< ದಾನಿಯೇಲನು 8 >
1 ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿಯೂ, ಮೊದಲಿನ ದರ್ಶನದಂಥ ಇನ್ನೊಂದು ದರ್ಶನವೂ ದಾನಿಯೇಲನಾದ ನನಗೆ ಕಾಣಿಸಿತು.
೧ಮೊದಲು ನನಗೆ ಕಾಣಿಸಿದ ಕನಸಲ್ಲದೆ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿಯೂ ಇನ್ನೊಂದು ಕನಸು ದಾನಿಯೇಲನಾದ ನನಗೆ ಕಾಣಿಸಿತು.
2 ಈ ದರ್ಶನದಲ್ಲಿ ನಾನು ನೋಡಿದ್ದೇನೆಂದರೆ: ನಾನು ಏಲಾಮ್ ಸೀಮೆಯಲ್ಲಿರುವ ಶೂಷನಿನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ನಾನು ಊಲಾ ನದಿಯ ದಡದ ಬಳಿಯಲ್ಲಿ ನಿಂತಿರುವ ಹಾಗೆ ತೋರಿತು.
೨ನಾನು ಕಂಡ ಕನಸಿನಲ್ಲಿ ಏಲಾಮ್ ಸಂಸ್ಥಾನದ ಶೂಷನ್ ಕೋಟೆಯಲ್ಲಿದ್ದೆನು. ಕನಸಿನಲ್ಲಿ ಊಲಾ ಕಾಲುವೆಯ ದಡದ ಮೇಲೆ ನಿಂತುಕೊಂಡಿದ್ದ ಹಾಗೆ ತೋರಿತು.
3 ಆಗ ನಾನು ಕಣ್ಣೆತ್ತಿ ನೋಡಿದಾಗ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ, ಇನ್ನೊಂದಕ್ಕಿಂತ ಒಂದು ಉದ್ದವಾಗಿದ್ದವು. ಆ ದೊಡ್ಡ ಕೊಂಬು ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.
೩ನಾನು ಕಣ್ಣೆತ್ತಿ ನೋಡಲು ಇಗೋ, ಎರಡು ಕೊಂಬಿನ ಒಂದು ಟಗರು ಕಾಲುವೆಯ ಹತ್ತಿರ ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ದೊಡ್ಡದಾಗಿತ್ತು. ಆ ದೊಡ್ಡದು ಮೊಳೆತದ್ದು ಚಿಕ್ಕ ಕೊಂಬು ಮೊಳೆತ ಮೇಲೆ.
4 ಆ ಟಗರು ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ ಕಾದಾಡುತ್ತಿರುವುದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವುದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವುದಕ್ಕೂ ಸಾಧ್ಯವಾಗುವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ, ತನ್ನನ್ನು ಹೆಚ್ಚಿಸಿಕೊಂಡಿತು.
೪ನಾನು ನೋಡುತ್ತಿದ್ದ ಹಾಗೆ ಆ ಟಗರು ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ ಹಾರಾಡುತ್ತಿತ್ತು. ಯಾವ ಜಂತುವೂ ಅದರೆದುರಿಗೆ ನಿಲ್ಲಲಾರದೆ ಹೋಯಿತು. ಅದರಿಂದ ಬಿಡಿಸಲು ಯಾವ ಪ್ರಾಣಿಗೂ ಶಕ್ತಿಯಿರಲಿಲ್ಲ. ಅದು ಮನಸ್ಸು ಬಂದಂತೆ ನಡೆದು ತನ್ನನ್ನು ಹೆಚ್ಚಿಸಿಕೊಂಡಿತು.
5 ನಾನು ಇದರ ಬಗ್ಗೆ ಆಲೋಚಿಸಲಾಗಿ ಕೂಡಲೆ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದೆ ಭೂಮಂಡಲವನ್ನೆಲ್ಲಾ ದಾಟಿಕೊಂಡು ಬಂದಿತು. ಆ ಹೋತಕ್ಕೆ ಕಣ್ಣುಗಳ ಮಧ್ಯೆ ವಿಶೇಷವಾದ ಕೊಂಬು ಇತ್ತು.
೫ನಾನು ಗಮನಿಸುತ್ತಿರುವಾಗ ಇಗೋ, ಒಂದು ಹೋತವು ಪಶ್ಚಿಮದಿಂದ ಭೂಮಂಡಲವನ್ನೆಲ್ಲಾ ದಾಟಿಕೊಂಡು ನೆಲವನ್ನು ಮುಟ್ಟದೆ ಓಡಿ ಬಂತು. ಅದರ ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿತ್ತು.
6 ನಾನು ನದಿಯ ಹತ್ತಿರ ಕಂಡ ಆ ಎರಡು ಕೊಂಬಿನ ಟಗರಿನ ಬಳಿಗೆ ಬಂದು ಪರಾಕ್ರಮದಿಂದ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು.
೬ನಾನು ಕಾಲುವೆಯ ಹತ್ತಿರ ಕಂಡ ಎರಡು ಕೊಂಬಿನ ಟಗರಿನ ಬಳಿಗೆ ಆ ಹೋತವು ಬಂದು, ಪರಾಕ್ರಮದಿಂದ ಉಬ್ಬಿ ರೋಷಗೊಂಡು ಅದರ ಮೇಲೆ ಬೀಳಬೇಕೆಂದು ಓಡಿತು.
7 ಅದು ಟಗರಿನ ಹತ್ತಿರ ಬರುವುದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು, ಅದರ ಎರಡು ಕೊಂಬುಗಳನ್ನು ಮುರಿದು ಬಿಟ್ಟಿತು. ಅದರ ಮುಂದೆ ನಿಲ್ಲುವುದಕ್ಕೆ ಟಗರಿಗೆ ಏನೂ ಶಕ್ತಿಯಿರಲಿಲ್ಲ. ಆದರೆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಹೋತದ ಹಿಡಿತದಿಂದ ಬಿಡಿಸುವವರು ಯಾರೂ ಇರಲಿಲ್ಲ.
೭ನನ್ನ ಕನಸಿನಲ್ಲಿ ಟಗರನ್ನು ಸಮೀಪಿಸಿ, ಅದರ ಮೇಲಣ ಕ್ರೋಧದಿಂದ ಉರಿಯುತ್ತಾ, ಅದರ ಮೇಲೆ ಹಾಯ್ದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದಕ್ಕೆ ಎದುರು ಬೀಳಲು ಟಗರಿಗೆ ಶಕ್ತಿಯಿರಲಿಲ್ಲ. ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿದು ಹಾಕಿತು. ಟಗರನ್ನು ಹೋತದಿಂದ ಬಿಡಿಸುವ ಪ್ರಾಣಿ ಯಾವುದೂ ಇರಲಿಲ್ಲ.
8 ಆದ್ದರಿಂದ ಆ ಹೋತವು ಬಹಳವಾಗಿ ಬಲಗೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದುಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು, ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.
೮ಆ ಹೋತವು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಂಡಿತು, ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಚತುರ್ದಿಕ್ಕುಗಳಿಗೆ ಚಾಚಿಕೊಂಡವು.
9 ಅವುಗಳ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ, ಪೂರ್ವದ ಕಡೆಗೂ, ರಮ್ಯ ದೇಶದ ಕಡೆಗೂ ಪ್ರಬಲವಾಯಿತು.
೯ಅವುಗಳೊಳಗೆ ಒಂದರಲ್ಲಿ ಒಂದು ಚಿಕ್ಕ ಕೊಂಬು ಮೊಳೆತು ಬಹು ದೊಡ್ಡದಾಗಿ ಬೆಳೆದು ದಕ್ಷಿಣದಲ್ಲಿಯೂ, ಪೂರ್ವದಲ್ಲಿಯೂ ಅಂದಚಂದದ ದೇಶದಲ್ಲಿಯೂ ಪ್ರಬಲವಾಯಿತು.
10 ಅದು ಆಕಾಶದ ಸೈನ್ಯದ ಎತ್ತರಕ್ಕೂ ಬೆಳೆದು, ಆ ಸೈನ್ಯದಲ್ಲಿಯೂ, ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ, ಅವುಗಳನ್ನು ತುಳಿದು ಹಾಕಿತು.
೧೦ಅದು ನಕ್ಷತ್ರ ಗಣದ ಮೇಲೆ ಕೈಮಾಡುವಷ್ಟು ಹೆಚ್ಚಿ, ಆ ಗಣದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಕೆಡವಿ ತುಳಿದುಬಿಟ್ಟಿತು.
11 ಅದು ಯೆಹೋವ ದೇವರ ಸೈನ್ಯದ ಅಧಿಪತಿಗೆ ವಿರೋಧವಾಗಿ ಬಲಗೊಂಡು, ನಿತ್ಯ ಯಜ್ಞವನ್ನು ಯೆಹೋವ ದೇವರಿಗೆ ಸಲ್ಲದಂತೆ ಮಾಡಿ, ಅವನ ಪವಿತ್ರ ಸ್ಥಾನವನ್ನು ಕೆಡವಿ ಹಾಕಲಾಯಿತು.
೧೧ಇದಲ್ಲದೆ ಆ ಗಣದ ಅಧಿಪತಿಯನ್ನೂ ಎದುರಿಸುವಷ್ಟು ಉಬ್ಬಿಕೊಂಡು ನಿತ್ಯಹೋಮವನ್ನು ಆತನಿಗೆ ಸಲ್ಲದಂತೆ ಮಾಡಿತು.
12 ಪ್ರತಿದಿನ ಯಜ್ಞದ ಸಂಗಡ ಯೆಹೋವ ದೇವರ ಸೈನ್ಯವೂ ಸಹ ಅಪರಾಧದ ನಿಮಿತ್ತವಾಗಿ ಅದಕ್ಕೆ ಕೊಡಲಾಯಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ, ಇಷ್ಟಾರ್ಥವನ್ನು ಪೂರೈಸಿಕೊಂಡು ಅನುಕೂಲ ಪಡೆಯಿತು, ವೃದ್ಧಿಗೆ ಬಂದಿತು.
೧೨ಆತನ ಪವಿತ್ರ ಸ್ಥಾನವನ್ನು ಕೆಡವಿ ನಿತ್ಯ ಹೋಮವನ್ನು ಅಡಗಿಸುವುದಕ್ಕೆ ನೀಚತನದಿಂದ ಒಂದು ಸೈನ್ಯವನ್ನಿಳಿಸಿ ಸತ್ಯಧರ್ಮವನ್ನು ನೆಲಕ್ಕೆ ದೊಬ್ಬಿ, ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡು ವೃದ್ಧಿಗೆ ಬಂತು.
13 ಆಮೇಲೆ ಒಬ್ಬ ಪರಿಶುದ್ಧನು ಮಾತನಾಡುವುದನ್ನು ಕೇಳಿದೆನು. ಮಾತನಾಡಿದ ಆತನಿಗೆ ಮತ್ತೊಬ್ಬ ಪರಿಶುದ್ಧನು, “ನಿತ್ಯ ಯಜ್ಞವನ್ನು ನಿಲ್ಲಿಸುವುದೂ, ಹಾಳುಮಾಡುವ ಅಪರಾಧವನ್ನು ತಡೆಯುವುದೂ, ಪರಿಶುದ್ಧ ಸ್ಥಳವನ್ನೂ, ಯೆಹೋವ ದೇವರ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವ ಈ ದರ್ಶನ ನೆರವೇರಲು ಎಷ್ಟು ಕಾಲ ಬೇಕಾಗುವುದು?” ಎಂದು ಕೇಳಿದನು.
೧೩ಆಗ ಒಬ್ಬ ದೇವದೂತನು ಮಾತನಾಡುವುದನ್ನು ಕೇಳಿದೆನು. ಮಾತನಾಡುವವನನ್ನು ಮತ್ತೊಬ್ಬ ದೇವದೂತನು, “ನಿತ್ಯಹೋಮವನ್ನು ನಿಲ್ಲಿಸುವುದು, ಭಯಂಕರವಾದ ದೇವದ್ರೋಹ ಮಾಡುವುದು, ಪವಿತ್ರಾಲಯವನ್ನೂ, ದೇವಭಕ್ತ ಗಣವನ್ನು ತುಳಿಯುವುದು ಎಂಬ ಕನಸಿನ ಕಾರ್ಯಗಳು ಎಷ್ಟು ಕಾಲ ನಡೆಯುವುದು?” ಎಂದು ಪ್ರಶ್ನೆಮಾಡಿದನು.
14 ಅವನು ನನಗೆ, “ಎರಡು ಸಾವಿರದ ಮುನ್ನೂರು ಸಾಯಂಕಾಲ ಹಾಗೂ ಪ್ರಾತಃಕಾಲದವರೆಗೂ ನಡೆಯುವುವು. ಅನಂತರ ಪರಿಶುದ್ಧ ಸ್ಥಳವು ಪುನಃ ನ್ಯಾಯಸ್ಥಾಪನೆಯಾಗುವುದು,” ಎಂದು ಹೇಳಿದನು.
೧೪ಅವನು ಇವನಿಗೆ, “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರ ರವರೆಗೆ ನಡೆಯುವವು. ಅನಂತರ ಪವಿತ್ರಾಲಯಕ್ಕೆ ಪುನಃ ನ್ಯಾಯಸ್ಥಾಪನೆಯಾಗುವುದು” ಎಂದು ಹೇಳಿದನು.
15 ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ, ಅದರ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ, ಮನುಷ್ಯನ ರೂಪದಂತಿರುವ ಒಬ್ಬನು ನನ್ನ ಮುಂದೆ ನಿಂತಿದ್ದನು.
೧೫ದಾನಿಯೇಲನಾದ ನಾನು ಈ ಕನಸನ್ನು ಕಂಡು ಅದನ್ನು ಗ್ರಹಿಸಲು ಪ್ರಯತ್ನಿಸುತ್ತಿರುವಾಗ ಇಗೋ, ಮನುಷ್ಯ ಸದೃಶನೊಬ್ಬನು ನನ್ನೆದುರಿಗೆ ನಿಂತಿದ್ದನು.
16 ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ, “ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು,” ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.
೧೬ಆಗ, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಇವನಿಗೆ ತಿಳಿಯಪಡಿಸು” ಎಂದು ಮನುಷ್ಯ ಧ್ವನಿಯಂತಹ ಒಂದು ವಾಣಿಯು ಊಲಾ ಕಾಲುವೆಯ ದಡಗಳ ನಡುವೆ ನನಗೆ ಕೇಳಿಸಿತು.
17 ಅದರಂತೆ ಅವನು ನನ್ನ ಬಳಿಗೆ ಬಂದನು. ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿ ಬಿದ್ದೆನು. ಆದರೆ ಅವನು ನನಗೆ, “ಮನುಷ್ಯಪುತ್ರನೇ, ಅಂತ್ಯಕಾಲದಲ್ಲಿ ನೆರವೇರುವ ದರ್ಶನವು ಎಂಬುದು ನಿನಗೆ ಮನದಟ್ಟಾಗಿರಲಿ,” ಎಂದನು.
೧೭ಅದರಂತೆ ಅವನು ನನ್ನ ಬಳಿಗೆ ಬಂದನು. ಅವನು ಬರಲು, ನಾನು ಭಯಭ್ರಾಂತನಾಗಿ ಅಡ್ಡಬಿದ್ದೆನು. ನನಗೆ ಅವನು, “ನರಪುತ್ರನೇ, ಇದು ಮನದಟ್ಟಾಗಿರಲಿ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು” ಎಂದು ಹೇಳಿದನು.
18 ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ, ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢನಿದ್ರೆಯಲ್ಲಿ ಬಿದ್ದಿದ್ದೆನು. ಆದರೆ ಅವನು ನನ್ನನ್ನು ಮುಟ್ಟಿ, ಎದ್ದು ನಿಲ್ಲುವಂತೆ ಮಾಡಿದನು.
೧೮ಅವನು ನನ್ನೊಡನೆ ಮಾತನಾಡುತ್ತಿರುವಲ್ಲಿ ನಾನು ಮೈಮರೆತು ಬೋರಲು ಬಿದ್ದಿದ್ದೆನು. ಆಗ ಅವನು ನನ್ನನ್ನು ಮುಟ್ಟಿ ನಿಲ್ಲಿಸಿ ನನಗೆ,
19 ಅವನು, “ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುತ್ತೇನೆ ಕೇಳು, ಆ ದರ್ಶನವು ನಿಯಮಿತ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು.
೧೯“ಇಗೋ, ದೇವರು ತನ್ನ ಕೋಪವನ್ನು ತೀರಿಸುವ ಮುಂದಿನ ಕಾಲದಲ್ಲಿ ನಡೆಯತಕ್ಕದ್ದನ್ನು ನಿನಗೆ ತಿಳಿಸುವೆನು; ಅದು ಕ್ಲುಪ್ತವಾದ ಅಂತ್ಯಕಾಲಕ್ಕೆ ಸಂಬಂಧಪಟ್ಟದ್ದು.
20 ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು, ಮೇದ್ಯ ಮತ್ತು ಪಾರಸಿಯ ರಾಜರು.
೨೦ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯ ಮತ್ತು ಪಾರಸಿಯ ರಾಜರು.
21 ಆ ಒರಟು ಹೋತವು ಗ್ರೀಕಿನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.
೨೧ಆ ಹೋತವು ಗ್ರೀಕ್ ರಾಜ್ಯ, ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ.
22 ಆ ಕೊಂಬು ಮುರಿದುಹೋದ ಮೇಲೆ, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದಂತೆಯೇ, ಆ ಜನಾಂಗದಿಂದ ನಾಲ್ಕು ರಾಜ್ಯಗಳು ಉದಯಿಸುವುವು. ಆದರೆ ಮೊದಲನೆಯ ಅರಸನಿಗೆ ಇದ್ದಷ್ಟು ಅಧಿಕಾರ ಅವರಿಗೆ ಇರುವುದಿಲ್ಲ.
೨೨ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನೆಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವುದಿಲ್ಲ.
23 “ಅವರ ರಾಜ್ಯದ ಕಡೆಯ ಕಾಲದಲ್ಲಿ ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ, ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.
೨೩ಆ ರಾಜ್ಯಗಳ ಕಡೆಯ ಕಾಲದಲ್ಲಿ, ಅಧರ್ಮಿಗಳ ಅಧರ್ಮವು ಪೂರ್ತಿಯಾದಾಗ ಕಠಿಣಮುಖನೂ, ತಂತ್ರವುಳ್ಳವನೂ ಆದ ಒಬ್ಬ ರಾಜನು ತಲೆದೋರುವನು.
24 ಅವನ ಶಕ್ತಿಯು ಬಲವಾಗಿರುವುದು. ಆದರೆ ಅದು ಸ್ವಂತ ಶಕ್ತಿಯಲ್ಲ. ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ಅಭಿವೃದ್ಧಿಯಾಗುವನು. ಅವನು ತನ್ನ ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲವಾದ, ಪರಿಶುದ್ಧ ಜನರನ್ನು ನಾಶಮಾಡುವನು.
೨೪ಅವನು ಪ್ರಬಲನಾಗುವನು, ಆದರೆ ಸ್ವಬಲದಿಂದಲ್ಲ. ಅತ್ಯಧಿಕವಾಗಿ ಹಾಳುಮಾಡಿ ವೃದ್ಧಿಗೆ ಬಂದು, ಇಷ್ಟಾರ್ಥವನ್ನು ತೀರಿಸಿಕೊಳ್ಳುವನು. ಬಲಿಷ್ಠರನ್ನೂ, ದೇವಜನರನ್ನೂ ಧ್ವಂಸಮಾಡುವನು.
25 ಅವನು ತನ್ನ ಶಕ್ತಿಯಿಂದಲೇ ತನ್ನ ಕಪಟತನವನ್ನು ಸಿದ್ಧಿಗೆ ತರುವನು. ಅವನು ಹೃದಯದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಸುರಕ್ಷಿತರಾಗಿದ್ದೇವೆಂದು ಹೇಳುವಾಗಲೇ ಅನೇಕರನ್ನು ನಾಶಮಾಡುವನು. ಅಲ್ಲದೆ ಅವನು ರಾಜಕುಮಾರರ ರಾಜಕುಮಾರನಿಗೆ ವಿರುದ್ಧವಾಗಿ ನಿಲ್ಲುವನು. ಆದರೂ ಮಾನವ ಶಕ್ತಿಯ ಬಳಕೆ ಇಲ್ಲದೆಯೂ ನಾಶವಾಗುವನು.
೨೫ಯುಕ್ತಿಯಿಂದಲೇ ತನ್ನ ಮೋಸವನ್ನು ಸಿದ್ಧಿಗೆ ತಂದು, ಮನದಲ್ಲಿ ಉಬ್ಬಿಕೊಂಡು ನೆಮ್ಮದಿಯಾಗಿರುವ ಬಹಳ ಜನರನ್ನು ನಾಶಪಡಿಸಿ, ಪ್ರಭುಗಳ ಪ್ರಭುವಿಗೂ ವಿರುದ್ಧವಾಗಿ ಏಳುವನು. ಆಹಾ, ಯಾರ ಕೈಯೂ ಸೋಕದೆ ಹಾಳಾಗುವನು.
26 “ನಿಮಗೆ ನೀಡಲಾದ ಸಂಜೆ ಮತ್ತು ಮುಂಜಾನೆಗಳ ದರ್ಶನವು ಸತ್ಯವಾದದ್ದು. ಆದರೆ ಆ ದರ್ಶನವು ಗುಟ್ಟಾಗಿರಲಿ. ಏಕೆಂದರೆ ಅದು ಬಹು ದೂರದ ಭವಿಷ್ಯಕ್ಕೆ ಸಂಬಂಧಿಸಿದ್ದು.”
೨೬ಕನಸಿನಲ್ಲಿ ತಿಳಿಸಲ್ಪಟ್ಟ ಉದಯಾಸ್ತಮಾನಗಳ ವಿಷಯವು ನಿಜವೇ ಸರಿ. ಆದರೆ ಆ ಕನಸು ಗುಟ್ಟಾಗಿರಲಿ. ಅದು ಬಹು ದಿನಗಳ ನಂತರ ನಡೆಯುವಂಥದು” ಎಂದು ಹೇಳಿದನು.
27 ದಾನಿಯೇಲನಾದ ನಾನು ಬಳಲಿ ಕೆಲವು ದಿನಗಳವರೆಗೂ ಅಸ್ವಸ್ಥನಾದೆನು. ಅನಂತರ ನಾನು ಎದ್ದು, ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು. ನಾನು ಆ ದರ್ಶನದ ಬಗ್ಗೆ ಬೆಚ್ಚಿಬೆರಗಾದೆನು. ಅದರ ಅರ್ಥವನ್ನೇ ಗ್ರಹಿಸಿಕೊಳ್ಳಲಾಗಲಿಲ್ಲ.
೨೭ಆಗ ದಾನಿಯೇಲನಾದ ನಾನು ಮೂರ್ಛೆಹೋಗಿ, ಕೆಲವು ದಿನಗಳು ಕಾಯಿಲೆ ಬಿದ್ದೆನು. ಆ ಮೇಲೆ ಎದ್ದು ರಾಜಕಾರ್ಯವನ್ನು ನಡೆಸಿದೆನು. ಆ ಕನಸಿಗೆ ಬೆಚ್ಚಿಬೆರಗಾದೆನು. ಅದು ಯಾರಿಗೂ ತಿಳಿಯಲಿಲ್ಲ.