13“ನೀನು ಇಸ್ರಾಯೇಲರೊಂದಿಗೆ ಮಾತನಾಡಿ, ‘ನಿಶ್ಚಯವಾಗಿ ನೀವು ನನ್ನ ವಿಶ್ರಾಂತಿಯ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ನಿಮ್ಮನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ, ನಿಮಗೂ, ನಿಮ್ಮ ಸಂತತಿಯವರಿಗೂ ಗುರುತಾಗಿರುವುದು.
14“‘ಹೀಗಿರುವುದರಿಂದ ನೀವು ಸಬ್ಬತ್ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರ ಮಾಡುವ ಪ್ರತಿಯೊಬ್ಬನು ಸಾಯಲೇಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ, ಅವರನ್ನು ನಿಮ್ಮ ಜನರೊಳಗಿಂದ ತೆಗೆದುಹಾಕಬೇಕು.
15ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಯೆಹೋವ ದೇವರಿಗೆ ಪರಿಶುದ್ಧವಾದ ಸಬ್ಬತ್ ದಿನ. ಆ ಸಬ್ಬತ್ ದಿನದಲ್ಲಿ ಕೆಲಸ ಮಾಡುವವರೆಲ್ಲಾ ಸಾಯಲೇಬೇಕು.
16ಹೀಗಿರಲಾಗಿ ಇಸ್ರಾಯೇಲರು ತಮ್ಮ ತಲತಲಾಂತರಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
17ನನಗೂ, ಇಸ್ರಾಯೇಲರಿಗೂ ಇದೇ ಶಾಶ್ವತವಾದ ಗುರುತು. ಏಕೆಂದರೆ ಆರು ದಿವಸಗಳಲ್ಲಿ ಯೆಹೋವ ದೇವರು ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸ ನಿಲ್ಲಿಸಿ, ವಿಶ್ರಮಿಸಿಕೊಂಡರು ಎಂದು ಹೇಳು,’” ಎಂದರು.
18ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.