< ಯೆರೆಮೀಯನು 47 >
1 ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
೧ಫರೋಹನು ಗಾಜಾ ಊರನ್ನು ಹೊಡೆದದ್ದಕ್ಕೆ ಮುಂಚಿತವಾಗಿ ಯೆಹೋವನು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.
2 ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ, ಅದು ತುಂಬಿ ತುಳುಕುವ ಪ್ರಳಯವಾಗುವುದು; ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ಆಕ್ರಮಿಸುವುವು; ಆಗ ಮನುಷ್ಯರು ಕೂಗುವರು; ದೇಶದ ನಿವಾಸಿಗಳೆಲ್ಲರು ಗೋಳಾಡುವರು.
೨ಯೆಹೋವನು ಇಂತೆನ್ನುತ್ತಾನೆ, “ಇಗೋ, ಪ್ರವಾಹವು ಉತ್ತರದಿಕ್ಕಿನಿಂದ ಹೊರಟು ತುಂಬಿತುಳುಕುವ ತೊರೆಯಾಗಿ ದೇಶವನ್ನೂ, ಅದರಲ್ಲಿರುವ ಸಮಸ್ತವನ್ನೂ, ಪಟ್ಟಣವನ್ನೂ ಮತ್ತು ಪಟ್ಟಣದ ನಿವಾಸಿಗಳನ್ನೂ ಆಕ್ರಮಿಸುವುದು. ಆಗ ಅಲ್ಲಿನವರು ಮೊರೆಯಿಡುವರು, ದೇಶದವರೆಲ್ಲಾ ಗೋಳಾಡುವರು.
3 ಅವನ ಬಲವಾದ ಕುದುರೆಗಳ ಗೊರಸುಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.
೩ಶತ್ರುವಿನ ಕುದುರೆಗಳ ಗೊರಸುಗಳು ನೆಲವನ್ನು ಅಪ್ಪಳಿಸುವ ಶಬ್ದಕ್ಕೂ, ರಥಗಳ ರಭಸಕ್ಕೂ, ಚಕ್ರಗಳ ಬಿರುಗುಟ್ಟುವಿಕೆಗೂ ತಂದೆಗಳು ಹೆದರುತ್ತಾ ಜೋಲುಗೈ ಉಳ್ಳವರಾಗಿ ತಮ್ಮ ಮಕ್ಕಳನ್ನು ಹಿಂದಿರುಗಿ ನೋಡರು.
4 ಏಕೆಂದರೆ ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವುದಕ್ಕೂ ಟೈರಿನಿಂದಲೂ ಸೀದೋನಿನಿಂದಲೂ ಉಳಿದವರನ್ನು ಕಡಿದುಬಿಡುವುದಕ್ಕೂ ಆ ದಿವಸ ಬಂತು. ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆಮಾಡುವನು.
೪ಏಕೆಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಉಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು.
5 ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?
೫“ಗಾಜಾ ಊರು ಬೋಳಿಸಿಕೊಂಡಿದೆ, ಅಷ್ಕೆಲೋನ್ ನಾಶಹೊಂದಿದೆ; ಫಿಲಿಷ್ಟಿಯದ ಬಯಲು ಸೀಮೆಯಲ್ಲಿ ಉಳಿದ ಪಟ್ಟಣವೇ, ನಿನ್ನನ್ನು ಎಂದಿನ ವರೆಗೆ ಕತ್ತರಿಸಿಕೊಳ್ಳುತ್ತಿರುವಿ?
6 “ಅಯ್ಯೋ, ಯೆಹೋವ ದೇವರ ಖಡ್ಗವೇ, ಎಷ್ಟರವರೆಗೆ ವಿಶ್ರಮಿಸಿಕೊಳ್ಳದೇ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ; ವಿಶ್ರಮಿಸಿಕೋ, ಸುಮ್ಮನಿರು.
೬ಅಯ್ಯೋ, ಯೆಹೋವನ ಖಡ್ಗವೇ, ಇನ್ನೆಷ್ಟರವರೆಗೆ ವಿಶ್ರಾಂತಿಗೊಳ್ಳದೆ ಇರುವಿ? ನಿನ್ನನ್ನು ಒರೆಯಲ್ಲಿ ಅಡಗಿಸಿಕೋ! ಶಾಂತವಾಗಿ, ಸುಮ್ಮನಿರು!
7 ಅದು ಹೇಗೆ ಸುಮ್ಮನಿರುವುದು? ಅಷ್ಕೆಲೋನಿಗೆ ವಿರೋಧವಾಗಿ ಮತ್ತು ಸಮುದ್ರ ತೀರಕ್ಕೆ ವಿರೋಧವಾಗಿ ಯೆಹೋವ ದೇವರೇ ಅದಕ್ಕೆ ಆಜ್ಞಾಪಿಸಿದ್ದಾರಲ್ಲಾ? ಅಲ್ಲಿ ಅದನ್ನು ನೇಮಿಸಿದ್ದಾನೆ.”
೭ಖಡ್ಗವು ವಿಶ್ರಾಂತಿಗೊಳ್ಳುವುದು ಹೇಗೆ? ಅಷ್ಕೆಲೋನಿನ ಮತ್ತು ಕರಾವಳಿಯ ವಿಷಯವಾಗಿ ಯೆಹೋವನು ಅದಕ್ಕೆ ಅಪ್ಪಣೆಕೊಟ್ಟನಲ್ಲಾ; ಅಲ್ಲಿಗೆ ಅದನ್ನು ನೇಮಿಸಿದ್ದಾನೆ.”