< ಜ್ಞಾನೋಕ್ತಿಗಳು 20 >

1 ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ, ಇವುಗಳಿಂದ ದಾರಿತಪ್ಪಿ ಹೋಗುವವನು ಜ್ಞಾನಿಯಲ್ಲ.
ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ; ಇವುಗಳಿಂದ ಮೋಸ ಹೋದವನು ಜ್ಞಾನಿಯಲ್ಲ.
2 ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು.
ಅರಸನ ಭಯವು ಸಿಂಹದ ಘರ್ಜನೆಯಂತಿದೆ; ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.
3 ವ್ಯಾಜ್ಯಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು, ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ.
ಕಲಹವನ್ನು ತಡೆಯುವವನು, ಮಾನಕ್ಕೆ ಯೋಗ್ಯನು; ಆದರೆ ಬುದ್ಧಿಹೀನನು ಮಾತ್ರ ಜಗಳವಾಡಲು ಒತ್ತಾಯಿಸುತ್ತಾನೆ.
4 ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?
ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.
5 ಮನುಷ್ಯನ ಹೃದಯಸಂಕಲ್ಪವು ಆಳವಾದ ಬಾವಿಯ ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.
ಮನುಷ್ಯನ ಹೃದಯದ ಆಲೋಚನೆಯು ಆಳವಾದ ಬಾವಿಯ ನೀರಿನಂತಿದೆ; ವಿವೇಕಿಯು ಅದನ್ನು ಸೇದುವನು.
6 ಸ್ನೇಹಿತರೆಂದು ಹೇಳಿಕೊಳ್ಳುವವರು ಬಹಳ ಜನರು, ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?
ಅನೇಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪ್ರಾಮಾಣಿಕತೆಯನ್ನು ಸಾರುವನು; ಆದರೆ ನಂಬಿಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
7 ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.
ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ; ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.
8 ರಾಜನು ನ್ಯಾಯಾಸನಾರೂಢನಾಗಿ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
ಅರಸನು ತನ್ನ ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವಾಗ, ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
9 “ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪವನ್ನು ತೊಳೆದುಕೊಂಡು ನಿರ್ಮಲನಾಗಿದ್ದೇನೆ” ಎಂದು ಯಾರು ಹೇಳಬಲ್ಲರು?
“ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ. ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?
10 ೧೦ ತೂಕದ ಕಲ್ಲನ್ನೂ, ಅಳತೆಯ ಪಾತ್ರೆಯನ್ನೂ ಹೆಚ್ಚಿಸುವುದು, ತಗ್ಗಿಸುವುದು ಇವೆರಡೂ ಯೆಹೋವನಿಗೆ ಅಸಹ್ಯ.
ಮೋಸದ ತೂಕಗಳೂ, ಮೋಸದ ಅಳತೆಗಳೂ ಇವೆರಡೂ ಯೆಹೋವ ದೇವರಿಗೆ ಅಸಹ್ಯ.
11 ೧೧ ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.
ಚಿಕ್ಕ ಮಕ್ಕಳಾದರೋ ತಮ್ಮ ಕ್ರಿಯೆಗಳಿಂದಲೇ, ತಾವು ಶುದ್ಧರೋ ಯಥಾರ್ಥರೋ ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ.
12 ೧೨ ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.
ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಯೆಹೋವ ದೇವರು ಉಂಟುಮಾಡಿದ್ದಾನೆ.
13 ೧೩ ನಿದ್ರಾನಿರತನಾಗಿರಬೇಡ! ಬಡವನಾದೀಯೆ, ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ.
ನೀವು ನಿದ್ರೆಯನ್ನು ಪ್ರೀತಿಸಿದರೆ, ನೀವು ಬಡತನದಲ್ಲಿ ಕೊನೆಗೊಳ್ಳುತ್ತೀರಿ; ನಿಮ್ಮ ಕಣ್ಣುಗಳನ್ನು ತೆರೆದರೆ, ಸಾಕಷ್ಟು ಆಹಾರ ಇರುತ್ತದೆ!
14 ೧೪ ಕೊಳ್ಳುವವನು, “ಚೆನ್ನಾಗಿಲ್ಲ, ಚೆನ್ನಾಗಿಲ್ಲ” ಎಂದು ಹೇಳುತ್ತಾನೆ, ಕೊಂಡುಕೊಂಡು ಹೋಗಿ ಹೆಚ್ಚಳಪಡುತ್ತಾನೆ.
“ಇದು ಒಳ್ಳೆಯದಲ್ಲ ಇದು ಒಳ್ಳೆಯದಲ್ಲ!” ಎಂದು ಕೊಳ್ಳುವವನು ಹೇಳುತ್ತಾನೆ; ಆದರೆ ಅವನು ಕೊಂಡು ಹೋದ ಮೇಲೆ ಅದನ್ನೇ ಹೊಗಳುತ್ತಾನೆ.
15 ೧೫ ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯವಾದ ಆಭರಣ.
ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ; ಆದರೆ ಪರಿಜ್ಞಾನದ ತುಟಿಗಳು ಅಪರೂಪದ ರತ್ನವಾಗಿವೆ.
16 ೧೬ ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆ ಮಾಡಿಕೋ.
ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ; ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
17 ೧೭ ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವುದು.
ವಂಚನೆಯಿಂದ ಸಿಕ್ಕಿದ ಆಹಾರವು ರುಚಿ; ಆದರೆ ಆಮೇಲೆ ಅವನ ಬಾಯಿಯು ಮರಳಿನಿಂದ ತುಂಬುವುದು.
18 ೧೮ ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು.
ಸಲಹೆಯಿಂದ ಯೋಜನೆಗಳು ನೆರವೆರುವವು; ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.
19 ೧೯ ಚಾಡಿಕೋರನು ಗುಟ್ಟನ್ನು ರಟ್ಟು ಮಾಡುವನು, ಆದುದರಿಂದ ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ.
ಚಾಡಿಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ; ಆದಕಾರಣ ಹರಟೆ ಹೊಡೆಯುವವನ ಸಹವಾಸ ಮಾಡಬೇಡ.
20 ೨೦ ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.
ತನ್ನ ತಂದೆಯನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಕತ್ತಲೆಯಲ್ಲಿ ಆರಿಹೋಗುವುದು.
21 ೨೧ ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು.
ಪ್ರಾರಂಭದಲ್ಲಿ ತ್ವರೆಯಾಗಿ ಪಡೆದುಕೊಂಡ ಆಸ್ತಿಯೂ ಅಂತ್ಯದಲ್ಲಿ ಆಶೀರ್ವಾದವಾಗಿರುವುದಿಲ್ಲ.
22 ೨೨ ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ, ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನು ಉದ್ಧರಿಸುವನು.
ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ; ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.
23 ೨೩ ತೂಕದ ಕಲ್ಲನ್ನು ಹೆಚ್ಚಿಸುವುದು, ತಗ್ಗಿಸುವುದು ಯೆಹೋವನಿಗೆ ಅಸಹ್ಯ, ಮೋಸದ ತಕ್ಕಡಿ ಒಳ್ಳೆಯದಲ್ಲ.
ವ್ಯತ್ಯಾಸದ ತೂಕಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಅಪ್ರಾಮಾಣಿಕ ತಕ್ಕಡಿಗಳು ಅವರನ್ನು ಮೆಚ್ಚಿಸುವುದಿಲ್ಲ.
24 ೨೪ ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ, ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು?
ಮನುಷ್ಯನ ಹೆಜ್ಜೆಗಳನ್ನು ಯೆಹೋವ ದೇವರು ನಿರ್ದೇಶಿಸುತ್ತಾರೆ. ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಳ್ಳಬಲ್ಲನು?
25 ೨೫ “ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು.
ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು ಆಮೇಲೆ ವಿಚಾರಿಸುವುದು ಉರುಲಾಗಿದೆ.
26 ೨೬ ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ, ಅವರನ್ನು ತೂರಿಬಿಡುವನು.
ಜ್ಞಾನಿಯಾದ ಅರಸನು ದುಷ್ಟರನ್ನು ತೂರುವನು; ಅವರ ಮೇಲೆ ಕಣದ ಚಕ್ರವನ್ನು ಎಳೆಯುವನು.
27 ೨೭ ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ, ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
ಮನುಷ್ಯನ ಆತ್ಮವು ಯೆಹೋವ ದೇವರ ದೀಪವಾಗಿದೆ. ಅದು ಅವನ ಅಂತರಂಗವನ್ನು ಶೋಧಿಸುತ್ತದೆ.
28 ೨೮ ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು, ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ.
ಪ್ರೀತಿಯೂ ನಂಬಿಗಸ್ತಿಕೆಯೂ ಅರಸನನ್ನು ಕಾಯುತ್ತವೆ; ಪ್ರೀತಿಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
29 ೨೯ ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.
ಯೌವನಸ್ಥರ ಮಹಿಮೆ ಅವರ ಬಲವೇ; ಮುದುಕರ ವೈಭವ ನರೆತ ತಲೆಯೇ.
30 ೩೦ ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವುದು, ಏಟುಗಳು ಅಂತರಂಗವನ್ನು ಶುದ್ಧಿಮಾಡುವುದು.
ಗಾಯಗೊಳಿಸುವ ಏಟುಗಳು ದುಷ್ಟತ್ವವನ್ನು ತೊಳೆಯುತ್ತವೆ; ಪೆಟ್ಟುಗಳು ಅಂತರಂಗವನ್ನೂ ಶುದ್ಧಿಗೊಳಿಸುತ್ತವೆ.

< ಜ್ಞಾನೋಕ್ತಿಗಳು 20 >