< ಯೆರೆಮೀಯನು 34 >
1 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಅವನ ಆಡಳಿತದ ಭೂಮಿಯ ಎಲ್ಲಾ ರಾಜ್ಯಗಳೂ ಎಲ್ಲಾ ಜನಾಂಗಗಳೂ ಯೆರೂಸಲೇಮಿಗೂ ಅದರ ಎಲ್ಲಾ ಪಟ್ಟಣಗಳಿಗೂ ವಿರೋಧವಾಗಿ ಯುದ್ಧಮಾಡುವಾಗ ಯೆಹೋವ ದೇವರಿಂದ ಯೆರೆಮೀಯನಿಗೆ ಬಂದ ವಾಕ್ಯವೇನೆಂದರೆ:
೧ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು, ಅವನ ಪೂರ್ಣಸೈನ್ಯವು, ಅವನ ಕೈಕೆಳಗಿನ ಸಮಸ್ತ ಭೂರಾಜ್ಯಗಳು, ಸಕಲ ಜನಗಳು, ಇವೆಲ್ಲಾ ಯೆರೂಸಲೇಮಿಗೂ ಅದಕ್ಕೆ ಸೇರಿದ ಎಲ್ಲಾ ಊರುಗಳಿಗೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು.
2 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈ ಪಟ್ಟಣವನ್ನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅದನ್ನು ಬೆಂಕಿಯಿಂದ ಸುಡುವನು.
೨ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನೀನು ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು, ‘ಯೆಹೋವನ ಮಾತನ್ನು ಆಲಿಸು, ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈವಶಮಾಡುವೆನು, ಅವನು ಅದನ್ನು ಬೆಂಕಿಯಿಂದ ಸುಟ್ಟುಬಿಡುವನು.
3 ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳುವುದಿಲ್ಲ. ಆದರೆ ನಿಶ್ಚಯವಾಗಿ ಹಿಡಿಯಲಾಗಿ, ಅವನ ಕೈವಶವಾಗುವೆ. ನೀವು ಬಾಬಿಲೋನಿನ ಅರಸನನ್ನು ಪ್ರತ್ಯಕ್ಷವಾಗಿ ಕಾಣುವಿರಿ. ಅವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವನು. ನೀನು ಬಾಬಿಲೋನಿಗೆ ಹೋಗುವಿ.
೩ನೀನು ಅವನ ಕೈಯಿಂದ ತಪ್ಪಿಸಿಕೊಳ್ಳಲಾರದೆ ಹಿಡಿಯಲ್ಪಟ್ಟು ಅವನ ವಶವಾಗುವಿ; ಬಾಬೆಲಿನ ಅರಸನ ಸಮಕ್ಷಮದಲ್ಲಿ ನಿಲ್ಲುವಿ; ಅವನು ನಿನ್ನ ಸಂಗಡ ಎದುರೆದುರಾಗಿ ಮಾತನಾಡುವನು; ನೀನು ಬಾಬಿಲೋನಿಗೆ ಗಡಿ ಪಾರಾಗುವಿ.
4 “‘ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವ ದೇವರ ವಾಗ್ದಾನವನ್ನು ಕೇಳು. ನಿನ್ನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ಖಡ್ಗದಿಂದ ಸಾಯುವುದಿಲ್ಲ.
೪ಆದರೂ ಯೆಹೂದದ ಅರಸನಾದ ಚಿದ್ಕೀಯನೇ, ಯೆಹೋವನ ಮಾತನ್ನು ಕೈಗೊಳ್ಳು; ಯೆಹೋವನು ನಿನ್ನ ವಿಷಯವಾಗಿ ಇಂತೆನ್ನುತ್ತಾನೆ, ನೀನು ಕೇಳಿ ಕೈಕೊಂಡರೆ ಖಡ್ಗದಿಂದ ಹತನಾಗುವುದಿಲ್ಲ; ಸುಖವಾಗಿ ಸಾಯುವಿ.
5 ನೀನು ಶಾಂತಿಯುತವಾಗಿ ಸಾಯುವೆ. ನಿನಗಿಂತ ಮೊದಲು ಆಳಿದ ನಿನ್ನ ಪಿತೃಗಳಾದ ಅರಸರನ್ನು ಗೌರವಿಸಲು ಬೆಂಕಿಯನ್ನು ಹೊತ್ತಿಸಿದ ಪ್ರಕಾರ ನಿನಗೂ ಹಾಕುವರು. “ಅಯ್ಯೋ, ಒಡೆಯನೇ,” ಎಂದು ಹೇಳಿ ನಿನಗೋಸ್ಕರ ಗೋಳಾಡುವರು. ನಾನೇ ಈ ವಾಗ್ದಾನವನ್ನು ಮಾಡಿದ್ದೇನೆಂದು ಯೆಹೋವ ದೇವರು ಹೇಳುತ್ತಾರೆ.’”
೫ನಿನಗಿಂತ ಮುಂಚಿನ ನಿನ್ನ ಪೂರ್ವಿಕರಾದ ಅರಸರಿಗೆ ಧೂಪಹಾಕಿದ ಪ್ರಕಾರ ನಿನಗೂ ಹಾಕುವರು; ಅಯ್ಯೋ, ಪ್ರಭುವೇ ಎಂದು ನಿನಗಾಗಿ ಗೋಳಾಡುವರು; ನಾನೇ ನುಡಿದಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ’” ಎಂದನು.
6 ಆಗ ಪ್ರವಾದಿಯಾದ ಯೆರೆಮೀಯನು ಈ ವಾಕ್ಯಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.
೬ಆಗ ಪ್ರವಾದಿಯಾದ ಯೆರೆಮೀಯನು ಈ ಮಾತುಗಳನ್ನೆಲ್ಲಾ ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಚಿದ್ಕೀಯನಿಗೆ ಹೇಳಿದನು.
7 ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೂ ಯೆಹೂದದಲ್ಲಿ ಮಿಕ್ಕ ಸಮಸ್ತ ಪಟ್ಟಣಗಳಿಗೂ ಎಂದರೆ, ಲಾಕೀಷಿಗೂ ಅಜೇಕಕ್ಕೂ ವಿರೋಧವಾಗಿ ಯುದ್ಧ ಮಾಡಿದಾಗಲೇ ಹೇಳಿದನು. ಏಕೆಂದರೆ ಯೆಹೂದದ ಪಟ್ಟಣಗಳಲ್ಲಿ ಈ ಕೋಟೆಯುಳ್ಳ ಪಟ್ಟಣಗಳು ಮಾತ್ರ ನಿಂತಿದ್ದವು.
೭ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮಿಗೂ, ಯೆಹೂದದೊಳಗೆ ಕೋಟೆಕೊತ್ತಲದ ಪಟ್ಟಣಗಳಾಗಿ ಉಳಿದಿದ್ದ ಲಾಕೀಷಿಗೂ ಮತ್ತು ಅಜೇಕಕ್ಕೂ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾಗ ಹೇಳಿದನು.
8 ಗುಲಾಮರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಅರಸನಾದ ಚಿದ್ಕೀಯನು ಯೆರೂಸಲೇಮಿನ ಎಲ್ಲಾ ಜನರೊಂದಿಗೆ ಒಡಂಬಡಿಕೆಯನ್ನು ಮಾಡಿದ ನಂತರ ಯೆಹೋವ ದೇವರಿಂದ ಯೆರೆಮೀಯನಿಗೆ ಈ ಮಾತು ಬಂದಿತು.
೮ಆ ಮೇಲೆ ಯೆಹೋವನು ಯೆರೆಮೀಯನಿಗೆ ಒಂದು ಮಾತನ್ನು ದಯಪಾಲಿಸಿದನು. ಇಷ್ಟರೊಳಗೆ ಅರಸನಾದ ಚಿದ್ಕೀಯನು ಯೆರೂಸಲೇಮಿನವರೆಲ್ಲರೊಂದಿಗೆ ಸೇರಿ,
9 ಪ್ರತಿಯೊಬ್ಬರೂ ತಮ್ಮ ಗಂಡು ಮತ್ತು ಹೆಣ್ಣು ಹಿಬ್ರಿಯ ಗುಲಾಮರನ್ನು ಇಬ್ಬರನ್ನೂ ಮುಕ್ತಗೊಳಿಸಬೇಕು. ಯೆಹೂದ್ಯರಾದ ಸಹೋದರ ಸಹೋದರಿಯರನ್ನು ಯಾರೂ ಬಂಧನದಲ್ಲಿ ಇಟ್ಟುಕೊಳ್ಳಲಿಲ್ಲ.
೯“ನಮ್ಮಲ್ಲಿ ಪ್ರತಿಯೊಬ್ಬನು ತನ್ನ ದಾಸ ದಾಸಿಯರೊಳಗೆ ಇಬ್ರಿಯರನ್ನು ಬಿಡುಗಡೆಮಾಡುವನು; ಯಾರೂ ತನ್ನ ಸಹೋದರನಾದ ಯೆಹೂದ್ಯನಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ” ಎಂದು ಅವರಿಗೆ ವಿಮೋಚನೆಯನ್ನು ಪ್ರಕಟಿಸುವ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು.
10 ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ತಮ್ಮ ದಾಸದಾಸಿಯರನ್ನು ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡರು. ಇನ್ನು ಮುಂದೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಅವರು ಒಪ್ಪಿದರು ಮತ್ತು ಅವರನ್ನು ಬಿಡುಗಡೆ ಮಾಡಿದರು.
೧೦ಆಗ ತಾವು ತಮ್ಮ ತಮ್ಮ ದಾಸ, ದಾಸಿಯರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ ಎಂದು ಒಡಂಬಡಿಕೆಗೆ ಒಪ್ಪಿಕೊಂಡ ಸಕಲ ಪ್ರಧಾನರೂ ಮತ್ತು ಸಮಸ್ತ ಪ್ರಜೆಗಳೂ ಅದರಂತೆ ನಡೆದು ಅವರನ್ನು ವಿಮೋಚಿಸಿದರು.
11 ಆದರೆ ನಂತರ ಅವರು ತಮ್ಮ ಮನಸ್ಸನ್ನು ಬದಲಾಯಿಸಿದರು ಮತ್ತು ಅವರು ಬಿಡುಗಡೆ ಮಾಡಿದ ಗುಲಾಮರನ್ನು ಮರಳಿ ತೆಗೆದುಕೊಂಡು ಅವರನ್ನು ಮತ್ತೆ ಗುಲಾಮರನ್ನಾಗಿ ಮಾಡಿದರು.
೧೧ಆದರೆ ಸ್ವಲ್ಪ ಸಮಯವಾದ ಮೇಲೆ ಮನಸ್ಸನ್ನು ಬೇರೆ ಮಾಡಿಕೊಂಡು ತಾವು ಬಿಟ್ಟಿದ್ದವರನ್ನು ಪುನಃ ದಾಸ, ದಾಸಿಯರನ್ನಾಗಿ ಅಧೀನಮಾಡಿಕೊಂಡರು.
12 ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾಗಿ:
೧೨ಹೀಗಿರಲು ಯೆಹೋವನು ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು,
13 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ದಾಸರ ದೇಶದೊಳಗಿಂದ ಹೊರಗೆ ತಂದ ದಿವಸದಲ್ಲಿ ಅವರ ಸಂಗಡ ಒಡಂಬಡಿಕೆ ಮಾಡಿ,
೧೩“ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮ ಪೂರ್ವಿಕರನ್ನು ನಾನು ಅಲ್ಲಿಂದ ಕರೆತಂದಾಗ
14 ‘ಏಳು ವರ್ಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಜೀತದಾಳಾಗಿದ್ದ ತನ್ನ ಸಹೋದರನಾದ ಹಿಬ್ರಿಯನನ್ನು ಕಳುಹಿಸಬೇಕೆಂದೂ, ಅವನು ನಿನಗೆ ಆರು ವರ್ಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕು,’ ಎಂದು ಹೇಳಿದೆನು. ಆದರೆ ನಿಮ್ಮ ಪಿತೃಗಳು ನನ್ನ ಮಾತನ್ನು ಕೇಳಲಿಲ್ಲ. ಅವರು ಕಿವಿಗೊಡಲಿಲ್ಲ.
೧೪‘ನಿಮ್ಮಲ್ಲಿ ಪ್ರತಿಯೊಬ್ಬನು ನಿಮಗೆ ಆರು ವರ್ಷಗಳ ಕಾಲ ದಾಸನಾಗಿದ್ದು ನಿಮಗೆ ಸೇವೆ ಮಾಡಿದ ಇಬ್ರಿಯನಾದ ಪ್ರತಿಯೊಬ್ಬ ಸಹೋದರನನ್ನು ಏಳನೆಯ ವರ್ಷದಲ್ಲಿ ಸ್ವತಂತ್ರನನ್ನಾಗಿ ಬಿಟ್ಟುಬಿಡಬೇಕು’ ಎಂದು ವಿಧಿಸಿ, ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆನಷ್ಟೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತಿಗೆ ಕಿವಿಗೊಡಲಿಲ್ಲ, ಕೇಳಲಿಲ್ಲ.
15 ನೀವೋ ಕೂಡಲೆ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ಬಿಡುಗಡೆಯನ್ನು ಪ್ರಕಟಿಸಿ, ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಿರಿ. ನನ್ನ ಹೆಸರಿನಿಂದ ಖ್ಯಾತಗೊಂಡಿರುವ ದೇವಾಲಯದಲ್ಲಿ, ನನ್ನ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡಿರಿ.
೧೫ನೀವೋ ಈಗಲೇ ಮನಮರುಗಿ ನಿಮ್ಮ ನಿಮ್ಮ ನೆರೆಹೊರೆಯವರಿಗೆ ವಿಮೋಚನೆಯನ್ನು ಪ್ರಕಟಿಸಿ ನನ್ನ ಚಿತ್ತಾನುಸಾರವಾಗಿ ನಡೆದಿರಿ. ನನ್ನ ಹೆಸರಿನಿಂದ ಖ್ಯಾತಿಗೊಂಡಿರುವ ಆಲಯದಲ್ಲಿ ನನ್ನ ಮುಂದೆ ಒಡಂಬಡಿಕೆ ಮಾಡಿಕೊಂಡಿರಿ.
16 ಆದರೆ ಆಮೇಲೆ ನಿಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡಿರಿ. ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು, ಶೋಷಣೆಗೆ ಗುರಿಮಾಡಿ, ನನ್ನ ನಾಮಕ್ಕೆ ಅಪಕೀರ್ತಿ ತಂದಿದ್ದೀರಿ.
೧೬ಆ ಮೇಲೆ ನೀವು ಮನಸ್ಸನ್ನು ಬೇರೆ ಮಾಡಿಕೊಂಡಿರಿ; ಸ್ವತಂತ್ರರನ್ನಾಗಿ ಬಿಟ್ಟಿದ್ದವರನ್ನು ಪುನಃ ದಾಸದಾಸಿಯರನ್ನಾಗಿ ಸೇರಿಸಿಕೊಂಡು ಅಧೀನಮಾಡಿಕೊಂಡು ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದಿರಿ” ಎಂಬುದೇ.
17 “ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಪ್ರತಿಯೊಬ್ಬನು ತನ್ನ ಸಹೋದರನಿಗೂ, ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವುದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಖಡ್ಗ, ಬರ, ವ್ಯಾಧಿ ಇವುಗಳಿಗಾಗಿಯೇ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಯೆಹೋವ ದೇವರು ಹೇಳುತ್ತಾರೆ ಮತ್ತು ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನೂ ತಿರಸ್ಕಾರ ಹೊಂದುವಂತೆ ಮಾಡುವೆನು.
೧೭ಆದಕಾರಣ ಯೆಹೋವನು, “ನೀವು ನನ್ನನ್ನು ಕೇಳಲಿಲ್ಲ, ನಿಮ್ಮ ನಿಮ್ಮ ಸಹೋದರರಿಗೂ, ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ; ಇದೇ ಯೆಹೋವನ ನುಡಿ. ಇಗೋ, ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ; ನಿಮ್ಮನ್ನು ಖಡ್ಗ, ವ್ಯಾಧಿ ಮತ್ತು ಕ್ಷಾಮಗಳಿಗೆ ಗುರಿಮಾಡುತ್ತೇನೆ; ನಿಮ್ಮನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.
18 ನನ್ನ ಒಡಂಬಡಿಕೆಯನ್ನು ಮೀರಿದ ಮನುಷ್ಯರನ್ನೂ, ಕರುವನ್ನೂ ಎರಡು ಭಾಗಮಾಡಿ, ಅದರ ತುಂಡುಗಳ ನಡುವೆ ದಾಟಿ ಹೋಗಿ, ನನ್ನ ಮುಂದೆ ಮಾಡಿದ ಒಡಂಬಡಿಕೆಯ ವಾಕ್ಯಗಳನ್ನು ಸ್ಥಾಪಿಸದೆ ಇರುವವರನ್ನೂ,
೧೮ನನ್ನ ನಿಬಂಧನೆಗಳನ್ನು ಕೈಗೊಳ್ಳದೆ, ನನ್ನ ಮುಂದೆ ಮಾಡಿದ ಒಡಂಬಡಿಕೆಯನ್ನು ಮೀರಿದವರಿಗೆ ಕರುವನ್ನು ಸೀಳಿ ಅದರ ಹೋಳುಗಳ ನಡುವೆ ಹಾದುಹೋಗುವ ಗತಿ ಬರುವಂತೆ ಮಾಡುವೆನು.
19 ಯೆಹೂದದ ಪ್ರಧಾನರನ್ನೂ, ಯೆರೂಸಲೇಮಿನ ಪ್ರಧಾನರನ್ನೂ, ಕಂಚುಕಿಯರನ್ನೂ, ಯಾಜಕರನ್ನೂ, ಕರುವಿನ ತುಂಡುಗಳ ನಡುವೆ ದಾಟಿಹೋದ ದೇಶದ ಜನರೆಲ್ಲರನ್ನೂ,
೧೯ನನ್ನ ಒಡಂಬಡಿಕೆಯನ್ನು ಮೀರಿದ ಯೆಹೂದದ ಪ್ರಧಾನರು, ಯೆರೂಸಲೇಮಿನ ಪ್ರಧಾನರು, ಕಂಚುಕಿಗಳು, ಯಾಜಕರು,
20 ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಒಪ್ಪಿಸುವೆನು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗುವುವು.
೨೦ಕರುವಿನ ಹೋಳುಗಳ ನಡುವೆ ಹಾದುಹೋದ ದೇಶದ ಸಕಲ ಜನರು, ಇವರೆಲ್ಲರನ್ನೂ ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು; ಇವರ ಹೆಣಗಳು ಆಕಾಶ ಪಕ್ಷಿಗಳಿಗೂ, ಭೂಜಂತುಗಳಿಗೂ ಆಹಾರವಾಗುವವು.
21 “ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ, ನಿಮ್ಮನ್ನು ಬಿಟ್ಟುಹೋಗಿರುವ ಬಾಬಿಲೋನಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.
೨೧ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವನ ಪ್ರಧಾನರನ್ನೂ ಅವರ ಪ್ರಾಣ ಹುಡುಕುವ ಶತ್ರುಗಳ ಕೈಗೆ ಅಂದರೆ ನಿಮ್ಮನ್ನು ಬಿಟ್ಟುಹೋಗಿರುವ ಬಾಬೆಲಿನ ಅರಸನ ಕೈಗೆ ಕೊಡುವೆನು” ಎನ್ನುತ್ತಾನೆ.
22 ಯೆಹೋವ ದೇವರು ಹೇಳುತ್ತಾರೆ, ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರುಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು ಮತ್ತು ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗಿ ಮಾಡುವೆನು.”
೨೨ಯೆಹೋವನು, “ಇಗೋ, ನಾನು ಅಪ್ಪಣೆಕೊಟ್ಟು ಆ ಶತ್ರುಗಳು ಈ ಪಟ್ಟಣಕ್ಕೆ ಹಿಂದಿರುಗುವಂತೆ ಮಾಡುವೆನು; ಅವರು ಅದಕ್ಕೆ ವಿರುದ್ಧವಾಗಿ ಯುದ್ಧಮಾಡಿ ಅದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಬಿಡುವರು; ನಾನು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ನುಡಿಯುತ್ತಾನೆ.