< ಆದಿಕಾಂಡ 40 >

1 ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು.
ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಗಳನ್ನು ಕೊಡುವವನೂ, ಆಹಾರಗಳನ್ನು ಮಾಡಿ ಕೊಡುವವನೂ ತಮ್ಮ ಅರಸನಿಗೆ ವಿರೋಧವಾಗಿ ಅಪರಾಧ ಮಾಡಿದರು.
2 ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು,
ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಿಸಿಕೊಂಡು,
3 ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು.
ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು
4 ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.
ಸೆರೆಮನೆಯ ಅಧಿಪತಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. ಹೀಗೆ ಅವರು ಕೆಲವು ಕಾಲ ಸೆರೆಯಲ್ಲಿದ್ದರು.
5 ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು.
ಐಗುಪ್ತ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ಅಡಿಗೆ ಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು.
6 ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು.
ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಬಹು ಚಿಂತೆಯುಳ್ಳವರಾಗಿ ಕಾಣಿಸಿದರು.
7 ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು.
ಅದನ್ನು ಅವನು ನೋಡಿ, “ನಿಮ್ಮ ಮುಖವು ಈ ಹೊತ್ತು ಏಕೆ ಕಳೆಗುಂದಿದೆ?” ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು.
8 ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.
ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು.
9 ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು.
ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನ ಮುಂದೆ ಕಂಡೆನು.
10 ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು.
೧೦ಅದಕ್ಕೆ ಮೂರು ದ್ರಾಕ್ಷಾಲತೆಯ ಕೊಂಬೆಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು.
11 ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು.
೧೧ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು” ಎಂದು ಹೇಳಿದನು.
12 ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.
೧೨ಅದಕ್ಕೆ ಯೋಸೇಫನು, “ಆ ಕನಸಿನ ಅರ್ಥವೇನೆಂದರೆ, ಆ ಮೂರು ದ್ರಾಕ್ಷಾಲತೆಯ ಕೊಂಬೆಗಳೇ ಮೂರು ದಿನಗಳು.
13 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ.
೧೩ಈ ಹೊತ್ತಿಗೆ ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ, ನಿನ್ನ ಉದ್ಯೋಗಕ್ಕೆ ಪುನಃ ನಿನ್ನನ್ನು ನೇಮಿಸುವನು. ನೀನು ಮೊದಲು ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ.
14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು.
೧೪ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ದಯೆ ತೋರಿಸಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು.
15 ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು.
೧೫ಏಕೆಂದರೆ ನಾನು ಇಬ್ರಿಯ ದೇಶದವನು. ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನು ಯಾವ ತಪ್ಪು ಮಾಡದೆ ಸೆರೆಯಲ್ಲಿ ಬಿದ್ದಿರುವೆನು” ಅಂದನು.
16 ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.
೧೬ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಅಡಿಗೆಭಟ್ಟರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ, ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು, “ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.
17 ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು.
೧೭ಮೇಲಿನ ಪುಟ್ಟಿಯಲ್ಲಿ ಫರೋಹನಿಗೋಸ್ಕರ ಎಲ್ಲಾ ವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿಂದುಹಾಕಿದವು” ಎಂದು ಹೇಳಿದನು.
18 ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು.
೧೮ಅದಕ್ಕೆ ಯೋಸೇಫನು, “ನಿನ್ನ ಕನಸಿನ ಅರ್ಥವೇನೆಂದರೆ, ಆ ಮೂರು ಪುಟ್ಟಿಗಳೇ ಮೂರು ದಿನಗಳು.
19 ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
೧೯ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ತೆಗೆಸುವನು, ನಿನ್ನನ್ನು ಮರಕ್ಕೆ ತೂಗು ಹಾಕಿಸುವನು, ಪಕ್ಷಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು” ಎಂದನು.
20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು.
೨೦ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು.
21 ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು.
೨೧ಪಾನದಾಯಕರ ಮುಖ್ಯಸ್ಥನನ್ನು ಪುನಃ ಅವನ ಉದ್ಯೋಗಕ್ಕೆ ನೇಮಿಸಿದನು. ಅವನು ಪಾನ ಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು.
22 ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು.
೨೨ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು.
23 ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.
೨೩ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.

< ಆದಿಕಾಂಡ 40 >