< ಯೆಹೆಜ್ಕೇಲನು 43 >

1 ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಬಾಗಿಲಿಗೆ ಕರೆದುಕೊಂಡು ಹೋದನು.
ಆಮೇಲೆ ಆತನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿಗೆ ಕರೆದುಕೊಂಡು ಹೋದನು.
2 ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವಮಾರ್ಗವಾಗಿ ಬಂದಿತು ಮತ್ತು ಅವರ ಧ್ವನಿಯು ಹರಿಯುವ ನೀರಿನ ಘರ್ಜನೆಯಂತಿತ್ತು; ಭೂಮಿಯು ಅವರ ಮಹಿಮೆಯಿಂದ ಪ್ರಕಾಶಿಸುತ್ತಿತ್ತು.
ಇಗೋ! ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವದಿಕ್ಕಿನ ಮಾರ್ಗವಾಗಿ ಬಂದಿತ್ತು ಮತ್ತು ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು; ಆತನ ಮಹಿಮೆಯಿಂದ ಭೂಮಿಯು ಪ್ರಕಾಶಿಸುತ್ತಿತ್ತು.
3 ನಾನು ಕಂಡ ದರ್ಶನವು, ಅವನು ಪಟ್ಟಣವನ್ನು ನಾಶಮಾಡಲು ಬಂದಾಗ ನಾನು ನೋಡಿದ ದೃಷ್ಟಿಯಂತೆ ಮತ್ತು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ದರ್ಶನಗಳಂತೆ ಮತ್ತು ಆಗ ನಾನು ಬೋರಲು ಬಿದ್ದೆನು.
ನಾನು ಕಂಡು ದರ್ಶನವೂ, ಆತನು ಪಟ್ಟಣವನ್ನು ಹಾಳುಮಾಡಲು ಬಂದಾಗ ನೋಡಿದ ದರ್ಶನದ ಹಾಗೂ, ಕೆಬಾರ್ ನದಿಯ ಹತ್ತಿರ ನನಗಾದ ದರ್ಶನದ ಹಾಗೂ ಇತ್ತು. ಆಗ ನಾನು ಬೋರಲು ಬಿದ್ದೆನು.
4 ಆಗ ಯೆಹೋವ ದೇವರ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿಸಿತು.
ಆಗ ಯೆಹೋವನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯವನ್ನು ಪ್ರವೇಶಿಸಿತು.
5 ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆತಂದಿತು. ಯೆಹೋವ ದೇವರ ಮಹಿಮೆಯಿಂದ ಆಲಯವು ತುಂಬಿಕೊಂಡಿತು.
ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆದು ತಂದಿತು. ಆಗ ಯೆಹೋವನ ಮಹಿಮೆಯು ಆಲಯವನ್ನು ತುಂಬಿಕೊಂಡಿತು.
6 ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವುದನ್ನು ಕೇಳಿದೆನು. ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿದ್ದನು.
ಆಗ ಆಲಯದೊಳಗಿಂದ ನನ್ನ ಸಂಗಡ ಮಾತನಾಡುವವನ ಶಬ್ದವನ್ನು ಕೇಳಿದೆನು. ಆ ಪುರುಷನು ನನ್ನ ಪಕ್ಕದಲ್ಲಿ ನಿಂತಿದ್ದನು.
7 ಅವರು ನನಗೆ, “ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ನನ್ನ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲರ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಎಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರದಿಂದಲೂ ಅವರ ಅರಸರ ಮರಣದ ಸಮಯದಲ್ಲಿ ಅವರ ಅಂತ್ಯಕ್ರಿಯೆಯ ವಿಧಿಗಳ ಅರ್ಪಣೆಯಿಂದ ಅಪವಿತ್ರಗೊಳಿಸುವುದಿಲ್ಲ.
ಮಾತನಾಡುವಾತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಇದು ನನ್ನ ಸಿಂಹಾಸನ, ನನ್ನ ಪಾದ ಪೀಠ, ಇಲ್ಲಿ ನಾನು ಇಸ್ರಾಯೇಲರ ಮಧ್ಯದಲ್ಲಿ ಸದಾ ವಾಸಿಸುವೆನು. ಇಸ್ರಾಯೇಲ್ ವಂಶದವರಾಗಲಿ, ಅವರ ಅರಸರಾಗಲಿ ತಮ್ಮ ದೇವದ್ರೋಹದಿಂದಲೂ, ಗತಿಸಿದ ಅರಸರ ಶವಗಳಿಂದಲೂ ನನ್ನ ಪರಿಶುದ್ಧ ನಾಮವನ್ನು ಅಪವಿತ್ರ ಮಾಡುವುದಿಲ್ಲ.
8 ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ. ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿಬಿಟ್ಟಿದ್ದೇನೆ.
ನನ್ನ ಹೊಸ್ತಿಲುಗಳ ಪಕ್ಕದಲ್ಲಿ ತಮ್ಮ ಹೊಸ್ತಿಲುಗಳನ್ನು ಹಾಕಿಕೊಂಡು ನನ್ನ ಮನೆಗೂ, ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ಮೇಲೆ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡುವುದಿಲ್ಲ. ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡಿದರು. ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು.
9 ಈಗ ಅವರು ತಮ್ಮ ವ್ಯಭಿಚಾರವನ್ನು ಮತ್ತು ನಿಮ್ಮ ರಾಜರ ಅಂತ್ಯಕ್ರಿಯೆಯ ವಿಧಿಗಳನ್ನು ಬಿಟ್ಟುಬಿಡಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ.
ಈಗಲಾದರೂ ತಮ್ಮ ದೇವದ್ರೋಹವನ್ನು ಮತ್ತು ಅರಸರ ಶವಗಳನ್ನು ನನ್ನಿಂದ ದೂರ ಮಾಡಲಿ. ಆಗ ನಾನು ಅದರ ಮಧ್ಯದಲ್ಲಿ ಸದಾ ವಾಸಿಸುವೆನು.”
10 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ದೇವಾಲಯನ್ನು ವಿವರಿಸಿರಿ. ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಅದರ ಪರಿಪೂರ್ಣತೆಯನ್ನು ಪರಿಗಣಿಸಲಿ.
೧೦“ನರಪುತ್ರನೇ, ಇಸ್ರಾಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ಆಲಯವನ್ನು ಅವರಿಗೆ ತೋರಿಸು ಮತ್ತು ಅವರು ಅದನ್ನು ಅಳತೆ ಮಾಡಲಿ.
11 ಅವರು ಮಾಡಿದ ಎಲ್ಲದಕ್ಕಾಗಿ ನಾಚಿಕೆಪಟ್ಟರೆ, ದೇವಾಲಯದ ರೂಪವನ್ನೂ, ಅದರ ಆಕಾರವನ್ನೂ, ಅದರ ಆಗಮನ ನಿರ್ಗಮನಗಳನ್ನೂ, ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ಕಟ್ಟಳೆಗಳನ್ನೂ ಅವರಿಗೆ ವಿವರಿಸು. ಅವರು ಅದರ ರಚನಾವಿಧಾನಗಳಿಗೆ ನಂಬಿಗಸ್ತರಾಗಿರುವಂತೆಯೂ ಅವರು ಅದರ ಎಲ್ಲಾ ಕಟ್ಟಳೆಗಳನ್ನೂ ಅನುಸರಿಸುವಂತೆಯೂ ಅವರ ಮುಂದೆಯೇ ಇವುಗಳನ್ನು ಬರೆ.
೧೧ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ಆಲಯದ ರೂಪವನ್ನೂ, ವ್ಯವಸ್ಥೆಯನ್ನೂ ಅದರ ಆಗಮನ ಮತ್ತು ನಿರ್ಗಮನಗಳನ್ನೂ ಮತ್ತು ಅದರ ಎಲ್ಲಾ ಕಟ್ಟಳೆಗಳನ್ನೂ, ಸಕಲ ರಚನಾವಿಧಾನಗಳನ್ನೂ, ಸಮಸ್ತ ವಿಧಿಗಳನ್ನೂ, ಸರ್ವ ನಿರ್ಮಾಣ ರೀತಿಗಳನ್ನೂ ಅವರಿಗೆ ತಿಳಿಸು. ಅವರು ಅದರ ಪೂರ್ಣಕ್ರಮವನ್ನೂ, ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ.
12 “ಇದು ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿ ಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧವಾಗಿದೆ. ಇಗೋ, ಇದೇ ಆ ಆಲಯದ ನಿಯಮವಾಗಿದೆ.
೧೨“ಇದೇ ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶವೆಲ್ಲಾ ಅತಿ ಪರಿಶುದ್ಧವಾಗಿರಬೇಕು. ಇಗೋ, ಆ ಆಲಯದ ನಿಯಮವು ಇದೇ.
13 “ಬಲಿಪೀಠವು ಮೀಟರ್ ಅಳತೆಯ ಪ್ರಕಾರ ಹೀಗಿರಬೇಕು. ಕೆಳಭಾಗದ ಎತ್ತರ ಐವತ್ತು ಸೆಂಟಿಮೀಟರ್, ಮೇಲಿನ ಬಿಡುವಿನ ಅಗಲವು ಸುತ್ತಲೂ ಐವತ್ತು ಸೆಂಟಿಮೀಟರ್, ಬಿಡುವಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಇಪ್ಪತ್ತೈದು ಸೆಂಟಿಮೀಟರ್;
೧೩“ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರ ಹೀಗಿರಬೇಕು. (ಉದ್ದ ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ) ಕೆಳಭಾಗದ ಎತ್ತರ ಒಂದು ಮೊಳ, ಮೇಲಿನ ಅಂಚಿನ ಅಗಲ ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ.
14 ಕೆಳಭಾಗದ ಎತ್ತರವು ಒಂದು ಮೊಳ ಮೇಲಿನ ಕೈ ಅಗಲದಷ್ಟು ಅಂಚಿನ ಉದ್ದವು ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಲೂ ದಿಂಡಿನ ಅಗಲವು ಒಂದು ಮೊಳ. ಇದೇ ಬಲಿಪೀಠ. ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರವು ಎರಡು ಮೊಳ, ಅದರ ಮೇಲಣ ಬಿಡುವಿನ ಅಗಲ ಒಂದು ಮೊಳ. ಸಣ್ಣ ಅಂಚು ಮೊದಲುಗೊಂಡು ದೊಡ್ಡ ಅಂಚಿನವರೆಗೂ ನಾಲ್ಕು ಮೊಳ ಮತ್ತು ಅಗಲವು ಒಂದು ಮೊಳ.
೧೪ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರ ಎರಡು ಮೊಳ, ಅದರ ಮೇಲಣ ಅಂಚಿನ ಅಗಲ ಒಂದು ಮೊಳ; ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರ ನಾಲ್ಕು ಮೊಳ, ಮೇಲಣ ಅಂಚಿನ ಅಗಲವು ಒಂದು ಮೊಳ.
15 ಅಗ್ನಿಕುಂಡದ ಅಂತಸ್ತಿನ ಎತ್ತರವು ಎರಡು ಮೀಟರ್ ಆ ಅಗ್ನಿಕುಂಡದ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು.
೧೫ಯಜ್ಞವೇದಿಯ ಅಂತಸ್ತಿನ ಎತ್ತರವು ನಾಲ್ಕು ಮೊಳ; ಆ ಯಜ್ಞವೇದಿಯ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು.
16 ಬಲಿಪೀಠದ ಉದ್ದವು ಹನ್ನೆರಡು ಮೊಳ, ಅಗಲ ಹನ್ನೆರಡು, ನಾಲ್ಕು ಕಡೆಯ ಚೌಕಗಳು ಚಚ್ಚೌಕವಾಗಿರಬೇಕು.
೧೬ಯಜ್ಞವೇದಿ ಹನ್ನೆರಡು ಮೊಳ ಉದ್ದವೂ, ಹನ್ನೆರಡು ಮೊಳ ಅಗಲವೂ ಮತ್ತು ಚಚ್ಚೌಕವಾಗಿರಬೇಕು.
17 ಅದರ ಅಂಚು ನಾಲ್ಕು ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ಅದರ ತಳವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಎದುರಾಗಿರಬೇಕು.”
೧೭ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ, ನಾಲ್ಕು ಕಡೆಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ, ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಅಭಿಮುಖವಾಗಿರಬೇಕು.”
18 ಅವರು ನನಗೆ ಹೇಳಿದ್ದೇನೆಂದರೆ: “ಮನುಷ್ಯಪುತ್ರನೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಬಲಿಪೀಠವನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.
೧೮ಆಗ ಆ ಪುರುಷನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಸರ್ವಾಂಗಹೋಮಕ್ಕೂ, ರಕ್ತವೆರಚುವ ಸಂಸ್ಕಾರಕ್ಕೂ ಯಜ್ಞವೇದಿಯನ್ನು ನಿರ್ಮಿಸುವಾಗ ಈ ವಿಧಿಗಳನ್ನು ಕೈಗೊಳ್ಳಬೇಕು.
19 ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಸೇವೆ ಮಾಡುವುದಕ್ಕಾಗಿ ನನ್ನ ಬಳಿಗೆ ಸಮೀಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯರಿಗೂ ದೋಷಪರಿಹಾರ ಬಲಿಗಾಗಿ ಎಳೆಯ ಹೋರಿಯನ್ನು ಕೊಡಬೇಕು.
೧೯ಲೇವಿಯರೂ, ಚಾದೋಕನ ಸಂತಾನದವರೂ, ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷ ಪರಿಹಾರಕಯಜ್ಞಕ್ಕಾಗಿ ಕೊಡು ಇದು ಕರ್ತನಾದ ಯೆಹೋವನ ನುಡಿ.
20 ಅದರ ರಕ್ತವನ್ನು ತೆಗೆದುಕೊಂಡು ಅದರ ನಾಲ್ಕು ಕೊಂಬುಗಳ ಅಂಚಿನ ನಾಲ್ಕು ಮೂಲೆಗಳಿಗೂ ಸುತ್ತಲೂ ಹಚ್ಚಿ ಬಲಿಪೀಠವನ್ನು ಶುದ್ಧೀಕರಿಸಿ ಮತ್ತು ಅದಕ್ಕೆ ಪ್ರಾಯಶ್ಚಿತ್ತವನ್ನು ಮಾಡಿರಿ.
೨೦ಆಮೇಲೆ ಅದರ ರಕ್ತದಲ್ಲಿ ಸ್ವಲ್ಪವನ್ನು ನೀನು ತೆಗೆದುಕೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೂ, ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ, ಸುತ್ತಣ ದಿಂಡಿಗೂ ಹಚ್ಚಿ, ಯಜ್ಞವೇದಿಯ ದೋಷವನ್ನು ಪರಿಹರಿಸಿ ಅದನ್ನು ಶುದ್ಧಿಮಾಡು.
21 ಇದಲ್ಲದೆ ನೀನು ಹೋರಿಯನ್ನೂ ಸಹ ದೋಷಪರಿಹಾರ ಬಲಿಗೆ ತೆಗೆದುಕೊಂಡು ಆಲಯದ ನೇಮಕವಾದ ಸ್ಥಳದಲ್ಲಿ, ಪರಿಶುದ್ಧ ಸ್ಥಳದಲ್ಲಿ ಹೊರಗೆ ಸುಡಬೇಕು.
೨೧ಮತ್ತು ದೋಷ ಪರಿಹಾರಕಯಜ್ಞಕ್ಕಾಗಿ ವಧಿಸಲ್ಪಟ್ಟ ಹೋರಿಯನ್ನು ನೀನು ಒಪ್ಪಿಸಲು ನೇಮಿಸಲ್ಪಟ್ಟವನು, ಪವಿತ್ರಾಲಯದ ಹೊರಗೆ ಆಲಯಕ್ಕೆ ಸಂಬಂಧಪಟ್ಟ ಗೊತ್ತಾದ ಸ್ಥಳದಲ್ಲಿ ಅದನ್ನು ಸುಡಬೇಕು.
22 “ಎರಡನೆಯ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ದೋಷಪರಿಹಾರ ಬಲಿಯಾಗಿ ಅರ್ಪಿಸಬೇಕು. ಅವರು ಬಲಿಪೀಠವನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.
೨೨“ಎರಡನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಹೋತವನ್ನು ದೋಷ ಪರಿಹಾರಕಯಜ್ಞಕ್ಕಾಗಿ ಅರ್ಪಿಸು. ಹೋರಿಯಿಂದ ಯಜ್ಞವೇದಿಯನ್ನು ಶುದ್ಧಿಮಾಡಿದಂತೆ ಹೋತದಿಂದಲೂ ಶುದ್ಧಿಮಾಡಬೇಕು
23 ಹೀಗೆ ಅವರು ಶುದ್ಧಮಾಡಿದಾಗ ಕೊನೆಯಲ್ಲಿ ದೋಷವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.
೨೩ನೀನು ಯಜ್ಞವೇದಿಯ ಶುದ್ಧೀಕರಣದ ಕಾರ್ಯವನ್ನು ಮುಗಿಸಿದ ಮೇಲೆ, ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ತಂದು ಅರ್ಪಿಸಬೇಕು.
24 ನೀನು ಅವುಗಳನ್ನು ಯೆಹೋವ ದೇವರ ಮುಂದೆ ಅರ್ಪಿಸಬೇಕು. ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಬೇಕು.
೨೪ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು, ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ, ಯೆಹೋವನಿಗಾಗಿ ಸರ್ವಾಂಗಹೋಮವನ್ನು ಅರ್ಪಿಸಬೇಕು.
25 “ಏಳು ದಿನಗಳ ತನಕ ಪ್ರತಿದಿನವೂ ನೀನು ದೋಷಪರಿಹಾರ ಬಲಿಗಾಗಿ ಮೇಕೆಯನ್ನು ಸಿದ್ಧಮಾಡಬೇಕು ಮತ್ತು ಪೂರ್ಣಾಂಗವಾದ ಪ್ರಾಯದ ಹೋರಿಯನ್ನೂ ಮಂದೆಯೊಳಗಿನ ಟಗರನ್ನೂ ಸಿದ್ಧಮಾಡಬೇಕು.
೨೫“ಏಳು ದಿನಗಳ ತನಕ ನೀನು ಪ್ರತಿ ದಿನವೂ ದೋಷಪರಿಹಾರ ಬಲಿಗಾಗಿ ಒಂದೊಂದು ಹೋತವನ್ನು ಸಿದ್ಧಮಾಡಬೇಕು. ಯಾಜಕರು ಸಹ ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ಸಿದ್ಧಮಾಡಬೇಕು.
26 ಏಳು ದಿನಗಳ ತನಕ ಅವರು ಬಲಿಪೀಠವನ್ನು ಶುದ್ಧಮಾಡಿ ತಮ್ಮನ್ನು ತಾವೇ ಪ್ರತಿಷ್ಠಿಸಿಕೊಳ್ಳಬೇಕು.
೨೬ಹೀಗೆ ಏಳು ದಿನ ಯಜ್ಞವೇದಿಯ ದೋಷವನ್ನು ಪರಿಹರಿಸುತ್ತಾ ಅದನ್ನು ಶುದ್ಧಿ ಮಾಡಿ ಪ್ರತಿಷ್ಠಿಸಬೇಕು.
27 ಈ ದಿನಗಳು ತೀರಿದಾಗ ಎಂಟನೆಯ ದಿನದ ತರುವಾಯ ಯಾಜಕರು ಬಲಿಪೀಠದ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
೨೭ಏಳು ದಿನಗಳ ಕಾರ್ಯವನ್ನು ಮುಗಿಸಿದ ಬಳಿಕ, ಎಂಟನೆಯ ದಿನದಿಂದ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ಪಕ್ಷವಾಗಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಮಾಡಬೇಕು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನು” ಇದು ಕರ್ತನಾದ ಯೆಹೋವನ ನುಡಿ.

< ಯೆಹೆಜ್ಕೇಲನು 43 >