< ಆದಿಕಾಂಡ 45 >

1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.
ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, “ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ” ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ.
2 ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ, ಹೊರಗಿದ್ದ ಈಜಿಪ್ಟಿನವರೂ, ಫರೋಹನ ಮನೆಯವರೂ ಕೇಳಿಸಿಕೊಂಡರು.
ಅವನು ಗಟ್ಟಿಯಾಗಿ ಅತ್ತದ್ದರಿಂದ ಐಗುಪ್ತರಿಗೂ, ಫರೋಹನ ಮನೆಯವರಿಗೂ ಆ ಶಬ್ದವು ಕೇಳಿಸಿತು.
3 ಯೋಸೇಫನು ತನ್ನ ಸಹೋದರರಿಗೆ, “ನಾನು ಯೋಸೇಫನು! ನನ್ನ ತಂದೆಯು ಬದುಕಿದ್ದಾನೋ?” ಎಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ, ಅವನಿಗೆ ಉತ್ತರ ಕೊಡಲಾರದೆ ಹೋದರು.
ಅವನು, “ತನ್ನ ಅಣ್ಣತಮ್ಮಂದಿರಿಗೆ ನಾನು ಯೋಸೇಫನು, ನನ್ನ ತಂದೆ ಇನ್ನೂ ಇದ್ದಾನೋ?” ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು.
4 ಆಗ ಯೋಸೇಫನು ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿರಿ,” ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, “ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ!
ಯೋಸೇಫನು, “ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ” ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ “ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ.
5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.
ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು.
6 ಏಕೆಂದರೆ ಈ ಎರಡು ವರ್ಷಗಳವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರ್ಷಗಳವರೆಗೆ ಬಿತ್ತುವುದೂ, ಕೊಯ್ಯುವುದೂ ಇರುವುದಿಲ್ಲ.
ದೇಶಕ್ಕೆ ಬರ ಬಂದು ಎರಡು ವರ್ಷವಾಗಿದೆಯಷ್ಟೆ. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ, ಕೊಯ್ಯುವುದಕ್ಕಾಗಲಿ, ಅವಕಾಶವಿಲ್ಲ.
7 ಆದ್ದರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವುದಕ್ಕೂ, ದೊಡ್ಡ ಬರಗಾಲದಿಂದ ನಿಮ್ಮ ಪ್ರಾಣಗಳನ್ನು ಉಳಿಸುವುದಕ್ಕೂ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ.
ನಿಮ್ಮ ಸಂತತಿ ಭೂಮಿಯ ಮೇಲೆ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ, ಬಹು ಜನವಾಗುವಂತೆಯೂ ದೇವರು ನನ್ನನ್ನು ಮೊದಲು ಕಳುಹಿಸಿದನು.
8 “ಆದ್ದರಿಂದ ಈಗ ನೀವಲ್ಲ, ದೇವರು ತಾವೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ದೇವರು ನನ್ನನ್ನು ಫರೋಹನಿಗೆ ತಂದೆಯಾಗಿಯೂ, ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಈಜಿಪ್ಟ್ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾರೆ.
“ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನಲ್ಲದೆ ನೀವು ಕಳುಹಿಸಲಿಲ್ಲ. ನನ್ನ ತಂದೆಯು ನನ್ನನ್ನು ಫರೋಹನ ಮಂತ್ರಿಯನ್ನಾಗಿಯೂ, ಫರೋಹನ ಅರಮನೆಯಲ್ಲಿ ಅಧಿಪತಿಯನ್ನಾಗಿಯೂ, ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿಯೂ ಮಾಡಿದ್ದಾನೆ.
9 ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ, ‘ನಿನ್ನ ಮಗ ಯೋಸೇಫನನ್ನು ದೇವರು ಈಜಿಪ್ಟಿಗೆಲ್ಲಾ ಪ್ರಭುವನ್ನಾಗಿ ಮಾಡಿದ್ದಾರೆ, ತಡಮಾಡದೆ ನನ್ನ ಬಳಿಗೆ ಬೇಗ ಬಾ.
ನೀವು ಬೇಗ ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ‘ನಿನ್ನ ಮಗನಾದ ಯೋಸೇಫನು ಹೀಗೆನ್ನುತ್ತಾನೆ, ದೇವರು ನನ್ನನ್ನು ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿ ನೇಮಿಸಿದ್ದಾನೆ. ನೀನು ತಡಮಾಡದೆ ನನ್ನ ಬಳಿಗೆ ಬಾ.
10 ಗೋಷೆನ್ ಪ್ರದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ದನಕುರಿಗಳೂ, ನಿನಗಿದ್ದದ್ದೆಲ್ಲವೂ ನನ್ನ ಸಮೀಪದಲ್ಲಿರಬೇಕು.
೧೦ಗೋಷೆನ್ ಸೀಮೆಯಲ್ಲಿ ನೀನು ವಾಸಮಾಡಬಹುದು. ನೀನೂ, ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ಕುರಿದನಗಳೂ ಮೊದಲಾದ ಎಲ್ಲವೂ ನನ್ನ ಬಳಿಯಲ್ಲೇ ಇರಬೇಕು.
11 ಅಲ್ಲಿ ನಿನ್ನನ್ನು ಪೋಷಿಸುವೆನು. ಏಕೆಂದರೆ ಇನ್ನೂ ಕ್ಷಾಮದ ಐದು ವರ್ಷಗಳಿವೆ. ನಿನಗೂ, ನಿನ್ನ ಮನೆಗೂ, ನಿನಗಿರುವುದೆಲ್ಲದಕ್ಕೂ ಬಡತನವಾಗಬಾರದು’ ಎಂದು ಹೇಳಿರಿ.
೧೧ಈ ಬರಗಾಲ ಮುಗಿಯುವುದಕ್ಕೆ ಇನ್ನೂ ಐದು ವರ್ಷ ಹೋಗಬೇಕು. ಆದ್ದರಿಂದ ನಿನಗೂ, ನಿನ್ನ ಮನೆಯವರಿಗೂ ನಿನಗಿರುವ ಎಲ್ಲವುಗಳಿಗೂ ಬಡತನವುಂಟಾಗದಂತೆ ಇಲ್ಲಿ ನಿನ್ನನ್ನು ಪೋಷಿಸುವೆನೆಂದು’ ಹೇಳುತ್ತಾನೆ ಎಂಬುದಾಗಿ ತಿಳಿಸಿರಿ.
12 “ನಿಮ್ಮ ಸಂಗಡ ಮಾತನಾಡುವುದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ, ನನ್ನ ಸಹೋದರ ಬೆನ್ಯಾಮೀನನ ಕಣ್ಣುಗಳೂ ನೋಡಿವೆ.
೧೨“ನಾನು ಸ್ವತಃ ನಿಮ್ಮ ಸಂಗಡ ಮಾತನಾಡಿದ್ದೆನಲ್ಲಾ. ಅದಕ್ಕೆ ನೀವೇ ಸಾಕ್ಷಿ. ನನ್ನ ಒಡಹುಟ್ಟಿದವನಾದ ಬೆನ್ಯಾಮೀನನೂ ಸಾಕ್ಷಿ.
13 ಹೀಗಿರಲಾಗಿ ನೀವು ಈಜಿಪ್ಟ್ ದೇಶದಲ್ಲಿ ನನಗಿರುವ ಎಲ್ಲಾ ಘನತೆಯನ್ನೂ, ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ,” ಎಂದನು.
೧೩ಐಗುಪ್ತ ದೇಶದಲ್ಲಿ ನನಗಿರುವ ಎಲ್ಲಾ ವೈಭವವನ್ನೂ, ನೀವು ಕಂಡಿದ್ದೆಲ್ಲವನ್ನು ತಂದೆಗೆ ತಿಳಿಸಿ ಬೇಗನೆ ಅವನನ್ನು ಇಲ್ಲಿಗೆ ಕರೆದುಕೊಂಡು ಬರಬೇಕು” ಎಂದು ಹೇಳಿ,
14 ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು.
೧೪ತನ್ನ ತಮ್ಮನಾದ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು.
15 ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.
೧೫ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು.
16 ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ, ಅವನ ಸೇವಕರಿಗೂ ಅದು ಮೆಚ್ಚಿಗೆಯಾಗಿತ್ತು.
೧೬ಯೋಸೇಫನ ಅಣ್ಣತಮ್ಮಂದಿರು ಬಂದ ಸಮಾಚಾರವು ಫರೋಹನ ಮನೆಯವರಿಗೆ ತಿಳಿದಾಗ ಫರೋಹನಿಗೂ ಅವನ ಪರಿವಾರದವರಿಗೂ ಸಂತೋಷವಾಯಿತು.
17 ಆಗ ಫರೋಹನು ಯೋಸೇಫನಿಗೆ, “ನಿನ್ನ ಸಹೋದರರಿಗೆ ಹೀಗೆ ಮಾಡಲು ಹೇಳು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ವಸ್ತುಗಳನ್ನು ಹೇರಿ, ಕಾನಾನ್ ದೇಶಕ್ಕೆ ಹೋಗಿ,
೧೭ಫರೋಹನು ಯೋಸೇಫನನ್ನು ಕರೆಯಿಸಿ, “ನೀನು ನಿನ್ನ ಅಣ್ಣತಮ್ಮಂದಿರಿಗೆ ತಿಳಿಸಬೇಕಾದ ನನ್ನ ಆಜ್ಞೆ ಏನೆಂದರೆ ‘ನಿಮ್ಮ ಕತ್ತೆಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ದೇಶಕ್ಕೆ ಹೋಗಿ,
18 ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’
೧೮ನಿಮ್ಮ ತಂದೆಯನ್ನೂ ಮನೆಯವರನ್ನೂ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ನಾನು ನಿಮಗೆ ಐಗುಪ್ತ ದೇಶದಲ್ಲಿ ದೊರಕುವ ಉತ್ತಮ ವಸ್ತುಗಳನ್ನು ನಿಮಗೆ ಕೊಡುವೆನು ಮತ್ತು ನೀವು ಈ ದೇಶದ ಸುಖವನ್ನು ಅನುಭವಿಸುವಿರಿ.
19 “ಇದನ್ನು ಸಹ ನಿನ್ನ ಸಹೋದರರು ಹೇಳುವಂತೆ ನಿನಗೆ ಅಪ್ಪಣೆಯಾಗಿದೆ: ‘ಈಜಿಪ್ಟ್ ದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ, ಹೆಂಡತಿಯರಿಗಾಗಿಯೂ ಬಂಡಿಗಳನ್ನು ತೆಗೆದುಕೊಂಡುಹೋಗಿ, ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ.
೧೯ಮತ್ತು ನಿಮ್ಮ ಹೆಂಡತಿ ಮಕ್ಕಳಿಗೋಸ್ಕರ ಐಗುಪ್ತ ದೇಶದಿಂದ ರಥಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ.
20 ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಈಜಿಪ್ಟ್ ದೇಶದಲ್ಲಿರುವ ಉತ್ತಮವಾದದ್ದೆಲ್ಲಾ ನಿಮ್ಮದೇ,’” ಎಂದನು.
೨೦ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಐಗುಪ್ತ ದೇಶದಲ್ಲೆಲ್ಲಾ ಇರುವ ಉತ್ತಮ ವಸ್ತುಗಳು ನಿಮ್ಮದೇ’” ಎಂದು ಹೇಳಿದನು.
21 ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ, ಮಾರ್ಗಕ್ಕೋಸ್ಕರ ಆಹಾರವನ್ನೂ ಕೊಟ್ಟನು.
೨೧ಇಸ್ರಾಯೇಲನ ಮಕ್ಕಳು ಅದೇ ರೀತಿಯಾಗಿ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ರಥಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು.
22 ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು.
೨೨ಇದಲ್ಲದೆ ಪ್ರತಿಯೊಬ್ಬನಿಗೂ ಶ್ರೇಷ್ಠ ವಸ್ತ್ರಗಳನ್ನು ಕೊಟ್ಟನು. ಬೆನ್ಯಾಮೀನನಿಗೋ ಮುನ್ನೂರು ಬೆಳ್ಳಿ ನಾಣ್ಯಗಳನ್ನೂ ಹಾಗೂ ಐದು ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು.
23 ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.
೨೩ತನ್ನ ತಂದೆಗೋಸ್ಕರ ಐಗುಪ್ತ ದೇಶದ ಒಳ್ಳೆಯ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ, ಹತ್ತು ಹೆಣ್ಣುಕತ್ತೆಗಳ ಮೇಲೆ ತನ್ನ ತಂದೆಗೆ ಪ್ರಯಾಣಕ್ಕೆ ಬೇಕಾದ ದವಸ ಧಾನ್ಯಗಳನ್ನು, ರೊಟ್ಟಿ ಮತ್ತು ಇತರ ಆಹಾರವನ್ನು ಕಳುಹಿಸಿದನು.
24 ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು.
೨೪ಆಗ ತನ್ನ ಅಣ್ಣತಮ್ಮಂದಿರಿಗೆ, “ನೀವು ದಾರಿಯಲ್ಲಿ ಜಗಳಮಾಡಬೇಡಿರಿ” ಎಂದು ಬುದ್ಧಿ ಹೇಳಿ ಅವರಿಗೆ ಹೋಗುವುದಕ್ಕೆ ಅಪ್ಪಣೆಕೊಟ್ಟನು. ಅವರು ಹೊರಟು ಹೋದರು.
25 ಅವರು ಈಜಿಪ್ಟಿನಿಂದ ಹೊರಟುಹೋಗಿ ಕಾನಾನಿನಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದು,
೨೫ಅವರು ಐಗುಪ್ತ ದೇಶವನ್ನು ಬಿಟ್ಟು ಕಾನಾನ್ ದೇಶಕ್ಕೆ ಸೇರಿ ತಂದೆಯಾದ ಯಾಕೋಬನ ಬಳಿಗೆ ಬಂದರು.
26 “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ! ಅವನೇ ಈಜಿಪ್ಟ್ ದೇಶವನ್ನೆಲ್ಲಾ ಆಳುತ್ತಿದ್ದಾನೆ,” ಎಂದು ಅವನಿಗೆ ತಿಳಿಸಿದಾಗ, ಅವನು ಆಶ್ಚರ್ಯಪಟ್ಟನು, ಅವರನ್ನು ನಂಬಲಿಲ್ಲ.
೨೬ಅವನಿಗೆ, “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ ಅವನು ಐಗುಪ್ತ ದೇಶದ ಸರ್ವಾಧಿಕಾರಿಯಾಗಿದ್ದಾನೆ” ಎಂದು ತಿಳಿಸಲು, ಅವನು ಆಶ್ಚರ್ಯಪಟ್ಟು ನಂಬಲಿಲ್ಲ.
27 ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದರು. ಅವನನ್ನು ಕರೆದುಕೊಂಡು ಹೋಗುವುದಕ್ಕೆ ಯೋಸೇಫನು ಕಳುಹಿಸಿದ ರಥಗಳನ್ನು ಅವನು ನೋಡಿದಾಗ ಯಾಕೋಬನ ಆತ್ಮವು ಉಜ್ಜೀವಿಸಿತು.
೨೭ತರುವಾಯ ಯೋಸೇಫನು ಹೇಳಿ ಕಳುಹಿಸಿದ್ದ ಎಲ್ಲಾ ಮಾತುಗಳನ್ನು ಕೇಳಿ ತನ್ನ ಪ್ರಯಾಣಕ್ಕೋಸ್ಕರ ಯೋಸೇಫನ ಕಡೆಯಿಂದ ಬಂದ ರಥಗಳನ್ನು ನೋಡಿದಾಗ ಯಾಕೋಬನ ಆತ್ಮವು ಉಲ್ಲಾಸಗೊಂಡಿತು, ಅಲ್ಲದೆ ಅವನಿಗೆ ಹೊಸ ಜೀವ ಬಂದಂತಾಯಿತು.
28 ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.
೨೮ಆಗ ಇಸ್ರಾಯೇಲನು, “ನನ್ನ ಮಗನಾದ ಯೋಸೇಫನು ಜೀವಂತವಾಗಿದ್ದಾನೆ. ನಾನು ಸಾಯುವುದಕ್ಕಿಂತ ಮೊದಲು ಹೋಗಿ ಅವನನ್ನು ನೋಡುವೆನು” ಎಂದನು.

< ಆದಿಕಾಂಡ 45 >