< ಯೋಬನು 22 >

1 ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು:
ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,
2 “ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?
“ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.
3 ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ? ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು?
ನೀನು ನೀತಿವಂತನಾಗಿರುವುದು ಸರ್ವಶಕ್ತನಾದ ದೇವರಿಗೆ ಸುಖವೋ? ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?
4 “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?
ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?
5 ನಿನ್ನ ದುಷ್ಟತನವು ಬಹಳವಲ್ಲವೋ? ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ.
ನಿನ್ನ ಕೆಟ್ಟತನವು ಬಹಳವಲ್ಲವೇ? ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?
6 ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ; ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ.
ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ, ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.
7 ನೀನು ದಣಿದವರಿಗೆ ನೀರು ಕೊಡಲಿಲ್ಲ; ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ.
ಬಳಲಿದವನಿಗೆ ನೀರು ಕೊಡದೆ, ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.
8 ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ, ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ,
ಬಲಿಷ್ಠನಾದರೆ ದೇಶವೇ ಅವನದು, ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.
9 ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ; ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ.
ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು, ಅನಾಥರ ಕೈಗಳನ್ನು ಮುರಿದಿದ್ದಿ.
10 ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ; ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ.
೧೦ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ, ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.
11 ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು; ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು.
೧೧ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.
12 “ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ? ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ!
೧೨ದೇವರು ಉನ್ನತ ಆಕಾಶದಲ್ಲಿಲ್ಲವೋ? ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!
13 ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ?
೧೩ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?
14 ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದ ದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ. ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ ಎಂದು ಹೇಳಿಕೊಂಡಿರುವೆ ಅಲ್ಲವೇ?
೧೪ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು; ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.
15 ದುಷ್ಟರು ಮೊದಲಿನಿಂದಲೂ ನಡೆದ ದಾರಿಯಲ್ಲಿ ನೀನು ನಡೆಯುವಿಯಾ?
೧೫ಕೆಟ್ಟವರು ಮೊದಲಿನಿಂದಲೂ, ನಡೆದ ದಾರಿಯನ್ನು ನೀನು ಹಿಡಿಯುವಿಯಾ?
16 ಅಕಾಲ ಮರಣವು ಅವರನ್ನು ಅಪಹರಿಸಿತು; ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು.
೧೬ಅಕಾಲ ಮರಣವು ಅವರನ್ನು ಅಪಹರಿಸಿತು, ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.
17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು! ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು.
೧೭ಅವರು ಆತನನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ಸರ್ವಶಕ್ತನಾದ ದೇವರು ನಮಗೇನು ಮಾಡಾನು’ ಎಂದು ಹೇಳಿಕೊಳ್ಳುತ್ತಿದ್ದರು.
18 ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
೧೮ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು. ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!
19 ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು. ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು:
೧೯ನೀತಿವಂತರು ಇದನ್ನು ನೋಡಿ ಹಿಗ್ಗುವರು, ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.
20 ‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು. ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’
೨೦‘ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು’ ಎಂದು, ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.
21 “ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು; ಇದರಿಂದ ನಿನಗೆ ಸಮೃದ್ಧಿ ಬರುವುದು.
೨೧ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು, ಇದರಿಂದ ನಿನಗೆ ಶುಭವಾಗುವುದು.
22 ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು; ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
೨೨ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ, ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.
23 ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ, ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ, ನೀನು ಪುನಃಸ್ಥಾಪಿತವಾಗುವೆ.
೨೩ನೀನು ಸರ್ವಶಕ್ತನಾದ ದೇವರ ಕಡೆಗೆ ತಿರುಗಿಕೊಂಡು, ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.
24 ನೀನು ಬಂಗಾರವನ್ನು ಧೂಳಿನಂತೆಯೂ, ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು.
೨೪ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು, ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.
25 ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು. ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು.
೨೫ಸರ್ವಶಕ್ತನಾದ ದೇವರು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.
26 ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ. ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ.
೨೬ಆಗ ನೀನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು, ದೇವರ ಅಭಿಮುಖನಾಗಿರುವೆ.
27 ನೀನು ದೇವರಿಗೆ ಪ್ರಾರ್ಥನೆಮಾಡುವೆ, ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು; ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ.
೨೭ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ.
28 ನೀನು ಏನಾದರೂ ನಿರ್ಣಯಿಸಿದ್ದರೆ, ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
೨೮ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.
29 ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು, ದೇವರು ಬಿದ್ದವರನ್ನು ರಕ್ಷಿಸುವರು.
೨೯ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ, ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.
30 ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ; ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”
೩೦ನಿರ್ದೋಷಿಯನ್ನು ಆತನು ತಪ್ಪಿಸುವನು, ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.”

< ಯೋಬನು 22 >