< ಆದಿಕಾಂಡ 11 >
1 ಆ ಕಾಲದಲ್ಲಿ ಭೂಲೋಕದಲ್ಲೆಲ್ಲಾ ಒಂದೇ ಭಾಷೆಯಿತ್ತು. ಭಾಷಾಭೇದವೇನೂ ಇರಲಿಲ್ಲ.
೧ಆಗ ಭೂಲೋಕದವರೆಲ್ಲರಿಗೂ ಒಂದೇ ಭಾಷೆ; ಒಂದೇ ಮಾತು ಇತ್ತು. ಭಾಷಾಭೇದಗಳೇನೂ ಇರಲಿಲ್ಲ.
2 ಜನರು ಪೂರ್ವದಿಕ್ಕಿಗೆ ಪ್ರಯಾಣ ಮಾಡುವಾಗ, ಶಿನಾರ್ ದೇಶದ ಬಯಲನ್ನು ಕಂಡು ಅಲ್ಲಿ ವಾಸಮಾಡಿದರು.
೨ಜನರು ಪೂರ್ವ ದಿಕ್ಕಿಗೆ ಪ್ರಯಾಣಮಾಡುತ್ತಿರುವಾಗ ಶಿನಾರ್ ದೇಶದ ಬಯಲು ಸೀಮೆಯನ್ನು ಕಂಡು ಅಲ್ಲೇ ನೆಲೆಸಿದರು.
3 ಅಲ್ಲಿ ಅವರು, “ಬನ್ನಿರಿ ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು.
೩“ಅವರೆಲ್ಲರೂ ಬನ್ನಿ, ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು.
4 ಅನಂತರ ಅವರು, “ಬನ್ನಿರಿ, ನಾವು ಭೂಮಿಯ ಮೇಲೆ ಪಟ್ಟಣವನ್ನು ಕಟ್ಟೋಣ. ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನು ನಮಗೋಸ್ಕರವಾಗಿ ಕಟ್ಟಿಕೊಂಡು, ನಮಗೆ ಹೆಸರು ಸಂಪಾದಿಸಿಕೊಳ್ಳೋಣ. ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರುವುದಕ್ಕೆ ಆಸ್ಪದವಾಗುವದಿಲ್ಲ,” ಎಂದುಕೊಂಡರು.
೪ಅವರು, “ಬನ್ನಿರಿ, ಒಂದು ಪಟ್ಟಣವನ್ನು ಕಟ್ಟೋಣ, ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಸಂಪಾದಿಸಿಕೊಳ್ಳೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಾಗುವುದಿಲ್ಲ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
5 ಜನರು ಕಟ್ಟುತ್ತಿದ್ದ ಪಟ್ಟಣವನ್ನೂ ಗೋಪುರವನ್ನೂ ನೋಡುವುದಕ್ಕೆ ಯೆಹೋವ ದೇವರು ಇಳಿದು ಬಂದರು.
೫ಮನುಷ್ಯರು ಕಟ್ಟುತ್ತಿದ್ದ ಆ ಪಟ್ಟಣವನ್ನೂ, ಗೋಪುರವನ್ನೂ ನೋಡುವುದಕ್ಕೆ ಯೆಹೋವನು ಇಳಿದು ಬಂದನು.
6 ಯೆಹೋವ ದೇವರು, “ಇವರಿಗೆ ಒಂದೇ ಜನಾಂಗವೂ ಒಂದೇ ಭಾಷೆಯೂ ಇದೆ. ಇವರು ಇದನ್ನು ಮಾಡಲಾರಂಭಿಸಿದ್ದಾರೆ. ಈಗ ಇನ್ನು ಮುಂದೆ ಇವರು ಮಾಡುವುದಕ್ಕೆ ಉದ್ದೇಶಿಸುವುದು ಇವರಿಗೆ ಅಸಾಧ್ಯವಾಗುವುದಿಲ್ಲ.
೬ನೋಡಿದ ಮೇಲೆ ಯೆಹೋವನು, “ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇವರು ಇಷ್ಟು ದೊಡ್ಡ ಯೋಜನೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲಾರಂಭಿಸಿದ್ದಾರೆ. ಇನ್ನು ಮುಂದೆ ಇವರು ಏನು ಮಾಡಲು ಉದ್ದೇಶಿಸಿದರೂ ಇವರಿಗೆ ಯಾವುದೂ ಅಸಾಧ್ಯವಾಗುವುದಿಲ್ಲ.
7 ನಾವು ಇಳಿದು ಹೋಗಿ, ಇವರು ಒಬ್ಬರ ಮಾತನ್ನು ಒಬ್ಬರು ತಿಳಿಯದಂತೆ, ಇವರ ಭಾಷೆಯನ್ನು ಗಲಿಬಿಲಿ ಮಾಡೋಣ,” ಎಂದರು.
೭ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿ ಮಾಡೋಣ ಬನ್ನಿ” ಎಂದನು.
8 ಆದ್ದರಿಂದ ಯೆಹೋವ ದೇವರು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿದರು. ಆಗ ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು.
೮ಯೆಹೋವನು ಅದೇ ಪ್ರಕಾರ ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿ ಬಿಟ್ಟನು. ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು.
9 ಆದಕಾರಣ ಅದಕ್ಕೆ, ಬಾಬೆಲ್ ಎಂದು ಹೆಸರಾಯಿತು. ಏಕೆಂದರೆ ಅಲ್ಲಿ ಯೆಹೋವ ದೇವರು ಇಡೀ ಜಗತ್ತಿನ ಭಾಷೆಗಳನ್ನು ಗಲಿಬಿಲಿ ಮಾಡಿದರು. ಅಲ್ಲಿಂದ ಯೆಹೋವ ದೇವರು ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿಬಿಟ್ಟರು.
೯ಸಮಸ್ತ ಲೋಕದ ಭಾಷೆಯನ್ನು ಯೆಹೋವನು ಅಲ್ಲಿ ಗಲಿಬಿಲಿ ಮಾಡಿ, ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ (ದೇವರ ಬಾಗಿಲು) ಎಂಬ ಹೆಸರಾಯಿತು.
10 ಶೇಮನ ವಂಶಾವಳಿ: ಶೇಮನು ನೂರು ವರ್ಷದವನಾಗಿದ್ದಾಗ, ಎಂದರೆ, ಪ್ರಳಯವಾಗಿ ಎರಡು ವರ್ಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
೧೦ಶೇಮನ ವಂಶವೃಕ್ಷ: ಜಲಪ್ರಳಯವು ಕಳೆದು ಎರಡು ವರ್ಷಗಳಾದ ಮೇಲೆ ಶೇಮನು ನೂರು ವರ್ಷದವನಾಗಿ ಅರ್ಪಕ್ಷದನನ್ನು ಪಡೆದನು.
11 ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ, ಶೇಮನು ಐನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೧೧ಶೇಮನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರ್ಷ ಬದುಕಿದನು.
12 ಅರ್ಪಕ್ಷದನು ಮೂವತ್ತೈದು ವರ್ಷದವನಾಗಿರುವಾಗ, ಅವನಿಂದ ಶೆಲಹನು ಹುಟ್ಟಿದನು.
೧೨ಅರ್ಪಕ್ಷದನು ಮೂವತ್ತೈದು ವರ್ಷದವನಾಗಿ ಶೆಲಹನನ್ನು ಪಡೆದನು.
13 ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೧೩ಅರ್ಪಕ್ಷದನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.
14 ಶೆಲಹನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ಏಬೆರನು ಹುಟ್ಟಿದನು.
೧೪ಶೆಲಹನು ಮೂವತ್ತನಾಲ್ಕು ವರ್ಷದವನಾಗಿ ಎಬರನನ್ನು ಪಡೆದನು.
15 ಶೆಲಹನಿಂದ ಏಬೆರನು ಹುಟ್ಟಿದ ಮೇಲೆ, ಶೆಲಹನು ನಾನೂರ ಮೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೧೫ಶೆಲಹನು ಎಬರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.
16 ಏಬೆರನು ಮೂವತ್ತ ನಾಲ್ಕು ವರ್ಷದವನಾಗಿದ್ದಾಗ, ಅವನಿಂದ ಪೆಲೆಗನು ಹುಟ್ಟಿದನು.
೧೬ಎಬರನು ಮೂವತ್ತನಾಲ್ಕು ವರ್ಷದವನಾಗಿ ಪೆಲೆಗನನ್ನು ಪಡೆದನು.
17 ಏಬೆರನಿಂದ ಪೆಲೆಗನು ಹುಟ್ಟಿದ ಮೇಲೆ, ಏಬೆರನು ನಾನೂರ ಮೂವತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೧೭ಎಬರನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರ್ಷ ಬದುಕಿದನು.
18 ಪೆಲೆಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ರೆಗೂವನು ಹುಟ್ಟಿದನು.
೧೮ಪೆಲೆಗನು ಮೂವತ್ತು ವರ್ಷದವನಾಗಿ ರೆಗೂವನನ್ನು ಪಡೆದನು.
19 ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ, ಪೆಲೆಗನು ಇನ್ನೂರ ಒಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೧೯ಪೆಲೆಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರ್ಷ ಬದುಕಿದನು.
20 ರೆಗೂವನು ಮೂವತ್ತೆರಡು ವರ್ಷದವನಾಗಿದ್ದಾಗ, ಅವನಿಂದ ಸೆರೂಗನು ಹುಟ್ಟಿದನು.
೨೦ರೆಗೂವನು ಮೂವತ್ತೆರಡು ವರ್ಷದವನಾಗಿ ಸೆರೂಗನನ್ನು ಪಡೆದನು.
21 ರೆಗೂವನಿಂದ ಸೆರೂಗನು ಹುಟ್ಟಿದ ಮೇಲೆ, ರೆಗೂವನು ಇನ್ನೂರ ಏಳು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೨೧ಸೆರೂಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಏಳು ವರ್ಷ ಬದುಕಿದನು.
22 ಸೆರೂಗನು ಮೂವತ್ತು ವರ್ಷದವನಾಗಿದ್ದಾಗ, ಅವನಿಂದ ನಾಹೋರನು ಹುಟ್ಟಿದನು.
೨೨ಸೆರೂಗನು ಮೂವತ್ತು ವರ್ಷದವನಾಗಿ ನಾಹೋರನನ್ನು ಪಡೆದನು.
23 ಸೆರೂಗನಿಂದ ನಾಹೋರನು ಹುಟ್ಟಿದ ಮೇಲೆ, ಸೆರೂಗನು ಇನ್ನೂರು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೨೩ಸೆರೂಗನು ನಾಹೋರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರು ವರ್ಷ ಬದುಕಿದನು.
24 ನಾಹೋರನು ಇಪ್ಪತ್ತೊಂಬತ್ತು ವರ್ಷದವನಾಗಿದ್ದಾಗ, ಅವನಿಂದ ತೆರಹನು ಹುಟ್ಟಿದನು.
೨೪ನಾಹೋರನು ಇಪ್ಪತ್ತೊಂಭತ್ತು ವರ್ಷದವನಾಗಿ ತೆರಹನನ್ನು ಪಡೆದನು.
25 ನಾಹೋರನಿಂದ ತೆರಹನು ಹುಟ್ಟಿದ ಮೇಲೆ, ನಾಹೋರನು ನೂರ ಹತ್ತೊಂಬತ್ತು ವರ್ಷ ಬದುಕಿದನು. ಅವನಿಂದ ಪುತ್ರರೂ ಪುತ್ರಿಯರೂ ಹುಟ್ಟಿದರು.
೨೫ನಾಹೋರ್ ತೆರಹನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಬತ್ತು ವರ್ಷ ಬದುಕಿದನು.
26 ತೆರಹನು ಎಪ್ಪತ್ತು ವರ್ಷದವನಾಗಿದ್ದಾಗ, ಅವನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು.
೨೬ತೆರಹನು ಎಪ್ಪತ್ತು ವರ್ಷದವನಾಗಿ ಅಬ್ರಾಮ, ನಾಹೋರ್, ಹಾರಾನ್ ಎಂಬ ಮಕ್ಕಳನ್ನು ಪಡೆದನು.
27 ತೆರಹನ ವಂಶಾವಳಿ: ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
೨೭ತೆರಹನ ವಂಶದವರ ಚರಿತ್ರೆಯು: ತೆರಹನು ಅಬ್ರಾಮ, ನಾಹೋರ್, ಹಾರಾನ್ ಎಂಬುವರನ್ನು ಪಡೆದನು. ಹಾರಾನನು ಲೋಟನನ್ನು ಪಡೆದನು.
28 ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಸ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆ ತೆರಹನಿಗಿಂತ ಮೊದಲು ಸತ್ತನು.
೨೮ಹಾರಾನನು ತಾನು ಹುಟ್ಟಿದ ದೇಶದೊಳಗೆ ಕಲ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆಯಾದ ತೆರಹನ ಮುಂದೆಯೇ ಸತ್ತನು.
29 ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾಳಿಗೂ ಇಸ್ಕಳಿಗೂ ತಂದೆ.
೨೯ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ.
30 ಸಾರಯಳು ಬಂಜೆಯಾದದ್ದರಿಂದ ಆಕೆಗೆ ಮಕ್ಕಳಿರಲಿಲ್ಲ.
೩೦ಸಾರಯಳು ಬಂಜೆಯಾಗಿದುದರಿಂದ ಆಕೆಗೆ ಮಕ್ಕಳಿರಲಿಲ್ಲ.
31 ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಕಾನಾನ್ ದೇಶಕ್ಕೆ ಹೋಗುವುದಕ್ಕಾಗಿ ಕಸ್ದೀಯರ ಊರ್ ಪಟ್ಟಣವನ್ನು ಬಿಟ್ಟು, ಹಾರಾನ್ ಎಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸವಾಗಿದ್ದನು.
೩೧ತೆರಹನು ತನ್ನ ಮಗನಾದ ಅಬ್ರಾಮನನ್ನೂ, ತನಗೆ ಮೊಮ್ಮಗನೂ, ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ, ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಕಾನಾನ್ ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟು ಅವರು ಹಾರಾನ ಪಟ್ಟಣಕ್ಕೆ ಬಂದು ಅಲ್ಲೇ ವಾಸಮಾಡಿಕೊಂಡರು.
32 ತೆರಹನು ಇನ್ನೂರ ಐದು ವರ್ಷ ಜೀವಿಸಿ, ಹಾರಾನಿನಲ್ಲಿ ಮರಣಹೊಂದಿದನು.
೩೨ತೆರಹನು ಇನ್ನೂರ ಐದು ವರ್ಷ ಬದುಕಿ ನಂತರ ಹಾರಾನಿನಲ್ಲಿ ಸತ್ತನು.