< ಯೋಬನು 24 >

1 “ಸರ್ವಶಕ್ತನಾದ ದೇವರು ಏಕೆ ದುಷ್ಟರಿಗೆ ದಂಡನೆಯ ಕಾಲಗಳನ್ನು ನೇಮಿಸಿ ಇಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ನ್ಯಾಯತೀರ್ಪಿನ ದಿನಗಳು ಏಕೆ ಗೋಚರವಾಗುವುದಿಲ್ಲ?
“ಸರ್ವಶಕ್ತರು ತೀರ್ಪಿನ ಕಾಲವನ್ನು ನಿಗದಿಪಡಿಸದೆ ಇರುವುದೇಕೆ? ದೇವರನ್ನು ತಿಳಿದವರು ದೇವರ ದಿನಗಳಿಗೋಸ್ಕರ ವ್ಯರ್ಥವಾಗಿ ನೋಡುತ್ತಿರುವುದು ಏಕೆ?
2 ಮೇರೆಗಳನ್ನು ದಾಟಿ ಆಶ್ರಯಿಸಿಕೊಳ್ಳುವವರು ಇದ್ದಾರೆ. ದನಕುರಿಗಳನ್ನು ಅಪಹರಿಸಿ ಸಾಕಿಕೊಳ್ಳುವವರಿದ್ದಾರೆ.
ಕೆಲವರು ಗಡಿಗಳ ಕಲ್ಲುಗಳನ್ನು ಬದಲಿಸುತ್ತಾರೆ, ಕದ್ದ ಮಂದೆಗಳನ್ನು ತೆಗೆದುಕೊಂಡು ಸಾಕಿಕೊಳ್ಳುತ್ತಾರೆ.
3 ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುತ್ತಾರೆ, ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
ದಿಕ್ಕಿಲ್ಲದವರ ಕತ್ತೆಗಳನ್ನು ಹೊಡೆದುಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
4 ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ, ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.
ದರಿದ್ರನನ್ನು ದಾರಿಯಿಂದ ತೊಲಗಿಸುತ್ತಾರೆ; ದೇಶದ ಬಡವರು ಕೂಡ ಅವರಿಂದ ಓಡಿ ಅಡಗಿಕೊಳ್ಳುತ್ತಾರೆ.
5 ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ, ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.
ಕಾಡುಕತ್ತೆಗಳ ಹಾಗೆ ಬಡವರು ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ; ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.
6 ತಮ್ಮ ಹೊಟ್ಟೆಗಾಗಿ ಬಯಲಿನಲ್ಲಿ ಸೊಪ್ಪನ್ನು ಕೊಯ್ದುಕೊಳ್ಳುವರು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುವರು.
ಬಡವರು ಹೊಲಗಳಲ್ಲಿ ಮೇವನ್ನು ಕೊಯ್ದು, ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುತ್ತಾರೆ.
7 ಹೊದಿಕೆ ಇಲ್ಲದೆ ಬೆತ್ತಲೆಯಾಗಿ ರಾತ್ರಿಯನ್ನು ಕಳೆಯುವರು, ಚಳಿಗಾಲದಲ್ಲಿಯೂ ಅವರಿಗೆ ಬಟ್ಟೆಯಿಲ್ಲ.
ಸಾಕಷ್ಟು ಬಟ್ಟೆ ಇಲ್ಲದೆ ಅವರು ರಾತ್ರಿಯನ್ನು ಕಳೆಯುತ್ತಾರೆ; ಚಳಿಯಲ್ಲಿ ಅವರಿಗೆ ಹೊದ್ದುಕೊಳ್ಳುವುದಕ್ಕೆ ಇಲ್ಲ.
8 ಮಲೆನಾಡಿನ ದೊಡ್ಡ ಮಳೆಯಿಂದ ನೆನೆದುಹೋಗಿ, ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುವರು.
ಬೆಟ್ಟಗಳ ಮಳೆಯಿಂದ ನೆನೆದುಹೋಗುತ್ತಾರೆ; ಬಂಡೆಗಳಲ್ಲಿ ಆಶ್ರಯವನ್ನು ಪಡೆಯುತ್ತಾರೆ.
9 ತಂದೆಯಿಲ್ಲದ ಮಗುವನ್ನು ತಾಯಿಯ ಮೊಲೆಯಿಂದ ಕಿತ್ತು, ಬಡವರಿಂದ ಒತ್ತೆ ತೆಗೆದುಕೊಳ್ಳುವವರಿದ್ದಾರೆ.
ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ; ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
10 ೧೦ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು; ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.
ಬಡವರೋ ಸಾಕಷ್ಟು ಬಟ್ಟೆಯಿಲ್ಲದವರಾಗಿ ಅಲೆಯುತ್ತಾರೆ; ಹಸಿದವರಾಗಿ ಸಿವುಡುಗಳನ್ನು ಹೊರುತ್ತಾರೆ.
11 ೧೧ ಯಜಮಾನರ ಪೌಳಿಗೋಡೆಗಳೊಳಗೇ ಇದ್ದುಕೊಂಡು ಎಣ್ಣೆಗಾಣವನ್ನು ತಿರುಗಿಸುವರು; ದಾಹಗೊಂಡೇ ಅವರ ತೊಟ್ಟಿಗಳಲ್ಲಿ ದ್ರಾಕ್ಷಿಯನ್ನು ತುಳಿಯುವರು.
ಯಜಮಾನರ ಮಾಳಿಗೆಗಳ ಮೇಲೆ ಓಲಿವ್ ಎಣ್ಣೆಗಾಣಗಳನ್ನು ಆಡಿಸುತ್ತಾರೆ; ದಾಹಗೊಂಡೇ ದ್ರಾಕ್ಷೆಯ ತೊಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ.
12 ೧೨ ತುಂಬಿದ ಪಟ್ಟಣದೊಳಗಿಂದ ಜನರು ನರಳುವರು, ಗಾಯಪಟ್ಟವರು ಮೊರೆಯಿಡುವರು, ಆದರೆ ದೇವರಾದರೋ ಅವರ ಮೊರೆಗೆ ಕಿವಿಗೊಡನು.
ಪಟ್ಟಣದೊಳಗಿಂದ ಮನುಷ್ಯರ ನರಳುವಿಕೆಯು ಜೋರಾಗುತ್ತದೆ; ಗಾಯಪಟ್ಟವರ ಪ್ರಾಣವು ಸಹಾಯಕ್ಕಾಗಿ ಕೂಗುತ್ತದೆ; ಆದರೂ ದೇವರು ಯಾರ ಮೇಲೆಯೂ ತಪ್ಪು ಹೊರಿಸುವುದಿಲ್ಲ.
13 ೧೩ ಬೆಳಕಿನ ವಿರುದ್ಧ ತಿರುಗಿ ಬಿದ್ದವರು ಇದ್ದಾರೆ; ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ, ಅದರ ಹಾದಿಗಳಲ್ಲಿ ಇರುವುದಿಲ್ಲ.
“ಬೆಳಕಿನ ವಿರೋಧವಾಗಿ ತಿರುಗಿಬಿದ್ದವರು ಇದ್ದಾರೆ; ಅಂಥವರು ಬೆಳಕಿನ ಮಾರ್ಗಗಳನ್ನು ಅರಿಯದವರು; ಬೆಳಕಿನ ದಾರಿಗಳಲ್ಲಿ ವಾಸವಾಗಿರದವರೂ ಆಗಿದ್ದಾರೆ.
14 ೧೪ ಕೊಲೆಪಾತಕನು ಮುಂಜಾನೆ ಎದ್ದು, ದಿಕ್ಕಿಲ್ಲದ ಬಡವರನ್ನು ಕೊಂದು, ರಾತ್ರಿಯಲ್ಲಿ ಕಳ್ಳನಂತಿರುವನು.
ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.
15 ೧೫ ಜಾರನು ತಾನು, ಯಾರ ಕಣ್ಣಿಗೂ ಬೀಳಬಾರದು ಎಂದು, ಸಂಜೆಯನ್ನು ಎದುರು ನೋಡುತ್ತಿದ್ದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
ವ್ಯಭಿಚಾರಿಯು ಸಂಜೆಯನ್ನು ಎದುರುನೋಡುತ್ತಿರುವನು. ತರುವಾಯ, ‘ಯಾವ ಕಣ್ಣೂ ನನ್ನನ್ನು ನೋಡುವುದಿಲ್ಲ,’ ಎಂದು ಹೇಳುತ್ತಾನೆ; ಯಾರು ತನ್ನನ್ನು ಕಾಣದಂತೆ ಮುಖವನ್ನು ಮುಚ್ಚಿಕೊಳ್ಳುತ್ತಾನೆ.
16 ೧೬ ಅವರು ಕತ್ತಲಲ್ಲಿ ಕನ್ನಕೊರೆದು ಮನೆಗಳೊಳಗೆ ನುಗ್ಗಿ; ಹಗಲಿನಲ್ಲಿ ಅಡಗಿಕೊಂಡಿದ್ದು; ಬೆಳಕನ್ನು ತಿಳಿಯದೆ ಇರುವರು.
ಕಳ್ಳರು ಕತ್ತಲಲ್ಲಿ ಕನ್ನ ಕೊರೆದು ಮನೆಗಳೊಳಗೆ ನುಗ್ಗುತ್ತಾರೆ. ಹಗಲಿನಲ್ಲಿ ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಾರೆ; ಅವರು ಬೆಳಕಿನಲ್ಲಿ ಏನೂ ಮಾಡಲು ಬಯಸುವುದಿಲ್ಲ.
17 ೧೭ ಅವರೆಲ್ಲರಿಗೂ ಬೆಳಕು ಕಾರ್ಗತ್ತಲಿನಂತಿರುವುದು, ಕಾರ್ಗತ್ತಲಿನ ಅಪಾಯಗಳನ್ನು ಅವರು ಬಲ್ಲರಷ್ಟೆ.
ಅವರೆಲ್ಲರಿಗೂ ಕಾರ್ಗತ್ತಲು ಬೆಳಕಿನಂತಿರುವುದು; ಕತ್ತಲೆಯ ಭೀತಿಯೇ ಅವರಿಗೆ ಸ್ನೇಹಿತರು.
18 ೧೮ (ನೀವು ಹೇಳುವುದೇನೆಂದರೆ) ದುಷ್ಟನು ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುವನು, ಭೂಲೋಕದ ಅವನ ಆಸ್ತಿಯು ಶಾಪಗ್ರಸ್ತವಾಗಿರುವುದು. ದ್ರಾಕ್ಷಿತೋಟಗಳ ಕಡೆಗೆ ತಿರುಗಲಾರನು.
“ಆದರೂ ಅವರು ನೀರಿನ ಮೇಲಿನ ಗುಳ್ಳೆಯಂತೆ ಇದ್ದಾರೆ. ಅವರ ಜಮೀನು ಶಾಪಕ್ಕೆ ಒಳಪಟ್ಟಿರುವುದರಿಂದ, ಯಾರೂ ಅವರ ದ್ರಾಕ್ಷೆಯ ತೋಟಕ್ಕೆ ಹೋಗುವುದಿಲ್ಲ.
19 ೧೯ ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ, ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು. (Sheol h7585)
ಬರಗಾಲದ ಬಿಸಿಲು ಹಿಮದ ನೀರನ್ನು ಹೀರಿಕೊಳ್ಳುವಂತೆ, ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ. (Sheol h7585)
20 ೨೦ ಹೆತ್ತ ಹೊಟ್ಟೆಯೇ ಅವನನ್ನು ಮರೆತುಬಿಡುವುದು; ಹುಳವು ಅವನ ಹೆಣವನ್ನು ಸವಿದು ತಿನ್ನುವುದು; ಇನ್ನು ಮೇಲೆ ಯಾರಿಗೂ ಅವನ ನೆನಪಿರದು; ಅನ್ಯಾಯವು ಮರದ ಹಾಗೆ ಮುರಿಯಲ್ಪಡುವುದು.
ಹೆತ್ತ ಕರುಳು ಅಂಥವರನ್ನು ಮರೆತು ಬಿಡುವುದು; ಹುಳವು ಅಂಥವರ ಹೆಣವನ್ನು ರುಚಿಯಿಂದ ತಿಂದುಬಿಡುವುದು; ಇನ್ನು ಅವರ ನೆನಪು ಇರುವುದಿಲ್ಲ; ಮರದ ಹಾಗೆ ದುಷ್ಟರು ಮುರಿದುಹೋಗುವರು.
21 ೨೧ ಅವನು ಮಕ್ಕಳಿಲ್ಲದ ಬಂಜೆಯರನ್ನು ನುಂಗಿಬಿಟ್ಟು, ವಿಧವೆಯರನ್ನು ಉದ್ಧರಿಸದೆ ಹೋದನಷ್ಟೆ (ಎಂಬುದೇ).
ದುಷ್ಟರು ಆಸ್ತಿಯ ವಿಷಯದಲ್ಲಿ ಬಂಜೆಯರನ್ನು ಮೋಸಮಾಡುತ್ತಾನೆ; ದುಷ್ಟರು ವಿಧವೆಯರಿಗೆ ದಯೆ ತೋರಿಸುವುದಿಲ್ಲ.
22 ೨೨ ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ, ಅವರು ತಮ್ಮ ಜೀವವು ಇನ್ನು ಉಳಿಯುವುದಿಲ್ಲವೆಂದು ನಂಬಿದ್ದರೂ ಉದ್ಧಾರವಾಗುವರು.
ಆದರೆ ದೇವರು ತಮ್ಮ ಶಕ್ತಿಯಿಂದ ಬಲಿಷ್ಠರನ್ನು ಎಳೆದೊಯ್ಯುತ್ತಾರೆ; ಬಲಿಷ್ಠರು ಉದ್ಧಾರವಾಗಿದ್ದರೂ ಅವರಿಗೆ ಜೀವನದ ಭರವಸೆ ಇಲ್ಲ.
23 ೨೩ ದೇವರು ಅವರಿಗೆ ಅಭಯವನ್ನು ಕೊಟ್ಟಿದ್ದರಿಂದ ಅವರು ಅದನ್ನು ಆಧಾರಮಾಡಿಕೊಳ್ಳುವರು; ಆತನ ಕಟಾಕ್ಷವು ಅವರ ಮಾರ್ಗಗಳ ಮೇಲಿರುವುದು.
ಭದ್ರತೆಯಲ್ಲಿ ವಿಶ್ರಾಂತಿ ಪಡೆಯಲು ದೇವರು ಅವರಿಗೆ ಅವಕಾಶ ನೀಡಬಹುದು; ಆದರೆ ದೇವರ ಕಣ್ಣುಗಳು ಅವರ ಮಾರ್ಗಗಳ ಮೇಲಿರುವುದು.
24 ೨೪ ಅವರು ಉನ್ನತಿಗೆ ಬರುವರು; ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ? ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.
ಅವರು ಸ್ವಲ್ಪಕಾಲ ಉನ್ನತವಾಗಿದ್ದು ನಂತರ ಇಲ್ಲದೆ ಹೋಗುತ್ತಾರೆ; ಅವರು ಎಲ್ಲಾ ಮನುಷ್ಯರಂತೆ ಕೊಯ್ದ ತೆನೆಯ ಹಾಗೆ ಕೆಳಗೆ ಬಿದ್ದು ಕಾಳಿನಂತೆ ಬೇರ್ಪಡುತ್ತಾರೆ.
25 ೨೫ ಹೀಗಲ್ಲವೆಂದು ನೀವು ನಂಬಿದರೆ ನಾನು ಸುಳ್ಳುಗಾರನೆಂದೂ ನನ್ನ ಮಾತುಗಳು ನಿರರ್ಥಕವೆಂದೂ; ನಿಮ್ಮಲ್ಲಿ ಯಾರು ಸ್ಥಾಪಿಸಬಲ್ಲರು?”
“ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು? ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”

< ಯೋಬನು 24 >