< ನೆಹೆಮೀಯನು 13 >

1 ಅಂದು ಜನರ ಮುಂದೆ ಮೋಶೆಯ ಧರ್ಮನಿಯಮಗಳ ಪಾರಾಯಣವು ನಡೆಯುತ್ತಿರಲಾಗಿ, ಅದರಲ್ಲಿ ಅಮ್ಮೋನಿಯರಾಗಲಿ ಹಾಗು ಮೋವಾಬ್ಯರಾಗಲಿ ದೇವರ ಸಭೆಯಲ್ಲಿ ಎಂದಿಗೂ ಪ್ರವೇಶಮಾಡಬಾರದು.
ಅದೇ ದಿವಸದಲ್ಲಿ ಜನರು ಕೇಳುವಂತೆ ಮೋಶೆಯ ನಿಯಮ ಗ್ರಂಥವನ್ನು ಗಟ್ಟಿಯಾಗಿ ಓದುವಾಗ, “ಅಮ್ಮೋನಿಯರೂ, ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದು,” ಎಂದು ಅದರಲ್ಲಿ ಬರೆದದ್ದು ಸಿಕ್ಕಿತು.
2 ಯಾಕೆಂದರೆ ಅವರು ಇಸ್ರಾಯೇಲರನ್ನು ಅನ್ನಪಾನಗಳೊಡನೆ ಎದುರುಗೊಳ್ಳಲಿಲ್ಲ, ಅವರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣವನ್ನು ಕೊಟ್ಟು ಅವನನ್ನು ಕರೆಯಿಸಿದರು. ನಮ್ಮ ದೇವರಾದರೋ ಅವನಿಂದ ಶಾಪವನ್ನಲ್ಲ, ಆಶೀರ್ವಾದವನ್ನೇ ಹೇಳಿಸಿದನು ಎಂಬ ಮಾತು ಬರೆದಿರುವುದಾಗಿ ಕಂಡು ಬಂದಿತು.
ಏಕೆಂದರೆ ಅವರು ಅನ್ನಪಾನಗಳೊಡನೆ ಇಸ್ರಾಯೇಲರನ್ನು ಎದುರುಗೊಳ್ಳಲಿಲ್ಲ. ಅವರು ಇಸ್ರಾಯೇಲರನ್ನು ಶಪಿಸುವುದಕ್ಕಾಗಿ ಬಿಳಾಮನಿಗೆ ಹಣಕೊಟ್ಟು ಕರೆಸಿದ್ದರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದರು.
3 ಇಸ್ರಾಯೇಲರು ಈ ಧರ್ಮವಿಧಿಯನ್ನು ಕೇಳಿದೊಡನೆ ಎಲ್ಲಾ ಮಿಶ್ರಜಾತಿಯವರನ್ನು ತಮ್ಮ ಮಧ್ಯದಿಂದ ಬೇರ್ಪಡಿಸಿದರು.
ಆಗ ಜನರು ದೇವರ ನಿಯಮವನ್ನು ಕೇಳಿದಾಗ, ಇಸ್ರಾಯೇಲರೊಳಗಿಂದ ವಿದೇಶಿ ಜನರನ್ನು ಪ್ರತ್ಯೇಕಿಸಿದರು.
4 ಇದಕ್ಕಿಂತ ಮೊದಲು ಯಾಜಕನಾದ ಎಲ್ಯಾಷೀಬನು ನಮ್ಮ ದೇವಾಲಯದ ಕೊಠಡಿಗಳ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟಿದ್ದನು. ಇವನು ಟೋಬೀಯನ ಸಂಬಂಧಿಕನಾಗಿದ್ದನು.
ಇದಕ್ಕೆ ಮುಂಚೆ ನಮ್ಮ ದೇವರ ಆಲಯದ ಉಗ್ರಾಣದ ಮೇಲೆ ವಿಚಾರಕನಾಗಿದ್ದ ಎಲ್ಯಾಷೀಬನೆಂಬ ಯಾಜಕನು ಟೋಬೀಯನ ಸಮೀಪ ಬಂಧುವಾಗಿದ್ದನು.
5 ನೈವೇದ್ಯದ್ರವ್ಯ, ಧೂಪ, ಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ದಶಮಾಂಶವನ್ನೂ, ಲೇವಿಯರಿಗೆ, ಗಾಯಕರಿಗೆ, ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ, ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಟೋಬೀಯನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು.
ಲೇವಿಯರಿಗೂ, ಹಾಡುಗಾರರಿಗೂ, ದ್ವಾರಪಾಲಕರಿಗೂ ನೇಮಕವಾದ ಕಾಣಿಕೆಗಳನ್ನೂ, ಧೂಪವನ್ನೂ, ಸಾಮಗ್ರಿಗಳನ್ನೂ, ಧಾನ್ಯದ ಹತ್ತನೆಯ ಪಾಲುಗಳನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇಡುತ್ತಿದ್ದ ದೊಡ್ಡ ಕೊಠಡಿಯನ್ನು ಎಲ್ಯಾಷೀಬನು ಟೋಬೀಯನಿಗೋಸ್ಕರ ಸಿದ್ಧ ಮಾಡಿಕೊಟ್ಟಿದ್ದನು.
6 ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆನು. ಇದೆಲ್ಲಾ ನಡೆಯುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಕಾಲಾಂತರದಲ್ಲಿ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,
ಆದರೆ ಇವೆಲ್ಲಾ ಸಂಭವಿಸುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆ. ತರುವಾಯ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,
7 ಹಿಂತಿರುಗಿ ಯೆರೂಸಲೇಮಿಗೆ ಬಂದೆನು. ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವಾಲಯದ ಪ್ರಾಕಾರದೊಳಗೆ ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನೋಡಿ,
ನಾನು ಯೆರೂಸಲೇಮಿಗೆ ಬಂದು ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವರ ಆಲಯದ ಅಂಗಳಗಳಲ್ಲಿ ಒಂದು ಕೊಠಡಿಯನ್ನು ಸಿದ್ಧಮಾಡಿಕೊಟ್ಟಿದ್ದನ್ನು ನಾನು ಕಂಡಾಗ, ಅದು ನನಗೆ ಬಹಳ ವ್ಯಸನಕರವಾಯಿತು.
8 ಈ ದುಷ್ಕೃತ್ಯದ ದೆಸೆಯಿಂದ ಬಹಳವಾಗಿ ನೊಂದುಕೊಂಡು, ಟೋಬೀಯನ ಮನೆಯ ಸಾಮಾನುಗಳನ್ನು ಆ ಕೊಠಡಿಯಿಂದ ಹೊರಗೆ ಹಾಕಿಸಿದೆನು.
ಆ ಕೊಠಡಿಯೊಳಗಿಂದ ಟೋಬೀಯನ ವಸ್ತುಗಳನ್ನೆಲ್ಲಾ ಹೊರಗೆ ಹಾಕಿಸಿದೆನು.
9 ಕೊಠಡಿಯನ್ನು ಶುದ್ಧಮಾಡುವುದಕ್ಕಾಗಿ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಆ ಕೊಠಡಿಯಲ್ಲಿ ಇಡಿಸಿದೆನು.
ಆಗ ನಾನು ಹೇಳಿದ್ದರಿಂದ ಅವರು ಕೊಠಡಿಗಳನ್ನು ಶುದ್ಧ ಮಾಡಿದರು. ತರುವಾಯ ದೇವರ ಆಲಯದ ಪಾತ್ರೆಗಳನ್ನೂ ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತಿರುಗಿ ಅಲ್ಲಿ ತಂದು ಇಡಿಸಿದೆನು.
10 ೧೦ ಇದಲ್ಲದೆ, ಲೇವಿಯರಿಗೆ ಸಲ್ಲತಕ್ಕ ಭಾಗಗಳು ಅವರಿಗೆ ಸಿಕ್ಕಲಿಲ್ಲವೆಂದೂ, ಆರಾಧನೆ ನಡೆಸತಕ್ಕ ಲೇವಿಯರೂ, ಗಾಯಕರೂ ತಮ್ಮ ತಮ್ಮ ಭೂಸ್ವಾಸ್ಥ್ಯಗಳಿಗೆ ಹಿಂತಿರುಗಿ ಹೋಗಿಬಿಟ್ಟರೆಂದೂ ನನಗೆ ಗೊತ್ತಾಯಿತು.
ಲೇವಿಯರ ಪಾಲನ್ನು ಅವರಿಗೆ ಕೊಡಲಿಲ್ಲವೆಂದು ನನಗೆ ತಿಳಿಯಿತು. ಸೇವೆಯನ್ನು ಮಾಡುವ ಲೇವಿಯರೂ, ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿ ಹೋಗುತ್ತಿದ್ದರು.
11 ೧೧ ಇದರ ದೆಸೆಯಿಂದ ನಾನು ಅಧಿಕಾರಿಗಳನ್ನು ಗದರಿಸಿ, “ದೇವಾಲಯವನ್ನು ಅಲಕ್ಷ್ಯ ಮಾಡಿದ್ದೇಕೆ?” ಎಂದು ಕೇಳಿದ್ದಲ್ಲದೆ ಬಿಟ್ಟು ಹೋದವರನ್ನು ಪುನಃ ಕರೆಯಿಸಿ ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.
ಆಗ ನಾನು ಅಧಿಕಾರಿಗಳನ್ನು ಗದರಿಸಿ ಅವರಿಗೆ, “ದೇವರ ಮಂದಿರವನ್ನು ಅಲಕ್ಷ್ಯಮಾಡಿದ್ದೇಕೆ?” ಎಂದು ವಾದಿಸಿದೆನು. ಬಿಟ್ಟುಹೋದವರನ್ನು ತಿರಿಗಿ ಕರೆಯಿಸಿ, ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.
12 ೧೨ ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು.
ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ ಎಣ್ಣೆ ಇವುಗಳಲ್ಲಿ ಹತ್ತರಲ್ಲೊಂದು ಪಾಲನ್ನು ಕೊಠಡಿಗಳಲ್ಲಿ ತಂದರು.
13 ೧೩ ನಂತರ ಉಗ್ರಾಣಗಳ ಮೇಲ್ವಿಚಾರಣೆಗಾಗಿ ನೋಡುವುದಕ್ಕೋಸ್ಕರ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಯ ಕುಲದವನಾದ ಪೆದಾಯ ಇವರನ್ನೂ, ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ, ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇಮಿಸಿದೆನು. ಇವರೆಲ್ಲರೂ ನಂಬಿಗಸ್ತರೆಂದು ಹೆಸರುಗೊಂಡವರಾಗಿದ್ದರು. ತಮ್ಮ ಸಹೋದರರಿಗೆ ಸಿಕ್ಕತಕ್ಕದ್ದನ್ನು ಹಂಚಿಕೊಡುವುದು ಇವರ ಕರ್ತವ್ಯವಾಗಿತ್ತು.
ಆಗ ನಾನು ಯಾಜಕನಾದ ಶೆಲೆಮ್ಯನನ್ನೂ, ಲೇಖಕನಾದ ಚಾದೋಕನನ್ನೂ, ಲೇವಿಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗ ಹಾನಾನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು. ಅವರು ನಂಬಿಗಸ್ತರೆಂದು ಹೆಸರುಗೊಂಡವರು. ತಮ್ಮ ಸಹೋದರರಿಗೆ ಹಂಚಿ ಕೊಡುವುದು ಅವರ ಕೆಲಸವಾಗಿತ್ತು.
14 ೧೪ ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ನೆನಪುಮಾಡಿಕೋ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು ನಿನ್ನ ಪುಸ್ತಕದಿಂದ ಆಳಿಸಿಬಿಡಬೇಡ.
ನನ್ನ ದೇವರೇ, ಇದಕ್ಕಾಗಿ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ. ನಾನು ನನ್ನ ದೇವರ ಆಲಯಕ್ಕೋಸ್ಕರವೂ, ಅದರ ಸೇವೆಗೋಸ್ಕರವೂ ನಂಬಿಗಸ್ತಿಕೆಯಿಂದ ಮಾಡಿದ ಭಕ್ತಿಕಾರ್ಯಗಳನ್ನು ಅಳಿಸಿಬಿಡಬೇಡಿರಿ.
15 ೧೫ ಆ ಕಾಲದಲ್ಲಿ ಯೆಹೂದದಲ್ಲಿ ಕೆಲವರು ಸಬ್ಬತ್ ದಿನದಲ್ಲಿ ತೊಟ್ಟಿಯೊಳಗೆ ದ್ರಾಕ್ಷಿ ತುಳಿಯುವುದನ್ನೂ, ಕಣದ ಕಾಳನ್ನು ಕೂಡಿಸಿ, ಆ ಕಾಳುಗಳನ್ನೂ, ದ್ರಾಕ್ಷಾರಸ, ದ್ರಾಕ್ಷಿ, ಅಂಜೂರದ ಹಣ್ಣು ಈ ಮುಂತಾದವುಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಆ ದಿನದಲ್ಲೇ ಯೆರೂಸಲೇಮಿಗೆ ತರುವುದನ್ನೂ ಕಂಡೆನು. ಅವರು ಆ ಆಹಾರ ಪದಾರ್ಥಗಳನ್ನು ಮಾರುವುದಕ್ಕೆ ಬಂದಾಗ ನಾನು ಅವರನ್ನು ವಿರೋಧಿಸಿದೆನು.
ಆ ದಿನಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ ದಿನಗಳಲ್ಲಿ ಕೆಲವರು ದ್ರಾಕ್ಷಿಯ ಆಲೆಗಳಲ್ಲಿ ಕೆಲಸಮಾಡುವುದನ್ನೂ, ಸಿವುಡುಗಳನ್ನು ತರುವುದನ್ನೂ, ಕತ್ತೆಗಳ ಮೇಲೆ ಹೇರಿಕೊಂಡು ಬರುವುದನ್ನೂ ಮತ್ತು ಸಬ್ಬತ್ ದಿನಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ, ದ್ರಾಕ್ಷಿಹಣ್ಣುಗಳನ್ನೂ, ಅಂಜೂರದ ಹಣ್ಣುಗಳನ್ನೂ, ಎಲ್ಲಾ ಹೊರೆಗಳನ್ನೂ ತರುವುದನ್ನು ನಾನು ಕಂಡೆನು. ಆದ್ದರಿಂದ, ವಿಶ್ರಾಂತಿಯ ದಿನದಲ್ಲಿ ಮಾರುವುದರ ವಿರೋಧವಾಗಿ ನಾನು ಎಚ್ಚರಿಸಿದೆನು.
16 ೧೬ ಇದಲ್ಲದೆ ದೇಶದಲ್ಲಿ ವಾಸಿಸುತ್ತಿದ್ದ ತೂರ್ಯರು ಮೀನು ಮುಂತಾದ ಸರಕುಗಳನ್ನು ತಂದು ಯೆಹೂದ್ಯರಿಗೆ ಸಬ್ಬತ್ ದಿನದಲ್ಲಿ ಯೆರೂಸಲೇಮಿನಲ್ಲೇ ಮಾರುತ್ತಿದ್ದರು.
ಇದಲ್ಲದೆ ಮೀನುಗಳನ್ನೂ, ಎಲ್ಲಾ ಸರಕುಗಳನ್ನೂ ತೆಗೆದುಕೊಂಡು ಬಂದು ಸಬ್ಬತ್ ದಿನದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ಟೈರಿನವರು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
17 ೧೭ ಆಗ ನಾನು ಯೆಹೂದದ ಶ್ರೀಮಂತರಿಗೆ, “ನೀವು ಮಾಡುವುದು ಎಂಥ ದುಷ್ಕೃತ್ಯ, ನೀವು ಸಬ್ಬತ್ ದಿನವನ್ನು ಅಶುದ್ಧ ಮಾಡುತ್ತಿದ್ದೀರಿ.
ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ ಅವರಿಗೆ, “ಸಬ್ಬತ್ ದಿನವನ್ನು ನೀವು ಅಪವಿತ್ರ ಮಾಡುವ ಈ ಕೆಟ್ಟ ಕಾರ್ಯವೇನು?
18 ೧೮ ನಿಮ್ಮ ಪೂರ್ವಿಕರು ಹೀಗೆ ಮಾಡಿದರೋ? ನಮ್ಮ ದೇವರು ಈ ಎಲ್ಲಾ ಕೇಡನ್ನು ನಮ್ಮ ಮೇಲೆಯೂ, ನಮ್ಮ ಪಟ್ಟಣದ ಮೇಲೆಯೂ ಬರಮಾಡಿದ್ದನಲ್ಲವೇ? ಹೀಗಿರಲಾಗಿ ನೀವೂ ಸಬ್ಬತ್ ದಿನವನ್ನು ಅಶುದ್ಧಮಾಡಿ ಇಸ್ರಾಯೇಲರ ಮೇಲೆ ದೈವಕೋಪವನ್ನು ಹೆಚ್ಚಿಸುತ್ತೀರಿ” ಎಂದು ಹೇಳಿ ಅವರನ್ನು ಗದರಿಸಿದೆನು.
ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ, ನಮ್ಮ ದೇವರು ನಮ್ಮ ಮೇಲೆಯೂ, ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲಿಲ್ಲವೋ? ಆದರೆ ನೀವು ಸಬ್ಬತ್ ದಿನವನ್ನು ಅಪವಿತ್ರ ಮಾಡುವುದರಿಂದ ಇಸ್ರಾಯೇಲಿನ ಮೇಲೆ ಇನ್ನೂ ದೇವರ ಕೋಪವನ್ನು ಬರಮಾಡುವಿರಿ.”
19 ೧೯ ಇದಲ್ಲದೆ, ಸಬ್ಬತ್ ದಿನ ಪ್ರಾರಂಭವಾಗುವುದಕ್ಕಿಂತ ಮೊದಲು ಯೆರೂಸಲೇಮಿನ ಬಾಗಿಲುಗಳನ್ನು ಕತ್ತಲಾಗುವುದಕ್ಕೆ ಮೊದಲೇ ಮುಚ್ಚಿಸಿ, ಸಬ್ಬತ್ ದಿನವು ಮುಗಿಯುವವರೆಗೂ ಅವುಗಳನ್ನು ತೆರೆಯಬಾರದೆಂದು ಆಜ್ಞಾಪಿಸಿ, ಯಾವ ಹೊರೆಯೂ ಒಳಗೆ ಬಾರದಂತೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಕಾವಲಿರಿಸಿದೆನು.
ಸಬ್ಬತ್ ದಿನಕ್ಕೆ ಮುಂಚೆ ಯೆರೂಸಲೇಮಿನ ಬಾಗಿಲುಗಳಲ್ಲಿ ಕತ್ತಲಾಗಲಾರಂಭಿಸಿದಾಗ ಬಾಗಿಲುಗಳನ್ನು ಹಾಕುವ ಹಾಗೆಯೂ, ಸಬ್ಬತ್ ದಿನವು ತೀರುವವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಸಬ್ಬತ್ ದಿನದಲ್ಲಿ ಹೊರೆ ಏನಾದರೂ ಒಳಗೆ ತರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಿಲುಗಳ ಬಳಿಯಲ್ಲಿ ಇಟ್ಟೆನು.
20 ೨೦ ಇದರಿಂದ ವರ್ತಕರೂ, ಎಲ್ಲಾ ತರದ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವುದಕ್ಕೆ ಬಂದವರೂ, ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ಇಳಿದುಕೊಂಡರು.
ಆಗ ವರ್ತಕರೂ, ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು.
21 ೨೧ ಕೊನೆಗೆ ನಾನು ಅವರಿಗೆ, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಪುನಃ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು” ಎಂದು ಗದರಿಸಲು, ಅವರು ಅಂದಿನಿಂದ ಸಬ್ಬತ್ ದಿನದಲ್ಲಿ ಪುನಃ ಬರಲೇ ಇಲ್ಲ.
ಆಗ ನಾನು ಅವರನ್ನು ಗದರಿಸಿ ಅವರಿಗೆ, “ನೀವು ಕೋಟೆಯ ಗೋಡೆಯ ಹೊರಗೆ ಏಕೆ ಇಳುಕೊಂಡಿದ್ದೀರಿ? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮನ್ನು ಸೆರೆಗೆ ಹಾಕುವೆನು,” ಎಂದೆನು. ಆ ದಿನದಿಂದ ಅವರು ಸಬ್ಬತ್ ದಿನದಲ್ಲಿ ಬರಲೇ ಇಲ್ಲ.
22 ೨೨ ಆ ಮೇಲೆ ನಾನು ಲೇವಿಯರಿಗೆ, “ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸುವ ಹಾಗೆ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಬಂದು ಬಾಗಿಲುಗಳನ್ನು ಕಾಯಬೇಕು” ಎಂದು ಆಜ್ಞಾಪಿಸಿದೆನು. ನನ್ನ ದೇವರೇ, ಇದನ್ನೂ ನನ್ನ ಹಿತಕ್ಕಾಗಿ ನೆನಪುಮಾಡಿಕೊಂಡು, ನಿನ್ನ ಮಹಾಕೃಪೆಗೆ ಅನುಸಾರವಾಗಿ ನನ್ನನ್ನು ಕನಿಕರಿಸು.
ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಂಡು ಬಂದು ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸಬೇಕೆಂದೂ, ಬಾಗಿಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕಾಗಿ ಸಹ ನೀವು ನನ್ನನ್ನು ನೆನಸಿ, ನಿಮ್ಮ ಮಹಾ ಪ್ರೀತಿಯ ಪ್ರಕಾರ ನನ್ನನ್ನು ಕರುಣಿಸಿರಿ.
23 ೨೩ ಅದೇ ಕಾಲದಲ್ಲಿ ನಾನು ಅಷ್ಡೋದ್, ಅಮ್ಮೋನಿಯ, ಮೋವಾಬ್ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕುರಿತು ವಿಚಾರಣೆ ಮಾಡಿದೆನು.
ಆ ದಿನಗಳಲ್ಲಿ ಅಮ್ಮೋನ್, ಮೋವಾಬ್, ಅಷ್ಡೋದ್ ಎಂಬ ದೇಶಗಳ ಸ್ತ್ರೀಯರನ್ನು ಮದುವೆಮಾಡಿಕೊಂಡ ಯೆಹೂದ್ಯರನ್ನು ಕಂಡೆನು.
24 ೨೪ ಅವರ ಮಕ್ಕಳಲ್ಲಿ ಅರ್ಧ ಮಂದಿ ಯೂದಾಯ ಭಾಷೆಯಲ್ಲಿ ಮಾತನಾಡದೆ, ಅಷ್ಡೋದ್ಯ ಭಾಷೆಯನ್ನಾಡುತ್ತಾರೆಂದು ತಿಳಿದು ನಾನು ಕೋಪಗೊಂಡೆನು.
ಇವರ ಮಕ್ಕಳು ಅರ್ಧಮಂದಿ ಯೆಹೂದ್ಯರ ಭಾಷೆಯಲ್ಲಿ ಮಾತಾಡಲು ತಿಳಿಯದೆ, ಅಷ್ಡೋದ್ಯರ ಮತ್ತು ಬೇರೆ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.
25 ೨೫ ಅವರನ್ನು ಶಪಿಸಿ, ಅವರಲ್ಲಿ, ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕಿತ್ತು,
ಆಗ ನಾನು ಅವರನ್ನು ಗದರಿಸಿ, ಶಪಿಸಿ, ಅವರಲ್ಲಿ ಕೆಲವರನ್ನು ಹೊಡೆದು, ಅವರ ಕೂದಲನ್ನು ಕಿತ್ತು, “ನೀವು ನಿಮ್ಮ ಪುತ್ರಿಯರನ್ನು ಅವರ ಪುತ್ರರಿಗೂ, ಅವರ ಪುತ್ರಿಯರನ್ನು ನಿಮ್ಮ ಪುತ್ರರಿಗೂ, ಮದುವೆಮಾಡಿಕೊಡಬೇಡಿರಿ, ಎಂದು ದೇವರ ಹೆಸರಿನಲ್ಲಿ ಅವರಿಂದ ಪ್ರಮಾಣಮಾಡಿಸಿದೆನು.
26 ೨೬ ಇಂತಹ ಸ್ತ್ರೀಯರ ದೆಸೆಯಿಂದ ಇಸ್ರಾಯೇಲ್ ರಾಜನಾದ ಸೊಲೊಮೋನನು ದೋಷಿಯಾದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ. ಅವನು ತನ್ನ ದೇವರಿಗೆ ಪ್ರಿಯನಾಗಿದ್ದನು. ಆದ್ದರಿಂದ ದೇವರು ಅವನನ್ನು ಎಲ್ಲಾ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದನು. ಆದರೂ ಅನ್ಯದೇಶದ ಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿಬಿಟ್ಟರು.
ಇಸ್ರಾಯೇಲಿನ ಅರಸನಾದ ಸೊಲೊಮೋನನು ಇಂತಹ ಮದುವೆಗಳಿಂದ ಪಾಪ ಮಾಡಿದನಲ್ಲವೇ? ಅನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನು ಇರಲಿಲ್ಲ, ಅವನು ತನ್ನ ದೇವರಿಗೆ ವಿಶೇಷಪ್ರಿಯನಾಗಿದ್ದನು, ಆದ್ದರಿಂದಲೇ ದೇವರು ಅವನನ್ನು ಎಲ್ಲ ಇಸ್ರಾಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ವಿದೇಶಿ ಸ್ತ್ರೀಯರು ಅವನನ್ನು ಕೂಡ ಪಾಪಮಾಡುವ ಹಾಗೆ ಮಾಡಿದರು.
27 ೨೭ ಹೀಗಿರಲಾಗಿ ನೀವೂ ಅನ್ಯಸ್ತ್ರೀಯರನ್ನು ಮದುವೆಮಾಡಿಕೊಂಡು ಅದೇ ಘೋರವಾದ ದುಷ್ಟತ್ವವನ್ನು ಮಾಡಿ ದೇವರಿಗೆ ದ್ರೋಹಿಗಳಾಗುವುದನ್ನು ನಾವು ಒಪ್ಪಿಕೊಳ್ಳಬೇಕೋ? ಎಂದು ಅವರನ್ನು ಗದರಿಸಿ “ಅವರ ಮಕ್ಕಳಿಗೆ ಹೆಣ್ಣನ್ನು ಕೊಡಬಾರದು, ನಿಮಗಾಗಲಿ ನಿಮ್ಮ ಮಕ್ಕಳಿಗಾಗಲಿ ಅವರಿಂದ ತರಲೂಬಾರದು” ಎಂಬ ಧರ್ಮವಿಧಿಯನ್ನು ಕೈಕೊಳ್ಳುವುದಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದೆನು.
ನೀವು ವಿದೇಶಿ ಸ್ತ್ರೀಯರನ್ನು ಮದುವೆಮಾಡಿಕೊಂಡು, ನಮ್ಮ ದೇವರಿಗೆ ಅಪರಾಧಮಾಡಿ, ಅದೇ ಘೋರವಾದ ದುಷ್ಕೃತ್ಯವನ್ನು ಮಾಡಲು ನಾವು ಒಪ್ಪಿಕೊಳ್ಳುವುದಿಲ್ಲ ನಿಮ್ಮ ಮಾತು ಕೇಳಬಹುದೋ?” ಎಂದು ಗದರಿಸಿದೆನು.
28 ೨೮ ಮಹಾಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾಗಿದ್ದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆನು.
ಮಹಾಯಾಜಕನಾದ ಎಲ್ಯಾಷೀಬನ ಮಗ ಯೋಯಾದನ ಮಕ್ಕಳಲ್ಲಿ ಒಬ್ಬನು ಹೋರೋನಿನವನಾದ ಸನ್ಬಲ್ಲಟನಿಗೆ ಅಳಿಯನಾದ ಕಾರಣ ನಾನು ಅವನನ್ನು ನನ್ನ ಬಳಿಯಿಂದ ಓಡಿಸಿಬಿಟ್ಟೆನು.
29 ೨೯ ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಪ್ರತಿಜ್ಞೆಯನ್ನೂ ಹೊಲೆಮಾಡಿದ್ದಾರಲ್ಲಾ. ಅವರ ಕೃತ್ಯಗಳನ್ನೂ ನೆನಪುಮಾಡಿಕೋ.
ನನ್ನ ದೇವರೇ, ಅವರು ಯಾಜಕತ್ವವನ್ನೂ, ಯಾಜಕರ ಮತ್ತು ಲೇವಿಯರ ಒಡಂಬಡಿಕೆಯನ್ನೂ, ಅಶುದ್ಧ ಮಾಡಿದ್ದಾರೆ; ಇದನ್ನು ನೆನಪುಮಾಡಿಕೊಳ್ಳಿರಿ.
30 ೩೦ ನಾನು ಈ ಪ್ರಕಾರ ಅನ್ಯವಾದದ್ದನ್ನೆಲ್ಲಾ ತೆಗೆಯಿಸಿ ಅವರನ್ನು ಶುದ್ಧಪಡಿಸಿದೆನಲ್ಲದೆ, ಯಾಜಕರಲ್ಲಿಯೂ, ಲೇವಿಯರಲ್ಲಿಯೂ ಪ್ರತಿಯೊಬ್ಬನಿಗಿರುವ ಕೆಲಸದ ವಿಷಯವಾಗಿಯೂ ಕ್ರಮಗಳನ್ನು ಏರ್ಪಡಿಸಿದೆನು.
ಹೀಗೆಯೇ ನಾನು ಅವರನ್ನು ಇತರ ಜನರಿಂದ ಬಿಡಿಸಿ, ಶುದ್ಧಪಡಿಸಿದೆ. ಯಾಜಕರಿಗೂ, ಲೇವಿಯರಿಗೂ, ಅವರವರ ಕೆಲಸದ ಪ್ರಕಾರ,
31 ೩೧ ನಿಯಮಿತ ಕಾಲಗಳನ್ನು, ಸಲ್ಲತಕ್ಕ ಕಟ್ಟಿಗೆ ದಾನದ ಮತ್ತು ಪ್ರಥಮ ಫಲದ ವಿಷಯವಾಗಿಯೂ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ.
ನೇಮಿತ ಕಾಲದಲ್ಲಿ ಸಲ್ಲತಕ್ಕ ಅರ್ಪಣೆಯ ಕಟ್ಟಿಗೆಗಳನ್ನೂ, ಪ್ರಥಮ ಫಲದ ವಿಷಯವಾಗಿ ಕ್ರಮಗಳನ್ನು ಏರ್ಪಡಿಸಿದೆನು. ನನ್ನ ದೇವರೇ, ಇದನ್ನು ಸಹ ನನ್ನ ಮೇಲಿನ ನಿಮ್ಮ ದಯೆಯೊಂದಿಗೆ ನನ್ನನ್ನು ನೆನಪುಮಾಡಿಕೊಳ್ಳಿರಿ.

< ನೆಹೆಮೀಯನು 13 >