< ಯೆಶಾಯನು 3 >
1 ಇಗೋ, ಕರ್ತನೂ ಸರ್ವಶಕ್ತನೂ ಆಗಿರುವ ಯೆಹೋವ ದೇವರೆಂಬ ನಾನು ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ಯೆರೂಸಲೇಮಿನಿಂದಲೂ ಯೆಹೂದದಿಂದಲೂ ತೆಗೆದುಬಿಡುವೆನು.
೧ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು.
2 ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಶಕುನದವನು, ಹಿರಿಯನು,
೨ಇದಲ್ಲದೆ ಶೂರ, ಯುದ್ಧಭಟರು, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ,
3 ಸೇನಾಪತಿ, ಅಧಿಕಾರಿ, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆದುಬಿಡುವೆನು.
೩ಪಂಚಾಶತಾಧಿಪತಿ, ಘನವಂತನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರೆಲ್ಲರನ್ನು ತೊಲಗಿಸಿಬಿಡುವೆನು.
4 “ಬಾಲಕರನ್ನು ಅವರ ಪ್ರಭುಗಳನ್ನಾಗಿ ಮಾಡಿ, ಮಕ್ಕಳು ಅವರ ಮೇಲೆ ಆಳುವಂತೆ ಮಾಡುವೆನು.”
೪ನಾನು, “ಬಾಲಕರನ್ನು ಪ್ರಭುಗಳನ್ನಾಗಿ ಆ ದೇಶಕ್ಕೆ ನೇಮಿಸುವೆನು, ಬಾಲಕರು ಅದನ್ನು ಆಳುವರು.
5 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು, ನೆರೆಯವನಿಗೆ ವಿರೋಧವಾಗಿ ನೆರೆಯವನು ಹಿಂಸಿಸುವನು. ಹುಡುಗನು ವೃದ್ಧನ ವಿರೋಧವಾಗಿಯೂ, ನೀಚನು ಘನವಂತನ ವಿರೋಧವಾಗಿಯೂ ಸೊಕ್ಕಿನಿಂದ ವರ್ತಿಸುವರು.
೫ಪ್ರಜೆಗಳು ಪರಸ್ಪರ ವಿರೋಧಿಗಳಾಗಿ, ಒಬ್ಬರನೊಬ್ಬರು ಹಿಂಸಿಸುವರು, ಬಾಲಕರು ಹಿರಿಯರ ಮೇಲೆಯೂ, ನೀಚನು ಘನವಂತನ ಜೊತೆಯಲ್ಲಿ ಸೊಕ್ಕಿನಿಂದ ವರ್ತಿಸುವರು.
6 ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು ಹೀಗೆ ಹೇಳುವನು, “ನಿನಗೆ ವಸ್ತ್ರವಿದೆ, ನಮ್ಮನ್ನು ನೀನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ.”
೬ಆ ದಿನದಲ್ಲಿ ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು, ‘ನಿನಗೆ ನಿಲುವಂಗಿ ಇದೆ. ನೀನು ನಮಗೆ ಒಡೆಯನಾಗಬೇಕು. ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ ತಂದೆಯ ಮನೆಯೊಳಗೆ ಅಣ್ಣನನ್ನು ಬಲವಂತ ಮಾಡಲು ಅಣ್ಣನು ದೇಶದ ನಿರರ್ಥಕ ವ್ರಣವೈದ್ಯನಾಗುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ನಿರಾಕರಿಸುವನು.
7 ಆ ದಿನದಲ್ಲಿ ಅವನು ಆಣೆಯಿಟ್ಟು, “ನಾನು ಉಪಶಮನ ಮಾಡುವವನಾಗುವುದಿಲ್ಲ. ಏಕೆಂದರೆ ನನ್ನ ಮನೆಯಲ್ಲಿ ಅನ್ನವಾಗಲಿ, ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ,” ಎಂದು ಉತ್ತರಿಸುವನು.
೭ಆ ದಿನದಲ್ಲಿ ಅವನು ಗಟ್ಟಿಯಾಗಿ ಕೂಗುತ್ತಾ, ‘ನಾನು ನಿಮ್ಮನ್ನು ಸ್ವಸ್ಥಪಡಿಸುವುದಿಲ್ಲ. ನನ್ನ ಮನೆಯಲ್ಲಿ ಅನ್ನವಾಗಲೀ, ವಸ್ತ್ರವಾಗಲೀ ಇಲ್ಲ: ಜನರನ್ನು ಆಳುವ ಒಡೆಯನನ್ನಾಗಿ ನನ್ನನ್ನು ಮಾಡಬೇಡಿರಿ’” ಎಂದು ಹೇಳುವನು.
8 ಏಕೆಂದರೆ ಯೆರೂಸಲೇಮು ಹಾಳಾಗಿದೆ, ಯೆಹೂದವು ಬಿದ್ದುಹೋಗಿದೆ. ಅವರ ನಡೆನುಡಿಗಳು ಯೆಹೋವ ದೇವರಿಗೆ ವಿರುದ್ಧವಾಗಿ ದೇವರ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತಾರೆ.
೮ಏಕೆಂದರೆ ಯೆರೂಸಲೇಮ್ ಹಾಳಾಯಿತು. ಯೆಹೂದವು ಬಿದ್ದುಹೋಯಿತು. ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತದಲ್ಲವೇ?
9 ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಸೊದೋಮಿನಂತೆ ಮರೆಮಾಡದೆ ಪ್ರಕಟ ಮಾಡುತ್ತಾರೆ. ಅವರಿಗೆ ಕಷ್ಟ! ಏಕೆಂದರೆ ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
೯ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಮರೆಮಾಡದೇ ಸೊದೋಮಿನವರಂತೆ ಪ್ರಕಟಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.
10 ನೀತಿವಂತರಿಗೆ ನೀವು, “ಅವರಿಗೆ ಒಳ್ಳೆಯದಾಗಲಿ!” ಎಂದು ಹೇಳಿರಿ. ಏಕೆಂದರೆ ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
೧೦ನೀವು ನೀತಿವಂತರಿಗೆ, “ನಿಮಗೆ ಒಳ್ಳೆಯದಾಗಲಿ” ಎಂದು ಹೇಳಿರಿ, ಅವರು ತಮ್ಮ ಒಳ್ಳೆಯ ಫಲವನ್ನು ಅನುಭವಿಸುವರು.
11 ಕೆಡುಕರಿಗೆ ಕಷ್ಟ! ಅವರಿಗೆ ಕೇಡೇ ಇರಲಿ. ಏಕೆಂದರೆ ಅವರ ಕೈಗಳ ಪ್ರತಿಫಲವು ಅವರಿಗೆ ಕೊಡಲಾಗುವುದು.
೧೧ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ದೊರಕುವುದು.
12 ನನ್ನ ಪ್ರಜೆಗಳನ್ನು ಹುಡುಗರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು. ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ. ನೀವು ನಡೆಯುವ ದಾರಿಯನ್ನು ಹಾಳು ಮಾಡಿದ್ದಾರೆ.
೧೨ನನ್ನ ಪ್ರಜೆಗಳನ್ನು ಬಾಲಕರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು. ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆಯತಕ್ಕ ದಾರಿಯನ್ನು ಹಾಳುಮಾಡಿದ್ದಾರೆ.
13 ನ್ಯಾಯಾಧೀಶರನ್ನು ಯೆಹೋವ ದೇವರು ಸ್ವಾಧೀನಪಡಿಸಿಕೊಂಡಿದ್ದಾರೆ; ಅವರು ಜನರನ್ನು ನಿರ್ಣಯಿಸಲು ಎದ್ದರು.
೧೩ಯೆಹೋವನು ವಾದಿಸುವುದಕ್ಕೂ, ಜನರಿಗೆ ನ್ಯಾಯತೀರಿಸುವುದಕ್ಕೂ ಎದ್ದು ನಿಂತಿದ್ದಾನೆ.
14 ಯೆಹೋವ ದೇವರು ತಮ್ಮ ಪ್ರಜೆಗಳ ಹಿರಿಯರ ಸಂಗಡ, ಮತ್ತು ಅವರ ಅಧಿಪತಿಗಳ ಸಂಗಡ ನ್ಯಾಯತೀರಿಸಲು ಪ್ರವೇಶಿಸುವರು. ಏಕೆಂದರೆ, “ನೀವು ನನ್ನ ದ್ರಾಕ್ಷಿತೋಟವನ್ನು ತಿಂದುಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
೧೪ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು. ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
15 ನೀವು ನನ್ನ ಪ್ರಜೆಯನ್ನು ಹೊಡೆದು, ಚೂರುಗಳನ್ನಾಗಿ ಮಾಡಿ, ಬಡವರ ಮುಖಗಳನ್ನು ಹಿಂಡುವುದರ ಅರ್ಥವೇನು?” ಎಂದು ಸರ್ವಶಕ್ತ ದೇವರಾದ ಯೆಹೋವ ದೇವರು ವಾದಿಸುತ್ತಾರೆ.
೧೫ನೀವು ನನ್ನ ಜನರನ್ನು ಜಜ್ಜಿ, ಬಡವರನ್ನು ದುಃಖದಿಂದ ಹಿಂಸಿಸುವುದೇಕೆ?” ಎಂದು ಕರ್ತನಾದ ಸೇನಾಧೀಶ್ವರ ಯೆಹೋವನು ವಾದಿಸುವನು.
16 ಇದಲ್ಲದೆ ಯೆಹೋವ ದೇವರು ಇಂತೆನ್ನುತ್ತಾರೆ: “ಚೀಯೋನ್ ಪುತ್ರಿಯರು ಅಹಂಕಾರಿಗಳಾಗಿದ್ದು, ಕತ್ತು ತೂಗುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ, ನಾಜೂಕಿನಿಂದ ಹೆಜ್ಜೆ ಇಡುತ್ತಾ, ಕಾಲುಗೆಜ್ಜೆ ಜಣಜಣಿಸುತ್ತಾ ನಡೆಯುತ್ತಾರೆ;
೧೬ಇದಲ್ಲದೆ ಯೆಹೋವನು ಹೀಗನ್ನುತ್ತಾನೆ, ಚೀಯೋನಿನ ಹೆಂಗಸರು ಅಹಂಕಾರವುಳ್ಳವರಾಗಿ, ಕತ್ತು ತೂಗುತ್ತಾ, ಕಣ್ಣುಗಳನ್ನು ತಿರುಗಿಸುತ್ತಾ, ವಯ್ಯಾರವಾಗಿ ಹೆಜ್ಜೆ ಇಡುತ್ತಾ, ಕಾಲು ಗೆಜ್ಜೆ ಜಣಜಣಿಸುತ್ತಾ ನಡೆಯುವವರಾಗಿರುವುದರಿಂದ,
17 ಆದ್ದರಿಂದ ಯೆಹೋವ ದೇವರು ಚೀಯೋನ್ ಪುತ್ರಿಯರ ನಡುನೆತ್ತಿಗೆ ಹುಣ್ಣನ್ನು ಅನುಮತಿಸಿ, ಅವರನ್ನು ಬೋಳುಮಾಡುವರು.”
೧೭ಕರ್ತನಾದ ಯೆಹೋವನು ಚೀಯೋನಿನ ಪುತ್ರಿಯರ ನಡುನೆತ್ತಿಯನ್ನೂ ಹುಣ್ಣಿನಿಂದ ಬಾಧಿಸಿ, ಅವರ ಮಾನವನ್ನು ಬಯಲುಮಾಡುವನು.
18 ಆ ದಿನದಲ್ಲಿ ಯೆಹೋವ ದೇವರು ಅವರ ಕಾಲಂದಿಗೆ, ತುರುಬು ಬಲೆ, ಅರ್ಧಚಂದ್ರ,
೧೮ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ,
19 ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,
೧೯ಜುಮುಕಿ, ಬಳೆ, ಶಿರವಸ್ತ್ರ,
20 ಕಂಠ ವಸ್ತ್ರ, ಕಾಲ ಸರಪಣಿ, ಡಾಬು, ಸುಗಂಧ ಭರಣಿ, ತಾಯಿತಿ,
೨೦ಮುಂಡಾಸು, ಕಾಲಗೆಜ್ಜೆ, ಡಾಬು, ಗಂಧದ ಭರಣಿ, ತೋಳಬಂಧಿ,
22 ಹಬ್ಬದ ಉಡಿಗೆ ತೊಡಿಗೆ, ಮೇಲಂಗಿ, ಶಾಲು, ಕೈಚೀಲ,
೨೨ಹಬ್ಬದ ಉಡುಗೆ-ತೊಡುಗೆ, ಮೇಲಂಗಿ, ಶಾಲು, ಕೈಚೀಲ,
23 ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.
೨೩ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ಹೊದಿಕೆ ಈ ಸೊಗಸಾದ ಭೂಷಣಗಳನ್ನೆಲ್ಲಾ ತೆಗೆದುಹಾಕುವನು.
24 ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ನಡುಪಟ್ಟಿಗೆ ಬದಲಾಗಿ ಹಗ್ಗ, ಜಡೆಯ ಬದಲಾಗಿ ಬೋಳುತಲೆ, ರೇಷ್ಮೆಬಟ್ಟೆಗೆ ಬದಲಾಗಿ ಗೋಣಿತಟ್ಟು, ಸೌಂದರ್ಯಕ್ಕೆ ಬದಲಾಗಿ ಬರೆ, ಇವೆಲ್ಲ ಅವರಿಗೆ ಬಂದೊದಗುವುದು.
೨೪ಆಗ ಸುಗಂಧದ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ, ಅಂದವಾದ ಜಡೆಯ ಬದಲಾಗಿ ಬೋಳುತಲೆ, ನಡುವಿನ ಶಲ್ಯಕ್ಕೆ ಬದಲಾಗಿ ಗೋಣಿತಟ್ಟು, ಸೌಂದರ್ಯಕ್ಕೆ ಬದಲಾಗಿ ಕುರೂಪ, ಬೆತ್ತಲೆ ಉಂಟಾಗುವುದು.
25 ನಿನ್ನ ಗಂಡಸರು ಖಡ್ಗಕ್ಕೆ ತುತ್ತಾಗುವರು. ನಿನ್ನ ಶೂರರು ಯುದ್ಧದಲ್ಲಿ ಬೀಳುವರು.
೨೫ಚೀಯೋನ್ ನಗರಿಯೇ, ನಿನ್ನ ವೀರರು ಖಡ್ಗದಿಂದ ಬಿದ್ದುಹೋಗುವರು. ನಿನ್ನ ಶೌರ್ಯವು ಯುದ್ಧದಲ್ಲಿ ಅಡಗಿ ಹೋಗುವುದು.
26 ಚೀಯೋನ್ ಬಾಗಿಲುಗಳಲ್ಲಿ ಪ್ರಲಾಪವು, ದುಃಖವು ತುಂಬಿರುವುದು. ಅವಳು ನಿರ್ಗತಿಕಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.
೨೬ಅವಳ ಪುರದ್ವಾರಗಳಲ್ಲಿ ಪ್ರಲಾಪವೂ, ದುಃಖವೂ ತುಂಬಿರುವವು. ಅವಳು ಹಾಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.