< ಸಮುವೇಲನು - ಪ್ರಥಮ ಭಾಗ 19 >

1 ಸೌಲನು ತನ್ನ ಮಗ ಯೋನಾತಾನ ಮತ್ತು ತನ್ನ ಸಮಸ್ತ ಸೇವಕರಿಗೆ ದಾವೀದನನ್ನು ಕೊಲ್ಲಬೇಕೆಂದು ಹೇಳಿದನು. ಆದರೆ ಸೌಲನ ಮಗನಾದ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
ಸೌಲನು ದಾವೀದನನ್ನು ಕೊಲ್ಲಬೇಕೆಂದು ತನ್ನ ಮಗನಾದ ಯೋನಾತಾನನಿಗೂ, ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
2 ಯೋನಾತಾನನು ದಾವೀದನನ್ನು, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದು ಹುಡುಕುತ್ತಾನೆ. ನೀನು ನಾಳೆ ಬೆಳಗಿನವರೆಗೆ ಎಚ್ಚರಿಕೆಯಾಗಿದ್ದು, ಮರೆಯಾದ ಸ್ಥಳಗಳಲ್ಲಿ ಅಡಗಿಕೋ.
ಆದ್ದರಿಂದ ಅವನು ದಾವೀದನಿಗೆ, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾನೆ. ನೀನು ಜಾಗರೂಕತೆಯಿಂದಿರು. ನಾಳೆ ಬೆಳಿಗ್ಗೆ ಒಂದು ಗುಪ್ತವಾದ ಸ್ಥಳದಲ್ಲಿ ಅಡಗಿಕೊಂಡಿರು.
3 ಆಗ ನನ್ನ ತಂದೆಯ ಬಳಿಯಲ್ಲಿ ನಿಂತುಕೊಂಡು, ನಿನಗೋಸ್ಕರ ನನ್ನ ತಂದೆಯ ಸಂಗಡ ಮಾತನಾಡಿ, ನಾನು ನೋಡುವುದನ್ನು ಹೊರಟುಬಂದು ನೀನು ಇರುವ ಹೊಲದಲ್ಲಿ ನಿನಗೆ ತಿಳಿಸುವೆನು,” ಎಂದನು.
ನೀನು ಅಡಗಿಕೊಂಡಿರುವ ಹೊಲಕ್ಕೆ ನಾನು ಬಂದು, ನನ್ನ ತಂದೆಯ ಬಳಿಯಲ್ಲಿ ನಿಂತು, ನಿನ್ನ ವಿಷಯವನ್ನು ಮಾತನಾಡಿ, ಅವನಿಂದ ತಿಳಿದು ಬರುವ ವಿಚಾರವನ್ನು ನಿನಗೆ ತಿಳಿಸುವೆನು” ಎಂದು ಹೇಳಿದನು.
4 ಹಾಗೆಯೇ ಯೋನಾತಾನನು ತನ್ನ ತಂದೆ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೆಯದನ್ನು ಮಾತನಾಡಿ ಅವನಿಗೆ, “ಅರಸನು ತನ್ನ ಸೇವಕನಾದ ದಾವೀದನಿಗೆ ದ್ರೋಹಮಾಡದೆ ಇರಲಿ. ಏಕೆಂದರೆ ಅವನು ನಿನಗೆ ದ್ರೋಹಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.
ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿ, “ಒಡೆಯನು ತನ್ನ ಸೇವಕನಾದ ದಾವೀದನಿಗೆ ಅನ್ಯಾಯ ಮಾಡದಿರಲಿ. ಅವನು ನಿನಗೆ ದ್ರೋಹ ಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.
5 ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಫಿಲಿಷ್ಟಿಯನನ್ನು ಹೊಡೆದನು. ಯೆಹೋವ ದೇವರು ಸಮಸ್ತ ಇಸ್ರಾಯೇಲರಿಗೋಸ್ಕರ ದೊಡ್ಡ ರಕ್ಷಣೆಯನ್ನು ಉಂಟುಮಾಡಿದರು. ನೀನೂ ಕಂಡು ಸಂತೋಷಪಟ್ಟೆ. ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರ್ದೋಷಿಯ ರಕ್ತಕ್ಕೆ ವಿರೋಧವಾಗಿ ಅಪರಾಧವನ್ನು ಮಾಡುವುದೇಕೆ?” ಎಂದನು.
ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಫಿಲಿಷ್ಟಿಯನನ್ನು ಕೊಂದನು. ಯೆಹೋವನು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿ ಸಂತೋಷಪಟ್ಟಿಯಲ್ಲಾ. ದಾವೀದನನ್ನು ನಿಷ್ಕರುಣೆಯಾಗಿ ಕೊಂದು, ನಿರಪರಾಧಿಯ ರಕ್ತವನ್ನು ಸುರಿಸಿ, ಅಪರಾಧಕ್ಕೆ ನೀನೇಕೆ ಗುರಿಯಾಗುತ್ತೀ?” ಅಂದನು.
6 ಆಗ ಸೌಲನು ಯೋನಾತಾನನ ಮಾತನ್ನು ಕೇಳಿ, “ಯೆಹೋವ ದೇವರಾಣೆ ಅವನು ಕೊಲೆಯಾಗುವುದಿಲ್ಲ,” ಎಂದನು.
ಸೌಲನು ಯೋನಾತಾನನ ಮಾತುಗಳನ್ನು ಲಾಲಿಸಿ, “ಯೆಹೋವನಾಣೆ, ಅವನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣಮಾಡಿದನು.
7 ಆಗ ಯೋನಾತಾನನು ದಾವೀದನನ್ನು ಕರೆದು, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ, ದಾವೀದನನ್ನು ಸೌಲನ ಬಳಿಗೆ ಕರೆತಂದನು. ಅವನು ಮುಂಚಿನ ಹಾಗೆಯೇ ಸೌಲನ ಬಳಿಯಲ್ಲಿ ಇದ್ದನು.
ಆಗ ಯೋನಾತಾನನು ದಾವೀದನನ್ನು ಕರೆದು, ಅವನಿಗೆ ಈ ಮಾತುಗಳನ್ನು ತಿಳಿಸಿ, ಸೌಲನ ಬಳಿಗೆ ಕರೆದುಕೊಂಡು ಬಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲಿ ಇರುವವನಾದನು.
8 ತಿರುಗಿ ಯುದ್ಧ ಉಂಟಾಯಿತು. ಆಗ ದಾವೀದನು ಹೊರಟು, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರನ್ನು ಸಾಹಸದಿಂದ ಹೊಡೆದನು. ಅವರು ಅವನ ಎದುರಿನಿಂದ ಓಡಿಹೋದರು.
ಫಿಲಿಷ್ಟಿಯರು ತಿರುಗಿ ಯುದ್ಧಕ್ಕೆ ಬಂದಾಗ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಸಂಪೂರ್ಣವಾಗಿ ಸೋಲಿಸಿ, ಓಡಿಸಿಬಿಟ್ಟನು.
9 ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು, ತನ್ನ ಮನೆಯೊಳಗೆ ಕುಳಿತಿರುವಾಗ, ಯೆಹೋವ ದೇವರಿಂದ ಕಳುಹಿಸಲಾದ ದುರಾತ್ಮವು ಅವನ ಮೇಲೆ ಬಂತು. ದಾವೀದನು ತನ್ನ ಕೈಯಿಂದ ಕಿನ್ನರಿ ಬಾರಿಸಿದನು.
ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದಾಗ ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂದಿತು.
10 ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.
೧೦ಅವನು ಒಡನೆ ಕಿನ್ನರಿಯನ್ನು ನುಡಿಸುತ್ತಿದ್ದ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಪಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ, ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
11 ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ,” ಎಂದು ಹೇಳಿ
೧೧ಸೌಲನು ಕೂಡಲೇ ದೂತರನ್ನು ಕರಿಸಿ ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ, “ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ” ಎಂದು ಹೇಳಿ
12 ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು.
೧೨ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಲು ಅವನು ಓಡಿಹೋಗಿ ತಪ್ಪಿಸಿಕೊಂಡನು.
13 ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.
೧೩ಅನಂತರ ಆಕೆಯು ಮನೆಯಲ್ಲಿದ್ದ ಒಂದು ವಿಗ್ರಹವನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ತಲೆದಿಂಬಿನ ಜಾಗದಲ್ಲಿ ಹಾಕಿ ಕಂಬಳಿಯನ್ನು ಹೊದಿಸಿದಳು.
14 ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, “ಅವನು ಖಾಯಿಲೆಯಲ್ಲಿದ್ದಾನೆ,” ಎಂದಳು.
೧೪ಸೌಲನ ದೂತರು ದಾವೀದನನ್ನು ಹಿಡಿಯುವುದಕ್ಕೆ ಬಂದಾಗ ಅವಳು ಅವನಿಗೆ ಸ್ವಸ್ಥವಿಲ್ಲವೆಂದು ಹೇಳಿಕಳುಹಿಸಿದಳು.
15 ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, “ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ,” ಎಂದನು.
೧೫ಸೌಲನು ತಿರುಗಿ ತನ್ನ ಆಳುಗಳನ್ನು, “ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಕೊಂದುಹಾಕುತ್ತೇನೆ” ಎಂದು ಆಜ್ಞಾಪಿಸಿದನು.
16 ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.
೧೬ಅವರು ಹೋಗಿ ನೋಡಲು ಹಾಸಿಗೆಯ ಮೇಲಿರುವುದು ಮೇಕೆಕೂದಲಿನಿಂದ ಹೆಣೆದ ಜಾಲರಿಯ ಒಂದು ವಿಗ್ರಹ ಎಂದು ತಿಳಿದುಬಂತು.
17 ಆಗ ಸೌಲನು ಮೀಕಲಳಿಗೆ, “ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ,” ಎಂದನು. ಆಗ ಮೀಕಲಳು ಸೌಲನಿಗೆ ಉತ್ತರವಾಗಿ, “ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು,” ಎಂದಳು.
೧೭ಆಗ ಸೌಲನು ಮೀಕಲಳಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲಾ” ಎನ್ನಲು ಆಕೆಯು ಅವನಿಗೆ, “ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ ಎಂದು ಅವನು ನನಗೆ ಹೇಳಿದನು” ಅಂದಳು.
18 ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.
೧೮ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದೆಲ್ಲವನ್ನು ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ನಯೋತ್ ಎಂಬ ಸ್ಥಳದಲ್ಲಿ ವಾಸವಾಗಿದ್ದರು.
19 ಆಗ, “ದಾವೀದನು ರಾಮದ ನಯೋತಿನಲ್ಲಿ ಇದ್ದಾನೆ,” ಎಂದು ಸೌಲನಿಗೆ ಗೊತ್ತಾಯಿತು.
೧೯ದಾವೀದನು ರಾಮದ ನಯೋತಿನಲ್ಲಿರುವುದು ಸೌಲನಿಗೆ ಗೊತ್ತಾಗಲು,
20 ಆದ್ದರಿಂದ ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದನು. ಪ್ರವಾದಿಗಳ ಗುಂಪು ಪ್ರವಾದಿಸುವುದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುಯೇಲನು ನಿಂತಿರುವುದನ್ನೂ ಕಂಡಾಗ, ದೇವರ ಆತ್ಮ ಸೌಲನ ದೂತರ ಮೇಲೆ ಬಂದಿತು, ಅವರೂ ಸಹ ಪ್ರವಾದಿಸಿದರು.
೨೦ಅವನು ದಾವೀದನನ್ನು ಹಿಡಿದು ತರುವುದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿ ಸಮೂಹವು ಪ್ರವಾದಿಸುತ್ತಿರುವುದನ್ನೂ, ಸಮುವೇಲನು ಅವರ ನಾಯಕನಾಗಿ ನಿಂತಿರುವುದನ್ನು ಕಂಡಾಗ, ದೇವರ ಆತ್ಮವು ಅವರ ಮೇಲೆಯೂ ಬಂದಿತು. ಅವರೂ ಪ್ರವಾದಿಸಿದರು.
21 ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ, ಅವನು ಬೇರೆ ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತರನ್ನು ಕಳುಹಿಸಿದನು. ಅವರೂ ಹಾಗೆಯೇ ಪ್ರವಾದಿಸಿದರು.
೨೧ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು. ಇವರೂ ಪ್ರವಾದಿಸಿದರು. ಅವನು ಮೂರನೆಯ ಸಾರಿ ಇನ್ನೂ ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಅವರೂ ಪ್ರವಾದಿಸಿದರು.
22 ಆಗ ಸೌಲನು ತಾನೇ ರಾಮಕ್ಕೆ ಹೋದನು. ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, ಸಮುಯೇಲನೂ ದಾವೀದನೂ ಎಲ್ಲಿದ್ದಾರೆ ಎಂದು ಕೇಳಿದನು. ಆಗ ಒಬ್ಬನು, “ಅವರು ರಾಮದ ನಯೋತಿನಲ್ಲಿದ್ದಾರೆ,” ಎಂದನು.
೨೨ಆಗ ಸೌಲನು ತಾನೇ ರಾಮಕ್ಕೆ ಹೋಗಬೇಕೆಂದು ಹೊರಟು, ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, “ಸಮುವೇಲ ದಾವೀದರು ಎಲ್ಲಿರುತ್ತಾರೆ?” ಎಂದು ವಿಚಾರಿಸಿದನು. ಆಗ ಜನರು, “ರಾಮದ ನಯೋತಿನಲ್ಲಿ ಇರುತ್ತಾರೆ” ಎಂದು ಉತ್ತರಕೊಟ್ಟರು.
23 ಹಾಗೆಯೇ ಅವನು ರಾಮದ ನಯೋತಿಗೆ ಹೋದನು. ಆಗ ದೇವರ ಆತ್ಮ ಮೇಲೆ ಬರಲು, ಅವನು ರಾಮದ ನಯೋತಿಗೆ ಸೇರುವವರೆಗೂ ಪ್ರವಾದಿಸುತ್ತಾ ಬಂದನು.
೨೩ಅವನು ಅಲ್ಲಿಂದ ರಾಮದ ನಯೋತಿಗೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವ ತನಕ ಪ್ರವಾದಿಸುತ್ತಾ ಹೋದನು.
24 ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ, ತಾನೂ ಹಾಗೆಯೇ ಸಮುಯೇಲನ ಮುಂದೆ ಪ್ರವಾದಿಸಿದನು. ಆ ದಿನ ಹಗಲೆಲ್ಲವೂ, ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದ್ದರಿಂದ, “ಸೌಲನು ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ?” ಎಂಬ ಮಾತು ಪ್ರಚಲಿತವಾಯಿತು.
೨೪ಅಲ್ಲಿಗೆ ಸೇರಿದ ಮೇಲೆ ಅವನು ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪ್ರವಾದಿಸುತ್ತಾ, ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಇದರಿಂದ “ಸೌಲನೂ ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ” ಎಂಬ ಮಾತು ಪ್ರಚಲಿತವಾಯಿತು.

< ಸಮುವೇಲನು - ಪ್ರಥಮ ಭಾಗ 19 >