< ಅರಣ್ಯಕಾಂಡ 6 >
1 ೧ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2 ೨ “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಾಜೀರರ ಹರಕೆಯನ್ನು ಅಂದರೆ ಯೆಹೋವನಿಗೆ ತನ್ನನ್ನು ಪ್ರತಿಷ್ಠಿಸಿಕೊಳ್ಳುವ,
“ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ: ‘ಪುರುಷನಾದರೂ, ಸ್ತ್ರೀಯಾದರೂ ಯೆಹೋವ ದೇವರಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರ ವ್ರತ ಕೈಗೊಂಡರೆ,
3 ೩ ವಿಶೇಷವಾದ ಹರಕೆಯನ್ನು ಮಾಡಿದಾಗ ದ್ರಾಕ್ಷಾರಸವನ್ನೂ ಮತ್ತು ಮದ್ಯಪಾನವನ್ನೂ ಮುಟ್ಟಬಾರದು. ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯಪಾನದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು. ಹಸಿ ಅಥವಾ ಒಣಗಿದ ದ್ರಾಕ್ಷಿ ಹಣ್ಣನ್ನೂ ತಿನ್ನಬಾರದು.
ದ್ರಾಕ್ಷಾರಸಕ್ಕೂ ಮದ್ಯಪಾನಕ್ಕೂ ದೂರವಾಗಿದ್ದು, ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ, ದ್ರಾಕ್ಷಿಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ ಹಸಿಯದಾಗಲಿ, ಒಣಗಿದ್ದಾಗಲಿ ದ್ರಾಕ್ಷಿಹಣ್ಣನ್ನು ತಿನ್ನದೆ ಇರಬೇಕು.
4 ೪ ಅವನು ಹರಕೆಮಾಡಿ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ದ್ರಾಕ್ಷಾಲತೆಯಿಂದ ಬೆಳೆದ ಬೀಜವನ್ನಾಗಲಿ, ಸಿಪ್ಪೆಯನ್ನಾಗಲಿ ತಿನ್ನಬಾರದು.
ತಮ್ಮ ನಾಜೀರತನದ ದಿವಸಗಳಲ್ಲೆಲ್ಲಾ ದ್ರಾಕ್ಷಿ ಬೀಜ ಮೊದಲುಗೊಂಡು ಸಿಪ್ಪೆಯವರೆಗೂ, ದ್ರಾಕ್ಷಿಬಳ್ಳಿಯಲ್ಲಿ ಬೆಳೆದದ್ದು ಯಾವುದನ್ನಾದರೂ ತಿನ್ನಬಾರದು.
5 ೫ “ಅವನು ತನ್ನ ಹರಕೆಯ ದಿನಗಳಲ್ಲಿ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ದೇವರಿಗೆ ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು.
“‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು.
6 ೬ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳಲ್ಲಿ ಯಾವ ಶವವನ್ನೂ ಮುಟ್ಟಬಾರದು.
“‘ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳಲ್ಲೆಲ್ಲಾ ಸತ್ತವರ ಬಳಿಗೆ ಬರಬಾರದು.
7 ೭ ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಅವನು ತನ್ನನ್ನು ದೇವರಿಂದ ಪ್ರತ್ಯೇಕಿಸಿ ಅಪವಿತ್ರಮಾಡಿಕೊಳ್ಳಬಾರದು. ಏಕೆಂದರೆ ತಾನು ದೇವರಿಗೆ ಮೀಸಲಾಗಿ ಬಿಟ್ಟ ಕೂದಲು ತಲೆಯ ಮೇಲೆ ಇದೆಯಲ್ಲಾ.
ಅವರು ತಂದೆತಾಯಿ, ಸಹೋದರ ಸಹೋದರಿ ಸತ್ತರೂ ಅವರು ಅವರಿಗೋಸ್ಕರ ಅಪವಿತ್ರರಾಗಬಾರದು. ಏಕೆಂದರೆ ದೇವರಿಗೆ ಅವರ ಸಮರ್ಪಣೆಯ ಸಂಕೇತವು ಅವರ ತಲೆಯ ಮೇಲೆ ಇದೆ.
8 ೮ ತಾನು ಪ್ರತಿಷ್ಠಿಸಿಕೊಂಡಿರುವ ದಿನಗಳೆಲ್ಲೆಲ್ಲಾ ಅವನು ಯೆಹೋವನಿಗೆ ಮೀಸಲಾಗಿಯೇ ಇರಬೇಕು.
ಅವರ ಸಮರ್ಪಣೆಯ ದಿವಸಗಳಲ್ಲೆಲ್ಲಾ ಅವರು ಯೆಹೋವ ದೇವರಿಗೆ ಮೀಸಲಾಗಿರಬೇಕು.
9 ೯ ಯಾರಾದರೂ ಆಕಸ್ಮಾತ್ತಾಗಿ ಅವನ ಬಳಿಯಲ್ಲೇ ಸತ್ತರೆ, ತಾನು ಪ್ರತಿಷ್ಠಿಸಿಕೊಂಡ ತಲೆಯ ಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ಅಂದರೆ ಶುದ್ಧನಾಗುವ ದಿನದಲ್ಲಿ ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು.
“‘ಅವರ ಬಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಸತ್ತದ್ದರಿಂದ ಅವರ ತಲೆಯ ಕೂದಲು ಅಶುದ್ಧವಾದರೆ, ಅವರು ಶುದ್ಧರಾಗುವ ದಿವಸದಲ್ಲಿ ಅಂದರೆ ಏಳನೆಯ ದಿವಸದಲ್ಲಿ ತಮ್ಮ ತಲೆಯನ್ನು ಬೋಳಿಸಬೇಕು.
10 ೧೦ ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತರಬೇಕು.
ಎಂಟನೆಯ ದಿವಸದಲ್ಲಿ ಅವರು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಿಲಿಗೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
11 ೧೧ ಯಾಜಕನು ಒಂದನ್ನು ದೋಷಪರಿಹಾರ ಯಜ್ಞವಾಗಿ, ಇನ್ನೊಂದನ್ನು ಸರ್ವಾಂಗಹೋಮವಾಗಿ ಸಮರ್ಪಿಸಿ ಶವಸೋಂಕಿದವನಿಗಾಗಿ ದೋಷಪರಿಹಾರ ಮಾಡಿ ಅವನ ತಲೆಯ ಕೂದಲನ್ನು ಆ ದಿನದಿಂದ ಪವಿತ್ರವೆಂದು ನಿರ್ಣಯಿಸಬೇಕು.
ಯಾಜಕನು ಒಂದನ್ನು ದೋಷಪರಿಹಾರಕ ಬಲಿಯಾಗಿಯೂ, ಇನ್ನೊಂದನ್ನು ದಹನಬಲಿಯಾಗಿ ಅರ್ಪಿಸಿ, ಅವರು ಶವದ ಹತ್ತಿರವಿದ್ದು ಪಾಪಮಾಡಿದ್ದರಿಂದ, ಅವರಿಗೋಸ್ಕರ ಆ ದಿವಸದಲ್ಲಿ ಅವರ ತಲೆಯನ್ನು ಪ್ರತಿಷ್ಠಿಸಬೇಕು.
12 ೧೨ ಅವನು ಎಷ್ಟು ದಿನಗಳವರೆಗೆ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದಾನೋ, ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತಯಜ್ಞವಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ಹರಕೆಗೆ ವಿಘ್ನಪ್ರಾಪ್ತವಾದುದರಿಂದ ಕಳೆದುಹೋದ ದಿನಗಳು ವ್ಯರ್ಥವಾದುದೆಂದು ಪರಿಗಣಿಸಬೇಕು.
ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು.
13 ೧೩ ನಾಜೀರನು ತನ್ನ ವ್ರತದಿನಗಳು ಮುಗಿದಾಗ ತನ್ನನ್ನು ಸಮರ್ಪಿಸಬೇಕಾದ ಕ್ರಮವನ್ನು ಅನುಸರಿಸಬೇಕು. ಅವನು ದೇವದರ್ಶನದ ಗುಡಾರದ ಬಾಗಿಲಿಗೆ ಬರಬೇಕು.
“‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು.
14 ೧೪ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆಗಳು ಯಾವುವೆಂದರೆ: ಅವನು ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಟಗರಿನ ಮರಿಯನ್ನು, ದೋಷಪರಿಹಾರ ಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಹೆಣ್ಣು ಕುರಿಮರಿಯನ್ನು, ಸಮಾಧಾನಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಟಗರನ್ನು ತರಬೇಕು.
ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು.
15 ೧೫ ಇದಲ್ಲದೆ ಒಂದು ಪುಟ್ಟಿ ತುಂಬಾ ಎಣ್ಣೆ ಬೆರಸಿದ ಗೋದಿಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆ ಹಾಕಿದ ಹುಳಿಯಿಲ್ಲದ ಕಡಬುಗಳನ್ನು ಧಾನ್ಯದ್ರವ್ಯ, ಪಾನದ್ರವ್ಯಗಳೊಡನೆ ತರಬೇಕು.
ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳ ಒಂದು ಬುಟ್ಟಿಯನ್ನೂ, ಎಣ್ಣೆ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ, ಧಾನ್ಯದ್ರವ್ಯ ಪಾನದ್ರವ್ಯ ಇವುಗಳನ್ನೆಲ್ಲಾ ಅರ್ಪಣೆಯಾಗಿ ತರಬೇಕು.
16 ೧೬ ಯಾಜಕನು ಇವುಗಳನ್ನು ಯೆಹೋವನ ಸನ್ನಿಧಿಗೆ ತಂದು ನಾಜೀರನ ದೋಷಪರಿಹಾರಕ ಯಜ್ಞವನ್ನೂ ಮತ್ತು ಸರ್ವಾಂಗಹೋಮವನ್ನೂ ಸಮರ್ಪಿಸಬೇಕು.
“‘ಇವುಗಳನ್ನು ಯಾಜಕನು ಯೆಹೋವ ದೇವರ ಎದುರಿನಲ್ಲಿ ತಂದು, ಅವರ ದೋಷಪರಿಹಾರಕ ಬಲಿಯನ್ನೂ ಅವರ ದಹನಬಲಿಯನ್ನೂ ಅರ್ಪಿಸಬೇಕು.
17 ೧೭ ಆ ಟಗರನ್ನೂ, ಪುಟ್ಟಿ ತುಂಬಾ ಹುಳಿಯಿಲ್ಲದ ರೊಟ್ಟಿಗಳನ್ನೂ, ಯಾಜಕನು ಯೆಹೋವನಿಗೆ ಸಮಾಧಾನಯಜ್ಞವಾಗಿ ಸಮರ್ಪಿಸಬೇಕು. ಅವನು ತಂದ ಧಾನ್ಯದ್ರವ್ಯ ಪಾನದ್ರವ್ಯಗಳನ್ನೂ ನೈವೇದ್ಯಮಾಡಬೇಕು.
ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯ ಸಂಗಡ ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಅರ್ಪಿಸಬೇಕು. ಇದಲ್ಲದೆ ಯಾಜಕನು ಅವರ ಧಾನ್ಯವನ್ನೂ, ಪಾನದ್ರವ್ಯವನ್ನೂ ಅರ್ಪಿಸಬೇಕು.
18 ೧೮ ಆಗ ನಾಜೀರನು ತನ್ನ ಸಮರ್ಪಣೆಯ ದೀಕ್ಷೆಯನ್ನು ಸೂಚಿಸುವ ತಲೆಯ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಆ ಕೂದಲನ್ನು ಸಮಾಧಾನಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
“‘ಇದಲ್ಲದೆ ನಾಜೀರರು ತಮ್ಮ ಸಮರ್ಪಣೆಯನ್ನು ಸಂಕೇತಿಸುವ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಪ್ರತ್ಯೇಕಿಸಿದ ತಮ್ಮ ತಲೆಗೂದಲನ್ನು ತೆಗೆದುಕೊಂಡು, ಸಮಾಧಾನದ ಬಲಿಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.
19 ೧೯ ತರುವಾಯ ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಪುಟ್ಟಿಯಲ್ಲಿನ ಹುಳಿಯಿಲ್ಲದ ಒಂದು ರೊಟ್ಟಿಯನ್ನು, ಹಾಗೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡು ನಾಜೀರನು ಕ್ಷೌರಮಾಡಿಸಿಕೊಂಡ ನಂತರ ಅವನ ಕೈಯಲ್ಲಿ ಅರ್ಪಿಸಬೇಕು.
“‘ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಆ ಪುಟ್ಟಿಯೊಳಗಿಂದ ಹುಳಿಯಿಲ್ಲದ ಒಂದು ರೊಟ್ಟಿಯನ್ನೂ, ಹುಳಿಯಿಲ್ಲದ ಒಂದು ದೋಸೆಯನ್ನೂ, ಆ ನಾಜೀರರ ಪ್ರತ್ಯೇಕಿಸಿದ ಕೂದಲನ್ನು ಕ್ಷೌರಮಾಡಿಸಿದ ತರುವಾಯ ಅವರ ಕೈಗಳಲ್ಲಿ ಕೊಡಬೇಕು.
20 ೨೦ ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸಿ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಿಸಬೇಕು. ಅನಂತರ ಆ ನಾಜೀರನು ದ್ರಾಕ್ಷಾರಸವನ್ನು ಪಾನಮಾಡಬೇಕು.
ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸುವ ಅರ್ಪಣೆಗಾಗಿ ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಸಂಗಡ ಅದು ಯಾಜಕನಿಗೆ ಪರಿಶುದ್ಧವಾಗಿದೆ. ಆಮೇಲೆ ನಾಜೀರರು ದ್ರಾಕ್ಷಾರಸವನ್ನು ಕುಡಿಯಬಹುದು.
21 ೨೧ ಹರಕೆಮಾಡಿಕೊಂಡ ನಾಜೀರರ ವ್ರತ ನಿಯಮವು ಇದೇ. ಅವರು ತಮ್ಮ ವ್ರತಪೂರ್ತಿಗಾಗಿ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆ ಇದೇ. ಅವರು ತಮ್ಮ ಶಕ್ತಿಗನುಸಾರ ಹೆಚ್ಚಾಗಿಯೂ ಕೊಡಬಹುದು. ಆದರೆ ತಾವು ಕೊಡುತ್ತೆವೆಂದು ಹರಕೆಮಾಡಿದಷ್ಟು ವ್ರತವಿಧಿಗನುಸಾರವಾಗಿ ಕೊಡಲೇಬೇಕು.”
“‘ಪ್ರಮಾಣ ಮಾಡಿಕೊಂಡ ನಾಜೀರರ ನಿಯಮವು ಇದೇ. ಸಂಬಂಧಪಟ್ಟದ್ದರೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಅವರು ತಮ್ಮ ಪ್ರತ್ಯೇಕಿಸುವಿಕೆಗಾಗಿ ಯೆಹೋವ ದೇವರಿಗೆ ಕಾಣಿಕೆ ಅರ್ಪಿಸತಕ್ಕದ್ದು. ನಾಜೀರ ವ್ರತದ ಕ್ರಮದ ಪ್ರಕಾರ, ನೀವು ಮಾಡಿದ ಪ್ರಮಾಣಕ್ಕನುಸಾರವಾಗಿ ತಮ್ಮ ವ್ರತದ ಕ್ರಮಗಳನ್ನು ನೆರವೇರಿಸಬೇಕು.’”
22 ೨೨ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
23 ೨೩ “ನೀನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಹೀಗೆ ಆಶೀರ್ವದಿಸಬೇಕು. ಈ ಪ್ರಕಾರ ಅವರಿಗೆ ಹೇಳಬೇಕು,
“ನೀನು ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು:
24 ೨೪ ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ;
“‘“ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಕಾಪಾಡಲಿ.
25 ೨೫ ಯೆಹೋವನು ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ;
ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ, ನಿಮಗೆ ಕೃಪೆ ತೋರಿಸಲಿ.
26 ೨೬ ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ’ ಎಂಬುದೇ.
ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಎತ್ತಿ, ನಿಮಗೆ ಸಮಾಧಾನ ಅನುಗ್ರಹಿಸಲಿ.”’
27 ೨೭ ಹೀಗೆ ಅವರು ಇಸ್ರಾಯೇಲರನ್ನು ಕುರಿತು ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”
“ಹೀಗೆ ಅವರು ನನ್ನ ಹೆಸರನ್ನು ಇಸ್ರಾಯೇಲರ ಮೇಲೆ ಉಚ್ಛರಿಸುವರು. ನಾನೇ ಅವರನ್ನು ಆಶೀರ್ವದಿಸುವೆನು.”