< ನ್ಯಾಯಸ್ಥಾಪಕರು 2 >

1 ಯೆಹೋವ ದೇವರ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮ ತಂದೆಗಳಿಗೆ ಆಣೆ ಇಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.
ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಾಯೇಲ್ಯರಿಗೆ, “ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ, ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರೆತಂದೆನು. ‘ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲವೆಂದು ನಾನು ಮಾತು ಕೊಟ್ಟಾಗ,
2 ‘ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡದೆ, ಅವರ ಬಲಿಪೀಠಗಳನ್ನು ಕೆಡಿವಿಬಿಡಿರಿ,’ ಎಂದು ಹೇಳಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಏಕೆ ಮಾಡಿದಿರಿ?
ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು’ ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?
3 ಆದ್ದರಿಂದ, ‘ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವುದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು. ಅವರ ದೇವರುಗಳು ನಿಮಗೆ ಉರುಲಾಗುವುವು,’ ಎಂದು ನಾನು ಹೇಳಿದ್ದೆನು.”
‘ನೀವು ಹೀಗೆ ಮಾಡುವುದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸುವುದಿಲ್ಲ; ಅವರು ನಿಮ್ಮ ಪಕ್ಕೆಗಳಿಗೆ ಮುಳ್ಳುಗಳಾಗಿರುವರು; ಅವರ ದೇವತೆಗಳು ನಿಮಗೆ ಉರುಲಾಗುವವು’ ಎಂದು ನಾನು ಮೊದಲೇ ಹೇಳಿದ್ದೆನಲ್ಲಾ” ಅಂದನು.
4 ಯೆಹೋವ ದೇವರ ದೂತನು ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ಹೇಳುವಾಗ, ಜನರು ಗಟ್ಟಿಯಾಗಿ ಅತ್ತರು.
ಯೆಹೋವನ ದೂತನು ಈ ಮಾತುಗಳನ್ನು ಹೇಳಿದಾಗ ಇಸ್ರಾಯೇಲರೆಲ್ಲರೂ ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು.
5 ಆ ಸ್ಥಳಕ್ಕೆ ಬೋಕೀಮ್ ಎಂಬ ಹೆಸರಿಟ್ಟು, ಅಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಿದರು.
ಮತ್ತು ಆ ಸ್ಥಳಕ್ಕೆ ಬೋಕೀಮೆಂಬ ಹೆಸರಿಟ್ಟು, ಅಲ್ಲಿಯೇ ಯೆಹೋವನಿಗೋಸ್ಕರ ಯಜ್ಞಮಾಡಿದರು.
6 ಯೆಹೋಶುವನು ಜನರನ್ನು ಕಳುಹಿಸಿಬಿಟ್ಟಾಗ, ಇಸ್ರಾಯೇಲರು ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ತಮ್ಮ ತಮ್ಮ ಬಾಧ್ಯತೆಗಳಿಗೆ ಹೋದರು.
ಯೆಹೋಶುವನು ಇಸ್ರಾಯೇಲ್ಯರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವಾಧೀನಮಾಡಿಕೊಂಡರು.
7 ಆದರೆ ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವ ದೇವರು ಇಸ್ರಾಯೇಲರಿಗೋಸ್ಕರ ಮಾಡಿದ ಎಲ್ಲ ಮಹತ್ಕಾರ್ಯಗಳನ್ನು ಅರಿತಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವ ದೇವರನ್ನು ಸೇವಿಸಿದರು.
ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಬದುಕಿದ್ದ, ಯೆಹೋವನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವನನ್ನು ಸೇವಿಸುತ್ತಿದ್ದರು.
8 ಆದರೆ ನೂನನ ಮಗನೆಂಬ ಯೆಹೋವ ದೇವರ ಸೇವಕನಾದ ಯೆಹೋಶುವನು ನೂರಹತ್ತು ವರ್ಷ ಪ್ರಾಯದವನಾಗಿ ಮರಣಹೊಂದಿದನು.
ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರ ಹತ್ತು ವರ್ಷದವನಾಗಿ ಮರಣಹೊಂದಿದನು.
9 ಅವನನ್ನು ಎಫ್ರಾಯೀಮನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ ಹೆರೆಸ್‌ನಲ್ಲಿ ಹೂಳಿಟ್ಟರು.
ಅವನನ್ನು ಅವನ ಸ್ವಾಧೀನದ ಭೂಮಿಯಾದ ತಿಮ್ನತ್ ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು. ಅದು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುತ್ತದೆ.
10 ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ, ಯೆಹೋವ ದೇವರನ್ನೂ ಅವರು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.
೧೦ಅವನ ಕಾಲದವರೆಲ್ಲರೂ ಪೂರ್ವಿಕರ ಬಳಿಗೆ ಸೇರಿದರು. ಆನಂತರ ಯೆಹೋವನನ್ನೂ, ಆತನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.
11 ಇಸ್ರಾಯೇಲರು ಯೆಹೋವ ದೇವರ ಮುಂದೆ ಕೆಟ್ಟತನ ಮಾಡಿ, ಬಾಳನನ್ನು ಸೇವಿಸಿ,
೧೧ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.
12 ತಮ್ಮ ತಂದೆಗಳನ್ನು ಈಜಿಪ್ಟಿನಿಂದ ಹೊರಡಿಸಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು, ತಮ್ಮ ಸುತ್ತಲಿರುವ ಜನಾಂಗಗಳ ದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದರು.
೧೨ತಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರುವಂತೆ ಮಾಡಿದರು.
13 ಅವರು ಯೆಹೋವ ದೇವರನ್ನು ಬಿಟ್ಟು, ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು.
೧೩ಅವರು ಯೆಹೋವನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದರು.
14 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿಗೆ ವಿರೋಧವಾಗಿ ಉರಿಗೊಂಡು, ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟರು. ಅವರು ಇನ್ನು ಮೇಲೆ ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ, ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟರು.
೧೪ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.
15 ಯೆಹೋವ ದೇವರು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಯಿಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವುದಕ್ಕೆ ಯೆಹೋವ ದೇವರ ಕೈ ಅವರಿಗೆ ವಿರೋಧವಾಗಿತ್ತು.
೧೫ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಇಸ್ರಾಯೇಲರು ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರು ಬಹು ಕಷ್ಟಗಳಿಗೆ ಗುರಿಯಾದರು.
16 ಆದರೂ ಯೆಹೋವ ದೇವರು ಅವರನ್ನು ಕೊಳ್ಳೆಹೊಡೆಯುವವರ ಕೈಯಿಂದ ಬಿಡಿಸುವದಕ್ಕೋಸ್ಕರ ನ್ಯಾಯಾಧಿಪತಿಗಳನ್ನು ಎಬ್ಬಿಸಿದರು.
೧೬ಆಗ ಯೆಹೋವನು ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸುವುದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದನು.
17 ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ, ಅನ್ಯದೇವರುಗಳ ಹಿಂದೆ ಹೋಗಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಪಿತೃಗಳು ಯೆಹೋವ ದೇವರ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದುಬಿಟ್ಟರು. ಅವರು ಮಾಡಿದ ಪ್ರಕಾರ ಮಾಡಲಿಲ್ಲ.
೧೭ಇಸ್ರಾಯೇಲರು ಅವರ ಮಾತನ್ನೂ ಕೇಳದೆ ಅನ್ಯದೇವರುಗಳನ್ನು ಪೂಜಿಸಿ, ಅವುಗಳಿಗೆ ಅಡ್ಡಬಿದ್ದು ದೈವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪೂರ್ವಿಕರ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು. ಅವರಂತೆ ನಡೆಯಲೇ ಇಲ್ಲ.
18 ಯೆಹೋವ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿದಾಗ, ಯೆಹೋವ ದೇವರು ನ್ಯಾಯಾಧಿಪತಿಯ ಸಂಗಡ ಇದ್ದು, ಆ ನ್ಯಾಯಾಧಿಪತಿಯ ದಿವಸಗಳಲ್ಲೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ತಪ್ಪಿಸಿ ರಕ್ಷಿಸುತ್ತಿದ್ದರು. ಏಕೆಂದರೆ ಅವರು ತಮ್ಮನ್ನು ಬಾಧಿಸಿ, ಶ್ರಮೆಪಡಿಸುವವರ ನಿಮಿತ್ತ ಗೋಳಾಡಿದ್ದರಿಂದ ಯೆಹೋವ ದೇವರು ಕನಿಕರಪಟ್ಟರು.
೧೮ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ, ಕನಿಕರಪಟ್ಟು, ನ್ಯಾಯಸ್ಥಾಪಕರನ್ನು ಎಬ್ಬಿಸಿ ಜೀವಮಾನವೆಲ್ಲಾ ಅವರ ಸಂಗಡ ಇದ್ದನು. ಅವರ ಮೂಲಕವಾಗಿ ಇಸ್ರಾಯೇಲರನ್ನು ಶತ್ರುಗಳಿಂದ ಬಿಡಿಸಿದನು.
19 ಆ ನ್ಯಾಯಾಧಿಪತಿಯ ಮರಣದ ನಂತರ, ಅವರು ತಿರುಗಿ ಮಾರ್ಗತಪ್ಪಿ, ಅನ್ಯದೇವರುಗಳನ್ನು ಹಿಂಬಾಲಿಸಿ ಹೋಗಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದು, ತಮ್ಮ ಹಿರಿಯರಿಗಿಂತ ಅಧಿಕ ಭ್ರಷ್ಟರಾದರು. ಅವರು ತಮ್ಮ ದುರ್ಮಾರ್ಗಗಳನ್ನೂ ಹಟಮಾರಿತನವನ್ನೂ ಬಿಡಲೇ ಇಲ್ಲ.
೧೯ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲರು ಪುನಃ ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಸೇವಿಸಿ, ಅವುಗಳಿಗೆ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನು, ಮೊಂಡತನಗಳನ್ನು ಬಿಡಲೇ ಇಲ್ಲ.
20 ಆದ್ದರಿಂದ ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪದಿಂದ ಉರಿಗೊಂಡು, “ಈ ಜನಾಂಗವು ನಾನು ಅವರ ಪಿತೃಗಳಿಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ಮೀರಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,
೨೦ಆದ್ದರಿಂದ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಹೆಚ್ಚಾಯಿತು. ಆತನು, “ಈ ಜನರ ಪೂರ್ವಿಕರಿಗೆ ನಾನು ಕೊಟ್ಟ ಒಡಂಬಡಿಕೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ.
21 ನಾನು ಸಹ ಇನ್ನು ಮೇಲೆ ಯೆಹೋಶುವನು ಮರಣಹೊಂದುವಾಗ ಉಳಿಸಿದ ಜನಾಂಗಗಳಲ್ಲಿ ಒಬ್ಬರನ್ನಾದರೂ ಇವರ ಮುಂದೆ ಹೊರಡಿಸಿಬಿಡುವುದಿಲ್ಲ,” ಎಂದರು.
೨೧ಹೀಗಿರುವುದರಿಂದ ಯೆಹೋಶುವನು ಸಾಯುವ ಮೊದಲು ಹೊರಡಿಸದೆ ಬಿಟ್ಟಿದ ಜನಾಂಗಗಳಲ್ಲಿ ನಾನು ಒಂದನ್ನು ಹೊರಡಿಸಿಬಿಡುವುದಿಲ್ಲ.
22 ಇಸ್ರಾಯೇಲರು ತಮ್ಮ ತಂದೆಗಳು ಕೈಗೊಂಡು ನಡೆದ ಯೆಹೋವ ದೇವರ ಮಾರ್ಗದಲ್ಲಿ ತಾವು ಕೈಗೊಂಡು ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ,
೨೨ಇವರೂ ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಯೆಹೋವನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮೂಲಕವಾಗಿ ಪರೀಕ್ಷಿಸುವೆನು” ಅಂದನು.
23 ಯೆಹೋವ ದೇವರು ಆ ಜನಾಂಗಗಳನ್ನು ಯೆಹೋಶುವನ ಕೈಯಲ್ಲಿ ಒಪ್ಪಿಸಿಕೊಡದೆ, ಅವುಗಳನ್ನು ಶೀಘ್ರವಾಗಿ ಓಡಿಸಿಬಿಡದೆ ಉಳಿಸಿದರು.
೨೩ಇದರಿಂದ ಯೆಹೋವನು ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಓಡಿಸಲಿಲ್ಲ.

< ನ್ಯಾಯಸ್ಥಾಪಕರು 2 >