< ಯೆಶಾಯನು 10 >

1 ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಕಾನೂನುಗಳನ್ನು ಬರೆಯುವವರಿಗೆ ಕಷ್ಟ!
ಅಯ್ಯೋ, ಅನ್ಯಾಯವಾದ ತೀರ್ಪುಗಳನ್ನು ತೀರಿಸಿ, ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ.
2 ಇವರು ವಿಧವೆಯರನ್ನು ಸೂರೆಮಾಡಿ, ದಿಕ್ಕಿಲ್ಲದವರಿಂದ ಸುಲಿದುಕೊಂಡು ದೀನರಿಗೆ ನ್ಯಾಯವನ್ನು ತಪ್ಪಿಸಿ, ನನ್ನ ಜನರಲ್ಲಿ ಬಡವರ ನ್ಯಾಯವನ್ನು ತೆಗೆಯಬೇಕೆಂದಿದ್ದಾರೆ.
ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ, ದಿಕ್ಕಿಲ್ಲದವರಿಗೆ ನ್ಯಾಯವನ್ನು ತಪ್ಪಿಸಿ, ಅನಾಥರನ್ನು ಕೊಳ್ಳೆಹೊಡೆದು, ವಿಧವೆಯರನ್ನು ಸೂರೆಮಾಡಬೇಕೆಂದಿದ್ದಾರೆ.
3 ವಿಚಾರಣೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?
ದಂಡನೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ?
4 ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ, ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.
ಕೈದಿಗಳ ಕಾಲ ಕೆಳಗೆ ಮುದುರಿಕೊಂಡು, ಹತರಾದವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ ಇಷ್ಟೆಲ್ಲಾ ನಡೆದರೂ ಯೆಹೋವನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇರುವುದು.
5 “ಅಯ್ಯೋ, ನನ್ನ ಕೋಪದ ಕೋಲಾದ ಅಸ್ಸೀರಿಯವೇ, ನನ್ನ ಕೈಯಲ್ಲಿರುವ ಬೆತ್ತವು ನನ್ನ ಕೋಪವೇ.
ಅಯ್ಯೋ, ಅಶ್ಶೂರವೇ ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೌದ್ರವೇ.
6 ನಾನು ಅವನನ್ನು ಭಕ್ತಿಹೀನ ಜನರಿಗೆ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅಪ್ಪಣೆ ಕೊಡುವೆನು.
ನಾನು ಅವನನ್ನು ಭ್ರಷ್ಟಜನರ ವಿರುದ್ಧವಾಗಿ ಕಳುಹಿಸಿ, ನನ್ನ ಕೋಪಕ್ಕೆ ಗುರಿಯಾದ ನನ್ನ ಪ್ರಜೆಯನ್ನು ಸೂರೆಮಾಡಿ, ಕೊಳ್ಳೆ ಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡುವೆನು.
7 ಅದರ ಅಭಿಪ್ರಾಯವೋ ಹಾಗಲ್ಲ. ಅದರ ಹೃದಯವು ಈ ಪ್ರಕಾರ ಆಲೋಚಿಸುವುದಿಲ್ಲ. ಜನಾಂಗಗಳನ್ನು ಕಡಿದುಬಿಡುವುದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವುದು ಅದರ ಹೃದಯದ ಉದ್ದೇಶವು.
ಅವನ ಅಭಿಪ್ರಾಯವೋ, ಹಾಗಲ್ಲ. ಅನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲ ಮಾಡುವೆನೆಂಬುದೇ ಹೊರತು ಈ ಯೋಚನೆಯು ಅವನ ಮನಸ್ಸಿನಲ್ಲಿ ಇಲ್ಲವೇ ಇಲ್ಲ.
8 ಏಕೆಂದರೆ ಅವನು, ‘ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ?
ಅವನು ಹೇಳುವುದೇನೆಂದರೆ, “ನನ್ನ ಅಧಿಪತಿಗಳೆಲ್ಲಾ ಅರಸರಲ್ಲವೇ?
9 ಕಲ್ನೋ, ಕರ್ಕೆಮೀಷಿನ ಹಾಗಲ್ಲವೋ? ಹಮಾತ್ ಅರ್ಪಾದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗಲ್ಲವೋ?
ಕರ್ಕೆಮೀಷಿನ ಗತಿಯು ಕಲ್ನೋವಿಗೆ ಆಯಿತಲ್ಲವೇ? ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಲ್ಲವೇ? ದಮಸ್ಕದ ಗತಿಯು ಸಮಾರ್ಯಕ್ಕೂ ಸಂಭವಿಸಿತಲ್ಲವೇ?
10 ಯೆರೂಸಲೇಮಿನಲ್ಲಿಯೂ ಸಮಾರ್ಯದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ,
೧೦ಯೆರೂಸಲೇಮಿನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈಮಾಡಿದಂತೆಯೇ,
11 ನಾನು ಸಮಾರ್ಯ ಮತ್ತು ಅದರ ವಿಗ್ರಹಗಳಿಗೆ ಮಾಡಿದಂತೆಯೇ ಯೆರೂಸಲೇಮಿಗೆ ಮತ್ತು ಅದರ ವಿಗ್ರಹಗಳಿಗೆ ಮಾಡುತ್ತೇನೆಯೇ?’”
೧೧ಸಮಾರ್ಯವನ್ನೂ, ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟ ಹಾಗೆ, ಯೆರೂಸಲೇಮನ್ನೂ ಅದರ ವಿಗ್ರಹಗಳನ್ನೂ ಕೆಡವಲಾರೆನೋ?” ಎಂಬುದೇ.
12 ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”
೧೨ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ, “ಅಶ್ಶೂರದ ರಾಜನ ಹೃದಯದ ದೊಡ್ಡಸ್ತಿಕೆಯ ಫಲಕ್ಕೂ, ಅವನ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”
13 ಏಕೆಂದರೆ ಅಸ್ಸೀರಿಯ ತನ್ನೊಳಗೆ ಹೀಗೆ ಅಂದುಕೊಂಡನು, “‘ನನ್ನ ಕೈಯ ಬಲದಿಂದಲೂ ನನ್ನ ಜ್ಞಾನದಿಂದಲೂ ಅದನ್ನು ಮಾಡಿದೆ. ಏಕೆಂದರೆ, ನಾನು ವಿವೇಕಿ. ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿಗಳನ್ನು ಕೊಳ್ಳೆಹೊಡೆದು, ಅದರ ಅರಸರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
೧೩ಏಕೆಂದರೆ ಅವನು ತನ್ನೊಳಗೆ, “ನನ್ನ ಜ್ಞಾನ, ಭುಜಬಲಗಳಿಂದಲೇ ಇದನ್ನು ಮಾಡಿದ್ದೇನೆ. ನಾನೇ ವಿವೇಕವುಳ್ಳ ಜನಾಂಗಗಳ ಮೇರೆಗಳನ್ನು ಕಿತ್ತು, ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ, ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
14 ಜನರ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ; ಹಕ್ಕಿ ಬಿಟ್ಟುಹೋದ ಮೊಟ್ಟೆಗಳನ್ನು ಕೂಡಿಸುವಂತೆ, ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬಾಯಿತೆರೆದು ಕೀಚುಗುಟ್ಟಲು ಯಾರೂ ಇರಲಿಲ್ಲ.’”
೧೪ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ. ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ. ರೆಕ್ಕೆಯಾಡಿಸಿ, ಬಾಯಿ ತೆರೆದು ಕಿಚುಗುಟ್ಟುವವರು ಯಾರೂ ಇಲ್ಲ” ಎಂದು ಅಂದುಕೊಂಡನು.
15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿಕೊಂಡೀತೆ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಕೋಲು ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ಬೆತ್ತ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
೧೫ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಕತ್ತರಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.
16 ಆದಕಾರಣ ಸೇನಾಧೀಶ್ವರ ಯೆಹೋವ ದೇವರು ಅವನ ಕೊಬ್ಬಿದ ಯೋಧರಿಗೆ ಕ್ಷಯವನ್ನು ಉಂಟುಮಾಡುವರು, ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವುದು.
೧೬ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನು ಉಂಟುಮಾಡುವನು. ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಅಸ್ತಿವಾರಕ್ಕೆ ಹತ್ತಿಕೊಳ್ಳುವುದು.
17 ಇಸ್ರಾಯೇಲಿನ ಬೆಳಕು ಬೆಂಕಿಯಾಗುವುದು, ಅದರ ಪರಿಶುದ್ಧರು ಜ್ವಾಲೆಯಂತಿರುವರು, ಅದು ಒಂದೇ ದಿನದಲ್ಲಿ ಅವನ ಮುಳ್ಳು, ದತ್ತೂರಿಗಳನ್ನು ದಹಿಸಿ ನುಂಗಿಬಿಡುವುದು.
೧೭ಇಸ್ರಾಯೇಲರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವುದು. ಅವರ ಪರಿಶುದ್ಧನು ಜ್ವಾಲೆಯಂತಿರುವನು. ಅದು ಒಂದೇ ದಿನದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವುದು.
18 ದೇಹಾತ್ಮದಂಥ ಅದರ ಉದ್ಯಾನವನವನ್ನೂ, ಫಲಭರಿತ ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
೧೮ಅದು ದೇಹಾತ್ಮಗಳನ್ನು ಉಳಿಸದೇ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲ ಮಾಡುವುದು. ದೇಶವೋ ರೋಗಿಯಂತೆ ನಾಶವಾಗುವುದು.
19 ಅವನ ಉಳಿದ ವನವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆಯಾಗಿರುವುದು.
೧೯ಅದರ ವನವೃಕ್ಷಗಳ ಸಂಖ್ಯೆಯು ಒಂದು ಚಿಕ್ಕಮಗುವೂ ಸಹ ಎಣಿಸಿ ಬರೆಯುವಷ್ಟು ಕಡಿಮೆಯಾಗುವುದು.
20 ಆ ದಿನದಲ್ಲಿ ಇಸ್ರಾಯೇಲರಲ್ಲಿ ಉಳಿದವರೂ, ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು, ಇಸ್ರಾಯೇಲಿನ ಪರಿಶುದ್ಧರಾದ ಯೆಹೋವ ದೇವರ ಸತ್ಯವಾಗಿ ಆಧಾರಮಾಡಿಕೊಳ್ಳುವರು.
೨೦ಆ ದಿನದಲ್ಲಿ ಇಸ್ರಾಯೇಲರೊಳಗೆ ಉಳಿದವರು, ಯಾಕೋಬಿನ ಮನೆತನದವರಲ್ಲಿ ತಪ್ಪಿಸಿಕೊಂಡವರು ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಯೆಹೋವನೆಂಬ ಇಸ್ರಾಯೇಲರ ಸದಮಲಸ್ವಾಮಿಯನ್ನು ನಂಬಿಗಸ್ತರಾಗಿ ಆಧಾರಮಾಡಿಕೊಳ್ಳುವರು.
21 ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ಹಿಂದಿರುಗುವರು.
೨೧ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.
22 ತಮ್ಮ ಜನರಾದ ಇಸ್ರಾಯೇಲರು ಸಮುದ್ರದ ಉಸುಬಿನಂತಿದ್ದರೂ, ಅವರಲ್ಲಿ ಉಳಿದವರು ಮಾತ್ರ ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು; ಹಾಗೂ ಸಂಪೂರ್ಣವಾಗಿ ನ್ಯಾಯಸಮ್ಮತವಾದುದು.
೨೨ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.
23 ಏಕೆಂದರೆ ಸೇನಾಧೀಶ್ವರ ಯೆಹೋವ ದೇವರೆಂಬ ಕರ್ತ ಆಗಿರುವವರು, ಎಲ್ಲಾ ದೇಶದ ಮಧ್ಯದಲ್ಲಿ ತಿಳಿಸಿದ ವಿನಾಶವನ್ನು ಉಂಟುಮಾಡುವರು.
೨೩ಏಕೆಂದರೆ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಯಿಸಲ್ಪಟ್ಟ ನಾಶನವನ್ನು ಉಂಟುಮಾಡುವನು.
24 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರಂತೆ ನಿಮ್ಮನ್ನು ಕೋಲಿನಿಂದ ಹೊಡೆದು, ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಸ್ಸೀರಿಯದವರಿಗೆ ಭಯಪಡಬೇಡಿರಿ.
೨೪ಆದುದರಿಂದ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಐಗುಪ್ತರು ಮಾಡಿದಂತೆ, ನಿಮ್ಮನ್ನು ಕೋಲಿನಿಂದ ಹೊಡೆದು, ನಿಮ್ಮ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ.
25 ನನ್ನ ಕೋಪವು ಅವರ ದಂಡನೆಗಾಗುವುದು; ಆದ್ದರಿಂದ ಇನ್ನು ಸ್ವಲ್ಪಕಾಲದಲ್ಲಿ ಕೋಪವು ತೀರಿಹೋಗುವುದು.
೨೫ಇನ್ನು ಸ್ವಲ್ಪ ಕಾಲದೊಳಗೆ ನಿಮ್ಮ ಮೇಲಿನ ಉಗ್ರವು ತೀರಿ, ನನ್ನ ಕೋಪವು ಅವರ ನಾಶನಕ್ಕಾಗುವುದು.”
26 ಸೇನಾಧೀಶ್ವರ ಯೆಹೋವ ದೇವರು ಓರೇಬ್ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ, ಅವರು ಕೋಲನ್ನು ಸಮುದ್ರದ ಮೇಲೆ ಚಾಚಿ, ಈಜಿಪ್ಟಿನವರ ಮೇಲೆ ಎತ್ತಿದಂತೆ ಎತ್ತುವರು.
೨೬ಸೇನಾಧೀಶ್ವರನಾದ ಯೆಹೋವನು ಓರೇಬ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ, ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತರ ಮೇಲೆ ಎತ್ತಿದಂತೆ ಎತ್ತುವನು.
27 ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವುದು ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
೨೭ಆ ದಿನದಲ್ಲಿ, ಅವರು ಹೊರಿಸಿದ ಹೊರೆಯು, ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ಕುತ್ತಿಗೆಯಿಂದಲೂ ತೊಲಗುವುದು, ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
28 ಅವರು ಅಯ್ಯಾಥಿಗೆ ಬಂದರು. ಮಿಗ್ರೋನನ್ನು ಹಾದು ಹೋಗಿ, ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟಿದ್ದಾರೆ.
೨೮ಶತ್ರುಗಳು ಅಯ್ಯಾಥಿನ ಮೇಲೆ ದಂಡೆತ್ತಿ ಬಂದಿದ್ದಾರೆ, ಮಿಗ್ರೋನನ್ನು ಹಾದುಹೋಗಿದ್ದಾರೆ; ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ.
29 ಅವರು ಕಣಿವೆಯನ್ನು ದಾಟಿದ್ದಾರೆ; ಗಿಬೆಯದಲ್ಲಿ ಇಳುಕೊಂಡಿದ್ದಾರೆ. ರಾಮಾ ಜನತೆ ಹೆದರುತ್ತಿದೆ; ಸೌಲನ ಗಿಬೆಯದ ಜನತೆ ಓಡಿಹೋಗಿದೆ.
೨೯ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.
30 ಗಲ್ಲೀಮ್ ಮಗಳೇ, ನಿನ್ನ ಸ್ವರವೆತ್ತಿ ಕೂಗು; ಬಡ ಅನಾತೋತೇ, ಲಯೆಷಿನವರೆಗೂ ಕೇಳಿಸುವಂತೆ ಕೂಗು.
೩೦ಗಲ್ಲೀಮ್ ಗ್ರಾಮವೇ, ಕೂಗಿ ಅರಚಿಕೋ! ಲಯೆಷವೇ, ಕಿವಿಗೊಡು! ಅನಾತೋತೇ, ಪ್ರತಿಧ್ವನಿ ಕೊಡು!
31 ಮದ್ಮೇನ ದಿಕ್ಕುಪಾಲಾಯಿತು. ಗೆಬೀಮಿನ ನಿವಾಸಿಗಳು ಓಡಿಹೋಗಲು ಕೂಡಿಕೊಂಡರು.
೩೧ಮದ್ಮೇನ ದಿಕ್ಕಾಪಾಲಾಯಿತು. ಗೇಬೀಮಿನ ನಿವಾಸಿಗಳು ವಲಸೆ ಹೋದರು.
32 ಆ ದಿನದಲ್ಲಿ ಅವರು ನೋಬಿನಲ್ಲಿ ಇಳಿದುಕೊಳ್ಳುವರು. ಚೀಯೋನ್ ನಗರಿಯ ಪರ್ವತದ ಕಡೆಗೆ, ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
೩೨ಇದೇ ದಿನ ಶತ್ರುಗಳು ನೋಬಿನಲ್ಲಿ ಬೀಡುಬಿಡುವರು. ಚೀಯೋನ್ ನಗರಿಯ ಪರ್ವತದ ಕಡೆಗೆ ಯೆರೂಸಲೇಮಿನ ಬೆಟ್ಟದ ಕಡೆಗೆ ಕೈ ಬೀಸುತ್ತಾರೆ.
33 ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು, ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
೩೩ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸುವನು. ಅವು ಧಡಮ್ಮನೆ ಬೀಳುವವು. ಉನ್ನತವಾದ ವೃಕ್ಷಗಳು ಕಡಿದು ಕೆಳಗೆ ಬೀಳುವವು. ಎತ್ತರವಾದ ಮರಗಳು ನೆಲದ ಪಾಲಾಗುವವು.
34 ಅವರು ಅಡವಿಯ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನು ಪರಾಕ್ರಮಿಯಾಗಿರುವವರ ಮುಂದೆ ಬಿದ್ದುಹೋಗುವುದು.
೩೪ಆತನು ಅಡವಿಯ ಪೊದೆಗಳನ್ನು ಕಬ್ಬಿಣದ ಕೊಡಲಿಯಿಂದ ಕಡಿದುಬಿಡುವನು. ಲೆಬನೋನಿನ ವನವು ಬಲಿಷ್ಠನಾದವನ ಮುಂದೆ ಬಿದ್ದುಹೋಗುವುದು.

< ಯೆಶಾಯನು 10 >