ್ರಾಯೇಲರಲ್ಲಿ ಬಹುಜನರು ಸತ್ತುಹೋದರು.
ಅದಕ್ಕೆ ಯೆಹೋವನು ವಿಷಸರ್ಪಗಳನ್ನು ಇಸ್ರಾಯೇಲ್ ಜನರೊಳಗೆ ಬರಮಾಡಿದನು. ಅವು ಜನರನ್ನು ಕಚ್ಚಿದ್ದರಿಂದ ಬಹಳಜನರು ಸತ್ತುಹೋದರು.
7 ಆದ್ದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ಯೆಹೋವ ದೇವರಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ. ಯೆಹೋವ ದೇವರು ನಮ್ಮ ಮೇಲಿಂದ ಸರ್ಪಗಳನ್ನು ದೂರಮಾಡುವ ಹಾಗೆ ಪ್ರಾರ್ಥನೆ ಮಾಡು,” ಎಂದರು. ಆಗ ಮೋಶೆಯು ಜನರಿಗೋಸ್ಕರ ಪ್ರಾರ್ಥನೆಮಾಡಿದನು.
ಆದುದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಮತ್ತು ಯೆಹೋವನಿಗೂ ವಿರುದ್ಧವಾಗಿ ಮಾತನಾಡಿ ದ್ರೋಹಿಗಳಾದೆವು. ಈ ಸರ್ಪಗಳು ನಮ್ಮ ಬಳಿಯಿಂದ ತೊಲಗಿಹೋಗುವಂತೆ ನೀನು ಯೆಹೋವನಿಗೆ ಪ್ರಾರ್ಥನೆಮಾಡಬೇಕು” ಎಂದು ಬೇಡಿಕೊಂಡರು.
8 ಯೆಹೋವ ದೇವರು ಮೋಶೆಗೆ, “ನೀನು ಕಂಚಿನಿಂದ ಒಂದು ಸರ್ಪವನ್ನು ಮಾಡಿಸಿಕೊಂಡು, ಒಂದು ಕಂಬದ ಮೇಲೆ ಇಡು. ಆಗ ಕಚ್ಚಿಸಿಕೊಂಡವರೆಲ್ಲರೂ ಅದರ ಮೇಲೆ ದೃಷ್ಟಿ ಇಟ್ಟರೆ ಅವರು ಬದುಕುವರು,” ಎಂದರು.
ಮೋಶೆ ಜನರಿಗೋಸ್ಕರ ಪ್ರಾರ್ಥಿಸಲಾಗಿ ಯೆಹೋವನು ಅವನಿಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು. ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು” ಎಂದು ಆಜ್ಞಾಪಿಸಿದನು.
9 ಆಗ ಮೋಶೆಯು ಕಂಚಿನ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟನು. ಸರ್ಪದಿಂದ ಕಚ್ಚಿಸಿಕೊಂಡವರಲ್ಲಿ ಯಾರು ಆ ಕಂಚಿನ ಸರ್ಪದ ಕಡೆಗೆ ದೃಷ್ಟಿ ಇಟ್ಟು ನೋಡಿದರೋ, ಅವರು ಬದುಕಿಕೊಂಡರು.
ಆದಕಾರಣ ಮೋಶೆ ತಾಮ್ರದಿಂದ ಸರ್ಪವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಟ್ಟನು. ಸರ್ಪದಿಂದ ಗಾಯಪಟ್ಟವರಲ್ಲಿ ಯಾರು ಆ ತಾಮ್ರದ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
10 ಇಸ್ರಾಯೇಲರು ಹೊರಟು ಓಬೋತಿನಲ್ಲಿ ಇಳಿದುಕೊಂಡರು.
೧೦ತರುವಾಯ ಇಸ್ರಾಯೇಲರು ಅಲ್ಲಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
11 ಓಬೋತಿನಿಂದ ಹೊರಟು ಮೋವಾಬ್ ದೇಶಕ್ಕೆದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಮರುಭೂಮಿಯಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
೧೧ಓಬೋತಿನಿಂದ ಹೊರಟು ಮೋವಾಬ್ ದೇಶದ ಮೂಡಲ ದಿಕ್ಕಿನ ಅರಣ್ಯದಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
12 ಅಲ್ಲಿಂದ ಅವರು ಹೊರಟು ಜೆರೆದ್ ಎಂಬ ಹಳ್ಳದ ಬಳಿಯಲ್ಲಿ ಇಳಿದುಕೊಂಡರು.
೧೨ಅಲ್ಲಿಂದ ಹೊರಟು ಜೆರೆದ್ ತಗ್ಗಿನಲ್ಲಿ ಇಳಿದುಕೊಂಡರು.
13 ಅಲ್ಲಿಂದ ಹೊರಟು ಅಮೋರಿಯರ ಪ್ರದೇಶದಿಂದ ಹೊರಗೆ ಬರುವ ಮರುಭೂಮಿಯಲ್ಲಿರುವ ಅರ್ನೋನ್ ಹೊಳೆಯ ಈಚೆಯಲ್ಲಿ ಇಳಿದುಕೊಂಡರು. ಏಕೆಂದರೆ ಅರ್ನೋನ್ ಮೋವಾಬರಿಗೂ ಅಮೋರಿಯರಿಗೂ ಮಧ್ಯದ ಮೋವಾಬಿನ ಗಡಿಯಾಗಿದೆ.
೧೩ಅಲ್ಲಿಂದ ಹೊರಟು ಅರ್ನೋನ್ ನದಿಯ ಆಚೆ ಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ನದಿಯು ಅಮೋರಿಯರ ಪ್ರದೇಶದಿಂದಾಚೆ ಇರುವ ಅರಣ್ಯದಲ್ಲಿ ಮೋವಾಬ್ಯರಿಗೂ, ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಗಡಿಯಾಗಿದೆ.
14 ಆದಕಾರಣ ಯೆಹೋವ ದೇವರ ಯುದ್ಧಗಳ ಪುಸ್ತಕದಲ್ಲಿ ಹೀಗೆಂದು ಬರೆದಿದೆ: “ಸೂಫಕ್ಕೆ ಸೇರಿದ ವಾಹೇಬನ್ನು, ಅರ್ನೋನ್
೧೪ಅದಕ್ಕೆ ಅನುಗುಣವಾಗಿ ಯೆಹೋವವಿಜಯ ಎಂಬ ಗ್ರಂಥದಲ್ಲಿ, “ಸೂಫಕ್ಕೆ ಸೇರಿದ ವಾಹೇಬನ್ನೂ, ಮತ್ತು ಅರ್ನೋನ್ ನದಿಗೆ ಕೂಡುವ ಹಳ್ಳಗಳನ್ನೂ,
15 ಹೊಳೆಗೆ ಸೇರುವ ಹಳ್ಳಗಳನ್ನು, ಆರ್ ಪಟ್ಟಣದ ತನಕ ಮೋವಾಬಿನ ಎಲ್ಲೆಯಾಗಿರುವ ಕೊರಕಲನ್ನು.”
೧೫ಆರ್ ಪಟ್ಟಣದ ತನಕ ಮೋವಾಬಿನ ಮೇರೆಯಾಗಿರುವ ಕೊರಕಲನ್ನೂ ದಾಟಿದ್ದಾಯಿತು” ಎಂದು ಬರೆದದೆ.
16 ಅವರು ಅಲ್ಲಿಂದ ಬೇರ್ ಎಂಬಲ್ಲಿಗೆ ಬಂದರು. ಯೆಹೋವ ದೇವರು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು,” ಎಂದು ಯೆಹೋವ ದೇವರು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯನ್ನು ಕುರಿತೇ.
೧೬ಅಲ್ಲಿಂದ ಅವರು ಬೇರ್ ಸ್ಥಳಕ್ಕೆ ಬಂದರು. ಯೆಹೋವನು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯ ವಿಷಯವೇ. ಯೆಹೋವನು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು” ಅಂದನು.
17 ಆಗ ಇಸ್ರಾಯೇಲರು ಈ ಹಾಡನ್ನು ಹಾಡಿದರು: “ಬಾವಿಯೇ, ಉಕ್ಕು, ಜನರೇ, ಅದರ ಬಗ್ಗೆ ನೀವು ಹಾಡಿರಿ.
೧೭ಆಗ ಇಸ್ರಾಯೇಲರು ಈ ಹಾಡನ್ನು ಗಾನಮಾಡಿದರು; “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಉಲ್ಲಾಸದಿಂದ ಗಾನಮಾಡಿರಿ
18 ಪ್ರಭುಗಳು ಈ ಬಾವಿಯನ್ನು ಅಗೆದರು. ಜನರ ಅಧಿಪತಿಗಳು ನ್ಯಾಯಾಧಿಪತಿಯ ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು.” ಆಮೇಲೆ ಅವರು ಮರುಭೂಮಿಯಿಂದ ಮತ್ತಾನಕ್ಕೆ ಬಂದರು.
೧೮ಇದು ಪ್ರಧಾನರು ಕೋಲುಗಳಿಂದ ತೋಡಿದ ಬಾವಿ, ಇದು ಜನಾಧಿಪತಿಗಳು ಕೋಲುಗಳಿಂದ ಅಗೆದ ಬಾವಿ” ಎಂಬುವುದೇ. ಅವರು ಅರಣ್ಯವನ್ನು ಬಿಟ್ಟು ಮತ್ತಾನಕ್ಕೂ,
19 ಇದಲ್ಲದೆ ಅವರು ಮತ್ತಾನದಿಂದ ನಹಲಿಯೇಲಕ್ಕೆ ಬಂದರು. ನಹಲಿಯೇಲದಿಂದ ಬಾಮೋತಿಗೆ ಬಂದರು.
೧೯ಮತ್ತಾನದಿಂದ ನಹಲೀಯೇಲಿಗೂ, ನಹಲೀಯೇಲಿನಿಂದ ಬಾಮೋತಿಗೂ ಬಂದರು.
20 ಬಾಮೋತಿನಿಂದ ಮೋವಾಬ್ ದೇಶದಲ್ಲಿರುವ ಕಣಿವೆಯಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಮರಳುಗಾಡು ಕಾಣಿಸುತ್ತದೆ.
೨೦ಬಾಮೋತಿನಿಂದ ಮೋವಾಬ್ಯರ ಬಯಲಿನಲ್ಲಿರುವ ತಗ್ಗಿನಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಅಲ್ಲಿಂದ ಯೆಷೀಮೋನ್ ಮರಳುಗಾಡು ಕಾಣಿಸುತ್ತದೆ.
21 ಆಗ ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,
೨೧ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,
22 “ನಾವು ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಯಾವುದೇ ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ, ಬಾವಿಯ ನೀರನ್ನು ಕುಡಿಯದೆ, ನಿನ್ನ ದೇಶವನ್ನು ದಾಟುವವರೆಗೆ ರಾಜಮಾರ್ಗದಲ್ಲಿಯೇ ಹೋಗುತ್ತೇವೆ,” ಎಂದು ಬೇಡಿಕೊಂಡರು.
೨೨“ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ನಿನ್ನ ದೇಶವನ್ನು ದಾಟುವವರೆಗೂ ರಾಜಮಾರ್ಗದಲ್ಲಿಯೇ ನಡೆದು ಹೋಗುವೆವು” ಎಂದು ಹೇಳಿದರು.
23 ಆದರೆ ಸೀಹೋನನು ಇಸ್ರಾಯೇಲರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ, ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು, ಇಸ್ರಾಯೇಲರನ್ನು ಎದುರಿಸಲು ಮರುಭೂಮಿಗೆ ಹೊರಟನು. ಅವನು ಯಹಚಕ್ಕೆ ಬಂದು ಇಸ್ರಾಯೇಲರ ಸಂಗಡ ಯುದ್ಧಮಾಡಿದನು.
೨೩ಆದರೆ ತನ್ನ ಸೀಮೆಯನ್ನು ದಾಟಿಹೋಗುವುದಕ್ಕೆ ಸೀಹೋನನು ಇಸ್ರಾಯೇಲರಿಗೆ ಅಪ್ಪಣೆಕೊಡದೆ ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು ಅವರನ್ನು ಎದುರಿಸುವುದಕ್ಕೆ ಮರುಭೂಮಿಗೆ ಹೊರಟರು. ಅವನು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು.
24 ಆದರೆ ಇಸ್ರಾಯೇಲರು ಅವನನ್ನು ಖಡ್ಗದಿಂದ ಹೊಡೆದು, ಅವನ ದೇಶವನ್ನು ಅರ್ನೋನ್ ನದಿಯಿಂದ ಯಬ್ಬೋಕ್ ನದಿಯವರೆಗೆ ಅಮ್ಮೋನನ ಮಕ್ಕಳ ಮೇರೆಯವರೆಗೂ ಸ್ವಾಧೀನಪಡಿಸಿಕೊಂಡರು. ಏಕೆಂದರೆ ಅಮ್ಮೋನನ ಮಕ್ಕಳ ಮೇರೆಯು ಬಲಿಷ್ಠವಾಗಿತ್ತು.
೨೪ಇಸ್ರಾಯೇಲರು ಅವನ ಜನರನ್ನು ಸೋಲಿಸಿ, ಕತ್ತಿಯಿಂದ ಸಂಹರಿಸಿ ಅರ್ನೋನ್ ನದಿ ಮೊದಲುಗೊಂಡು ಯಬ್ಬೋಕ್ ನದಿಯವರೆಗೂ, ಅಮ್ಮೋನಿಯರ ಗಡಿಯವರೆಗೂ ಸೀಹೋನನ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು. ಏಕೆಂದರೆ ಅಮ್ಮೋನಿಯರ ಮಕ್ಕಳ ಗಡಿಯು ಬಲವುಳ್ಳದ್ದಾಗಿತ್ತು.
25 ಇಸ್ರಾಯೇಲರು ಆ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಇಸ್ರಾಯೇಲರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.
೨೫ಇಸ್ರಾಯೇಲರು ಈ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಅವರು ಹೆಷ್ಬೋನಿನಲ್ಲಿಯೂ, ಅದಕ್ಕೆ ಸೇರಿದ ಗ್ರಾಮಗಳಲ್ಲಿಯೂ, ಅಮೋರಿಯರ ಬೇರೆ ಎಲ್ಲಾ ಊರುಗಳಲ್ಲಿಯೂ ವಾಸಿಸಿದರು.
26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು. ಅವನು ಮೋವಾಬ್ ದೇಶದ ಹಿಂದಿನ ಅರಸನ ಸಂಗಡ ಯುದ್ಧಮಾಡಿ, ಅವನ ಸಮಸ್ತ ದೇಶವನ್ನು ಅರ್ನೋನ್ ನದಿಯವರೆಗೂ ಅವನಿಂದ ವಶಪಡಿಸಿಕೊಂಡಿದ್ದನು.
೨೬ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಪೂರ್ವದ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ನದಿಯ ವರೆಗೂ ಅವನ ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದನು.
27 ಇದರ ಬಗ್ಗೆ ಕವಿಗಳು ಹೀಗೆಂದು ಹಾಡಿದ್ದಾರೆ: “ಹೆಷ್ಬೋನಿಗೆ ಬನ್ನಿರಿ ಅದನ್ನು ತಿರುಗಿ ಕಟ್ಟಬೇಕು. ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆ ಮಾಡಬೇಕು.
೨೭ಕವಿಗಳು ಹೇಳಿದ ಪದ್ಯವು ಇದರ ವಿಷಯವಾಗಿಯೇ; “ಹೆಷ್ಬೋನಿಗೆ ಬನ್ನಿರಿ. ಅದನ್ನು ಹೊಸದಾಗಿ ಕಟ್ಟಬೇಕು, ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆಮಾಡಬೇಕು.
28 “ಏಕೆಂದರೆ ಬೆಂಕಿ ಹೆಷ್ಬೋನಿನಿಂದಲೂ, ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು, ಮೋವಾಬಿನ ಆರ್ ಎಂಬ ಪಟ್ಟಣವನ್ನೂ, ಅರ್ನೋನ್ ಹೊಳೆಯ ಬಳಿಯಲ್ಲಿರುವ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
೨೮ಸೀಹೋನನ ಪಟ್ಟಣವಾದ ಹೆಷ್ಬೋನಿನಿಂದ ಅಗ್ನಿ ಜ್ವಾಲೆಹೊರಟು, ಮೋವಾಬ್ಯರ ರಾಜಧಾನಿಯಾದ ಆರ್ ಎಂಬ ಪಟ್ಟಣವನ್ನೂ ಅರ್ನೋನ್ ಬೆಟ್ಟದ ಮೇಲಿರುವ ಪ್ರಭುಗಳನ್ನು ದಹಿಸಿಬಿಟ್ಟಿತು.
29 ಮೋವಾಬೇ, ನಿನಗೆ ದಿಕ್ಕಾರ! ಕೆಮೋಷಿನ ಜನವೇ ನಿಮಗೆ ದುರ್ಗತಿ ಉಂಟಾಯಿತಲ್ಲಾ! ಅವನು ತನ್ನ ಪುತ್ರರನ್ನು ದೇಶಭ್ರಷ್ಟರನ್ನಾಗಿಯೂ ತನ್ನ ಪುತ್ರಿಯರನ್ನು ಸೆರೆಯವರನ್ನಾಗಿಯೂ ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಒಪ್ಪಿಸಿಕೊಟ್ಟನು.
೨೯ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ! ಕೆಮೋಷಿನ ಭಕ್ತರೇ, ನಿಮಗೆ ದುರ್ಗತಿಯುಂಟಾಯಿತು. ಆತನು ತನ್ನ ಗಂಡುಮಕ್ಕಳನ್ನು ದೇಶಭ್ರಷ್ಟರನ್ನಾಗಿ ಮಾಡಿದನು. ನಿನ್ನ ಹೆಣ್ಣುಮಕ್ಕಳನ್ನು ಸೆರೆಯವರನ್ನಾಗಿಯೂ ಮಾಡಿದ್ದಾನಲ್ಲಾ. ಅಮೋರಿಯರ ಅರಸನಾದ ಸೀಹೋನನಿಗೆ ಸೆರೆಯವರಾದರು.
30 “ನಾವು ಅವರನ್ನು ಪದಚ್ಚುತಿಗೊಳಿಸಿದೆವು. ಹೆಷ್ಬೋನು ದೀಬೋನಿನವರೆಗೂ ನಾಶವಾಯಿತು. ನಾವು ಅವರನ್ನು ಮೇದೆಬಾಕ್ಕೆ ಮುಟ್ಟುವ ನೋಫಹದ ತನಕ ಹಾಳುಮಾಡಿದೆವು.”
೩೦ನಾವು ಅವರನ್ನು ಬಾಣದಿಂದ ಹೊಡೆದೆವು; ಹೆಷ್ಬೋನಿನಿಂದ ದೀಬೋನಿವರೆಗೂ ಎಲ್ಲಾ ನಾಶವಾಯಿತು. ಮೇದೆಬಾ ಊರಿನ ನೆರೆಯಲ್ಲಿರುವ ನೋಫಹದ ತನಕ ಹಾಳುಮಾಡಿ ಬಿಟ್ಟೆವು.”
31 ಹೀಗೆ ಇಸ್ರಾಯೇಲರು ಅಮೋರಿಯರ ದೇಶದಲ್ಲಿ ವಾಸಮಾಡಿದರು.
೩೧ಹೀಗೆ ಇಸ್ರಾಯೇಲರು ಅಮ್ಮೋರಿಯರ ದೇಶದಲ್ಲಿ ವಾಸಮಾಡುವಂತಾಯಿತು.
32 ಇದಲ್ಲದೆ ಮೋಶೆಯು ಯಜ್ಜೇರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದನು. ಅವರು ಅವರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿರುವ ಅಮೋರಿಯರನ್ನು ಹೊರಡಿಸಿಬಿಟ್ಟರು.
೩೨ಅದಲ್ಲದೆ ಮೋಶೆ ಗೂಢಚಾರರ ಮೂಲಕ ಯಗ್ಜೇರನ್ನು ಪರೀಕ್ಷಿಸಿದ ಮೇಲೆ ಇಸ್ರಾಯೇಲರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.
33 ಅವರು ತಿರುಗಿ ಬಾಷಾನಿನ ಹಾದಿ ಏರಿದರು. ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವುದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
೩೩ಇಸ್ರಾಯೇಲರು ಹಿಂದಿರುಗಿ ಬಾಷಾನಿನ ಮಾರ್ಗವಾಗಿ ಹತ್ತಿಹೋಗಲಾಗಿ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರೊಡನೆ ಅವರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈವೂರಿಗೆ ಹೊರಟುಬಂದನು.
34 ಆಗ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಅವನಿಗೆ ಭಯಪಡಬೇಡ, ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು.
೩೪ಯೆಹೋವನು ಮೋಶೆಗೆ, “ಅವನಿಗೆ ಭಯಪಡಬೇಡ, ನಾನು ಅವನನ್ನು ಮತ್ತು ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ನಿನ್ನ ಕೈಗೆ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರವೇ ಇವರಿಗೂ ಮಾಡಬೇಕು” ಎಂದು ಹೇಳಿದನು.
35 ಈ ಪ್ರಕಾರ ಅವರು ಅವನನ್ನೂ ಅವನ ಮಕ್ಕಳನ್ನೂ ಅವನ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು, ಅವನ ದೇಶವನ್ನು ವಶಮಾಡಿಕೊಂಡರು.
೩೫ಆದಕಾರಣ ಇಸ್ರಾಯೇಲರು, ಅವರಲ್ಲಿ ಒಬ್ಬನೂ ಉಳಿಯದಂತೆ ಅವನನ್ನೂ, ಅವನ ಮಕ್ಕಳನ್ನೂ, ಅವನ ಜನರನ್ನೆಲ್ಲಾ ನಾಶಮಾಡಿ ಅವನ ದೇಶವನ್ನು ಸ್ವಾಧೀನಪಡಿಸಿಕೊಂಡರು.

< ಅರಣ್ಯಕಾಂಡ 21 >