< ಕೀರ್ತನೆಗಳು 10 >

1 ಯೆಹೋವನೇ, ನೀನು ಏಕೆ ದೂರವಾಗಿ ನಿಂತಿದ್ದೀ? ಕಷ್ಟಕಾಲದಲ್ಲಿ ಏಕೆ ಮರೆಯಾಗುತ್ತೀ?
ಯೆಹೋವ ದೇವರೇ, ನೀವು ದೂರದಲ್ಲಿ ನಿಂತುಕೊಳ್ಳುವುದು ಏಕೆ? ಇಕ್ಕಟ್ಟಿನ ಕಾಲಗಳಲ್ಲಿ ನೀವು ಮರೆಯಾಗಿರುವುದೂ ಏಕೆ?
2 ದುಷ್ಟರು ಅಹಂಕಾರದಿಂದ ದೀನರನ್ನು ಬಹಳವಾಗಿ ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಕುಯುಕ್ತಿಯಲ್ಲಿ ತಾವೇ ಸಿಕ್ಕಿ ಬೀಳಲಿ.
ದುಷ್ಟನು ಗರ್ವದಿಂದ ದೀನನನ್ನು ಬೇಟೆಯಾಡುತ್ತಾನೆ, ಅವನು ಕಲ್ಪಿಸಿದ ಕುಯುಕ್ತಿಗಳಲ್ಲಿ ಅವನೇ ಸಿಕ್ಕಿಬೀಳುತ್ತಾನೆ.
3 ದುಷ್ಟನು ತನ್ನ ಹೃದಯದ ಸಂಕಲ್ಪಗಳು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ; ಲಾಭಬಡುಕನು ಯೆಹೋವನನ್ನು ದೂಷಿಸಿ ತಿರಸ್ಕರಿಸುತ್ತಾನೆ.
ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ.
4 ದುಷ್ಟನು ಸೊಕ್ಕಿನ ಮುಖದಿಂದ, “ಯೆಹೋವನು ವಿಚಾರಿಸುವುದಿಲ್ಲ” ಎಂದು ಹೇಳಿಕೊಂಡು, ದೇವರಿಲ್ಲ ಎಂಬುದಾಗಿ ಸದಾ ಯೋಚಿಸುತ್ತಾನೆ.
ದುಷ್ಟನು ತನ್ನ ಗರ್ವದಲ್ಲಿ ದೇವರನ್ನು ಹುಡುಕುವುದಿಲ್ಲ; ಅವನ ಎಲ್ಲ ಯೋಚನೆಗಳಲ್ಲಿಯೂ ದೇವರಿಗೆ ಸ್ಥಳವೇ ಇಲ್ಲ.
5 ಅವನ ಪ್ರಯತ್ನಗಳು ಯಾವಾಗಲೂ ಕೈಗೂಡುತ್ತವೆ; ಆದರೆ ನಿನ್ನ ನ್ಯಾಯತೀರ್ಪು ಮಹೋನ್ನತವಾಗಿರುವುದರಿಂದ ಅದು ಅವನ ಗ್ರಹಿಕೆಗೆ ಬರುವುದಿಲ್ಲ; ವೈರಿಗಳ ಗುಂಪನ್ನಾದರೋ ತಾತ್ಸಾರಮಾಡುತ್ತಾನೆ.
ಅವನ ಮಾರ್ಗಗಳು ಯಾವಾಗಲೂ ಸಮೃದ್ಧಿಯಾಗಿರುತ್ತವೆ; ಆದರೆ ನಿಮ್ಮ ನಿಯಮಗಳು ಅವನ ದೃಷ್ಟಿಗೆ ಬಹು ದೂರವಾಗಿವೆ; ಅವನು ತನ್ನ ಎಲ್ಲಾ ವೈರಿಗಳನ್ನು ಹೀಯಾಳಿಸುತ್ತಾನೆ.
6 ಅವನು, “ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ.
ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.”
7 ಅವನ ಬಾಯಿಯು ಶಾಪ, ಬಲಾತ್ಕಾರ ಮತ್ತು ವಂಚನೆಗಳಿಂದ ತುಂಬಿದೆ; ಅವನ ನಾಲಿಗೆಯ ಕೆಳಗೆ ಹಾನಿಯೂ, ನಾಶನವೂ ಇವೆ.
ಅವನ ಬಾಯಿ ಸುಳ್ಳಿನಿಂದಲೂ ಬೆದರಿಕೆಯಿಂದಲೂ ತುಂಬಿದೆ. ಕೇಡೂ ನಾಶನವೂ ಅವನ ನಾಲಿಗೆಯ ಕೆಳಗೆ ಇರುತ್ತವೆ.
8 ಅವನು ಗ್ರಾಮಗಳ ಸಂದುಗೊಂದುಗಳಲ್ಲಿ ಹೊಂಚಿಕೊಂಡಿದ್ದು, ಮರೆಯಾದ ಸ್ಥಳಗಳಲ್ಲಿ ನಿರಪರಾಧಿಗಳನ್ನು ಕೊಲ್ಲುತ್ತಾನೆ. ಅವನು ಗತಿಹೀನನನ್ನು ಹಿಡಿಯುವುದಕ್ಕೆ ಸಮಯ ನೋಡುತ್ತಾನೆ.
ಅವನು ಗ್ರಾಮಗಳಲ್ಲಿ ಹೊಂಚಿಕೊಂಡು ಮರೆಯಾದ ಸ್ಥಳಗಳಲ್ಲಿ, ನಿರಪರಾಧಿಯನ್ನು ಕೊಲ್ಲುತ್ತಾನೆ. ಅವನ ಕಣ್ಣುಗಳು ನಿರ್ಗತಿಕರನ್ನು ಹೊಂಚಿ ನೋಡುತ್ತವೆ;
9 ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.
ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ.
10 ೧೦ ಕುಗ್ಗಿದವನು ಜಜ್ಜಲ್ಪಟ್ಟು ಉರುಳಿಕೊಳ್ಳುತ್ತಾನೆ, ಗತಿಯಿಲ್ಲದವನು ಅವನ ಬಲಾತ್ಕಾರದಿಂದ ಬಿದ್ದು ಹೋಗುತ್ತಾನೆ.
ಅವನ ಕೈಯಲ್ಲಿ ಸಿಕ್ಕುವವರು ಜಜ್ಜಿಹೋಗುತ್ತಾರೆ, ಅವನ ಬಲದ ಎದುರು ಸೋತುಹೋಗುತ್ತಾರೆ.
11 ೧೧ ಆ ದುಷ್ಟನು ತನ್ನೊಳಗೆ, “ದೇವರು ಇವನನ್ನು ಬಿಟ್ಟು ವಿಮುಖನಾಗಿದ್ದಾನೆ; ಆತನು ನೋಡುವುದೇ ಇಲ್ಲ” ಅಂದುಕೊಳ್ಳುತ್ತಾನೆ.
“ದೇವರು ಮರೆತುಬಿಟ್ಟಿದ್ದಾರೆ; ತಮ್ಮ ಮುಖ ಮರೆ ಮಾಡಿಕೊಂಡಿದ್ದಾರೆ; ಇನ್ನೆಂದೂ ಕಾಣಲಾರರು,” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ.
12 ೧೨ ಯೆಹೋವನೇ, ಏಳು; ದೇವರೇ, ಕುಗ್ಗಿದವನನ್ನು ಮರೆಯಬೇಡ; ಅವನನ್ನು ರಕ್ಷಿಸುವುದಕ್ಕೆ ಕೈಚಾಚು.
ಯೆಹೋವ ದೇವರೇ, ಎದ್ದೇಳಿರಿ! ದೇವರೇ, ನಿಮ್ಮ ಕೈ ಎತ್ತಿರಿ. ನಿಸ್ಸಹಾಯಕರನ್ನು ಮರೆಯಬೇಡಿರಿ.
13 ೧೩ “ದೇವರು ವಿಚಾರಿಸುವುದೇ ಇಲ್ಲ” ಎಂದು ಹೇಳುತ್ತಾ, ದುಷ್ಟನು ನಿನ್ನನ್ನು ಏಕೆ ಅಲಕ್ಷ್ಯಮಾಡಬೇಕು?
ದುಷ್ಟರು ದೇವರನ್ನು ಅಲಕ್ಷ್ಯ ಮಾಡುವುದು ಏಕೆ? “ದೇವರು ನನ್ನನ್ನು ಲೆಕ್ಕ ಕೇಳುವುದಿಲ್ಲ,” ಎಂದು ಅವನು ತನಗೆ ತಾನೇ ಹೇಳಿಕೊಳ್ಳುವುದು ಏಕೆ?
14 ೧೪ ನೀನು ಅವರ ಅನ್ಯಾಯ ಹಾಗು ಬಲಾತ್ಕಾರಗಳನ್ನು ನೋಡಿದ್ದಿ; ಅವುಗಳನ್ನು ವಿಚಾರಿಸುತ್ತೀ, ಗತಿಯಿಲ್ಲದವನು ತನ್ನನ್ನು ನಿನಗೇ ಒಪ್ಪಿಸುವನು; ದಿಕ್ಕಿಲ್ಲದವನಿಗೆ ನೀನೇ ದಿಕ್ಕು.
ದೇವರೇ, ನೀವಾದರೋ ಬಾಧೆಪಡುವವರ ಕಷ್ಟಗಳನ್ನು ನೋಡಿದ್ದೀರಿ; ಅವರ ಸಂಕಟವನ್ನು ಪರಿಗಣಿಸಿ, ನೀವೇ ನೋಡಿಕೊಳ್ಳಿರಿ. ಗತಿಯಿಲ್ಲದವರು ತಮ್ಮನ್ನು ನಿಮಗೇ ಒಪ್ಪಿಸಿಕೊಡುತ್ತಾರೆ; ನೀವೇ ದಿಕ್ಕಿಲ್ಲದವರಿಗೆ ಸಹಾಯ ಮಾಡುವವರು.
15 ೧೫ ದುಷ್ಟನ ಭುಜಬಲವನ್ನು ಮುರಿದುಹಾಕು, ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲಮಾಡಿಬಿಡು.
ದುಷ್ಟನ ಭುಜಬಲವನ್ನು ಮುರಿದುಬಿಡಿರಿ; ಕೆಟ್ಟದ್ದನ್ನು ಮಾಡುವವರಿಗೆ ಅವರ ಕೆಟ್ಟತನಕ್ಕೆ ಲೆಕ್ಕ ಕೇಳಿರಿ; ಇಲ್ಲದಿದ್ದರೆ ನೀವು ಅವನನ್ನು ಲೆಕ್ಕ ಕೇಳುವುದಿಲ್ಲ ಅಂದುಕೊಳ್ಳುವನು.
16 ೧೬ ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು; ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.
ಯೆಹೋವ ದೇವರು ಯುಗಯುಗಾಂತರಗಳಿಗೂ ಅರಸರಾಗಿದ್ದಾರೆ; ರಾಷ್ಟ್ರಗಳು ಅವರ ದೇಶದೊಳಗಿಂದ ಹೊರಹಾಕಲಾಯಿತು.
17 ೧೭ ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದಿ; ಅವರ ಹೃದಯವನ್ನು ಧೈರ್ಯಪಡಿಸುತ್ತಿ; ಅವರ ಮೊರೆಗೆ ಕಿವಿಗೊಡುತ್ತಿ.
ಯೆಹೋವ ದೇವರೇ, ನೀವು ಬಾಧೆಪಡುವವರ ಬಯಕೆಯನ್ನು ಆಲಿಸುತ್ತೀರಿ; ಅವರನ್ನು ಪ್ರೋತ್ಸಾಹಿಸಿ, ಅವರ ಕೂಗನ್ನು ಲಾಲಿಸುತ್ತೀರಿ.
18 ೧೮ ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ. ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.
ಅನಾಥರಿಗೂ, ಕುಗ್ಗಿದವರಿಗೂ ನ್ಯಾಯವನ್ನು ನಡಿಸಿಕೊಡಿರಿ. ಹೀಗಾದರೆ ಕೇವಲ ಮಣ್ಣಿನ ಮಾನವರಿಂದ ಅವರಿಗೆ ಇನ್ನೆಂದಿಗೂ ಭಯ ಉಂಟಾಗುವುದಿಲ್ಲ.

< ಕೀರ್ತನೆಗಳು 10 >