< ಯೆಶಾಯನು 29 >
1 ಅಯ್ಯೋ, ಅರೀಯೇಲೇ, ಅರೀಯೇಲೇ, ದಾವೀದನು ವಾಸಿಸಿದ ಪಟ್ಟಣವೇ! ವರುಷಕ್ಕೆ ವರುಷವನ್ನು ಕೂಡಿಸಿರಿ. ನಿಮ್ಮ ಹಬ್ಬಗಳ ಚಕ್ರ ಮುಂದುವರಿಯಲಿ.
೧ಅಯ್ಯೋ, ಅರೀಯೇಲೇ, ಅರೀಯೇಲೇ ದಾವೀದನು ಸೈನ್ಯಸಮೇತವಾಗಿ ವಾಸಿಸಿದ ಪಟ್ಟಣವೇ, ನಿನ್ನ ಗತಿಯನ್ನು ಏನು ಹೇಳಲಿ! ಈ ವರ್ಷಕ್ಕೆ ಮುಂದಿನ ವರ್ಷವನ್ನು ಸೇರಿಸಿರಿ; ಹಬ್ಬಗಳು ಹೆಚ್ಚಾಗಿ ಬರಲಿ.
2 ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು. ಅಲ್ಲಿ ಕಷ್ಟವೂ, ದುಃಖವೂ ಇರುವುದು. ಅವಳು ನನಗೆ ಬಲಿಪೀಠದ ಒಲೆಯಂತೆ ಇರುತ್ತಾಳೆ.
೨ಆ ಮೇಲೆ ನಾನು ಅರೀಯೇಲನ್ನು ಬಾಧಿಸುವೆನು; ಅರಚಾಟ ಕಿರಿಚಾಟಗಳಿಂದ ತುಂಬುವುದು; ಆ ಪಟ್ಟಣವು ನನಗೆ ಅರೀಯೇಲಾಗಿಯೇ ಪರಿಣಮಿಸುವುದು.
3 ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ, ದಿಬ್ಬ ಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.
೩ನಾನು ನಿನ್ನ ಸುತ್ತಲೂ ದಂಡಿಳಿಸಿ, ನಿನಗೆ ವಿರುದ್ಧವಾಗಿ ಕೋಟೆಗಳನ್ನು ಕಟ್ಟಿ, ದಿಬ್ಬಹಾಕಿ ನಿನ್ನನ್ನು ಮುತ್ತುವೆನು.
4 ಆಗ ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ. ನಿನ್ನ ನುಡಿಯು ಧೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು. ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರುವುದು. ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.
೪ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು, ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವುದು, ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.
5 ಅದೂ ಅಲ್ಲದೆ ನಿನ್ನ ವೈರಿಗಳ ಗುಂಪು ಸೂಕ್ಷ್ಮವಾದ ಧೂಳಿನಂತಾಗುವುದು. ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರುವುದು. ಹೌದು, ಅದು ಕ್ಷಣಮಾತ್ರದಲ್ಲಿ ಫಕ್ಕನೆ ಆಗುವುದು.
೫ಗುಂಪು ಗುಂಪಾಗಿ ಕೂಡಿರುವ ನಿನ್ನ ಶತ್ರುಗಳು ಸೂಕ್ಷ್ಮವಾದ ಧೂಳಿನಂತೆಯೂ, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನಂತೆಯೂ ಇರುವರು; ಅವರು ಕ್ಷಣ ಮಾತ್ರದಲ್ಲಿ ಲಯಹೊಂದುವರು.
6 ಸೇನಾಧೀಶ್ವರ ಯೆಹೋವ ದೇವರು ಗುಡುಗಿನಿಂದಲೂ, ಮಹಾಶಬ್ದದಿಂದಲೂ, ಬಿರುಗಾಳಿ ಸುಳಿಗಾಳಿಯಿಂದಲೂ, ದಹಿಸುವ ಅಗ್ನಿಜ್ವಾಲೆಯಿಂದಲೂ ಪ್ರತ್ಯಕ್ಷರಾಗುವರು.
೬ಸೇನಾಧೀಶ್ವರನಾದ ಯೆಹೋವನು ಗುಡುಗು, ಭೂಕಂಪ, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಯ ಜ್ವಾಲೆ ಇವುಗಳ ಮೂಲಕ ನಿನ್ನನ್ನು ಶಿಕ್ಷಿಸುವನು.
7 ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ ಬಾಧಿಸುವ ಸಕಲ ಜನಾಂಗಗಳು ರಾತ್ರಿಯ ದರ್ಶನದ ಕನಸಿನಂತೆ ಮಾಯವಾಗುವುವು.
೭ಅರೀಯೇಲಿನ ಮೇಲೆ ಹೋರಾಡಿ, ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ, ಬಾಧಿಸುವ ಸಕಲ ಜನಾಂಗಗಳ ಗುಂಪು, ಕನಸಿನಂತೆ, ರಾತ್ರಿಯ ಸ್ವಪ್ನದ ಹಾಗೆ ಮಾಯವಾಗುವುದು.
8 ಹಸಿದ ಮನುಷ್ಯನು ಕನಸು ಕಂಡು ಇಗೋ, ಉಣ್ಣುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚೆತ್ತಾಗ ಪ್ರಾಣ ತುಂಬಿದ ಹಾಗೆಯೂ, ಬಾಯಾರಿದವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚರವಾದಾಗ ಬಲಹೀನನಾಗಿದ್ದು, ಪ್ರಾಣ ಆಶಿಸುವ ಹಾಗೆಯೇ ಚೀಯೋನ್ ಪರ್ವತಕ್ಕೆ ವಿರೋಧವಾಗಿ ಯುದ್ಧಮಾಡುವ ಎಲ್ಲಾ ಜನಾಂಗಗಳ ಸಮೂಹವಿರುವುದು.
೮ಹಸಿದವನು ಕನಸು ಕಂಡು ಆಹಾ, ತಿನ್ನುತ್ತಿದ್ದೇನೆ ಎಂದುಕೊಂಡಂತಾಗುವುದು; ಎಚ್ಚೆತ್ತಾಗ ಅವನ ಹೊಟ್ಟೆ ಬರಿದಾಗಿಯೇ ಇರುವುದು. ಬಾಯಾರಿದವನು ಸ್ವಪ್ನದಲ್ಲಿ ಇಗೋ ನೀರು ಕುಡಿಯುತ್ತಿದ್ದೇನೆ ಎಂದುಕೊಂಡಂತಾಗುವುದು; ನಿದ್ರೆಯಿಂದ ಎಚ್ಚೆತ್ತಾಗ ಬಲಹೀನನಾಗಿದ್ದು, ಬಳಲಿ ನೀರನ್ನು ಬಯಸುತ್ತಾ ಬಾಯಾರಿಕೆಯಿಂದ ಇರುವನು. ಚೀಯೋನ್ ಪರ್ವತಕ್ಕೆ ವಿರುದ್ಧವಾಗಿ ಹೋರಾಡುವ ಸಕಲ ಜನಾಂಗಗಳಿಗೂ ಇದೇ ಗತಿಯಾಗುವುದು.
9 ತಾಮಸ ಮಾಡಿ ಆಶ್ಚರ್ಯಪಡಿರಿ. ಕುರುಡು ಮಾಡಿಕೊಂಡು ದೃಷ್ಟಿಯಿಲ್ಲದವರಾಗಿರಿ ಇವರು ಅಮಲೇರಿದ್ದಾರೆ. ಆದರೆ ದ್ರಾಕ್ಷಾರಸದಿಂದಲ್ಲ. ಅವರು ಕೂಗಾಡುತ್ತಾರೆ, ಆದರೆ ಮದ್ಯದಿಂದಲ್ಲ.
೯ನಿಮ್ಮನ್ನು ನೀವೇ ಬೆರಗು ಮಾಡಿಕೊಂಡು ಬೆರಗಾಗಿರಿ, ಕುರುಡು ಮಾಡಿಕೊಂಡು ಕುರುಡರಾಗಿರಿ! ಇವರು ಅಮಲೇರಿದ್ದಾರೆ, ದ್ರಾಕ್ಷಾರಸದಿಂದಲ್ಲ; ಓಲಾಡುತ್ತಾರೆ ಮದ್ಯದಿಂದಲ್ಲ.
10 ಯೆಹೋವ ದೇವರು ನಿಮ್ಮ ಮೇಲೆ ಗಾಢನಿದ್ರೆಯ ಆತ್ಮವನ್ನು ಹೊಯ್ದು, ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾರೆ. ಪ್ರವಾದಿಗಳನ್ನೂ, ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನು ಮುಚ್ಚಿದ್ದಾರೆ.
೧೦ಯೆಹೋವನು ನಿಮ್ಮ ಮೇಲೆ ಗಾಢನಿದ್ರೆಯನ್ನು ಬರಮಾಡಿ, ಪ್ರವಾದಿಗಳ ಕಣ್ಣುಗಳನ್ನು ಮುಚ್ಚಿ, ದಿವ್ಯದರ್ಶಿಗಳ ತಲೆಗಳಿಗೆ ಮುಸುಕು ಹಾಕಿದ್ದಾನೆ.
11 ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿದ ಗ್ರಂಥದ ವಾಕ್ಯಗಳ ಹಾಗಾಯಿತು. ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು, “ಇದನ್ನು ಓದು,” ಎಂದು ವಿನಂತಿಸಿದರೆ ಅವನು, “ಮುದ್ರೆ ಹಾಕಿದೆಯೆಲ್ಲಾ, ಆಗುವುದಿಲ್ಲ,” ಅನ್ನುವನು.
೧೧ದೈವದರ್ಶನವೆಲ್ಲಾ ಮುದ್ರೆಹಾಕಿದ ಶಾಸ್ತ್ರದ ಮಾತಿನ ಹಾಗಿದೆ; ಅದನ್ನು ಅಕ್ಷರ ಬಲ್ಲವನಿಗೆ, “ಇದನ್ನು ಓದು” ಎಂದು ಹೇಳಿದರೆ ಅವನು, “ಮುದ್ರೆ ಹಾಕಿದೆಯಲ್ಲಾ, ಆಗುವುದಿಲ್ಲ” ಎಂದು ಹೇಳುವನು.
12 ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು ನನಗೆ ಓದಲು ಬರುವುದಿಲ್ಲ ಅನ್ನುವನು.
೧೨ಅಕ್ಷರವಿಲ್ಲದವನಿಗೆ, “ಇದನ್ನು ಓದು” ಎಂದು ಹೇಳಿದರೆ ಅವನು, “ನನಗೆ ಓದಲು ಬರುವುದಿಲ್ಲ” ಎಂದು ಹೇಳುವನು.
13 ಕರ್ತರು ಹೇಳುವುದೇನೆಂದರೆ: “ಈ ಜನರು ಬಾಯಿಂದ ನನ್ನನ್ನು ಸಮೀಪಿಸಿ, ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.
೧೩ಯೆಹೋವನು ಹೇಳುವುದೇನೆಂದರೆ, “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ, ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿಕೊಂಡು, ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯಭಕ್ತಿಯನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.
14 ಹೀಗಿರುವುದರಿಂದ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು. ಅವರ ಜ್ಞಾನಿಗಳ ಜ್ಞಾನವು ಅಳಿಯುವುದು. ಅವರ ವಿವೇಕಿಗಳ ವಿವೇಕವು ಅಡಗಿಕೊಳ್ಳುವುದು.”
೧೪ಹೀಗಿರುವುದರಿಂದ ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ, ಅದ್ಭುತವೂ ಆದ ಕಾರ್ಯವನ್ನು ಇನ್ನು ಮಾಡುವೆನು; ಇವರ ಜ್ಞಾನಿಗಳ ಜ್ಞಾನವು ಅಳಿಯುವುದು, ವಿವೇಕಿಗಳ ವಿವೇಕವು ಅಡಗುವುದು” ಎಂದು ಹೇಳಿದನು.
15 ತಮ್ಮ ಆಲೋಚನೆಗಳನ್ನು ಯೆಹೋವ ದೇವರಿಗೆ ಮರೆಮಾಡುವುದಕ್ಕೆ ಅಗಾಧದಲ್ಲಿ ಹೋಗಿ, ನಮ್ಮನ್ನು ಯಾರು ನೋಡಿಯಾರು? ನಮ್ಮನ್ನು ಯಾರು ತಿಳಿದಾರು? ಎಂದುಕೊಂಡು, ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸುವವರಿಗೆ ಕಷ್ಟ!
೧೫ತಮ್ಮ ಆಲೋಚನೆಯನ್ನು ಯೆಹೋವನಿಗೆ ಮರೆಮಾಡುವುದಕ್ಕೆ, ಅಗಾಧಕ್ಕೆ ಹೋಗಿ, “ನಮ್ಮನ್ನು ಯಾರು ನೋಡುವರು? ಯಾರು ತಿಳಿದಾರು?” ಅಂದುಕೊಂಡು ಕತ್ತಲಲ್ಲೇ ತಮ್ಮ ಕೆಲಸಗಳನ್ನು ನಡೆಸುವವರ ಗತಿಯನ್ನು ಏನು ಹೇಳಲಿ!
16 ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು, ಕುಂಬಾರನು ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು! ಉಂಟುಮಾಡಿದವನಿಗೆ ಉಂಟುಮಾಡಿದ್ದು, “ನೀನು ನನ್ನನ್ನು ಉಂಟುಮಾಡಲಿಲ್ಲ,” ಎಂತಲೂ, ಮಡಕೆ ಕುಂಬಾರನಿಗೆ, “ನಿನಗೆ ಏನೂ ಗೊತ್ತಿಲ್ಲ,” ಎಂತಲೂ ಹೇಳಬಹುದೇ?
೧೬ಅಯ್ಯೋ, ನೀವು ಎಂಥಾ ಮೂರ್ಖರು! ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು. ಕೆಲಸ ಮಾಡಿದವನಿಗೆ ಮಾಡಲ್ಪಟ್ಟದ್ದು, “ಆತನು ಕೆಲಸ ಮಾಡಲಿಲ್ಲ” ಎಂದು ಹೇಳುವುದೋ? ಇಲ್ಲವೇ, ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸಲ್ಪಟ್ಟದ್ದು, “ಆತನಿಗೆ ವಿವೇಕವಿಲ್ಲ” ಎಂದು ಹೇಳುವುದೋ?
17 ಆದರೂ ಇನ್ನು ಸ್ವಲ್ಪಕಾಲದಲ್ಲಿ ಲೆಬನೋನ್ ಫಲವುಳ್ಳ ಹೊಲವಾಗಿದ್ದು, ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವುದಿಲ್ಲವೋ?
೧೭ಇನ್ನು ಸ್ವಲ್ಪ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು, ಈಗಿನ ತೋಟವು ಅರಣ್ಯವಾಗಿ ಕಾಣಿಸುವುದು.
18 ಆ ದಿನದಲ್ಲಿ ಕಿವುಡರು ಗ್ರಂಥದ ಮಾತುಗಳನ್ನು ಕೇಳುವರು ಮತ್ತು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ, ಅಂಧಕಾರದೊಳಗಿಂದಲೂ ಕಾಣುವುವು.
೧೮ಆ ದಿನದಲ್ಲಿ ಕಿವುಡರು ಶಾಸ್ತ್ರದ ಮಾತುಗಳನ್ನು ಕೇಳುವರು ಮತ್ತು ಕುರುಡರ ಕಣ್ಣುಗಳು ಕತ್ತಲೆಯೊಳಗೂ ಕಾಣುವುದು.
19 ದೀನರ ಸಂತೋಷವು ಯೆಹೋವ ದೇವರಲ್ಲಿ ಹೆಚ್ಚಾಗುವುವು. ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸುವರು.
೧೯ದೀನರು ಯೆಹೋವನಲ್ಲಿ ಹೆಚ್ಚಾಗಿ ಆನಂದಿಸುವರು, ಬಡವರು ಇಸ್ರಾಯೇಲರ ಸದಮಲಸ್ವಾಮಿಯಲ್ಲಿ ಉಲ್ಲಾಸಿಸುವರು.
20 ಭಯಂಕರನು ಇಲ್ಲವಾಗುತ್ತಾನೆ. ಅಪಹಾಸ್ಯ ಮಾಡುವವರು ಕಣ್ಮರೆಯಾಗುತ್ತಾರೆ. ಕೇಡಿಗೆ ಕಾಯುವವರೆಲ್ಲರೂ ನಾಶವಾಗುತ್ತಾರೆ.
೨೦ಏಕೆಂದರೆ ಭಯಂಕರರು ನಿಶ್ಶೇಷವಾಗುವರು, ಧರ್ಮನಿಂದಕರು ನಿರ್ನಾಮವಾಗುವರು.
21 ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.
೨೧ಸುಳ್ಳುಸಾಕ್ಷಿಯಿಂದ ತಪ್ಪು ಹೊರಿಸುವವರೂ, ಚಾವಡಿಯಲ್ಲಿ ದೋಷವನ್ನು ಖಂಡಿಸುವವನಿಗೆ ಉರುಲೊಡ್ಡುವವರೂ, ನ್ಯಾಯವಂತನ ನ್ಯಾಯವನ್ನು ಸುಮ್ಮನೆ ತಪ್ಪಿಸುವವರೂ ಆಗಿರುವ ಅಧರ್ಮನಿರತರೆಲ್ಲರೂ ನಿರ್ಮೂಲವಾಗುವರು.
22 ಆದ್ದರಿಂದ ಅಬ್ರಹಾಮನನ್ನು ವಿಮೋಚಿಸಿದ ಯೆಹೋವ ದೇವರು ಯಾಕೋಬಿನ ಮನೆತನದ ವಿಷಯವಾಗಿ ಹೇಳುವುದೇನೆಂದರೆ, “ಈಗ ಯಾಕೋಬ್ಯರು ನಾಚಿಕೆಪಡುವುದಿಲ್ಲ. ಅವನ ಮುಖವು ಕಳೆಗುಂದುವುದಿಲ್ಲ.
೨೨ಹೀಗಿರಲು ಅಬ್ರಹಾಮನನ್ನು ಉದ್ಧರಿಸಿದ ಯೆಹೋವನು ಯಾಕೋಬನ ಮನೆತನದ ವಿಷಯವಾಗಿ, “ಯಾಕೋಬ್ಯರು, ಇನ್ನು ನಾಚಿಕೆಪಡುವುದಿಲ್ಲ, ಅವರ ಮುಖವು ಇನ್ನು ಕಳೆಗುಂದುವುದಿಲ್ಲ.
23 ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು ತನ್ನ ಮಧ್ಯದಲ್ಲಿ ಕಾಣುವಾಗ ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ, ಯಾಕೋಬಿನ ಪರಿಶುದ್ಧನನ್ನು ಪ್ರತಿಷ್ಠಿಸುವರು, ಇಸ್ರಾಯೇಲಿನ ದೇವರಿಗೆ ಭಯಪಡುವರು.
೨೩ಯಾಕೋಬ ವಂಶದವರು ತಮ್ಮ ಮಧ್ಯದಲ್ಲಿ ನಾನು ನಡೆಸುವ ಕೆಲಸವನ್ನು ನೋಡಿ, ನನ್ನ ನಾಮವೇ ಆರಾಧನೆಗೆ ಅರ್ಹವೆಂದು ಪ್ರತಿಷ್ಠಿಸುವರು; ಹೌದು, ಯಾಕೋಬ್ಯರ ಸದಮಲಸ್ವಾಮಿಯನ್ನು ಪ್ರತಿಷ್ಠೆಪಡಿಸಿ ಇಸ್ರಾಯೇಲರ ದೇವರಿಗೆ ನಡುಗುವರು.
24 ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗೊಣಗುಟ್ಟುವವರು ಬೋಧನೆ ಕಲಿಯುವರು.”
೨೪ತಪ್ಪಿದ ಹೃದಯವುಳ್ಳವರೆಲ್ಲರೂ ವಿವೇಕಿಗಳಾಗುವರು, ಗುಣಗುಟ್ಟುವವರು ಉಪದೇಶವನ್ನು ಕೇಳಿ ನಡೆಯುವರು” ಎಂದು ಹೇಳುತ್ತಾನೆ.