< ಸಮುವೇಲನು - ದ್ವಿತೀಯ ಭಾಗ 3 >
1 ಸೌಲನ ಕುಟುಂಬದವರಿಗೂ ದಾವೀದನ ಕುಟುಂಬದವರಿಗೂ ಬಹು ದಿವಸ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಆದರೆ ಸೌಲನ ಕುಟುಂಬದವರು ಬಲಹೀನರಾಗುತ್ತಾ ಹೋದರು.
೧ಬಹು ದಿನಗಳವರೆಗೆ ಸೌಲನ ವಂಶದವರಿಗೂ ಮತ್ತು ದಾವೀದನ ವಂಶದವರಿಗೂ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶವು ದುರ್ಬಲವಾಗುತ್ತಾ ಬಂತು.
2 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
೨ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು; ಚೊಚ್ಚಲ ಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು.
3 ಕರ್ಮೇಲ್ಯನಾದ ನಾಬಾಲನ ವಿಧವೆ ಅಬೀಗೈಲಳಿಂದ ಹುಟ್ಟಿದ ಅವನ ಎರಡನೆಯ ಮಗ ಕಿಲಾಬನೂ; ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು;
೩ಎರಡನೆಯವನು ಕಿಲಾಬನು. ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು. ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಪುತ್ರನು.
4 ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು; ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು;
೪ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು.
5 ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು. ಇವರು ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು.
೫ಆರನೆಯವನು ಇತ್ರಾಮನು. ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ.
6 ಸೌಲನ ಕುಟುಂಬಕ್ಕೂ ದಾವೀದನ ಕುಟುಂಬಕ್ಕೂ ಯುದ್ಧ ನಡೆಯುತ್ತಿರುವಾಗ, ಅಬ್ನೇರನು ಸೌಲನ ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಬಲಪಡಿಸಿಕೊಂಡನು.
೬ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.
7 ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳೆಂಬ ಹೆಸರುಳ್ಳ ಒಬ್ಬ ಉಪಪತ್ನಿ ಇದ್ದಳು. ಈಷ್ಬೋಶೆತನು ಅಬ್ನೇರನಿಗೆ, “ನೀನು ನನ್ನ ತಂದೆಯ ಉಪಪತ್ನಿಯ ಬಳಿಗೆ ಪ್ರವೇಶಿಸಿದ್ದೇಕೆ?” ಎಂದನು.
೭ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯರನ್ನು ಕೂಡಿದ್ದೇಕೆ?” ಎಂದು ಕೇಳಿದನು.
8 ಆಗ ಅಬ್ನೇರನು ಈಷ್ಬೋಶೆತನ ಮಾತುಗಳಿಗೆ ಬಹುಕೋಪಗೊಂಡು, “ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿವಸದವರೆಗೂ ಯೆಹೂದವನ್ನು ವಿರೋಧಿಸಿ, ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಸಹೋದರರಿಗೂ, ಸ್ನೇಹಿತರಿಗೂ ದಯೆ ತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ತಪ್ಪು ಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
೮ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
9 ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,
೯ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದ ವರೆಗಿರುವ ಎಲ್ಲಾ ಇಸ್ರಾಯೇಲರಲ್ಲಿಯೂ, ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ,
10 ದಾವೀದನ ಸಿಂಹಾಸನವನ್ನು ದಾನಿನಿಂದ ಬೇರ್ಷೆಬದ ಮಟ್ಟಿಗೂ ಇರುವ ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ ಸ್ಥಿರಪಡಿಸುವ ಹಾಗೆ ನಾನು ಮಾಡದೆ ಇದ್ದರೆ, ದೇವರು ಅಬ್ನೇರನಿಗೆ ಹೀಗೆಯೂ ಅಧಿಕವಾಗಿಯೂ ಮಾಡಲಿ,” ಎಂದನು.
೧೦ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆ ಹೋದರೆ, ಆತನು ನನಗೆ ಬೇಕಾದದ್ದನ್ನು ಮಾಡಲಿ” ಅಂದನು.
11 ಈಷ್ಬೋಶೆತನು ಅಬ್ನೇರನಿಗೆ ಭಯಪಟ್ಟದ್ದರಿಂದ ಒಂದು ಮಾತಾದರೂ ಪ್ರತ್ಯುತ್ತರ ಹೇಳಲಾರದೆ ಇದ್ದನು.
೧೧ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
12 ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ತನ್ನ ದೂತರನ್ನು ಕಳುಹಿಸಿ, “ದೇಶವು ಯಾರದು? ಇದಲ್ಲದೆ ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು. ಆಗ ಇಗೋ, ಇಸ್ರಾಯೇಲರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವುದೆಂದು ಹೇಳಿರಿ,” ಎಂದನು.
೧೨ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.
13 ಅದಕ್ಕೆ ದಾವೀದನು, “ಒಳ್ಳೆಯದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು. ಆದರೆ ನಾನು ನಿನ್ನಲ್ಲಿ ಒಂದನ್ನು ಕೇಳುತ್ತೇನೆ.” ಏನೆಂದರೆ, “ನೀನು ನನ್ನನ್ನು ನೋಡುವುದಕ್ಕೆ ಬರುವಾಗ, ಸೌಲನ ಮಗಳಾದ ಮೀಕಲಳನ್ನು ನೀನು ಕರೆದುಕೊಂಡು ಬಾರದೆ ಹೋದರೆ, ನೀನು ನನ್ನ ಮುಖವನ್ನು ಕಾಣಬಾರದು,” ಎಂದನು.
೧೩ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.
14 ದಾವೀದನು ಸೌಲನ ಮಗ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ಮೀಕಲಳನ್ನು ನನಗೆ ಒಪ್ಪಿಸು,” ಎಂದನು.
೧೪ಆಗ ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು” ಎಂಬುದಾಗಿ ಆಜ್ಞಾಪಿಸಿದನು.
15 ಆಗ ಈಷ್ಬೋಶೆತನು ಸೇವಕರನ್ನು ಕಳುಹಿಸಿ, ಲಯಿಷನ ಮಗನಾಗಿರುವ ಅವಳ ಗಂಡ ಪಲ್ಟೀಯೇಲನಿಂದ ಅವಳನ್ನು ಕರೆಯಿಸಿಕೊಂಡನು.
೧೫ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆಯಿಸಿದನು.
16 ಅವಳ ಗಂಡನು ಅವಳ ಸಂಗಡ ಬಹುರೀಮಿನವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆ, “ತಿರುಗಿ ಹೋಗು ಹಿಂದಿರುಗು,” ಎಂದನು. ಅವನು ತಿರುಗಿಹೋದನು.
೧೬ಆಗ ಪಲ್ಟೀಯೇಲನು ಬಹುರೀಮಿನವರೆಗೆ ಅಳುತ್ತಾ ಆಕೆಯ ಹಿಂದೆ ಹೋದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗಿ ಮನೆಗೆ ಹೋಗು” ಎಂದು ಹೇಳಲು ಅವನು ಹಿಂದಿರುಗಿ ಹೋದನು.
17 ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ, “ದಾವೀದನು ನಿಮ್ಮ ಮೇಲೆ ಅರಸನಾಗಿರುವುದಕ್ಕೆ ನೀವು ಹುಡುಕುತ್ತಿದ್ದೀರಿ.
೧೭ಅಬ್ನೇರನು ಇಸ್ರಾಯೇಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮೊದಲು ಅಪೇಕ್ಷಿಸಿದಂತೆಯೇ ಈಗ ಮಾಡಿರಿ.
18 ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.
೧೮ಯೆಹೋವನು ದಾವೀದನ ವಿಷಯವಾಗಿ ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವನೆಂದು ನುಡಿದಿದ್ದಾನಲ್ಲಾ” ಎಂದು ಹೇಳಿದನು.
19 ಇದಲ್ಲದೆ ಅಬ್ನೇರನು ಬೆನ್ಯಾಮೀನ್ಯರ ಸಂಗಡ ಮಾತನಾಡಿದನು. ಅಬ್ನೇರನು ಇಸ್ರಾಯೇಲರ ದೃಷ್ಟಿಗೂ ಬೆನ್ಯಾಮೀನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೆಯದಾಗಿ ತೋರಿದ್ದನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ಹೆಬ್ರೋನಿಗೆ ಹೋದನು.
೧೯ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿಕೊಂಡು ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕೋಸ್ಕರ ಹೆಬ್ರೋನಿಗೆ ಹೊರಟನು.
20 ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರೆದುಕೊಂಡು, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರನಿಗೂ, ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.
೨೦ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣ ಮಾಡಿಸಿದನು.
21 ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.
೨೧ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು.
22 ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.
೨೨ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಭಟರು ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂತಿರುಗಿ ಬಂದರು. ಅವನು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
23 ಯೋವಾಬನೂ ಅವನ ಸಂಗಡ ಇದ್ದ ಸೈನ್ಯವೂ ಬಂದಾಗ ಅಲ್ಲಿದ್ದವರು ಯೋವಾಬನಿಗೆ, “ನೇರನ ಮಗ ಅಬ್ನೇರನು ಅರಸನ ಬಳಿಗೆ ಬಂದನು. ದಾವೀದನು ಅವನನ್ನು ಕಳುಹಿಸಿಬಿಟ್ಟದ್ದರಿಂದ ಸಮಾಧಾನವಾಗಿ ಹೋಗಿದ್ದಾನೆ,” ಎಂದರು.
೨೩ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ, ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು, ಅರಸನ ಬಳಿಗೆ ಹೋಗಿ,
24 ಆಗ ಯೋವಾಬನು ಅರಸನ ಬಳಿಗೆ ಬಂದು, “ಏನು ಮಾಡಿದೆ? ಅಬ್ನೇರನು ನಿನ್ನ ಬಳಿಗೆ ಬಂದನು. ಅವನು ಹೋಗಿ ಬಿಡುವ ಹಾಗೆ ನೀನು ಅವನನ್ನು ಕಳುಹಿಸಿಬಿಟ್ಟದ್ದು ಏಕೆ?
೨೪“ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ?
25 ನೇರನ ಮಗ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಆಗಮನ, ನಿರ್ಗಮನಗಳನ್ನು ತಿಳಿದುಕೊಳ್ಳುವುದಕ್ಕೂ, ನೀನು ಮಾಡುವುದನ್ನೆಲ್ಲಾ ಕಂಡುಹಿಡಿಯುವುದಕ್ಕೂ ಬಂದಿದ್ದನು,” ಎಂದನು.
೨೫ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ,
26 ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದಾಗ, ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು. ಅವರು ಅವನನ್ನು ಸಿರಾ ಎಂಬ ಬಾವಿಯಿಂದ ತಿರುಗಿ ಕರೆದುಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.
೨೬ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
27 ಅಬ್ನೇರನು ಹೆಬ್ರೋನಿಗೆ ತಿರುಗಿ ಬಂದ ತರುವಾಯ ಯೋವಾಬನ ಬಾಗಿಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತನಾಡಿ, ಅವನನ್ನು ಒಂದು ಕಡೆ ಕರೆದುಕೊಂಡು ಹೋಗಿ, ತನ್ನ ತಮ್ಮ ಅಸಾಯೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಹೊಟ್ಟೆಯಲ್ಲಿ ಇರಿದು ಕೊಂದುಹಾಕಿದನು.
೨೭ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.
28 ದಾವೀದನು ಅದನ್ನು ಕೇಳಿದಾಗ, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ ನನ್ನ ರಾಜ್ಯವೂ ಎಂದೆಂದಿಗೂ ಯೆಹೋವ ದೇವರ ಮುಂದೆ ನಿರಪರಾಧಿಯಾಗಿದ್ದೇವೆ.
೨೮ಸ್ವಲ್ಪ ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ, ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು.
29 ಅದು ಯೋವಾಬನ ತಲೆಯ ಮೇಲೆಯೂ, ಅವನ ತಂದೆಯ ಮನೆತನದವರ ಮೇಲೆಯೂ ನಿಂತಿರಲಿ. ಯೋವಾಬನ ಮನೆಯಲ್ಲಿ ರಕ್ತಸ್ರಾವ ರೋಗದವರೂ, ಕುಷ್ಠರೋಗಿಯೂ, ಕೋಲು ಹಿಡಿದು ನಡೆಯುವವನೂ, ಖಡ್ಗದಿಂದ ಬೀಳುವವನೂ, ಆಹಾರದ ಕೊರತೆಯುಳ್ಳವನಾಗಿಯೂ ಇದ್ದೇ ಇರಲಿ,” ಎಂದನು.
೨೯ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ (ರಕ್ತ, ಕೀವುಸ್ರವಿಸುವ ಚರ್ಮ ರೋಗ), ಕುಷ್ಠರೋಗಿಗಳೂ, ಕುಂಟರೂ, ಕತ್ತಿಯಿಂದ ಹತರಾಗುವವರೂ, ಭಿಕ್ಷೇ ಬೇಡುವವರು ಇದ್ದೇ ಇರಲಿ” ಅಂದನು.
30 ಹೀಗೆ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದುಹಾಕಿದರು. ಏಕೆಂದರೆ ಅಬ್ನೇರನು ಅವನ ಸಹೋದರ ಅಸಾಯೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.
೩೦ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ಸಾಯಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
31 ದಾವೀದನು ಯೋವಾಬನಿಗೂ, ಅವನ ಸಂಗಡವಿದ್ದ ಸಮಸ್ತ ಜನರಿಗೂ, “ನೀವು ನಿಮ್ಮ ವಸ್ತ್ರಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಉಟ್ಟುಕೊಂಡು, ಅಬ್ನೇರನ ಮುಂದೆ ಗೋಳಾಡಿರಿ,” ಎಂದನು. ಅರಸನಾದ ದಾವೀದನು ತಾನೇ ಅವನ ಶವದ ಪೆಟ್ಟಿಗೆಯ ಹಿಂದೆ ಹೋದನು.
೩೧ಅರಸನಾದ ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಕಟ್ಟಿಕೊಂಡು, ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ” ಎಂದು ಆಜ್ಞಾಪಿಸಿ ತಾನು ಶವಯಾತ್ರೆ ಹಿಂದೆ ಹೋದನು.
32 ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಹೂಳಿಟ್ಟರು. ಆಗ ಅರಸನು ತನ್ನ ಧ್ವನಿಯನ್ನೆತ್ತಿ ಅಬ್ನೇರನ ಸಮಾಧಿಯ ಬಳಿಯಲ್ಲಿ ಅತ್ತನು; ಜನರೆಲ್ಲರು ಅತ್ತರು.
೩೨ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು. ಜನರೆಲ್ಲರೂ ಅತ್ತರು.
33 ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?
೩೩ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?
34 ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.
೩೪ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.
35 ಇನ್ನೂ ಹೊತ್ತಿರುವಾಗಲೇ ಜನರೆಲ್ಲರು ಬಂದು ಊಟಮಾಡು ಎಂದು ದಾವೀದನಿಗೆ ಹೇಳಿದರು. ಅದಕ್ಕೆ ದಾವೀದನು, “ಸೂರ್ಯನು ಅಸ್ತಮಿಸುವುದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾಗಲಿ, ಬೇರೆ ಯಾವ ಆಹಾರವನ್ನಾಗಲಿ ರುಚಿ ನೋಡಿದರೆ, ದೇವರು ನನಗೆ ಬೇಕಾದದ್ದನ್ನು ಮಾಡಲಿ, ಅಧಿಕವಾಗಿಯೂ ಮಾಡಲಿ,” ಎಂದು ಆಣೆ ಇಟ್ಟುಕೊಂಡನು.
೩೫ಸೂರ್ಯಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟು ಹೇಳಿದನು.
36 ಜನರೆಲ್ಲರು ಅದನ್ನು ತಿಳಿದುಕೊಂಡಾಗ, ಅವರೆಲ್ಲರಿಗೆ ಮೆಚ್ಚಿಗೆಯಾಯಿತು. ಹಾಗೆಯೇ ಅರಸನು ಏನೇನು ಮಾಡಿದನೋ, ಅದು ಜನರಿಗೆ ಮೆಚ್ಚಿಗೆಯಾಗಿತ್ತು.
೩೬ಜನರು ಇದನ್ನು ಕಂಡು ಮೆಚ್ಚಿದರು. ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.
37 ಏಕೆಂದರೆ ನೇರನ ಮಗ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದದ್ದಲ್ಲವೆಂದು ಸಮಸ್ತ ಜನರೂ, ಸಮಸ್ತ ಇಸ್ರಾಯೇಲರೂ ಆ ದಿವಸದಲ್ಲಿ ತಿಳಿದುಕೊಂಡರು.
೩೭ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು.
38 ಇದಲ್ಲದೆ ಅರಸನು ತನ್ನ ಸೇವಕರಿಗೆ, “ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿಲ್ಲವೋ?
೩೮ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.
39 ನಾನು ಅರಸನಾಗಿ ಅಭಿಷೇಕ ಹೊಂದಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಪುತ್ರರಾದ ಇವರು ನನ್ನ ಹತೋಟಿಗೆ ಬಾರದವರು. ಕೆಟ್ಟತನ ಮಾಡುವವನಿಗೆ ಯೆಹೋವ ದೇವರು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವರು,” ಎಂದನು.
೩೯ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು ಯೆಹೋವನೇ ಕೆಡುಕರಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿದನು.