< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 16 >
1 ಅವರು ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ಅವರು ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
೧ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಮಾಡಿಸಿದ್ದ ಗುಡಾರದಲ್ಲಿಟ್ಟು ದೇವರಿಗೋಸ್ಕರ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
2 ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಅವನು ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
೨ಆ ಯಜ್ಞಗಳು, ಹೋಮಗಳು ಸಮರ್ಪಣೆಯಾದ ನಂತರ ದಾವೀದನು ಇಸ್ರಾಯೇಲರನ್ನು ಯೆಹೋವನ ಹೆಸರಿನಿಂದ ಆಶೀರ್ವದಿಸಿದನು.
3 ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು.
೩ಹಾಗೂ ಅವರಲ್ಲಿ ಪ್ರತಿಯೊಬ್ಬ ಪುರುಷ ಹಾಗು ಸ್ತ್ರೀಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಬೇಯಿಸಿದ ಮಾಂಸವನ್ನೂ ಮತ್ತು ದ್ರಾಕ್ಷಿಹಣ್ಣಿನ ಒಂದು ಗೊಂಚಲನ್ನೂ ಕೊಡಿಸಿದನು.
4 ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
೪ಯೆಹೋವನ ಮಂಜೂಷದ ಮುಂದೆ ದೇವರಾಧನೆ ನಡಿಸುವುದಕ್ಕೋಸ್ಕರ ದಾವೀದನು ಕೆಲವು ಲೇವಿಯರನ್ನು ನೇಮಿಸಿದನು. ಇಸ್ರಾಯೇಲಿನ ದೇವರಾದ ಯೆಹೋವನನ್ನು ಸ್ತುತಿಸುವುದೂ, ಹಾಡಿ ಹರಸುವುದೂ ಅವರ ಕರ್ತವ್ಯವಾಗಿತ್ತು.
5 ಅವರು ಯಾರೆಂದರೆ: ಮುಖ್ಯಸ್ಥನಾದ ಆಸಾಫನೂ, ಅವನ ತರುವಾಯ ಜೆಕರ್ಯನೂ, ಯೆಜೀಯೇಲನೂ, ಶೆಮೀರಾಮೋತನೂ, ಯೆಹೀಯೇಲನೂ, ಮತ್ತಿತ್ಯನೂ, ಎಲೀಯಾಬನೂ, ಬೆನಾಯನೂ, ಓಬೇದ್ ಏದೋಮನೂ, ಯೆಹಿಯೇಲನೂ ಇವರು ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಿದ್ದರು. ಆದರೆ ಆಸಾಫನು ತಾಳಗಳನ್ನು ಬಾರಿಸುತ್ತಿದ್ದನು.
೫ಅವರಲ್ಲಿ ಆಸಾಫನು ಪ್ರಧಾನನು. ಜೆಕರ್ಯನು ಎರಡನೆಯವನು. ಯೆಗೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್, ಯೆಗೀಯೇಲ್ ಇವರು ಸ್ವರಮಂಡಲ, ಕಿನ್ನರಿ ಮೊದಲಾದ ವಾದ್ಯಗಳನ್ನು ನುಡಿಸುವವರು, ಆಸಾಫನು ಕೈತಾಳ ಹಾಕುವುದಕ್ಕೆ ನೇಮಿಸಲಾಯಿತು.
6 ಇದಲ್ಲದೆ ಯಾಜಕರಾದ ಬೆನಾಯನೂ, ಯಹಜಿಯೇಲನೂ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
೬ಬೆನಾಯ, ಯೆಹಜೀಯೇಲ್ ಎಂಬ ಯಾಜಕರು ದೇವರ ಒಡಂಬಡಿಕೆ ಮಂಜೂಷದ ಮುಂದೆ ನಿತ್ಯವೂ ತುತ್ತೂರಿಗಳನ್ನು ಊದುವುದಕ್ಕೆ ನೇಮಕವಾದರು.
7 ಆಸಾಫನಿಗೂ, ಅವನ ಜೊತೆ ಲೇವಿಯರಿಗೂ ಯೆಹೋವ ದೇವರ ಸ್ತೋತ್ರಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
೭ದಾವೀದನು ಆಸಾಫನನ್ನೂ, ಅವನ ಸಹೋದರರನ್ನೂ ಯೆಹೋವನನ್ನು ಕೊಂಡಾಡಿ ಕೀರ್ತಿಸುವುದಕ್ಕಾಗಿ ಸ್ತೋತ್ರಗೀತೆಗಳನ್ನು ಹಾಡುವುದಕ್ಕಾಗಿ ಆ ದಿನದಲ್ಲೇ ಮೊದಲು ನೇಮಿಸಿದನು. ಅವರು ಹಾಡಿದ್ದೇನಂದರೆ;
8 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ, ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
೮“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ಸತ್ಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
9 ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ, ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
೯ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
10 ದೇವರ ಪರಿಶುದ್ಧ ನಾಮವನ್ನು ಹೊಗಳಿರಿ, ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
೧೦ಆತನ ಪರಿಶುದ್ಧನಾಮದಲ್ಲಿ ಸಂತೋಷಪಡಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ನಿತ್ಯವೂ ಅಪೇಕ್ಷಿಸಿ ಹರ್ಷಿಸಲಿ.
11 ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
೧೧ಯೆಹೋವನನ್ನೂ ಮತ್ತು ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
೧೨ಆತನ ಸೇವಕನಾದ ಇಸ್ರಾಯೇಲಿನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ಆತನ ಅದ್ಭುತ ಕಾರ್ಯಗಳನ್ನು,
13 ಅವರ ಸೇವಕನಾದ ಇಸ್ರಾಯೇಲಿನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
೧೩ಮಹತ್ಕಾರ್ಯಗಳನ್ನು, ನ್ಯಾಯ ನಿರ್ಣಯಗಳನ್ನು ಸ್ಮರಿಸಿರಿ.
14 ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
೧೪ಯೆಹೋವನೆಂಬಾತನು ನಮ್ಮ ದೇವರು, ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
15 ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
೧೫ಆತನು ಸಾವಿರಾರು ತಲೆಮಾರಿನವರೆಗೂ ಇರುವಂತೆ ಮಾಡಿದ ವಾಗ್ದಾನ ಮತ್ತು ಆತನ ಒಡಂಬಡಿಕೆ ಇವುಗಳನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳಿರಿ.
16 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕಮಾಡಿಕೊಳ್ಳಿರಿ.
೧೬ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು ಮತ್ತು ಇಸಾಕನಿಗಾಗಿ ವಾಗ್ದಾನ ಮಾಡಿ ಭರವಸೆ ನೀಡಿದನು.
17 ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು, ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
೧೭ಅದು ರಾಜಶಾಸನದಂತಿರುವುದು ಎಂದು ಯಾಕೋಬನಿಗೂ ಶಾಶ್ವತವಾದ ಒಡಂಬಡಿಕೆಯಾಗಿರುವುದೆಂದು ಇಸ್ರಾಯೇಲರಿಗೂ ಮಾತುಕೊಟ್ಟನು.
18 “ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
೧೮ನೀವು ಇನ್ನೂ ಬಹು ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳು ಆಗಿರುವಾಗಲೇ
19 ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
೧೯ಆತನು, ‘ನಿಮಗೆ ಈ ದೇಶವನ್ನು ಕೊಡುವೆನು ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು’ ಎಂದು ವಾಗ್ದಾನ ಮಾಡಿದನು.
20 ಅವರು ಜನಾಂಗದಿಂದ ಜನಾಂಗಕ್ಕೂ, ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
೨೦ಅವರು ದೇಶದಿಂದ ದೇಶಕ್ಕೂ ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಲ್ಲಿ
21 ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ:
೨೧ಅವರಿಗೆ ಯಾರಿಂದಲೂ ಅನ್ಯಾಯವಾಗಲಿ, ಅಪಾಯವಾಗಲಿ ಆಗಲು ಬಿಡಲಿಲ್ಲ. ಆತನು ಅವರ ವಿಷಯದಲ್ಲಿ ಅರಸನನ್ನು ಗದರಿಸಿ,
22 ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ. ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.
೨೨‘ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು. ನನ್ನ ಪ್ರವಾದಿಗಳಿಗೆ ಯಾವ ಕೇಡನ್ನು ಮಾಡಬಾರದು’ ಎಂದು ಹೇಳಿದನು.
23 ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ. ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
೨೩ಎಲ್ಲಾ ಭೂನಿವಾಸಿಗಳೇ ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ.
24 ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
೨೪ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಿಪಡಿಸಿರಿ.
25 ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
೨೫ಯೆಹೋವನು ದೊಡ್ಡವನು, ಬಹಳವಾಗಿ ಸ್ತುತಿಗೆ ಪಾತ್ರನು ಆಗಿದ್ದಾನೆ. ಎಲ್ಲಾ ದೇವತೆಗಳಲ್ಲಿ ಆತನೇ ಅದ್ಭುತನಾದವನು.
26 ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
೨೬ಜನಾಂಗಗಳ ದೇವತೆಗಳೆಲ್ಲಾ ಬರೀ ಬೊಂಬೆಗಳೇ. ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.
27 ಅವರ ಸನ್ನಿಧಿಯಲ್ಲಿ ಘನತೆಯೂ ಪ್ರಭೆಯೂ; ಅವರ ಪರಿಶುದ್ಧ ಸ್ಥಳದಲ್ಲಿ ಬಲವೂ ಸಂತೋಷವೂ ಇವೆ.
೨೭ಆತನ ಸಾನ್ನಿಧ್ಯದಲ್ಲಿ ಮಾನ ಮಹಿಮೆಗಳು ಆತನ ಪವಿತ್ರಾಲಯದಲ್ಲಿ ಮಹಿಮೆ, ಸ್ತುತಿಸ್ತೋತ್ರಗಳು, ಸಂತೋಷಗಳೂ ಇರುತ್ತವೆ.
28 ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ, ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
೨೮ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ.
29 ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ದೇವರ ಸನ್ನಿಧಿಗೆ ಬನ್ನಿರಿ. ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
೨೯ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ. ಕಾಣಿಕೆ ಸಹಿತ ಆತನ ಸನ್ನಿಧಿಗೆ ಬನ್ನಿರಿ. ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ನಮಸ್ಕರಿಸಿರಿ.
30 ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ. ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ.
೩೦ಎಲ್ಲಾ ಭೂನಿವಾಸಿಗಳೇ, ಆತನ ಮುಂದೆ ಸಾಷ್ಟಾಂಗವೆರಗಿ ನಮಸ್ಕರಿಸಿರಿ. ಭೂಮಿಯು ಸ್ಥಿರವಾಗಿರುವುದು, ಕದಲುವುದಿಲ್ಲ,
31 ಆಕಾಶವು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಯೆಹೋವ ದೇವರು ಆಳುತ್ತಾರೆಂದು ಜನಾಂಗಗಳಲ್ಲಿ ಹೇಳಲಿ.
೩೧ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
32 ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ. ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ.
೩೨ಭೂನಿವಾಸಿಗಳಿಗೆ ನ್ಯಾಯತೀರಿಸುವುದಕ್ಕೆ ಬರುವನೆಂದು ಯೆಹೋವನ ಮುಂದೆ ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ.
33 ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ. ದೇವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ.
೩೩ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ಮತ್ತು ವನದ ಮರಗಳು ಉತ್ಸಾಹ ಧ್ವನಿ ಮಾಡಲಿ.
34 ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ. ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
೩೪ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು ಶಾಶ್ವತವಾಗಿರುವುದು.
35 ನಮ್ಮ ರಕ್ಷಣೆಯ ದೇವರೇ, “ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸಿರಿ, ಜನಾಂಗಗಳೊಳಗಿಂದ ನಮ್ಮನ್ನು ಬಿಡುಗಡೆ ಮಾಡಿ ಒಂದುಗೂಡಿಸಿರಿ.”
೩೫ನಮ್ಮ ಸಹಾಯಕನಾಗಿರುವ ದೇವರೇ, ನಮ್ಮನ್ನು ರಕ್ಷಿಸು; ಅನ್ಯಜನಗಳಲ್ಲಿ ಚದುರಿಹೋಗಿರುವ ನಮ್ಮನ್ನು ಬಿಡಿಸಿ ಒಟ್ಟುಗೂಡಿಸು; ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು ಅನ್ನಿರಿ.
36 ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ, ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು.
೩೬ಇಸ್ರಾಯೇಲ್ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ” ಎಂದು ಹಾಡಿದರು. ಅವರು ಹೀಗೆ ಹಾಡಿದಾಗ ಸರ್ವಜನರೂ ಆಮೆನ್ ಎಂದು ಯೆಹೋವನನ್ನು ಸ್ತುತಿಸಿದರು.
37 ಪ್ರತಿದಿನದ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯಮಿತವಾಗಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಸೇವೆ ಸಲ್ಲಿಸಲು ದಾವೀದನು ಆಸಾಫ್ ಮತ್ತು ಅವನ ಸಹಚರರನ್ನು ನೇಮಿಸಿದನು.
೩೭ದಾವೀದನು ಯೆಹೋವನ ಒಡಂಬಡಿಕೆ ಮಂಜೂಷದ ಮುಂದೆ ಪ್ರತಿದಿನವೂ ಆರಾಧನೆ ನಡಿಸುವುದಕ್ಕೆ ಆಸಾಫನನ್ನೂ, ಅವನ ಸಹೋದರರನ್ನೂ ಬಾಗಿಲನ್ನು ಕಾಯುವುದಕ್ಕಾಗಿ,
38 ಓಬೇದ್ ಏದೋಮ್ ಮತ್ತು ಅವನ ಸಹಚರರಾದ ಅರವತ್ತೆಂಟು ಮಂದಿಯೂ, ದ್ವಾರಪಾಲಕರಾದ ಯೆದುತೂನನ ಮಗ ಓಬೇದ್ ಎದೋಮ್ ಮತ್ತು ಹೋಸ ನೇಮಕವಾಗಿದ್ದರು.
೩೮ಯೆದುತೂನನ ಮಗನಾದ ಓಬೇದೆದೋಮ್ ಮತ್ತು ಹೋಸ ಇವರನ್ನು, ಅವರ ಆರುವತ್ತೆಂಟು ಸಹೋದರರನ್ನೂ ಅಲ್ಲೇ ಇರಿಸಿದನು.
39 ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಲ್ಲಿ ಯೆಹೋವ ದೇವರ ಗುಡಾರದ ಮುಂದೆ ಸೇವೆಮಾಡುವದಕ್ಕೆ ದಾವೀದನು ಯಾಜಕನಾದ ಚಾದೋಕನನ್ನೂ ಮತ್ತು ಅವನ ಸಹೋದರರನ್ನು ನೇಮಿಸಿದನು.
೩೯ಯಾಜಕನಾದ ಚಾದೋಕನನ್ನೂ, ಅವನ ಸಹೋದರರನ್ನೂ ಗಿಬ್ಯೋನಿನ ಪೂಜಾಸ್ಥಳಗಳಲ್ಲಿದ್ದ ಯೆಹೋವನ ಗುಡಾರದ ಬಳಿಯಲ್ಲಿ ಇರಿಸಿದನು.
40 ಯೆಹೋವ ದೇವರು ಇಸ್ರಾಯೇಲಿಗೆ ಆಜ್ಞಾಪಿಸಿದ ಮೋಶೆಯ ನಿಯಮದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡಲೂ ಅವರು ಪ್ರತಿದಿನವೂ ಉದಯಕಾಲದಲ್ಲಿ ಮತ್ತು ಸಾಯಂಕಾಲದಲ್ಲಿ ದಹನಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದರು.
೪೦ಅವರು ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಮಾಡಿ ಯೆಹೋವನ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲರಿಗೆ ವಿಧಿತವಾದದ್ದೆಲ್ಲವನ್ನೂ ನೆರವೇರಿಸಬೇಕಾಯಿತು.
41 “ದೇವರ ಪ್ರೀತಿ ನಿತ್ಯವಾಗಿ ನೆಲೆಗೊಂಡಿರುವುದು,” ಎಂದು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಹೇಮಾನನೂ, ಯೆದುತೂನನೂ ಹೆಸರು ಹೆಸರಾಗಿ ಆಯ್ಕೆಗೊಂಡು, ನೇಮಕರಾಗಿದ್ದರು.
೪೧ಅವರ ಬಳಿಯಲ್ಲಿ ಯೆಹೋವನನ್ನು, ಆತನ ಶಾಶ್ವತವಾದ ಕೃಪೆಗೋಸ್ಕರ ಸ್ತುತಿಸುವುದಕ್ಕೆ ಹೇಮಾನ್, ಯೆದುತೂನ ಮತ್ತು ಹೆಸರು ಹೆಸರಾಗಿ ನೇಮಿಸಲ್ಪಟ್ಟ ಬೇರೆ ಜನರೂ ಇದ್ದರು.
42 ಅದರ ಸಂಗಡ ತುತೂರಿ ಊದಲು, ತಾಳ ಬಾರಿಸಲು, ದೇವರ ಗೀತವಾದ್ಯಗಳೂ ಸಹಿತವಾಗಿ ಹೇಮಾನನೂ, ಯೆದುತೂನನೂ ಮೇಲ್ವಿಚಾರಕರಾಗಿದ್ದರು. ಯೆದುತೂನನ ಪುತ್ರರು ದ್ವಾರಪಾಲಕರಾಗಿದ್ದರು.
೪೨ಹೇಮಾನ್ ಮತ್ತು ಯೆದುತೂನರ ಹತ್ತಿರ ವಾದ್ಯಗಾರರಿಗಾಗಿ ತುತ್ತೂರಿ, ತಾಳ ಮೊದಲಾದ ವಾದ್ಯಗಳೂ ಮತ್ತು ದೇವಕೀರ್ತನಾ ಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿ ನೇಮಿಸಲ್ಪಟ್ಟರು.
43 ತರುವಾಯ ಜನರೆಲ್ಲರು ತಮ್ಮ ತಮ್ಮ ಮನೆಗೆ ಹೋದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸುವುದಕ್ಕೆ ಹೋದನು.
೪೩ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸುವುದಕ್ಕಾಗಿ ಹೋದನು.