< ನ್ಯಾಯಸ್ಥಾಪಕರು 8 >
1 ೧ ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ, “ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರಕೋಪದಿಂದ ಜಗಳವಾಡಿದರು.
ಆಗ ಎಫ್ರಾಯೀಮ್ಯರು, “ನೀನು ಮಿದ್ಯಾನ್ಯರ ಮೇಲೆ ಯುದ್ಧಮಾಡುವುದಕ್ಕೆ ಹೋಗುವಾಗ, ನಮ್ಮನ್ನು ಕರೆಯದೆ ಹೋದದ್ದೇನು?” ಎಂದು ಹೇಳಿ ಅವನ ಸಂಗಡ ತೀಕ್ಷ್ಣವಾಗಿ ವಿವಾದ ಮಾಡಿದರು.
2 ೨ ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸಮಾನವಾಗುವಂತದ್ದು ನಾನೇನು ಮಾಡಿದೆ? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ, ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ?
ಅವನು ಅವರಿಗೆ, “ನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿದೆನು? ಅಬೀಯೆಜೆರನ ದ್ರಾಕ್ಷಿ ಫಲ ಕೂಡಿಸುವುದಕ್ಕಿಂತ ಎಫ್ರಾಯೀಮನ ಉಳಿದ ದ್ರಾಕ್ಷಿಗಳನ್ನು ಸಂಗ್ರಹಿಸುವುದು ಉತ್ತಮವಲ್ಲವೇ?
3 ೩ ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿ ಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ?” ಎಂದನು. ಈ ಮಾತುಗಳನ್ನು ಕೇಳಿದಾಗ ಅವರ ಸಿಟ್ಟಿಳಿಯಿತು.
ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ಪ್ರಧಾನರಾದ ಓರೇಬನನ್ನೂ, ಜೇಬನನ್ನೂ ಒಪ್ಪಿಸಿಕೊಡಲಿಲ್ಲವೇ? ನೀವು ಮಾಡಿದ್ದಕ್ಕೆ ನಾನು ಮಾಡಿದ್ದು ಎಷ್ಟು?” ಎಂದನು. ಅವನು ಈ ಮಾತು ಹೇಳಿದಾಗ, ಅವನ ವಿಷಯವಾಗಿ ಅವರ ಕೋಪವು ಶಾಂತವಾಯಿತು.
4 ೪ ಗಿದ್ಯೋನನು ಅವನ ಸಂಗಡ ಇದ್ದ ಮುನ್ನೂರು ಜನರು ಬಹಳ ದಣಿದವರಾಗಿದ್ದರೂ, ಹಿಂದಟ್ಟುತ್ತಾ ಯೊರ್ದನನ್ನು ದಾಟಿ ಸುಖೋತಿಗೆ ಬಂದರು.
ಗಿದ್ಯೋನನು ಯೊರ್ದನಿಗೆ ಬಂದು ಅದನ್ನು ದಾಟಿ; ಅವನೂ, ಅವನ ಸಂಗಡ ಇದ್ದ ಮುನ್ನೂರು ಜನರೂ ದಣಿದವರಾಗಿಯೂ, ಹಿಂದಟ್ಟುವವರಾಗಿಯೂ ಇದ್ದರು.
5 ೫ ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ, ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ, ಚಲ್ಮುನ್ನರನ್ನು ಹಿಂದಟ್ಟುತ್ತಾ ಇದ್ದೇನೆ” ಅಂದನು.
ಅವನು ಸುಕ್ಕೋತನವರಿಗೆ, “ದಯಮಾಡಿ ನನ್ನ ಕೂಡ ಇರುವ ಜನರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ. ಏಕೆಂದರೆ ಅವರು ದಣಿದಿದ್ದಾರೆ. ನಾನು ಮಿದ್ಯಾನ್ಯರ ಅರಸುಗಳಾದ ಜೆಬಹನನ್ನೂ, ಚಲ್ಮುನ್ನನನ್ನೂ ಹಿಂದಟ್ಟುತ್ತೇನೆ,” ಎಂದನು.
6 ೬ ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ನೀನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?” ಎಂದು ಉತ್ತರಕೊಟ್ಟರು.
ಆದರೆ ಸುಕ್ಕೋತಿನ ಪ್ರಧಾನರು ಅವನಿಗೆ, “ನಿನ್ನ ಸೈನ್ಯಕ್ಕೆ ನಾವು ರೊಟ್ಟಿ ಕೊಡುವಂತೆ ಜೆಬಹ ಚಲ್ಮುನ್ನರ ಕೈ ನಿನ್ನ ಕೈವಶವಾಗಿದೆಯೋ?” ಎಂದರು.
7 ೭ ಆಗ ಗಿದ್ಯೋನನು ಅವರಿಗೆ, “ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಕಾಡಿನಲ್ಲಿರುವ ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸುವೆನು” ಎಂದು ಹೇಳಿದನು.
ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು.
8 ೮ ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು.
ಅಲ್ಲಿಂದ ಪೆನೀಯೇಲಿಗೆ ಹೋಗಿ, ಆ ಊರಿನವರ ಸಂಗಡ ಆ ಪ್ರಕಾರವೇ ಮಾತನಾಡಿದನು. ಅವರು ಸುಕ್ಕೋತಿನ ಮನುಷ್ಯರು ಉತ್ತರ ಕೊಟ್ಟ ಹಾಗೆಯೇ ಉತ್ತರಕೊಟ್ಟರು.
9 ೯ ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಬುರುಜನ್ನು ಕೆಡವಿಬಿಡುವೆನು” ಅಂದನು.
ಆಗ ಅವನು ಪೆನೀಯೇಲಿನ ಮನುಷ್ಯರಿಗೆ ಸಹ, “ನಾನು ಸಮಾಧಾನವಾಗಿ ತಿರುಗಿ ಬರುವಾಗ, ಈ ಗೋಪುರವನ್ನು ಕೆಡವಿಬಿಡುವೆನು,” ಎಂದನು.
10 ೧೦ ಜೆಬಹ, ಚಲ್ಮುನ್ನರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಮೂಡಣದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ.
ಜೆಬಹನೂ, ಚಲ್ಮುನ್ನನೂ ತಮ್ಮ ಸೈನ್ಯದ ಹೆಚ್ಚು ಕಡಿಮೆ ಹದಿನೈದು ಸಾವಿರ ಜನರ ಸಂಗಡ ಕರ್ಕೋರಿನಲ್ಲಿ ಇದ್ದರು. ಇವರಷ್ಟೂ, ಖಡ್ಗ ಹಿಡಿಯತಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಬಿದ್ದುಹೋದಾಗ, ಪೂರ್ವದೇಶದ ಸಮಸ್ತ ಜನರು ಅಲ್ಲಿ ಉಳಿದರು.
11 ೧೧ ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು.
ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು.
12 ೧೨ ಜೆಬಹನೂ ಮತ್ತು ಚಲ್ಮುನ್ನನೂ ಓಡಿಹೋಗಲಾಗಿ, ಅವರನ್ನು ಹಿಂದಟ್ಟಿ ಹಿಡಿದು, ಅವರ ಸೈನ್ಯವನ್ನು ಚದರಿಸಿಬಿಟ್ಟನು.
ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು.
13 ೧೩ ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದು,
ಯೋವಾಷನ ಮಗನಾದ ಗಿದ್ಯೋನನು ಯುದ್ಧ ತೀರಿಸಿಕೊಂಡು ಹೆರೆಸ್ ಎಂಬ ಬೆಟ್ಟದ ಮಾರ್ಗವಾಗಿ ತಿರುಗಿಬಂದು,
14 ೧೪ ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು, ಆ ಊರಿನ ಮುಖಂಡರೂ, ಹಿರಿಯರೂ ಯಾರಾರೆಂದು ವಿಚಾರಿಸಲು ಅವನು ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆದುಕೊಟ್ಟನು.
ಸುಕ್ಕೋತಿನ ಮನುಷ್ಯರಲ್ಲಿ ಒಬ್ಬ ಯೌವನಸ್ಥನನ್ನು ಹಿಡಿದು ಅವನನ್ನು ಕೇಳಿದಾಗ ಅವನು, ಸುಕ್ಕೋತಿನ ಪ್ರಧಾನರೂ, ಹಿರಿಯರೂ ಆದ ಎಪ್ಪತ್ತೇಳು ಜನರ ಹೆಸರನ್ನು ಅವನು ಬರೆದನು.
15 ೧೫ ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “ನಾವು ದಣಿದಿರುವ ನಿನ್ನ ಸೈನಿಕರಿಗೋಸ್ಕರ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ಕೈಕಟ್ಟಿ ಸ್ವಾಧೀನಮಾಡಿಕೊಂಡಿದ್ದೀಯೋ? ಎಂದು ನನ್ನನ್ನು ನಿಂದಿಸಿದಿರಲ್ಲಾ;
ಗಿದ್ಯೋನನು ಸುಕ್ಕೋತಿನ ಮನುಷ್ಯರ ಬಳಿಗೆ ಬಂದು, “ಇಗೋ, ದಣಿದಿರುವ ನಿನ್ನ ಮನುಷ್ಯರಿಗೆ ನಾವು ರೊಟ್ಟಿಯನ್ನು ಕೊಡುವ ಹಾಗೆ, ಜೆಬಹ, ಚೆಲ್ಮುನ್ನರ ಕೈ ಈಗಲೇ ನಿನ್ನ ಕೈವಶವಾಗಿದೆಯೋ ಎಂದು ನೀವು ನನ್ನನ್ನು ನಿಂದಿಸಿದ ಜೆಬಹನನ್ನೂ, ಚಲ್ಮುನ್ನನನ್ನೂ ನೋಡಿರಿ,” ಎಂದು ಹೇಳಿ
16 ೧೬ ನೋಡಿರಿ, ಅವರು ಇಲ್ಲಿರುತ್ತಾರೆ” ಎಂದು ಹೇಳಿ ಊರಿನ ಹಿರಿಯರನ್ನೂ, ಮುಖಂಡರನ್ನೂ, ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು.
ಪಟ್ಟಣದ ಹಿರಿಯರನ್ನು ಮತ್ತು ಸುಕ್ಕೋತಿನವರನ್ನು ಹಿಡಿದು, ಮರುಭೂಮಿಯ ಮುಳ್ಳು ಹಾಗು ಕಾರೆಗಿಡದ ಮುಳ್ಳುಗಳಿಂದ ದಂಡಿಸಿ ಅವರಿಗೆ ಪಾಠ ಕಲಿಸಿದನು.
17 ೧೭ ಮತ್ತು ಪೆನೂವೇಲಿನ ಬುರುಜನ್ನು ಕೆಡವಿಬಿಟ್ಟು ಆ ಊರಿನ ಜನರನ್ನು ಸಂಹರಿಸಿದನು.
ಪೆನೀಯೇಲಿನ ಗೋಪುರವನ್ನು ಕೆಡವಿ, ಆ ಪಟ್ಟಣದ ಮನುಷ್ಯರನ್ನು ಕೊಂದುಹಾಕಿದನು.
18 ೧೮ ಅವನು ಜೆಬಹ, ಚಲ್ಮುನ್ನರನ್ನು, “ನೀವು ತಾಬೋರದಲ್ಲಿ ಕೊಂದುಹಾಕಿದ ಮನುಷ್ಯರು ಹೇಗಿದ್ದರು?” ಎಂದು ಕೇಳಲಾಗಿ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು” ಎಂದು ಉತ್ತರಕೊಟ್ಟರು.
ಅವನು ಜೆಬಹನಿಗೂ, ಚಲ್ಮುನ್ನನಿಗೂ, “ನೀವು ತಾಬೋರಿನಲ್ಲಿ ಕೊಂದುಹಾಕಿದ ಆ ಮನುಷ್ಯರು ಯಾವ ತರಹದವರಾಗಿದ್ದರು?” ಎಂದನು. ಅದಕ್ಕವರು, “ನಿನ್ನ ಹಾಗೆಯೇ ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಂತಿದ್ದರು,” ಎಂದರು.
19 ೧೯ ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಯೆಹೋವನಾಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿ
ಅದಕ್ಕವನು, “ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು. ಯೆಹೋವ ದೇವರ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುತ್ತಿರಲಿಲ್ಲ,” ಎಂದನು.
20 ೨೦ ತನ್ನ ಹಿರೀ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು” ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು.
21 ೨೧ ಆಗ ಜೆಬಹನೂ ಮತ್ತು ಚಲ್ಮುನ್ನನೂ ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮನ್ನು ಕೊಂದುಹಾಕು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದಲ್ಲಾ” ಅನ್ನಲು ಅವನೆದ್ದು ಜೆಬಹ, ಚಲ್ಮುನ್ನರನ್ನು ಕೊಂದುಹಾಕಿ, ಅವರ ಒಂಟೆಗಳ ಕೊರಳಿನಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
ಆಗ ಜೆಬಹನೂ, ಚಲ್ಮುನ್ನನೂ, “ನೀನು ಎದ್ದು ನಮ್ಮ ಮೇಲೆ ಬೀಳು. ಏಕೆಂದರೆ ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವುದು,” ಎಂದರು. ಗಿದ್ಯೋನನು ಎದ್ದು ಜೆಬಹನನ್ನೂ, ಚೆಲ್ಮುನ್ನನನ್ನೂ ಕೊಂದುಹಾಕಿ, ಅವರ ಒಂಟೆಗಳ ಕುತ್ತಿಗೆಗಳಲ್ಲಿ ಇದ್ದ ಆಭರಣಗಳನ್ನು ತೆಗೆದುಕೊಂಡನು.
22 ೨೨ ತರುವಾಯ ಇಸ್ರಾಯೇಲ್ಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲಾ; ನೀನೂ, ನಿನ್ನ ಮಗನೂ, ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು” ಎಂದರು.
ಆಗ ಇಸ್ರಾಯೇಲ್ ಜನರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನರ ಕೈಯಿಂದ ತಪ್ಪಿಸಿ ರಕ್ಷಿಸಿದ್ದರಿಂದ, ನೀನೂ, ನಿನ್ನ ಪುತ್ರನೂ, ನಿನ್ನ ಪುತ್ರನ ಪುತ್ರನೂ ನಮ್ಮನ್ನು ಆಳಬೇಕು,” ಎಂದರು.
23 ೨೩ ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಯೆಹೋವನೇ ನಿಮ್ಮ ಅರಸನಾಗಿರುವನು.
ಗಿದ್ಯೋನನು ಅವರಿಗೆ, “ನಾನು ನಿಮ್ಮನ್ನು ಆಳುವುದಿಲ್ಲ. ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ. ಯೆಹೋವ ದೇವರೇ ನಿಮ್ಮನ್ನು ಆಳುವರು.”
24 ೨೪ ಆದರೆ ನಿಮಗೆ ಒಂದು ಬಿನ್ನಹ ಮಾಡುತ್ತೇನೆ; ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಲಿ” ಅಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದರಿಂದ ಅವರ ಬಳಿಯಲ್ಲಿ ಬಂಗಾರದ ಓಲೆಗಳು ಇದ್ದವು.
ಮತ್ತು ಗಿದ್ಯೋನನು ಅವರಿಗೆ, “ಒಂದು ಬಿನ್ನಹವನ್ನು ನಾನು ನಿಮಗೆ ಮಾಡುತ್ತೇನೆ. ಪ್ರತಿಯೊಬ್ಬನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಿರಿ,” ಎಂದನು. ಏಕೆಂದರೆ ಮಿದ್ಯಾನರು ಇಷ್ಮಾಯೇಲರಾಗಿದ್ದದರಿಂದ ಅವರು ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು.
25 ೨೫ ಗಿದ್ಯೋನನ ಬಿನ್ನಹಕ್ಕೆ ಇಸ್ರಾಯೇಲ್ಯರು, “ನಾವು ಸಂತೋಷದಿಂದ ಕೊಡುವೆವು” ಎಂದು ಹೇಳಿ, ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಓಲೆಗಳನ್ನು ಇಟ್ಟುಬಿಟ್ಟರು.
ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು.
26 ೨೬ ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ, ಇವುಗಳ ಹೊರತಾಗಿ ಅವನು ಇಸ್ರಾಯೇಲ್ಯರಿಂದ ಕೇಳಿ ತೆಗೆದುಕೊಂಡ ಓಲೆಗಳ ಬಂಗಾರವೇ ಸಾವಿರದ ಏಳುನೂರು ತೊಲೆ ತೂಕವಾಗಿತ್ತು.
ಆಭರಣಗಳೂ, ಕಂಠಮಾಲೆಗಳೂ, ಮಿದ್ಯಾನರ ಅರಸರು ಹೊದ್ದುಕೊಂಡಿದ್ದ ರಕ್ತಾಂಬರ ವಸ್ತ್ರಗಳೂ, ಅವರ ಒಂಟೆಗಳ ಕೊರಳೊಳಗೆ ಇದ್ದ ಸರಪಣಿಗಳೂ ಹೊರತು ಅವನು ಕೇಳಿ ತೆಗೆದುಕೊಂಡ ಬಂಗಾರದ ಓಲೆಗಳ ತೂಕವು ಇಪ್ಪತ್ತು ಕಿಲೋಗ್ರಾಂ ತೂಕವಾಗಿತ್ತು.
27 ೨೭ ಈ ಬಂಗಾರದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಆದ್ದರಿಂದ ಇಸ್ರಾಯೇಲರೆಲ್ಲರೂ ಅದನ್ನು ಪೂಜಿಸುತ್ತಿದ್ದುದರಿಂದ ದೈವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಉರುಲಾಯಿತು.
ಆ ಬಂಗಾರದಿಂದ ಗಿದ್ಯೋನನು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲರೆಲ್ಲರೂ ಅದರ ಹಿಂದೆ ಹೋಗಿ ಪೂಜಿಸಿ ದೇವದ್ರೋಹಿಗಳಾದರು, ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
28 ೨೮ ಮಿದ್ಯಾನ್ಯರು ಇಸ್ರಾಯೇಲ್ಯರ ಮುಂದೆ ಬಹಳವಾಗಿ ತಗ್ಗಿಸಲ್ಪಟ್ಟರು; ಅವರು ಪುನಃ ತಲೆಯೆತ್ತಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಲ್ವತ್ತು ವರ್ಷಗಳ ಕಾಲ ದೇಶದಲ್ಲಿ ಸಮಾಧಾನವಿತ್ತು.
ಮಿದ್ಯಾನ್ಯರು ತಮ್ಮ ತಲೆಯನ್ನು ತಿರುಗಿ ಎತ್ತಕೂಡದ ಹಾಗೆ ಇಸ್ರಾಯೇಲರ ಮುಂದೆ ತಗ್ಗಿಹೋದರು. ದೇಶವು ಗಿದ್ಯೋನನ ದಿವಸಗಳಲ್ಲಿ ನಲವತ್ತು ವರುಷ ವಿಶ್ರಾಂತಿಯಲ್ಲಿತ್ತು.
29 ೨೯ ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು.
ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು.
30 ೩೦ ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು.
ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಂದ ಜನಿಸಿದ ಎಪ್ಪತ್ತು ಮಂದಿ ಮಕ್ಕಳು ಇದ್ದರು.
31 ೩೧ ಅವನಿಗೆ ಶೆಕೆಮಿನಲ್ಲಿದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗನು ಹುಟ್ಟಲು, ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
ಶೆಖೆಮಿನಲ್ಲಿದ್ದ ಅವನ ಉಪಪತ್ನಿಯು ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅವನು ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.
32 ೩೨ ಯೋವಾಷನ ಮಗನಾದ ಗಿದ್ಯೋನನು ದಿನತುಂಬಿದ ಮುದುಕನಾಗಿ ಮರಣ ಹೊಂದಲು, ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿಯು ಅವನ ತಂದೆಯಾದ ಯೋವಾಷನದಾಗಿತ್ತು.
ಯೋವಾಷನ ಮಗನಾದ ಗಿದ್ಯೋನನು ಒಳ್ಳೆಯ ವೃದ್ಧಾಪ್ಯದಲ್ಲಿ ಮರಣಹೊಂದಿದಾಗ, ಅವನನ್ನು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿ ತನ್ನ ತಂದೆಯಾದ ಯೋವಾಷನ ಸಮಾಧಿಯಲ್ಲಿ ಹೂಳಿಡಲಾಯಿತು.
33 ೩೩ ಗಿದ್ಯೋನನು ಸತ್ತನಂತರ ಇಸ್ರಾಯೇಲರು ದೈವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.
ಗಿದ್ಯೋನನ ಮರಣದ ತರುವಾಯ, ಇಸ್ರಾಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜೆ ಮಾಡುತ್ತಾ ಬಾಳ್ ಬೆರೀತನ್ನು ತಮಗೆ ದೇವರಾಗಿ ಮಾಡಿಕೊಂಡರು.
34 ೩೪ ಸುತ್ತಣ ಎಲ್ಲಾ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಯೆಹೋವನನ್ನು ಮರೆತುಬಿಟ್ಟರು.
ಸುತ್ತಲೂ ಇದ್ದ ತಮ್ಮ ಎಲ್ಲಾ ಶತ್ರುಗಳ ಕೈಯಿಂದ ತಮ್ಮನ್ನು ತಪ್ಪಿಸಿಬಿಟ್ಟ ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟರು.
35 ೩೫ ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಅವರು ನೆನಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.
ಗಿದ್ಯೋನನೆಂಬ ಯೆರುಬ್ಬಾಳನು ಇಸ್ರಾಯೇಲಿಗೆ ಮಾಡಿದ ಸಕಲ ಉಪಕಾರಗಳಿಗೆ ತಕ್ಕ ಹಾಗೆ ದಯೆಯನ್ನು ಅವನ ಮನೆಗೆ ಮಾಡದೆ ಹೋದರು.