< ಯೆಶಾಯನು 1 >

1 ಯೆಹೂದ ದೇಶದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ.
ಯೆಹೂದ ದೇಶದ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದರ್ಶನವು.
2 ಆಕಾಶಮಂಡಲವೇ, ಆಲಿಸು! ಭೂಮಂಡಲವೇ ಕೇಳು! ಯೆಹೋವನು ಮಾತನಾಡುತ್ತಿದ್ದಾನೆ. ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹ ಮಾಡಿದ್ದಾರೆ.
ಆಕಾಶಗಳೇ, ಕೇಳಿರಿ. ಭೂಮಿಯೇ, ಕಿವಿಗೊಡು. ಏಕೆಂದರೆ ಯೆಹೋವ ದೇವರು ಮಾತನಾಡುತ್ತಿದ್ದಾರೆ: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
3 ಎತ್ತು ಯಜಮಾನನನ್ನು, ಕತ್ತೆ ಒಡೆಯನ ಕೊಟ್ಟಿಗೆಯನ್ನು ತಿಳಿದಿರುವುದು. ಆದರೆ ಇಸ್ರಾಯೇಲ್ ಜನರಿಗೋ ತಿಳಿವಳಿಕೆ ಇಲ್ಲ. ನನ್ನ ಪ್ರಜೆಯು ಆಲೋಚಿಸುವುದಿಲ್ಲ.
ಎತ್ತು ತನ್ನ ಯಜಮಾನನನ್ನು, ಕತ್ತೆಯು ತನ್ನ ಒಡೆಯನ ಕೊಟ್ಟಿಗೆಯನ್ನು ತಿಳಿದಿರುವುವು. ಆದರೆ ಇಸ್ರಾಯೇಲಿಗೆ ತಿಳಿದಿಲ್ಲ. ನನ್ನ ಜನರಿಗೂ ತಿಳಿಯುವುದಿಲ್ಲ.”
4 ಪಾಪಿಷ್ಠ ಜನಾಂಗವೇ, ಅಧರ್ಮದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಜಾತಿಯೇ, ದ್ರೋಹಿಗಳಾದ ಮಕ್ಕಳೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರು ಯೆಹೋವನನ್ನು ತೊರೆದಿದ್ದಾರೆ. ಇಸ್ರಾಯೇಲರ ಸದಮಲಸ್ವಾಮಿಯನ್ನು ಧಿಕ್ಕರಿಸಿದ್ದಾರೆ. ಆತನಿಗೆ ಬೆನ್ನು ಮಾಡಿ ಬೇರೆಯಾಗಿದ್ದಾರೆ.
ಅಯ್ಯೋ ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ! ದುಷ್ಟ ಸಂತತಿಯೇ, ಭ್ರಷ್ಟರಾದ ಮಕ್ಕಳೇ! ಯೆಹೋವ ದೇವರನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧರನ್ನು ತಿರಸ್ಕರಿಸಿದ್ದಾರೆ ಅವರಿಂದ ದೂರವಾಗಿದ್ದಾರೆ.
5 ಏಕೆ ದ್ರೋಹವನ್ನು ಹೆಚ್ಚಿಸಿ, ಪೆಟ್ಟಿಗೆ ಗುರಿಯಾಗುತ್ತೀರಿ? ತಲೆಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಏಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ? ತಲೆಯೆಲ್ಲಾ ಗಾಯವಾಗಿದೆ, ಹೃದಯವೆಲ್ಲಾ ಬಾಧಿತವಾಗಿದೆ.
6 ಅಂಗಾಲಿನಿಂದ ನಡುನೆತ್ತಿಯ ತನಕ ಪೆಟ್ಟು, ಬಾಸುಂಡೆ, ವಾಸಿಯಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ. ಅವುಗಳನ್ನು ತೊಳೆಯಲಿಲ್ಲ, ಕಟ್ಟಲಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಲಿಲ್ಲ.
ಅಂಗಾಲಿನಿಂದ ನಡುನೆತ್ತಿಯವರೆಗೂ ಬಾಸುಂಡೆ, ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ. ಅವುಗಳನ್ನು ತೊಳೆಯಲಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಿಲ್ಲ.
7 ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಸುಟ್ಟುಹೋಗಿವೆ. ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಅನ್ಯಜನರಿಂದ ಹಾಳಾಯಿತು.
ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ. ನಿಮ್ಮ ಹೊಲಗಳನ್ನು ಪರರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಇತರ ಜನರಿಂದ ಕೆಡವಿಬಿದ್ದು ಹಾಳಾಗಿದೆ.
8 ಯೆರೂಸಲೇಮಿನ ನಗರವೊಂದೇ ಉಳಿದು, ದ್ರಾಕ್ಷಿತೋಟದ ಮನೆಯಂತೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಲ್ಪಟ್ಟ ಪಟ್ಟಣದ ಹಾಗೆಯೂ ಇದೆ.
ಚೀಯೋನ್ ಪುತ್ರಿಯು ದ್ರಾಕ್ಷಿ ತೋಟದಲ್ಲಿರುವ ಮನೆಯ ಹಾಗೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಿರುವ ಪಟ್ಟಣದ ಹಾಗೆಯೂ ಇದೆ.
9 ಸೇನಾಧೀಶ್ವರನಾದ ಯೆಹೋವನು ನಮಗೆ ಸ್ವಲ್ಪ ಜನರನ್ನು ಉಳಿಸದೇ ಹೋಗಿದ್ದರೆ, ಸೊದೋಮಿನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು.
ಸೇನಾಧೀಶ್ವರ ಯೆಹೋವ ದೇವರು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
10 ೧೦ ಸೊದೋಮಿನ ಅಧಿಪತಿಗಳೇ, ಯೆಹೋವನ ಮಾತನ್ನು ಆಲಿಸಿರಿ. ಗೊಮೋರದ ಪ್ರಜೆಗಳೇ ನಮ್ಮ ದೇವರ ಧರ್ಮೋಪದೇಶವನ್ನು ಕೇಳಿರಿ.
ಸೊದೋಮಿನ ಅಧಿಪತಿಗಳೇ, ನೀವು ಯೆಹೋವ ದೇವರ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳೇ! ನಮ್ಮ ದೇವರ ನಿಯಮಕ್ಕೆ ಕಿವಿಗೊಡಿರಿ.
11 ೧೧ ಯೆಹೋವನು ಹೀಗೆನ್ನುತ್ತಾನೆ, “ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗ ಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು. ಹೋರಿ, ಕುರಿಗಳ, ರಕ್ತಕ್ಕೆ ನಾನು ಒಲಿಯೆನು.
“ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು?” ಎಂದು ಯೆಹೋವ ದೇವರು ನುಡಿಯುತ್ತಾರೆ. “ಟಗರುಗಳ ದಹನಬಲಿಗಳು, ಪುಷ್ಟಪಶುಗಳ ಕೊಬ್ಬು ಇದೆಲ್ಲಾ ನನಗೆ ಬೇಸರ. ಹೋರಿ, ಕುರಿ, ಹೋತಗಳ ರಕ್ತಕ್ಕೆ, ನಾನು ಸಂತೋಷಪಡುವುದಿಲ್ಲ.
12 ೧೨ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ನೀವು ಬರುತ್ತೀರಲ್ಲಾ; ನನ್ನ ಆಲಯದ ಪ್ರಾಕಾರವನ್ನು ಪ್ರವೇಶಿಸಲು ಯಾರು ನಿಮ್ಮನ್ನು ಕೇಳಿಕೊಂಡರು?
ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಬರುತ್ತೀರಲ್ಲಾ, ನನ್ನ ಪ್ರಾಕಾರಗಳನ್ನು ತುಳಿಯಲು ಯಾರು ನಿಮ್ಮನ್ನು ಕೇಳಿಕೊಂಡರು.
13 ೧೩ ವ್ಯರ್ಥವಾದ ಕಾಣಿಕೆಗಳನ್ನು ಇನ್ನು ತರಬೇಡಿ; ಧೂಪವು ನನಗೆ ಅಸಹ್ಯ; ಅಮಾವಾಸ್ಯೆ, ಹುಣ್ಣಿಮೆಹಬ್ಬ, ಸಬ್ಬತ್ ದಿನ, ಕೂಟ ಪ್ರಕಟಣೆ ಇವು ಬೇಡ; ಅಧರ್ಮದಿಂದ ಕೂಡಿದ ಸಂಘವನ್ನು ನಾನು ಸಹಿಸಲಾರೆನು.
ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತರಬೇಡಿರಿ! ನಿಮ್ಮ ಧೂಪವು ನನಗೆ ಅಸಹ್ಯ. ಅಮಾವಾಸ್ಯೆಗಳು, ಸಬ್ಬತ್ ದಿನಗಳು, ಸಭೆಗಳು ಕೂಡುವುದು ಇವು ಬೇಡ. ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ಸಹಿಸಲಾರೆನು.
14 ೧೪ ನಿಮ್ಮ ಅಮಾವಾಸ್ಯೆಗಳನ್ನೂ, ಹುಣ್ಣಿಮೆಹಬ್ಬ, ಉತ್ಸವ ದಿನಗಳನ್ನೂ ದ್ವೇಷಿಸುತ್ತೇನೆ; ಇವು ನನಗೆ ಭಾರ; ಸಹಿಸಲು ಬೇಸರ.
ನಿಮ್ಮ ಅಮಾವಾಸ್ಯೆಗಳನ್ನೂ, ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ದ್ವೇಷಿಸುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ.
15 ೧೫ ನೀವು ನನ್ನ ಕಡೆಗೆ ಪ್ರಾರ್ಥಿಸಲು ಕೈಯೆತ್ತುವಾಗ, ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು. ಹೌದು, ನೀವು ಬಹಳ ಪ್ರಾರ್ಥನೆಗಳನ್ನು ಮಾಡಿದರೂ ನಾನು ಆಲಿಸುವುದಿಲ್ಲ. ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.
ನೀವು ಪ್ರಾರ್ಥಿಸಲು ನಿಮ್ಮ ಕೈಗಳನ್ನು ಚಾಚುವಾಗ, ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. “ನಿಮ್ಮ ಕೈಗಳು ರಕ್ತದಿಂದ ತೊಯ್ದಿವೆ!
16 ೧೬ ನಿಮ್ಮನ್ನು ತೊಳೆದು ಶುದ್ಧರಾಗಿ, ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿ,
“ನಿಮ್ಮನ್ನು ತೊಳೆದುಕೊಂಡು ಶುದ್ಧಮಾಡಿಕೊಳ್ಳಿರಿ. ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟಕೃತ್ಯಗಳನ್ನು ತೆಗೆದುಹಾಕಿರಿ. ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ.
17 ೧೭ ಸದಾಚಾರವನ್ನು ಅಭ್ಯಾಸ ಮಾಡಿಕೊಳ್ಳಲು ಕಲಿಯಿರಿ, ನ್ಯಾಯವನ್ನು ಅನುಸರಿಸಿ ನಡೆಯಿರಿ. ಹಿಂಸೆಗೆ ಒಳಗಾದವನಿಗೆ ಸಹಾಯಮಾಡಿರಿ. ಅನಾಥನಿಗೆ ನ್ಯಾಯತೀರಿಸಿರಿ. ವಿಧವೆಯ ಪಕ್ಷವಾಗಿ ವಾದಿಸಿರಿ.”
ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ. ನ್ಯಾಯವನ್ನು ಹುಡುಕಿರಿ. ಹಿಂಸೆಪಡುವವರನ್ನು ಉಪಚರಿಸಿರಿ. ಅನಾಥರಿಗೆ ನ್ಯಾಯತೀರಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
18 ೧೮ “ಬನ್ನಿರಿ ವಾದಿಸುವ” ಎಂದು ಯೆಹೋವನು ಅನ್ನುತ್ತಾನೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುವವು. ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.
“ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.
19 ೧೯ ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ.
ನೀವು ಒಪ್ಪಿ ವಿಧೇಯರಾದರೆ ದೇಶದ ಸತ್ಫಲವನ್ನು ಸವಿಯುವಿರಿ.
20 ೨೦ ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ” ಈ ಮಾತನ್ನು ಯೆಹೋವನೇ ನುಡಿದಿದ್ದಾನೆ.
ಆದರೆ ನೀವು ತಿರಸ್ಕರಿಸಿ ತಿರುಗಿಬಿದ್ದರೆ, ಖಡ್ಗದ ಬಾಯಿಗೆ ತುತ್ತಾಗುವಿರಿ,” ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
21 ೨೧ ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ ಈಗ ಕೊಲೆಪಾತಕರಿಗೆ ನೆಲೆಯಾಗಿದೆ.
ನಂಬಿಗಸ್ತಿಕೆಯ ಪಟ್ಟಣವು ವ್ಯಭಿಚಾರದ ಪಟ್ಟಣವಾಗಿದೆಯಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆಯಾಗಿತ್ತು. ಆದರೆ ಈಗ ಕೊಲೆಗಾರರಿಂದ ತುಂಬಿದೆ.
22 ೨೨ ನಿನ್ನ ಬೆಳ್ಳಿಯು ಅಶುದ್ಧವಾಯಿತು. ನಿನ್ನ ದ್ರಾಕ್ಷಾರಸವು ನೀರಾಯಿತು.
ನಿನ್ನ ಬೆಳ್ಳಿಯು ಕಂದಾಯಿತು. ನಿನ್ನ ದ್ರಾಕ್ಷಾರಸವು ನೀರಿನಿಂದ ಬೆರಕೆಯಾಯಿತು.
23 ೨೩ ನಿನ್ನ ಅಧಿಕಾರಿಗಳು ದ್ರೋಹಿಗಳೂ, ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಪ್ರೀತಿಸಿ, ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸುವುದಿಲ್ಲ; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.
ನಿನ್ನ ಪ್ರಭುಗಳು ಎದುರುಬೀಳುವವರೂ, ಕಳ್ಳರ ಜೊತೆಗಾರರೂ ಆಗಿದ್ದಾರೆ. ಪ್ರತಿಯೊಬ್ಬನೂ ಲಂಚ ಪ್ರಿಯನೂ, ಬಹುಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ. ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವುದಿಲ್ಲ.
24 ೨೪ ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ, “ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು.
ಆದ್ದರಿಂದ ಸರ್ವಶಕ್ತರಾದ ದೇವರೂ, ಇಸ್ರಾಯೇಲಿನ ಪರಾಕ್ರಮಿಯೂ ಆದ ಯೆಹೋವ ದೇವರು ಹೇಳುವುದೇನೆಂದರೆ, “ಆಹಾ! ನನ್ನ ವೈರಿಗಳ ಮೇಲೆ ನನ್ನ ಕೋಪವನ್ನು ಹೊರಹಾಕುತ್ತೇನೆ ಮತ್ತು ನನ್ನ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ.
25 ೨೫ ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಪುಟಕ್ಕೆ ಹಾಕಿ, ನಿನ್ನ ಹೊಲಸುತನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಬಿಡುವೆನು.
ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ, ನಿನ್ನ ಮಲಿನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಹಾಕುವೆನು.
26 ೨೬ ಪೂರ್ವದಲ್ಲಿ ನಿನಗಿದ್ದ ನ್ಯಾಯಾಧಿಪತಿಗಳನ್ನು, ಮಂತ್ರಾಲೋಚಕರನ್ನು ಪುನಃ ಒದಗಿಸಿಕೊಡುವೆನು. ಆ ಮೇಲೆ ನೀನು ಸದಾಚಾರದ ನಗರಿ ಎಂತಲೂ, ಸ್ವಾಮಿ ನಿಷ್ಠೆಯುಳ್ಳ ನಗರಿ ಎಂತಲೂ ಕರೆಯಲ್ಪಡುವಿ.”
ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ, ನಿನ್ನ ಆಲೋಚನಾಪರರನ್ನು ಪ್ರಾರಂಭದಲ್ಲಿದ್ದ ಹಾಗೆಯೂ ತಿರುಗಿ ಒದಗಿಸಿ ಕೊಡುವೆನು. ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ, ನಂಬಿಗಸ್ತಿಕೆಯ ಪಟ್ಟಣವೆಂದೂ ಎನಿಸಿಕೊಳ್ಳುವೆ.”
27 ೨೭ ಚೀಯೋನ್ ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ತಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.
ಚೀಯೋನ್ ಪಟ್ಟಣವು ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ಚಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.
28 ೨೮ ಆದರೆ ದ್ರೋಹಿಗಳೂ ಮತ್ತು ಪಾಪಿಗಳೂ ಒಟ್ಟಾಗಿ ನಾಶವಾಗುವರು. ಹೌದು, ಯೆಹೋವನನ್ನು ತೊರೆದವರು ನಾಶವಾಗುವರು.
ಆದರೆ ದ್ರೋಹಿಗಳೂ, ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಯೆಹೋವ ದೇವರನ್ನು ತೊರೆದವರು ನಿರ್ಮೂಲವಾಗುವರು.
29 ೨೯ “ನೀವು ಇಷ್ಟಪಟ್ಟ ಏಲಾ ಮರಗಳ ನಿಮಿತ್ತ ನಾಚಿಕೆಪಡುವಿರಿ. ಗೊತ್ತು ಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
“ನೀವು ಇಷ್ಟಪಟ್ಟ ಪವಿತ್ರ ಏಲಾ ಮರಗಳ ನಿಮಿತ್ತ ನಾಚಿಕೊಳ್ಳುವಿರಿ. ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
30 ೩೦ ಎಲೆ ಒಣಗಿದ ಏಲಾ ಮರದಂತೆಯೂ, ನೀರಿಲ್ಲದ ವನದ ಹಾಗೂ ಇರುವಿರಿ.
ನೀವು ಬಾಡಿದ ಎಲೆಯುಳ್ಳ ಏಲಾ ಮರದಂತೆಯೂ, ನೀರಿಲ್ಲದ ತೋಟದಂತೆಯೂ ಇರುವಿರಿ.
31 ೩೧ ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕಾರ್ಯವೇ ಕಿಡಿ, ಎರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.”
ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕೆಲಸ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವುವು.”

< ಯೆಶಾಯನು 1 >