< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 5 >

1 ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ.
ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲ ಮಗನಾಗಿದ್ದರೂ ಅವನು ತನ್ನ ತಂದೆಯ ಉಪಪತ್ನಿಯೊಂದಿಗೆ ಸಂಗಮಿಸಿ ಹಾಸಿಗೆಯನ್ನು ಹೊಲೆ ಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು.
2 ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲುತನವು ಯೋಸೇಫನದಾಗಿತ್ತು.
ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಬಲಿಷ್ಠನಾದುದರಿಂದಲೂ, ರಾಜಾಧಿಕಾರವು ಇವನ ಕುಲಕ್ಕೆ ಬಂದುದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲ ಮಗನೆಂದು ಲಿಖಿತವಾಗಲಿಲ್ಲ. ಆದರೂ ಚೊಚ್ಚಲ ಮಗನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು.
3 ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.
ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
4 ಯೋಯೇಲನ ವಂಶಜರು: ಅವನ ಮಗ ಶೆಮಾಯನು; ಅವನ ಮಗ ಗೋಗನು; ಅವನ ಮಗ ಶಿಮ್ಮೀಯಿ.
ಯೋವೇಲನ ವಂಶಾವಳಿ: ಇವನ ಮಗ ಶೆಮಾಯ; ಶೆಮಾಯನ ಮಗ ಗೋಗ್.
5 ಅವನ ಮಗ ಮೀಕಾಯನು; ಅವನ ಮಗ ರೆವಾಯನು, ಅವನ ಮಗ ಬಾಳನು.
ಗೋಗನ ಮಗ ಶಿಮ್ಮೀ; ಇವನ ಮಗ ಮೀಕ. ಮೀಕನ ಮಗ ರೆವಾಯ, ಇವನ ಮಗ ಬಾಳ್.
6 ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರಿನಿಂದ ಸೆರೆಯಾಗಿ ಒಯ್ದ ಅವನ ಮಗ ಬೇರನು; ಅವನೇ ರೂಬೇನ್ಯರಲ್ಲಿ ನಾಯಕನಾಗಿದ್ದನು.
ಬಾಳನ ಮಗ ಬೇರ. ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ ಫಿಲ್ನೇಸರನು ಸೆರೆಯೊಯ್ದನು.
7 ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾವಳಿಯನ್ನು ಲೆಕ್ಕಿಸಿದ ಅವನ ಮುಖ್ಯಸ್ಥರು ಯಾರೆಂದರೆ, ಯೆಹಿಯೇಲ್, ಜೆಕರ್ಯ,
ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರ ಸಂಬಂಧಿಗಳಾಗಿ ಲಿಖಿತರಾದವರು ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. ಬೆಳನು ಅಜಾಜನ ಮಗ.
8 ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ. ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು.
ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು.
9 ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.
ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು.
10 ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು.
೧೦ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು.
11 ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದವರೆಗೂ ವಾಸವಾಗಿದ್ದರು.
೧೧ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು:
12 ಬಾಷಾನಿನಲ್ಲಿ ಮುಖ್ಯನಾದವನು ಯೋಯೇಲನು, ಎರಡನೆಯವನು ಶಾಫಾಮನು, ಅನಂತರ ಯನ್ನೈ, ಶಾಫಾಟನು.
೧೨ಪ್ರಧಾನನಾದ ಯೋವೇಲ್, ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ ಇವರೂ ನಾಯಕರಾಗಿದ್ದರು.
13 ಕುಟುಂಬಗಳಾಗಿ ಅವರ ಬಂಧುಗಳು: ಮೀಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈನು, ಯಕ್ಕಾನನು, ಜೀಯನು, ಏಬೆರನು; ಒಟ್ಟು ಏಳುಮಂದಿ.
೧೩ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬ ಏಳು ಕುಟುಂಬಗಳೂ ಇವರ ಕುಲಸಂಬಂಧಿಗಳು.
14 ಇವರು ಹೂರಿಯ ಮಗ ಅಬೀಹೈಲನ ಪುತ್ರರು: ಈ ಹೂರೀಯು ಯಾರೋಹನ ಮಗನು, ಅವನು ಗಿಲ್ಯಾದನ ಮಗನು, ಅವನು ಮೀಕಾಯೇಲನ ಮಗನು, ಅವನು ಯೆಷೀಷೈಯನ ಮಗನು, ಅವನು ಯಹ್ದೋವಿನ ಮಗನು, ಅವನು ಬೂಜನ ಮಗನು.
೧೪ಇವರು ಅಬೀಹೈಲನ ಮಕ್ಕಳು: ಅಬೀಹೈಲನು ಹೂರೀಯ ಮಗ, ಇವನು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ, ಇವನು ಮೀಕಾಯೇಲನ ಮಗ. ಮೀಕಾಯೇಲನು ಯೆಷೀಷೈಯನ ಮಗ, ಇವನು ಯಹ್ದೋವಿನ ಮಗ, ಇವನು ಅಹೀಬೂಜನ ಮಗ.
15 ಅಬ್ದಿಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರದ ಮುಖ್ಯಸ್ಥನು.
೧೫ಅಹೀಬೂಜನು ಅಬ್ದೀಯೇಲನ ಮಗ. ಅಬ್ದೀಯೇಲನು ಗೂನೀಯನ ಮಗ. ಇವನು ಇವರ ಗೋತ್ರದ ಮೂಲಪುರುಷನು.
16 ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
೧೬ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.
17 ಇವರೆಲ್ಲರು ಯೆಹೂದದ ಅರಸನಾದ ಯೋತಾಮನ ದಿವಸಗಳಲ್ಲಿಯೂ, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು.
೧೭ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ, ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟರು.
18 ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು.
೧೮ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು.
19 ಇವರು ಹಗ್ರೀಯರಾದ ಯೆಟೂರನು, ನಾಫೀಷನು, ನೊದಾಬನು ಎಂಬವರ ವಿರುದ್ಧ ಯುದ್ಧಮಾಡಿದರು.
೧೯ಅವರು ಹೋಗಿ ಹಗ್ರೀಯ, ಯೆಟೂರ್, ನಾಫೀಷ್ ಮತ್ತು ನೋದಾಬ್ ಇವರೊಡನೆಯೂ ಯುದ್ಧಮಾಡಿದರು.
20 ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.
೨೦ಅವರು ದೇವರ ಮೇಲೆ ಭರವಸೆ ಇಟ್ಟಿದ್ದರಿಂದ ಮೊರೆಯಿಟ್ಟ ಅವರ ಪ್ರಾರ್ಥನೆಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು.
21 ಅವರು ವೈರಿಗಳಿಂದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಐವತ್ತು ಸಾವಿರ ಒಂಟೆಗಳನ್ನು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳನ್ನು, ಎರಡು ಸಾವಿರ ಕತ್ತೆಗಳನ್ನು ಅಲ್ಲದೆ, ಒಂದು ಲಕ್ಷ ಜನರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದರು.
೨೧ಈ ಯುದ್ಧದಲ್ಲಿ ಅವರ ಹಿಂಡುಗಳನ್ನು ಅಂದರೆ, ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳೂ, ಎರಡು ಸಾವಿರ ಕತ್ತೆಗಳು ಮತ್ತು ಒಂದು ಲಕ್ಷ ಜನರನ್ನೂ ಕೊಳ್ಳೆಹಿಡಿದರು.
22 ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
೨೨ಏಕೆಂದರೆ ದೇವರು ಅವರ ಪರವಾಗಿ ಯುದ್ಧಮಾಡಿದ್ದರಿಂದ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ, ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು.
23 ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.
೨೩ಮನಸ್ಸೆ ಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಗಿರಿ ಇವುಗಳ ವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸಿದರು.
24 ಅವರ ಪಿತೃಗಳ ಮನೆಯಲ್ಲಿರುವ ಯಜಮಾನರು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್. ಇವರು ಪರಾಕ್ರಮಶಾಲಿಗಳಾಗಿಯೂ, ಹೆಸರುಗೊಂಡವರಾಗಿಯೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರಾಗಿಯೂ ಇದ್ದರು.
೨೪ಇವರ ಗೋತ್ರಗಳ ಪ್ರಧಾನ ಪುರುಷರು ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್. ಇವರು ರಣವೀರರೂ ಪ್ರಖ್ಯಾತಿ ಹೊಂದಿದವರು ಗೋತ್ರಪ್ರಧಾನರೂ ಆಗಿದ್ದರು.
25 ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.
೨೫ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.
26 ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
೨೬ಆದುದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ, ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಹಿಡಿದು ಕರೆದೊಯ್ದರು. ಅವರು ಇಂದಿನವರೆಗೂ ಅಲ್ಲಿಯೇ ನೆಲೆಸುವಂತೆ ದೇವರು ಮಾಡಿದ್ದಾನೆ.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 5 >