< ಯೋಬನು 34 >

1 ಆಗ ಎಲೀಹು ಮತ್ತೆ ಇಂತೆಂದನು,
ಎಲೀಹು ಮುಂದುವರೆಸಿ ಹೇಳಿದ್ದೇನೆಂದರೆ:
2 “ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ, ಜ್ಞಾನಿಗಳೇ, ನನಗೆ ಕಿವಿಗೊಡಿರಿ!
ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ಪಂಡಿತರೇ, ನನಗೆ ಕಿವಿಗೊಡಿರಿ.
3 ನಾಲಿಗೆಯು ಆಹಾರವನ್ನು ರುಚಿನೋಡುವಂತೆ, ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.
ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
4 ನ್ಯಾಯವನ್ನೇ ಆರಿಸಿಕೊಳ್ಳೋಣ, ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.
ನಾವು ಸರಿಯಾದುದನ್ನೇ ಆಯ್ದುಕೊಳ್ಳೋಣ; ಒಳ್ಳೆಯದು ಏನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
5 ಯೋಬನು, ‘ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.
“ಏಕೆಂದರೆ ಯೋಬನು, ‘ನಾನು ನಿರ್ದೋಷಿಯಾಗಿದ್ದೇನೆ. ಆದರೆ ದೇವರು ನನಗೆ ನ್ಯಾಯವನ್ನು ನಿರಾಕರಿಸಿದ್ದಾರೆ.
6 ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ’ ಎಂದು ಹೇಳಿಕೊಂಡಿದ್ದಾನೆ.
ನನ್ನಲ್ಲಿ ನ್ಯಾಯವಿದ್ದರೂ ನನ್ನನ್ನು ಸುಳ್ಳುಗಾರನೆಂದು ಪರಿಗಣಿಸಲಾಗಿದೆ; ನಾನು ನಿರ್ದೋಷಿಯಾಗಿದ್ದರೂ ದೇವರ ಬಾಣವು ಗುಣಪಡಿಸಲಾಗದ ಗಾಯವನ್ನು ನನಗೆ ಉಂಟುಮಾಡಿದೆ,’ ಎಂದು ಹೇಳುತ್ತಿದ್ದಾನೆ.”
7 ಯೋಬನಿಗೆ ಸಮಾನನು ಯಾರು? ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.
ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿಯುವಂತೆ ಅಪಹಾಸ್ಯ ಮಾಡುತ್ತಿದ್ದಾನೆ.
8 ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ, ಕೆಟ್ಟವರ ಸಂಗಡ ನಡೆದಾಡುತ್ತಾನೆ.
ಯೋಬನು ದುಷ್ಕರ್ಮಿಗಳೊಂದಿಗೆ ಸಹವಾಸ ಇಟ್ಟುಕೊಳ್ಳುತ್ತಾ ದುಷ್ಟಜನರ ಸಂಗಡ ನಡೆದಾಡುತ್ತಾನೆ.
9 ‘ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ, ಅವನಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾನಷ್ಟೆ.
“ಏಕೆಂದರೆ ಅವನು, ‘ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದರಿಂದ ಮನುಷ್ಯನಿಗೆ ಯಾವುದೇ ಲಾಭವಿಲ್ಲ,’ ಎಂದು ಹೇಳುತ್ತಾನೆ.”
10 ೧೦ ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ, ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!
“ಆದ್ದರಿಂದ ಬುದ್ಧಿವಂತರೇ, ನಾನು ಹೇಳುವುದನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾರೆಂಬ ಯೋಚನೆ ದೂರವಿರಲಿ. ಸರ್ವಶಕ್ತರು ಅನ್ಯಾಯವನ್ನು ಎಸಗುತ್ತಾರೆಂಬ ಭಾವನೆ ದೂರವಾಗಿರಲಿ.
11 ೧೧ ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.
ದೇವರು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕ ಫಲವನ್ನು ಕೊಡುತ್ತಾರೆ; ಹೌದು, ದೇವರು ಪ್ರತಿಯೊಬ್ಬರನ್ನು ಅವರವರ ನಡತೆಗೆ ತಕ್ಕಂತೆ ಅನುಭವಿಸಮಾಡುತ್ತಾರೆ.
12 ೧೨ ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ, ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.
ನಿಶ್ಚಯವಾಗಿ ದೇವರು ಕೆಟ್ಟದ್ದನ್ನು ಮಾಡುವುದಿಲ್ಲ, ಸರ್ವಶಕ್ತರು ನ್ಯಾಯವನ್ನು ಡೊಂಕು ಮಾಡುವುದಿಲ್ಲ.
13 ೧೩ ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು? ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?
ಭೂಮಿಯ ಮೇಲೆ ದೇವರನ್ನು ನೇಮಿಸಿದವರು ಯಾರು? ಸರ್ವಲೋಕವನ್ನು ದೇವರ ವಶಕ್ಕೆ ಒಪ್ಪಿಸಿಕೊಟ್ಟವರು ಯಾರು?
14 ೧೪ ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,
ಒಂದು ವೇಳೆ, ದೇವರು ತಮ್ಮ ಆತ್ಮವನ್ನೂ, ಶ್ವಾಸವನ್ನೂ, ನಮ್ಮಿಂದ ಹಿಂದಕ್ಕೆ ತೆಗೆದುಕೊಳ್ಳಲು ಮನಸ್ಸುಮಾಡುವುದಾದರೆ,
15 ೧೫ ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು, ಪುನಃ ಮನುಷ್ಯರು ಧೂಳೇ ಆಗುವರು.
ಎಲ್ಲಾ ಮನುಷ್ಯರೂ ಒಟ್ಟಿಗೆ ಅಳಿದುಹೋಗುವರು; ಇಡೀ ಮಾನವಕುಲವು ಧೂಳಿಗೆ ಹಿಂದಿರುಗುವುದು.”
16 ೧೬ ನಿನಗೆ ವಿವೇಕವಿದ್ದರೆ ಇದನ್ನು ಕೇಳು, ನನ್ನ ಮಾತುಗಳ ಧ್ವನಿಗೆ ಕಿವಿಗೊಡು!
“ಯೋಬನೇ, ಅರ್ಥಮಾಡಿಕೊಂಡು, ಇದನ್ನು ಕೇಳಿಸಿಕೋ; ನನ್ನ ಮಾತಿಗೆ ಕಿವಿಗೊಡು.
17 ೧೭ ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ? ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?
ನ್ಯಾಯವನ್ನು ದ್ವೇಷಿಸುವ ದೇವರು, ಆಳ್ವಿಕೆಮಾಡಲು ಸಾಧ್ಯವೇ? ನೀತಿವಂತರೂ, ಸರ್ವಶಕ್ತರೂ ಆಗಿರುವ ದೇವರ ಮೇಲೆ ನೀನು ತಪ್ಪುಹೊರಿಸುವಿಯೋ?
18 ೧೮ ಆತನು ರಾಜನಿಗೆ, ‘ನೀನು ಮೂರ್ಖ’ ಪ್ರಭುಗಳಿಗೆ, ‘ನೀವು ಕೆಟ್ಟವರು’ ಎಂದು ಹೇಳಬಲ್ಲನೇ?
ದೇವರು ಅರಸನಿಗೆ, ‘ನೀನು ಮೂರ್ಖ,’ ಎಂದು ಹೇಳಬಲ್ಲರು. ದೇವರು ಪ್ರಧಾನರಿಗೆ, ‘ನೀವು ದುಷ್ಟರು’ ಎಂದು ಕರೆಯಬಲ್ಲರು ಅಲ್ಲವೇ?
19 ೧೯ ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ, ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.
ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ? ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.
20 ೨೦ ಕ್ಷಣ ಮಾತ್ರದೊಳಗೆ ಸಾಯುವರು; ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.
ಜನರು ಮಧ್ಯರಾತ್ರಿಯಲ್ಲಿ ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಅವರು ತಲ್ಲಣಗೊಂಡು ಇಲ್ಲದೆ ಹೋಗುತ್ತಾರೆ; ಪರಾಕ್ರಮಿಗಳು ಸಹ ಮಾನವರ ಕೈ ಒಳಪಡದೆ ಗತಿಸಿಹೋಗುತ್ತಾರೆ.”
21 ೨೧ ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು, ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.
“ಏಕೆಂದರೆ ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ ಇರುತ್ತದೆ; ದೇವರು ಮನುಷ್ಯನ ಪ್ರತಿಯೊಂದು ಹೆಜ್ಜೆಯನ್ನೂ ನೋಡುತ್ತಾರೆ.
22 ೨೨ ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ, ಅನುಕೂಲವಾದ ಯಾವ ಕತ್ತಲೂ, ಯಾವ ಗಾಢಾಂಧಕಾರವೂ ಇರುವುದಿಲ್ಲ.
ಆದ್ದರಿಂದ ದೇವರ ದೃಷ್ಟಿಯಿಂದ ದುಷ್ಟರು ಅಡಗಿಕೊಳ್ಳಲು, ಗಾಢಾಂಧಕಾರವೂ ಇಲ್ಲ, ನೆರಳೂ ಇರುವುದಿಲ್ಲ.
23 ೨೩ ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ, ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.
ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ. ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.
24 ೨೪ ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು, ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.
ಯಾವ ವಿಚಾರಣೆ ಇಲ್ಲದೆಯೇ ದೇವರು ಪರಾಕ್ರಮಿಗಳನ್ನು ದಂಡಿಸಬಹುದು. ದೇವರು ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯ.
25 ೨೫ ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.
ಏಕೆಂದರೆ, ದೇವರು ಅಂಥವರ ದುಷ್ಕಾರ್ಯಗಳನ್ನು ತಿಳಿದಿದ್ದಾರೆ. ರಾತ್ರಿಯಲ್ಲಿ ಅವರನ್ನು ಕೆಡವಿ ದಂಡನೆಗೆ ಗುರಿಮಾಡುವರು.
26 ೨೬ ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.
ಅವರ ದುಷ್ಟತನಕ್ಕಾಗಿ ದೇವರು ಎಲ್ಲರು ನೋಡುವಂತೆ ಅವರನ್ನು ಶಿಕ್ಷಿಸುವರು.
27 ೨೭ ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.
ಅವರು ದೇವರನ್ನು ಹಿಂಬಾಲಿಸದೆ, ದೇವರ ಮಾರ್ಗಗಳನ್ನೆಲ್ಲಾ ಅಲಕ್ಷ್ಯ ಮಾಡಿದ್ದರಷ್ಟೆ.
28 ೨೮ ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.
ಹೀಗೆ ದುಷ್ಟರು ಬಡವರ ಕೂಗನ್ನು ದೇವರ ಬಳಿಗೆ ಬರುವಂತೆ ಮಾಡಿದ್ದರು ದೇವರು ದಿಕ್ಕಿಲ್ಲದವರ ಕೂಗನ್ನು ಆಲೈಸಿದ್ದರು.
29 ೨೯ ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.
ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು? ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ, ದೇವದರ್ಶನ ಪಡೆಯಬಲ್ಲವರು ಯಾರು?
30 ೩೦ ಭ್ರಷ್ಟನು ಆಳಬಾರದು, ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.
ಭಕ್ತಿಹೀನನು ಆಳಬಾರದು, ಯಾರೂ ಜನರಿಗೆ ಉರುಲಾಗಬಾರದು, ಎಂಬುದೇ ಇದರಲ್ಲಿ ದೇವರ ಉದ್ದೇಶ.”
31 ೩೧ ಮನುಷ್ಯನು ದೇವರನ್ನು ಕುರಿತು, ‘ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,
“ಒಂದು ವೇಳೆ, ಯಾರಾದರೂ ದೇವರಿಗೆ, ‘ನಾನು ಪಾಪಮಾಡಿದ್ದೇನೆ, ಆದರೆ ಇನ್ನು ಮುಂದೆ ಪಾಪಮಾಡುವುದಿಲ್ಲ.
32 ೩೨ ನಾನು ಕಾಣದಿರುವುದನ್ನು ನೀನೇ ಸೂಚಿಸು; ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ ಇನ್ನು ಮೇಲೆ ಮಾಡುವುದಿಲ್ಲ’ ಎಂದು ಹೇಳುವುದಕ್ಕಾದೀತೇ?
ದೇವರೇ, ನಾನು ಕಾಣದಿರುವುದನ್ನು ನನಗೆ ಬೋಧಿಸಿರಿ. ನಾನು ತಪ್ಪುಮಾಡಿದ್ದರೂ, ಇನ್ನು ಮೇಲೆ ಅದನ್ನು ಮಾಡುವುದಿಲ್ಲ,’ ಎಂದು ಹೇಳಿದ್ದರೆ ಸರಿ.
33 ೩೩ ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.
ಆದರೆ ನೀನು ಪಶ್ಚಾತ್ತಾಪಪಡಲು ನಿರಾಕರಿಸಿದಾಗ, ದೇವರು ನಿನಗೆ ತಕ್ಕ ದಂಡನೆಯನ್ನು ಕೊಡಬಾರದೆ? ಇದನ್ನು ನೀನೇ ತೀರ್ಮಾನಿಸು, ನಾನು ತೀರ್ಮಾನಿಸುವುದಿಲ್ಲ; ಆದ್ದರಿಂದ ನಿನಗೆ ತಿಳಿದದ್ದನ್ನು ನನಗೆ ತಿಳಿಸು.”
34 ೩೪ ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,
“ತಿಳುವಳಿಕೆಯುಳ್ಳವರೂ, ನನ್ನನ್ನು ಆಲಿಸಿದ ಜ್ಞಾನಿಗಳೂ ನಿನ್ನ ವಿಷಯವಾಗಿ:
35 ೩೫ ‘ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ, ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.’
‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡಿದ್ದಾನೆ; ಅವನ ಮಾತುಗಳು ಬುದ್ಧಿಯಿಲ್ಲದ ಮಾತುಗಳು.
36 ೩೬ ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.
ಯೋಬನನ್ನು ಕಡೆಯವರೆಗೆ ಪರೀಕ್ಷಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಅವನು ದುಷ್ಟರ ಹಾಗೆ ಉತ್ತರ ಕೊಡುತ್ತಾನೆ.
37 ೩೭ ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.
ಯೋಬನು ತನ್ನ ಪಾಪಕ್ಕೆ ದೇವರಿಗೆ ಎದುರಾಗಿ ಪ್ರತಿಭಟನೆಯನ್ನು ಸಹ ಕೂಡಿಸುತ್ತಿದ್ದಾನೆ; ಅಪಹಾಸ್ಯದಿಂದ ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರುದ್ಧ ಹೆಚ್ಚು ಮಾತುಗಳನ್ನಾಡುತ್ತಾನೆ,’ ಎಂದು ನನಗೆ ಹೇಳುತ್ತಿದ್ದಾರೆ.”

< ಯೋಬನು 34 >