< ಯೋಬನು 8 >
1 ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು:
೧“ಆಗ ಶೂಹ್ಯನಾದ ಬಿಲ್ದದನು ಹೀಗೆಂದನು,
2 “ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ? ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ.
೨“ಬಿರುಗಾಳಿಯಂತಿರುವ ಮಾತುಗಳನ್ನಾಡಿ ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವಿ?
3 ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ? ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?
೩ದೇವರು ಅನ್ಯಾಯವಾದ ತೀರ್ಪನ್ನು ಕೊಡುವನೋ? ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವನೋ?
4 ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ, ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು.
೪ಒಂದು ವೇಳೆ ನಿನ್ನ ಮಕ್ಕಳು ಆತನಿಗೆ ವಿರುದ್ಧವಾಗಿ ಪಾಪ ಮಾಡಿದ್ದರಿಂದ, ಆತನು ಅವರನ್ನು ಅವರ ದುಷ್ಕೃತ್ಯದ ಕೈಗೆ ಒಪ್ಪಿಸಿದನೋ ಏನೋ?
5 ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ, ಸರ್ವಶಕ್ತರಿಗೆ ಬಿನ್ನಹ ಮಾಡು.
೫ನೀನು ಶುದ್ಧನೂ, ಯಥಾರ್ಥನೂ ಆಗಿ ಕುತೂಹಲದಿಂದ ಆತನ ಪ್ರಸನ್ನತೆಯನ್ನು ಬಯಸಿ, ಸರ್ವಶಕ್ತನಾದ ದೇವರಿಗೆ ನಿನ್ನ ವಿಜ್ಞಾಪನೆಯನ್ನು ಮಾಡಿಕೊಂಡರೆ,
6 ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.
೬ಆತನು ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವನು.
7 ನಿನ್ನ ಆರಂಭವು ಅಲ್ಪವಾಗಿದ್ದರೂ, ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.
೭ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ, ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವುದು.
8 “ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು.
೮ದಯಮಾಡಿ, ಪೂರ್ವಿಕರನ್ನು ವಿಚಾರಿಸಿ, ಅವರ ಪೂರ್ವಿಕರು ಕಂಡುಕೊಂಡದ್ದಕ್ಕೂ ಮನಸ್ಸಿಡು.
9 ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ; ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ.
೯ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು. ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ.
10 ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ? ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ?
೧೦ಅವರು ನಿನಗೆ ಬೋಧಿಸಿ ಬುದ್ಧಿಹೇಳಿ, ಮನಃಪೂರ್ವಕವಾಗಿ ಮಾತನಾಡುವುದಿಲ್ಲವೋ?
11 ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ? ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ?
೧೧ಜವುಗು ಇಲ್ಲದೆ ಜಂಬುಹುಲ್ಲು ಬೆಳೆಯುವುದೇ? ನೀರಿಲ್ಲದೆ ಆಪುಹುಲ್ಲು ಮೊಳೆಯುವುದೇ?
12 ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ, ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು.
೧೨ಇನ್ನೂ ಎಳೆಯದಾಗಿರುವಾಗಲೇ ಮಿಕ್ಕ ಎಲ್ಲಾ ಸಸಿಗಳಿಗಿಂತಲೂ ಮುಂಚಿತವಾಗಿ, ಯಾರೂ ಕೊಯ್ಯದೆ ಇದು ಒಣಗಿ ಹೋಗುವುದು.
13 ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ; ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು.
೧೩ದೇವರನ್ನು ಮರೆತು ಬಿಟ್ಟವರೆಲ್ಲರ ಗತಿಯು ಹೀಗೆಯೇ ಇರುವುದು; ಭ್ರಷ್ಟನ ನಿರೀಕ್ಷೆಯು ನಿರರ್ಥಕವಾಗುವುದು.
14 ಅಂಥವರ ಭರವಸೆಯು ಭಂಗವಾಗುವುದು; ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು.
೧೪ಅವನ ಭರವಸವು ಭಂಗವಾಗುವುದು, ಅವನ ಆಶ್ರಯವು ಜೇಡದ ಮನೆಯಂತಿರುವುದು.
15 ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು; ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.
೧೫ಅವನು ಆ ಮನೆಯನ್ನು ಆತುಕೊಂಡರೆ ಅದು ನಿಲ್ಲುವುದಿಲ್ಲ; ಅದನ್ನು ಹಿಡುಕೊಂಡರೆ ಅದು ಸ್ಥಿರವಾಗಿರದು.
16 ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ; ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ.
೧೬ಅವನು ಬಳ್ಳಿಯಂತೆ ಬಿಸಿಲಿನಲ್ಲಿಯೂ ಹಸಿಯಾಗಿದ್ದು, ತೋಟದಲ್ಲೆಲ್ಲಾ ಕವಲೊಡೆದು ಹರಡಿ
17 ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ, ಕಲ್ಲುಗಳ ನಡುವೆ ನುಗ್ಗುತ್ತವೆ.
೧೭(ಕಲ್ಲು) ಕುಪ್ಪೆಯ ಮೇಲೆ ತನ್ನ ಬೇರುಗಳನ್ನು ಹೆಣೆದುಕೊಂಡು, ಕಲ್ಲುಬಿರುಕಿನಲ್ಲಿಯೂ ನುಗ್ಗಬಲ್ಲನು.
18 ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ, ‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು.
೧೮ಅವನನ್ನು ಅಲ್ಲಿಂದ ಕಿತ್ತು ಹಾಕಿದರೆ ಆ ಸ್ಥಳವು, ‘ನಿನ್ನನ್ನು ಕಾಣೆ’ ಎಂದು ಕೂಗುವುದು.
19 ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು; ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು.
೧೯ಆ ಮಣ್ಣಿನಿಂದ ಬೇರೆ ಸಸಿಗಳು ಮೊಳೆಯುವವು. ಆಹಾ, ಇದೇ ಅವನ ಗತಿಯ ಸುಖ!
20 “ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ; ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ.
೨೦ಇಗೋ ದೇವರು ನಿರ್ದೋಷಿಯನ್ನು ತಳ್ಳಿಬಿಡುವುದಿಲ್ಲ, ಕೆಡುಕರನ್ನು ಕೈಹಿಡಿಯುವುದಿಲ್ಲ.
21 ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು; ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು.
೨೧ಆತನು ಇನ್ನು ಮೇಲೆ ನಿನ್ನ ಬಾಯನ್ನು ನಗುವಿನಿಂದಲೂ, ತುಟಿಗಳನ್ನು ಉತ್ಸಾಹ ಧ್ವನಿಯಿಂದಲೂ ತುಂಬಿಸುವನು.
22 ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”
೨೨ನಿನ್ನ ಶತ್ರುಗಳನ್ನು ಅವಮಾನವು ಮುಸುಕುವುದು; ದುಷ್ಟರ ನಿವಾಸವು ನಿರ್ಮೂಲವಾಗುವುದು.”