< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 17 >

1 ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು.
ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು.
2 ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.
ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.
3 ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.
ಇವನು ಬಾಳ್ ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಯೆಹೋಷಾಫಾಟನ ಸಂಗಡ ಇದ್ದನು.
4 ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು.
ಇವನು ಇಸ್ರಾಯೇಲರಂತೆ ನಡೆಯದೆ, ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.
5 ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು.
ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.
6 ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು.
ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದ ದೇಶದಲ್ಲಿದ್ದ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದು ಹಾಕಿಸಿದನು.
7 ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು.
ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.
8 ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು.
ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರು ಇದ್ದರು. ಎಲೀಷಾಮಾ, ಯೆಹೋರಾಮ್,
9 ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು.
ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.
10 ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ.
೧೦ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರೆಗೆ ಯೆಹೋವನ ಭಯವಿದ್ದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.
11 ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.
೧೧ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.
12 ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
೧೨ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದ ದೇಶದಲ್ಲಿ ಕೋಟೆಗಳನ್ನೂ ಮತ್ತು ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
13 ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.
೧೩ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.
14 ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು.
೧೪ಪೂರ್ವಿಕರ ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಗೋತ್ರ ಪ್ರಧಾನರು ಯಾರೆಂದರೆ: ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ಯುದ್ಧವೀರರ ಅಧಿಪತಿಯಾದ ಅದ್ನ;
15 ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು.
೧೫ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧವೀರರ ಅಧಿಪತಿಯಾದ ಯೆಹೋಹಾನಾನ್;
16 ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು.
೧೬ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;
17 ಬೆನ್ಯಾಮೀನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು.
೧೭ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಯುದ್ಧವೀರರ ಅಧಿಪತಿಯಾದ ಎಲ್ಯಾದ;
18 ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು.
೧೮ಒಂದು ಲಕ್ಷದ ಎಂಭತ್ತುಸಾವಿರ ಮಂದಿ ಯುದ್ಧಸನ್ನದ್ಧ ಸೈನಿಕರ ನಾಯಕನಾದ ಯೆಹೋಜಾಬಾದ್ ಎಂಬುವವರು.
19 ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.
೧೯ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ, ಕೋಟೆ ಕೊತ್ತಲಗಳುಳ್ಳ ಯೆಹೂದ ಪಟ್ಟಣಗಳಲ್ಲಿಯೂ ಸೈನಿಕರಿದ್ದರು.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 17 >