< ಎಸ್ತೇರಳು 4 >

1 ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು.
ಮೊರ್ದೆಕೈಯು ನಡೆದದ್ದನ್ನೆಲ್ಲಾ ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ತಲೆಯ ಮೇಲೆ ಹಾಕಿಕೊಂಡು, ಪಟ್ಟಣದ ಮಧ್ಯದಲ್ಲಿ ಹೋಗುತ್ತಾ ಮಹಾದುಃಖದಿಂದ ಗೋಳಾಡಿದನು.
2 ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.
ಗೋಣಿತಟ್ಟು ಕಟ್ಟಿಕೊಂಡವರು ಅರಮನೆಯ ಒಳಗೆ ಹೋಗಬಾರದೆಂದು ಅಪ್ಪಣೆಯಾಗಿತ್ತು. ಆದುದರಿಂದ ಅವನು ಅರಮನೆಯ ಹೆಬ್ಬಾಗಿಲಿನ ಮುಂದೆ ಬಂದನು.
3 ಇದಲ್ಲದೆ ಅರಸನ ಮಾತೂ ಅವನ ಕಟ್ಟಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡರು.
ಯಾವ ಯಾವ ಸಂಸ್ಥಾನಗಳಲ್ಲಿ ಅರಸನ ಆಜ್ಞೆಯೂ ಮತ್ತು ನಿರ್ಣಯವೂ ಪ್ರಕಟವಾದವೋ ಅಲ್ಲೆಲ್ಲಾ ಯೆಹೂದ್ಯರೊಳಗೆ ಮಹಾದುಃಖವೂ, ಉಪವಾಸ, ರೋದನೆ ಮತ್ತು ಪ್ರಲಾಪಗಳೂ ಉಂಟಾದವು. ಅನೇಕರು ಗೋಣಿತಟ್ಟನ್ನು ಹಾಸಿ ಬೂದಿಹಾಕಿಕೊಂಡು ಅದರ ಮೇಲೆ ಕುಳಿತುಕೊಂಡರು.
4 ಆಗ ಎಸ್ತೇರಳ ದಾಸಿಯರೂ ಅವಳ ಕಂಚುಕಿಯರೂ ಬಂದು ಮೊರ್ದೆಕೈ ಬಗ್ಗೆ ಅವಳಿಗೆ ತಿಳಿಸಿದರು. ಆದ್ದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆಕೈಯು ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಉಡುಪನ್ನು ಕಳುಹಿಸಿಕೊಟ್ಟಳು. ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ.
ಎಸ್ತೇರಳ ಸೇವಕಿಯರೂ ಕಂಚುಕಿಗಳೂ ರಾಣಿಯಾದ ಆಕೆಯ ಬಳಿಗೆ ಬಂದು ಈ ವಿಚಾರವನ್ನು ತಿಳಿಸಿದಾಗ ಆಕೆಯು ಬಹಳವಾಗಿ ಕಳವಳಗೊಂಡು ಮೊರ್ದೆಕೈಗೆ ವಸ್ತ್ರಗಳನ್ನು ಕಳುಹಿಸಿ, “ಗೋಣಿತಟ್ಟನ್ನು ತೆಗೆದುಬಿಟ್ಟು, ಇವುಗಳನ್ನು ಧರಿಸಿಕೋ” ಎಂದು ಹೇಳಿಕಳುಹಿಸಿದಳು. ಆದರೆ ಅವನು ಅವುಗಳನ್ನು ಸ್ವೀಕರಿಸಲಿಲ್ಲ.
5 ಆಗ ಎಸ್ತೇರಳು ತನ್ನ ಬಳಿಯಲ್ಲಿ ಸೇವೆಗಾಗಿ ನೇಮಿಸಲಾಗಿದ್ದ ಅರಸನ ರಾಜಕಂಚುಕಿಯರಲ್ಲಿ ಹತಾಕನನ್ನು ಕರೆದು, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ವರ್ತನೆಗೆ ಕಾರಣವನ್ನೂ ಅವನಿಂದ ತಿಳಿದುಕೊಂಡು ಬರಬೇಕೆಂದು ಆಜ್ಞಾಪಿಸಿದಳು.
ಆಗ ಆಕೆ ಅರಸನಿಂದ ತನ್ನ ಸೇವೆಗೋಸ್ಕರ ನೇಮಿಸಲ್ಪಟ್ಟಿದ್ದ ಹತಾಕನೆಂಬ ರಾಜ ಕಂಚುಕಿಯನ್ನು ಕರೆಯಿಸಿ, “ನೀನು ಮೊರ್ದೆಕೈಯ ಬಳಿಗೆ ಹೋಗಿ, ಇದಕ್ಕೆ ಕಾರಣವೇನು ಎಂದು ವಿಚಾರಿಸಿಕೊಂಡು ಬಾ” ಎಂದು ಹೇಳಿಕಳುಹಿಸಿದಳು.
6 ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು.
ಹತಾಕನು ಅರಮನೆಯ ಬಾಗಿಲಿನ ಮುಂದಿರುವ ಪಟ್ಟಣದ ಬಯಲಿಗೆ ಮೊರ್ದೆಕೈಯ ಹತ್ತಿರ ಹೋದನು.
7 ಆಗ ಮೊರ್ದೆಕೈ ತನಗೆ ಆದ ಎಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣದ ವಿಷಯವನ್ನೂ ಅವನಿಗೆ ತಿಳಿಸಿದನು.
ಮೊರ್ದೆಕೈಯು ತನಗೆ ಸಂಭವಿಸಿದ್ದೆಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡುತ್ತೇನೆಂದು ನಿಗದಿಪಡಿಸಿದ ಬೆಳ್ಳಿಯ ಹಣ ಇಷ್ಟೆಂಬುದನ್ನೂ ಅವನಿಗೆ ತಿಳಿಸಿದನು.
8 ಯೆಹೂದ್ಯರನ್ನು ನಾಶಮಾಡಲು ಶೂಷನಿನಲ್ಲಿ ಪ್ರಕಟಗೊಂಡ ರಾಜಾಜ್ಞೆಯ ಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ, ಅವಳು ತನ್ನ ಜನರಿಗಾಗಿ ಅರಸನ ಮುಂದೆ ಹೋಗಿ ಬಿನ್ನಹ ಮಾಡುವಂತೆಯೂ ಆಕೆಗೆ ತಿಳಿಸಲು ಹೇಳಿದನು.
ಅದರೊಂದಿಗೆ ತಮ್ಮನ್ನು ಸಂಹರಿಸುವುದಕ್ಕೋಸ್ಕರ ಶೂಷನಿನಲ್ಲಿ ಪ್ರಕಟವಾದ ರಾಜಶಾಸನದ ಒಂದು ಪ್ರತಿಯನ್ನು ಕೊಟ್ಟು, “ಇದನ್ನು ಎಸ್ತೇರಳಿಗೆ ತೋರಿಸಿ ವಿವರಿಸು; ಮತ್ತು ಆಕೆಯು ಅರಸನ ಬಳಿಗೆ ಹೋಗಿ ಅವನು ಕೃಪೆ ತೋರಿಸುವಂತೆ ಅವನ ಸನ್ನಿಧಿಯಲ್ಲಿ ತನ್ನ ಜನರಿಗೋಸ್ಕರ ಬಿನ್ನಹ ಮಾಡಲಿ” ಎಂದು ಹೇಳಿಕಳುಹಿಸಿದನು.
9 ಆಗ ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು.
ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು.
10 ಎಸ್ತೇರಳು ಮತ್ತೊಮ್ಮೆ ಹತಾಕನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ,
೧೦ಎಸ್ತೇರಳು ಅವನನ್ನು ಪುನಃ ಮೊರ್ದೆಕೈಯ ಬಳಿಗೆ ಕಳುಹಿಸಿ,
11 “ಅರಸನು ಹೇಳಿಕಳುಹಿಸದೆ ಅರಸನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವ ಗಂಡಸರಿಗಾಗಲಿ, ಹೆಂಗಸರಿಗಾಗಲಿ ಮರಣದಂಡನೆಯಾಗುವುದು. ಒಂದು ವೇಳೆ ಒಳಗೆ ಬಂದ ವ್ಯಕ್ತಿಯ ಕಡೆಗೆ ಅರಸನು ತನ್ನ ಸ್ವರ್ಣದಂಡವನ್ನು ಚಾಚಿದರೆ ಅವನಿಗೆ ಮಾತ್ರ ಮರಣದಂಡನೆಯಾಗದೆ ಜೀವದಿಂದ ಉಳಿಯುವರು. ಈ ರಾಜಾಜ್ಞೆಯನ್ನು ಅರಸನ ಸಮಸ್ತ ಸೇವಕರೂ ಅರಸನ ಪ್ರಾಂತಗಳ ಜನರೂ ತಿಳಿದಿದ್ದಾರೆ. ಆದರೆ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ನನಗೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು.
೧೧“ಅರಸನು ತನ್ನ ಬಳಿಗೆ ಬರಲು ಹೇಳಿದ ಹೊರತು ಅವನ ಬಳಿಗೆ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ಒಂದೇ ನಿಯಮವು ಎಲ್ಲಾ ಸ್ತ್ರೀಪುರುಷರಿಗುಂಟು. ಯಾರ ಕಡೆಗೆ ಅವನು ತನ್ನ ಸುವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರು ಎಂಬುದು ಅರಸನ ಎಲ್ಲಾ ಸೇವಕರಿಗೂ ಮತ್ತು ಸಂಸ್ಥಾನಗಳ ಎಲ್ಲಾ ಜನರಿಗೂ ಗೊತ್ತು. ನನಗಂತೂ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ಆಮಂತ್ರಣವಾಗಲಿಲ್ಲ” ಎಂದು ಹೇಳಿಸಿದಳು.
12 ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು.
೧೨ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು.
13 ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ.
೧೩ಅವನು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನಾನೊಬ್ಬಳು ಅರಮನೆಯಲ್ಲಿರುವುದರಿಂದ ಉಳಿಯುವೆನು ಎಂದು ಭಾವಿಸಿಕೊಳ್ಳಬೇಡ.
14 ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು.
೧೪ನೀನು ಈಗ ಸುಮ್ಮನಿದ್ದುಬಿಟ್ಟರೆ ಬೇರೆ ಕಡೆಯಿಂದ ಯೆಹೂದ್ಯರಿಗೆ ಸಹಾಯವೂ, ವಿಮೋಚನೆಯೂ ಉಂಟಾದಾವು; ನೀನಾದರೋ ನಿನ್ನ ತಂದೆಯ ಮನೆಯವರೊಡನೆ ನಾಶವಾಗುವಿ. ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು” ಎಂದು ಹೇಳಿಕಳುಹಿಸಿದನು.
15 ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ,
೧೫ಆಗ ಎಸ್ತೇರಳು ಮೊರ್ದೆಕೈಗೆ, “ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು;
16 “ನೀನು ಹೋಗಿ ಶೂಷನಿನಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವು ರಾತ್ರಿ ಹಗಲೂ ಮೂರು ದಿನ ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸಮಾಡಿರಿ. ಹಾಗೆಯೇ ನಾನೂ ನನ್ನ ದಾಸಿಯರೊಡನೆ ಉಪವಾಸ ಮಾಡುವೆನು. ಅನಂತರ ನಾನು ರಾಜಾಜ್ಞೆಯನ್ನು ಮೀರಿ ಅರಸನ ಬಳಿಗೆ ಹೋಗುವೆನು. ನಾನು ಸತ್ತರೂ ಸಾಯುವೆನು,” ಎಂದು ಹೇಳಿಕಳುಸಿದಳು.
೧೬ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ” ಎಂದು ಹೇಳಿಸಿದಳು.
17 ಆಗ ಮೊರ್ದೆಕೈ ಹೊರಟುಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
೧೭ಮೊರ್ದೆಕೈ ಹಿಂದಿರುಗಿ ಹೋಗಿ ಎಸ್ತೇರಳು ಹೇಳಿದಂತೆಯೇ ಮಾಡಿದನು.

< ಎಸ್ತೇರಳು 4 >