< ಅರಸುಗಳು - ಪ್ರಥಮ ಭಾಗ 14 >

1 ಅದೇ ಕಾಲದಲ್ಲಿ ಯಾರೊಬ್ಬಾಮನ ಮಗ ಅಬೀಯನಿಗೆ ರೋಗ ತಗುಲಿತು. ಆದ್ದರಿಂದ ಯಾರೊಬ್ಬಾಮನು ತನ್ನ ಪತ್ನಿಗೆ,
ಆ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು.
2 “ನೀನು ಯಾರೊಬ್ಬಾಮನ ಪತ್ನಿ ಎಂದು ಯಾರೂ ತಿಳಿಯದ ಹಾಗೆ ನೀನೆದ್ದು, ವೇಷಹಾಕಿಕೊಂಡು ಶೀಲೋವಿಗೆ ಹೋಗು. ‘ಈ ಜನರ ಮೇಲೆ ಅರಸನಾಗಿರುವೆ,’ ಎಂದು ನನಗೆ ಹೇಳಿದ ಪ್ರವಾದಿ ಅಹೀಯನು ಅಲ್ಲಿದ್ದಾನೆ.
ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಹಾಕಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
3 ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ, ಭಕ್ಷ್ಯಗಳನ್ನೂ, ಒಂದು ಮಡಕೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವುದನ್ನು ನಿನಗೆ ತಿಳಿಸುವನು,” ಎಂದನು.
ನೀನು ಹತ್ತು ರೊಟ್ಟಿಗಳನ್ನೂ, ಒಂದಷ್ಟು ಸಿಹಿಪದಾರ್ಥವನ್ನೂ ಮತ್ತು ಒಂದು ಕುಪ್ಪೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು” ಎಂದು ಹೇಳಿದನು.
4 ಯಾರೊಬ್ಬಾಮನ ಪತ್ನಿಯು ಹಾಗೆಯೇ ಮಾಡಿ, ಎದ್ದು ಶೀಲೋವಿಗೆ ಹೋಗಿ, ಅಹೀಯನ ಮನೆಗೆ ಬಂದಳು. ಆದರೆ ಅಹೀಯನಿಗೆ ಕಾಣಿಸಲಿಲ್ಲ, ವೃದ್ದಾಪ್ಯದಿಂದ ಅವನ ಕಣ್ಣುಗಳು ಮೊಬ್ಬಾಗಿ ಹೋಗಿದ್ದವು.
ಆಕೆಯು ಅವನು ಹೇಳಿದಂತೆಯೇ ಮಾಡಿ ಶೀಲೋವಿನಲ್ಲಿದ್ದ ಅಹೀಯನ ಮನೆಗೆ ಹೋದಳು. ಮುಪ್ಪಿನ ದೆಸೆಯಿಂದ ಅಹೀಯನ ಕಣ್ಣುಗಳು ಮೊಬ್ಬಾಗಿ ಹೋಗಿದ್ದರಿಂದ ಅವನಿಗೆ ಏನು ಕಾಣಿಸುತ್ತಿರಲಿಲ್ಲ.
5 ಆದರೆ ಯೆಹೋವ ದೇವರು ಅಹೀಯನಿಗೆ, “ಯಾರೊಬ್ಬಾಮನ ಪತ್ನಿಯು ತನ್ನ ಮಗನಿಗೋಸ್ಕರ ನಿನ್ನಿಂದ ದೈವೋತ್ತರವನ್ನು ಕೇಳುವುದಕ್ಕೆ ಬರುತ್ತಾಳೆ. ಏಕೆಂದರೆ ಅವಳ ಮಗನು ರೋಗದಲ್ಲಿದ್ದಾನೆ. ನೀನು ಅವಳಿಗೆ ಹೀಗೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊಬ್ಬಳ ಹಾಗೆ ವೇಷಹಾಕಿಕೊಂಡು ಬರುವಳು,” ಎಂದು ಹೇಳಿಕೊಟ್ಟಿದ್ದನು.
ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋಕ್ತಿಯನ್ನು ಕೇಳುವುದಕ್ಕೆ ತನ್ನನ್ನು ಅನ್ಯಳ ಹಾಗೆ ವೇಷಮರೆಸಿಕೊಂಡು ಬರುತ್ತಾಳೆಂದೂ, ಆಕೆಗೆ ಇಂಥಿಂಥ ಉತ್ತರ ಕೊಡಬೇಕು” ಎಂದು ತಿಳಿಸಿದ್ದನು.
6 ಅನಂತರ ಅವಳು ಬಾಗಿಲಲ್ಲಿ ಪ್ರವೇಶಿಸುವಾಗ, ಅಹೀಯನು ಅವಳ ಹೆಜ್ಜೆಗಳ ಶಬ್ದ ಕೇಳುತ್ತಲೇ ಅವನು, “ಯಾರೊಬ್ಬಾಮನ ಪತ್ನಿಯೇ ಒಳಗೆ ಬಾ, ನೀನು ಮತ್ತೊಬ್ಬಳಂತೆ ತೋರಿಸಿಕೊಳ್ಳುವುದು ಏಕೆ? ನಾನು ಕಠಿಣವಾದವುಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ.
ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುತ್ತಿರುವಾಗಲೇ ಅಹೀಯನು ಆಕೆಯ ಕಾಲು ಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ ಬಾ. ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
7 ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಾನು ಜನರೊಳಗಿಂದ ತೆಗೆದು ನಿನ್ನನ್ನು ಹೆಚ್ಚಿಸಿ, ನನ್ನ ಜನರಾದ ಇಸ್ರಾಯೇಲರ ಮೇಲೆ ನಾಯಕನಾಗಿ ಮಾಡಿದೆನು.
ನೀನು ಹೋಗಿ ಯಾರೊಬ್ಬಾಮನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಅಪ್ಪಣೆಯನ್ನು ತಿಳಿಸು. ಆತನು ಅವನಿಗೆ, ‘ನಾನು ನಿನ್ನನ್ನು ಜನರ ಮಧ್ಯದಿಂದ ಉನ್ನತಸ್ಥಾನಕ್ಕೆ ತಂದೆನು. ನಿನ್ನನ್ನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನನ್ನಾಗಿ ಮಾಡಿದೆನು.
8 ದಾವೀದನ ಮನೆಯಿಂದ ರಾಜ್ಯವನ್ನು ವಿಭಾಗಿಸಿ ನಿನಗೆ ಕೊಟ್ಟೆನು. ಆದರೆ ನನ್ನ ಆಜ್ಞೆಗಳನ್ನು ಕೈಗೊಂಡು, ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ, ತನ್ನ ಸಂಪೂರ್ಣ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರಲಿಲ್ಲ.
ರಾಜ್ಯವನ್ನು ದಾವೀದನ ಕುಟುಂಬದವರಿಂದ ಕಿತ್ತುಕೊಂಡು ನಿನಗೆ ಕೊಟ್ಟೆನು. ಆದರೂ ನೀನು ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣ ಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ನನ್ನನ್ನು ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದನಂತೆ ನಡೆಯಲಿಲ್ಲ.
9 ನೀನು ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದೆ. ಏಕೆಂದರೆ, ನೀನು ಹೋಗಿ ನನಗೆ ಕೋಪವನ್ನೆಬ್ಬಿಸುವ ಅನ್ಯದೇವರುಗಳನ್ನೂ, ಎರಕದ ವಿಗ್ರಹಗಳನ್ನೂ ಮಾಡಿಕೊಂಡು, ನನ್ನನ್ನು ತಿರಸ್ಕರಿಸಿದೆ.
ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ. ನನ್ನನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ.
10 “‘ಆದ್ದರಿಂದ ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ, ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ, ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟುಕೊಂಡವರನ್ನೂ ಕಡಿದುಬಿಟ್ಟು, ಅದು ತೀರುವವರೆಗೆ ಮನುಷ್ಯನು ರಸವನ್ನು ಹೇಗೆ ತೆಗೆದು ಹಾಕುತ್ತಾನೋ, ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಉಳುವಿಕೆಯನ್ನು ತೆಗೆದುಹಾಕುತ್ತೇನೆ.
೧೦ಆದುದರಿಂದ ಯಾರೊಬ್ಬಾಮನೇ ಕೇಳು, ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು. ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು.
11 ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿಂದುಬಿಡುವವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿಂದುಬಿಡುವವು,’ ಎಂದು ಯೆಹೋವ ದೇವರು ಹೇಳಿದ್ದಾರೆ.
೧೧ಅವರು ನಿರ್ನಾಮವಾಗುವರು. ಅವರಲ್ಲಿ ಪಟ್ಟಣದೊಳಗೆ ಸಾಯುವಂಥವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವವು ಎಂದು ಹೇಳುತ್ತಾನೆ’. ಇದು ಯೆಹೋವನಾದ ನನ್ನ ಮಾತು. ನೀನು ಎದ್ದು ನಿನ್ನ ಮನೆಗೆ ಹೋಗು.
12 “ಆದ್ದರಿಂದ ನೀನೆದ್ದು ನಿನ್ನ ಮನೆಗೆ ಹೋಗು. ಪಟ್ಟಣದಲ್ಲಿ ಪ್ರವೇಶಿಸುವಾಗ ನಿನ್ನ ಮಗನು ಸಾಯುವನು.
೧೨ನೀನು ಪಟ್ಟಣದೊಳಗೆ ಕಾಲಿಡುವಷ್ಟರಲ್ಲಿ ಹುಡುಗನು ಸಾಯುವನು.
13 ಇದಲ್ಲದೆ ಸಮಸ್ತ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಳಿಡುವರು. ಏಕೆಂದರೆ, ಯಾರೊಬ್ಬಾಮನವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು. ಯಾರೊಬ್ಬಾಮನ ಮನೆಯವರೊಳಗೆ ಅವನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗಾದ ಒಳ್ಳೆಯ ಕ್ರಿಯೆ ಸಿಕ್ಕಿತು.
೧೩ಇಸ್ರಾಯೇಲರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಅವನು ಮಾತ್ರ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಅವನೊಬ್ಬನೇ ಸಮಾಧಿಹೊಂದುವನು.
14 “ಇದಲ್ಲದೆ ಯೆಹೋವ ದೇವರು ಇಸ್ರಾಯೇಲನ್ನು ಆಳುವುದಕ್ಕೆ ಅದೇ ದಿನದಲ್ಲಿ ಯಾರೊಬ್ಬಾಮನ ಮನೆಯನ್ನು ಕಡಿದುಬಿಡುವ ಒಬ್ಬ ಅರಸನನ್ನು ತನಗೋಸ್ಕರ ಎಬ್ಬಿಸುವರು.
೧೪ಯೆಹೋವನು ಇಸ್ರಾಯೇಲರನ್ನು ಆಳಲು ಬೇರೊಬ್ಬ ಅರಸನನ್ನು ನೇಮಿಸುವನು. ಅವನು ಕೂಡಲೇ ಯಾರೊಬ್ಬಾಮನ ಮನೆಯವರನ್ನು ಸಂಹರಿಸಿಬಿಡುವನು. ಇನ್ನು ಏನೇನು ಸಂಭವಿಸುವದೋ?
15 ಈಗಲೇ ಏನು ಆಗುವುದು? ನೀರಿನಲ್ಲಿರುವ ಆಪು ಹುಲ್ಲು ಅಲ್ಲಾಡುವ ಹಾಗೆ ಯೆಹೋವ ದೇವರು ಇಸ್ರಾಯೇಲನ್ನು ಹೊಡೆಯುವರು. ಇಸ್ರಾಯೇಲರು ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಲು, ತಮ್ಮ ವಿಗ್ರಹಾರಾಧನೆಗೋಸ್ಕರ ಅಶೇರ ಸ್ತಂಭಗಳನ್ನು ನಿಲ್ಲಿಸಿಕೊಂಡದ್ದರಿಂದ, ಯೆಹೋವ ದೇವರು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ, ಯೂಫ್ರೇಟೀಸ್ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವರು.
೧೫ಯೆಹೋವನು ಇಸ್ರಾಯೇಲರನ್ನು ಹೊಡೆಯುವನು. ಆಗ ಅವರು ನೀರಿನಲ್ಲಿರುವ ಆಪುಹುಲ್ಲೋ ಎಂಬಂತೆ ಹೊಯ್ದಾಡುವರು. ಅವರು ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಆತನಿಗೆ ಕೋಪವನ್ನೆಬ್ಬಿಸಿದ್ದರಿಂದ ಆತನು ಅವರನ್ನು ಅವರ ಪೂರ್ವಿಕರಿಗೆ ಕೊಟ್ಟ ದೇಶದಿಂದ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದೊಳಗೆ ಚದುರಿಸಿಬಿಡುವನು.
16 ಯೆಹೋವ ದೇವರು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲರನ್ನು ಶತ್ರುಗಳಿಗೆ ಒಪ್ಪಿಸಿಬಿಡುವರು. ಏಕೆಂದರೆ ಯಾರೊಬ್ಬಾಮನೇ ಪಾಪಮಾಡಿ, ಪಾಪವನ್ನು ಮಾಡಲು ಇಸ್ರಾಯೇಲರನ್ನು ಪ್ರೇರೇಪಿಸಿದನು,” ಎಂದನು.
೧೬ಯೆಹೋವನು ಯಾರೊಬ್ಬಾಮನ ಪಾಪಗಳ ನಿಮಿತ್ತವಾಗಿಯೂ ಅವನ ಪ್ರೇರಣೆಯಿಂದ ಇಸ್ರಾಯೇಲರು ಮಾಡಿದ ಅಪರಾಧಗಳ ನಿಮಿತ್ತವಾಗಿಯೂ ಅವರನ್ನು ಶತ್ರುಗಳಿಗೆ ಒಪ್ಪಿಸುವನು” ಎಂದು ಆಕೆಗೆ ಹೇಳಿದನು.
17 ಆಗ ಯಾರೊಬ್ಬಾಮನ ಪತ್ನಿ ಎದ್ದು ಹೊರಟು ತಿರ್ಚಕ್ಕೆ ಬಂದಳು. ಯೆಹೋವ ದೇವರು ಪ್ರವಾದಿಯಾದ ತನ್ನ ಸೇವಕನಾಗಿರುವ ಅಹೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವಳು ಬಾಗಿಲ ಹೊಸ್ತಿಲ ಬಳಿಗೆ ಬಂದಾಗ ಅವಳ ಮಗನು ಸತ್ತನು.
೧೭ಯಾರೊಬ್ಬಾಮನ ಹೆಂಡತಿಯು ತಿರ್ಚಾ ಊರಿಗೆ ಹೊರಟುಹೋಗಿ ತನ್ನ ಮನೆಯ ಹೊಸ್ತಿಲಲ್ಲಿ ಕಾಲಿಟ್ಟ ಕೂಡಲೇ ಹುಡುಗನು ಸತ್ತನು.
18 ಯೆಹೋವ ದೇವರು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಅವರು ಅವನನ್ನು ಹೂಳಿಟ್ಟರು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿದರು.
೧೮ಯೆಹೋವನು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಎಲ್ಲಾ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು.
19 ಯಾರೊಬ್ಬಾಮನ ಮಿಕ್ಕಾದ ಕ್ರಿಯೆಗಳೂ, ಅವನು ಯುದ್ಧ ಮಾಡಿದ್ದೂ, ಆಳಿದ್ದೂ, ಇವು ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
೧೯ಯಾರೊಬ್ಬಾಮನ ಇತರ ಕೃತ್ಯಗಳೂ ಅವನ ಯುದ್ಧ ಮತ್ತು ರಾಜ್ಯಭಾರಗಳ ವಿವರವೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
20 ಯಾರೊಬ್ಬಾಮನು ಆಳಿದ ದಿವಸಗಳು ಇಪ್ಪತ್ತೆರಡು ವರ್ಷಗಳಾಗಿದ್ದವು. ಅವನು ಮೃತನಾಗಿ, ತನ್ನ ಪಿತೃಗಳ ಜೊತೆ ಸೇರಿದನು. ಅವನಿಗೆ ಬದಲಾಗಿ ಅವನ ಮಗ ನಾದಾಬನು ಅರಸನಾದನು.
೨೦ಅವನು ಇಪ್ಪತ್ತೆರಡು ವರ್ಷ ಆಳಿ ಪೂರ್ವಿಕರ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗನಾದ ನಾದಾಬನು ಅರಸನಾದನು.
21 ಆದರೆ ಸೊಲೊಮೋನನ ಮಗ ರೆಹಬ್ಬಾಮನು ಯೆಹೂದದಲ್ಲಿ ಆಳುತ್ತಾ ಇದ್ದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
೨೧ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ಅರಸನಾದನು. ಅವನು ಪಟ್ಟಕ್ಕೆ ಬಂದಾಗ ನಲ್ವತ್ತೊಂದು ವರ್ಷದವನಾಗಿದ್ದು, ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
22 ಆದರೆ ಯೆಹೂದದವರು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನ ಮಾಡಿ, ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿಗಿಂತ, ತಾವು ಹೆಚ್ಚಾಗಿ ಪಾಪಮಾಡಿ ಯೆಹೋವ ದೇವರಿಗೆ ರೋಷವನ್ನೆಬ್ಬಿಸಿದರು.
೨೨ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ತಮ್ಮ ಪೂರ್ವಿಕರಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
23 ಅವರು ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ, ಉನ್ನತ ಸ್ಥಳಗಳನ್ನೂ ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ, ಹಸುರಾದ ಪ್ರತಿ ಗಿಡದ ಕೆಳಗೂ ತಮಗಾಗಿ ಮಾಡಿಕೊಂಡರು.
೨೩ತಮ್ಮ ಪೂರ್ವಿಕರಂತೆಯೇ ಅವರೂ ತಮಗೋಸ್ಕರ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಂಡರು. ಪ್ರತಿಯೊಂದು ದಿಣ್ಣೆಗಳ ಮೇಲೆ ಹಾಗೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಕಲ್ಲಿನ ಕಂಬಗಳನ್ನೂ ಮತ್ತು ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.
24 ಇದಲ್ಲದೆ ಪೂಜಾಸ್ಥಳಗಳಲ್ಲಿ ಪುರುಷಗಾಮಿಗಳಿದ್ದರು. ಅವರು ಇಸ್ರಾಯೇಲರ ಮುಂದೆ ಯೆಹೋವ ದೇವರು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕಾರ್ಯಗಳನ್ನು ಮಾಡುತ್ತಾ ಇದ್ದರು.
೨೪ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿರುವ ದೇವದಾಸ, ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ಆಚರಿಸುವವರಾದರು.
25 ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ, ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು.
೨೫ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರುದ್ಧವಾಗಿ ದಂಡೆತ್ತಿ ಬಂದನು.
26 ಅವನು ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು.
೨೬ಅವನು ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಹಾಗೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.
27 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು.
೨೭ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು.
28 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
೨೮ಅರಸನು ಯೆಹೋವನ ಆಲಯಕ್ಕೆ ಹೋಗುವಾಗಲೆಲ್ಲಾ ಅವರು ಅವುಗಳನ್ನು ಹಿಡಿದುಕೊಳ್ಳುವರು. ಅಲ್ಲಿಂದ ಅರಸನು ಹಿಂತಿರುಗಿ ಹೋದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿಡುವರು.
29 ರೆಹಬ್ಬಾಮನ ಉಳಿದ ಕಾರ್ಯಗಳೂ, ಅವನು ಮಾಡಿದ ಸಮಸ್ತವೂ ಯೆಹೂದ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
೨೯ರೆಹಬ್ಬಾಮನ ಉಳಿದ ಚರಿತ್ರೆಯು ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
30 ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.
೩೦ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
31 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸಮಾಧಿ ಬಳಿ ಸಮಾಧಿಮಾಡಿದರು. ಅವನ ತಾಯಿ ಅಮ್ಮೋನಿಯಳಾದ ನಯಮಾ. ಅವನ ಮಗ ಅಬಿಯಾಮನು ಅವನಿಗೆ ಬದಲಾಗಿ ಅರಸನಾದನು.
೩೧ರೆಹಬ್ಬಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದೊಳಗೆ ಅವನ ಹಿರಿಯರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. ಅನಂತರ ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಅರಸನಾದನು.

< ಅರಸುಗಳು - ಪ್ರಥಮ ಭಾಗ 14 >