< ಯೆಶಾಯನು 16 >

1 ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರದ ಪರ್ವತಕ್ಕೆ ಕಳುಹಿಸಿರಿ.
ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಯನ್ನು ಸೆಲ ಬಂಡೆಯಿಂದ ಮರುಭೂಮಿಯ ಕಡೆಗೆ, ಚೀಯೋನ್ ಪುತ್ರಿಯರ ಪರ್ವತಕ್ಕೆ ಕಳುಹಿಸಿರಿ.
2 ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಮೋವಾಬಿನ ಜನರು ಅಲೆಯುವ ಪಕ್ಷಿಗಳಂತೆಯೂ, ಗೂಡಿನಿಂದ ಚದುರಿರುವ ಮರಿಗಳಂತೆಯೂ ಆಗುವರು.
ಗೂಡಿನಿಂದ ಹೊರಗೆ ಬಂದ ಹಕ್ಕಿಗಳ ಮರಿಗಳಂತೆ ಅಲೆದಾಡುವ ಹಾಗೆ, ಮೋವಾಬಿನ ಪುತ್ರಿಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.
3 ಆಲೋಚನೆ ಹೇಳಿರಿ, ತೀರ್ಮಾನಿಸಿರಿ; ನಡು ಮಧ್ಯಾಹ್ನದಲ್ಲಿ ನಿಮ್ಮ ನೆರಳು ರಾತ್ರಿಯ ಕತ್ತಲಿನಂತೆ ದಟ್ಟವಾದ ನೆರಳನ್ನು ಕೊಡಲಿ. ನಿಮ್ಮಲ್ಲಿರುವ ದೀನದಲಿತರನ್ನು ಸಂರಕ್ಷಿಸು, ತಪ್ಪಿಸಿಕೊಂಡು ಹೋಗುವ ಜನರ ವಿಷಯವನ್ನು ಬಯಲುಮಾಡಬೇಡಿ.
ಆಲೋಚಿಸಿ, ತೀರ್ಮಾನಿಸಿರಿ. ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳನ್ನು ರಾತ್ರಿಯಂತೆ ಮಾಡಿರಿ. ವಲಸಿಗರನ್ನು ಅಡಗಿಸಿರಿ. ಅಲೆಯುವವರನ್ನು ಬಯಲಿಗೆ ತರಬೇಡ.
4 ನಿಮ್ಮ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ; ಮೋವಾಬ್ಯರು ಬಲತ್ಕಾರಿಗಳಿಗೆ ವಶವಾಗದ ಹಾಗೆ ಆಶ್ರಯವಾಗಿರಿ. ಹಿಂಸಿಸುವವರು ನಿಮ್ಮ ದೇಶದಿಂದ ನಿರ್ಮುಲವಾಗುವರು, ನಾಶನವು ನಿಂತುಹೋಗುವುದು. ಪೀಡಿಸುವವರು ನಿಮ್ಮ ದೇಶದಿಂದ ನಿರ್ಮೂಲರಾಗುವರು.
ಮೋವಾಬ್ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ. ವಿನಾಶಕರಿಗೆ ವಶವಾಗದಂತೆ ಅವರಿಗೆ ಆಶ್ರಯ ನೀಡಿರಿ. ದಬ್ಬಾಳಿಕೆ ಮುಗಿಯುತ್ತಾ ಬಂತು. ಸೂರೆಮಾಡುವುದು ನಿಲ್ಲುವುದು, ಪೀಡಿಸುವವರು ದೇಶದಿಂದ ಅಳಿದುಹೋಗುವರು.
5 ಇದಲ್ಲದೆ ಸಿಂಹಾಸನವು ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ನೀತಿನ್ಯಾಯದಿಂದ ಕುಳಿತುಕೊಳ್ಳುವನು.
ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು.
6 ಮೋವಾಬ್ಯರ ಅಹಂಕಾರವನ್ನು, ಗರ್ವವನ್ನು, ಕೊಚ್ಚಿಕೊಳ್ಳುವಿಕೆಯನ್ನು, ಕೋಪವನ್ನು ನಾವು ಕೇಳಿದ್ದೇವೆ. ಅವರು ಕೊಚ್ಚಿಕೊಳ್ಳುವುದೆಲ್ಲಾ ಬರೀ ವ್ಯರ್ಥವೇ.
ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ. ಆಕೆಗೆ ಬಹಳ ಗರ್ವ. ಆಕೆಯ ಅಹಂಕಾರವು, ಆಕೆಯ ಗರ್ವವು ಮತ್ತು ಆಕೆಗೆ ಕೋಪವು ಸಹ ಉಂಟು. ಆದರೆ ಆಕೆಯ ಕೊಚ್ಚಿಕೊಳ್ಳುವಿಕೆ ಬರಿದಾದದ್ದು.
7 ಆದಕಾರಣ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವುದು. ಪ್ರತಿಯೊಬ್ಬನೂ ಪ್ರಲಾಪಿಸುವನು. ನೀವು ಕೀರ್ ಹರೆಷೆಥಿನ ಜನರ ದೀಪದ್ರಾಕ್ಷೆಯ ಕಡುಬು ಹಾಳಾಯಿತಲ್ಲಾ ಎಂದು ನರಳುವಿರಿ.
ಆದ್ದರಿಂದ ಮೋವಾಬಿನ ನಿಮಿತ್ತ ಮೋವಾಬ್ಯರು ಗೋಳಾಡುವರು, ಒಟ್ಟಾಗಿ ಗೋಳಾಡುವರು. ಏಕೆಂದರೆ ಕೀರ್ ಹರೆಷೆಥಿನ ದ್ರಾಕ್ಷಿಯ ಕಡುಬುಗಳಿಗೋಸ್ಕರ ನೀವು ದುಃಖಿಸುವಿರಿ. ನಿಜವಾಗಿಯೂ ಅವರು ನೊಂದು ಹೋಗಿದ್ದಾರೆ.
8 ಹೆಷ್ಬೋನಿನ ಭೂಮಿಯು, ಸಿಬ್ಮದ ದ್ರಾಕ್ಷಾಲತೆಯು ಒಣಗಿ ಹೋಗಿದೆ. ಯಜ್ಜೇರಿನವರೆಗೆ ವ್ಯಾಪಿಸಿ ಅರಣ್ಯದಲ್ಲಿ ಹಬ್ಬಿ, ಸಮುದ್ರದಾಚೆಗೆ ಸೇರುವಷ್ಟು ವಿಶಾಲವಾಗಿ ತನ್ನ ಶಾಖೆಗಳನ್ನು ಹರಡಿಕೊಂಡಿದ್ದ ಮೋವಾಬಿನ ರಾಜ ದ್ರಾಕ್ಷಿಗಳನ್ನು, ಜನಾಂಗಗಳ ಒಡೆಯರನ್ನು ತುಳಿದುಬಿಟ್ಟಿದ್ದಾನೆ.
ಹೆಷ್ಬೋನ್ ಊರಿನ ಹೊಲ ಮತ್ತು ಸಿಬ್ಮ ಊರಿನ ದ್ರಾಕ್ಷಿ ಸಹ ನಿಸ್ಸಾರವಾಗಿವೆ. ಇತರ ಜನರ ಪ್ರಭುಗಳು ವಿಶಾಲವಾದ ದ್ರಾಕ್ಷಿಗಿಡಗಳನ್ನು ತುಳಿದು ಹಾಕಿದ್ದಾರೆ, ಆ ದ್ರಾಕ್ಷಿಗಿಡಗಳು ಯಜ್ಜೇರ್ ಊರಿನವರೆಗೂ ವ್ಯಾಪಿಸಿ, ಮರುಭೂಮಿಯಲ್ಲಿ ಹರಡಿತ್ತು. ಅದರ ಕೊಂಬೆಗಳು ಹಬ್ಬಿ, ಸಮುದ್ರದವರೆಗೆ ವಿಶಾಲವಾಗಿತ್ತು.
9 ಹೀಗಿರಲು ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರಿನವರೊಂದಿಗೆ ನಾನು ಅಳುವೆನು. ಹೆಷ್ಬೋನೇ, ಎಲ್ಲಾಲೇ ನನ್ನ ಕಣ್ಣೀರಿನಿಂದ ನಿಮ್ಮನ್ನು ತೋಯಿಸುವೆನು. ನಿಮ್ಮ ಹಣ್ಣಿನ ಮೇಲೆಯೂ, ನಿಮ್ಮ ಬೆಳೆಯ ಮೇಲೆಯೂ ಬಿದ್ದು ಆರ್ಭಟಿಸುವುದನ್ನು ನಿಲ್ಲಿಸಿಬಿಟ್ಟಿದ್ದೇನೆ.
ಆದಕಾರಣ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರ್ ಪಟ್ಟಣದೊಂದಿಗೆ ಅಳುವೆನು. ಓ ಹೆಷ್ಬೋನ್ ಮತ್ತು ಎಲೆಯಾಲೆ ಪಟ್ಟಣಗಳೇ, ನಿಮ್ಮನ್ನು ನನ್ನ ಕಣ್ಣೀರಿನಿಂದ ತೋಯಿಸುವೆನು! ಏಕೆಂದರೆ ಶತ್ರುಗಳು ಬಿದ್ದುಹೋದ ನಿಮ್ಮ ಬೇಸಿಗೆಯ ಫಲಗಳಿಗೂ, ಬೆಳೆಗಳಿಗೂ ಆರ್ಭಟಿಸುತ್ತಾರೆ.
10 ೧೦ ಹರ್ಷಾನಂದಗಳು ತೋಟಗಳಿಂದ ತೊಲಗಿವೆ. ದ್ರಾಕ್ಷಿಯ ತೋಟಗಳಲ್ಲಿ ಉತ್ಸಾಹದ ಧ್ವನಿಯೂ, ಉಲ್ಲಾಸದ ಆರ್ಭಟವೂ ಇರುವುದಿಲ್ಲ. ತುಳಿಯುವವರು ದ್ರಾಕ್ಷಿಯ ತೊಟ್ಟಿಗಳಲ್ಲಿ ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.
ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೊಲಗಿವೆ. ದ್ರಾಕ್ಷಿತೋಟಗಳಲ್ಲಿ ಕೀರ್ತನೆಗಳಾಗಲೀ, ಆರ್ಭಟವಾಗಲೀ ಇರುವದಿಲ್ಲ. ದ್ರಾಕ್ಷಿ ತೊಟ್ಟಿಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.
11 ೧೧ ಆದುದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವು, ಕೀರ್ ಹೆರೆಸಿನ ನಿಮಿತ್ತ ನನ್ನ ಅಂತರಂಗವು ಕಿನ್ನರಿಯಂತೆ ಅಲುಗಿ ನುಡಿಯುತ್ತದೆ.
ಆದ್ದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವೂ, ಕೀರ್ ಹೆರೆಸೆಥ್ ನಿಮಿತ್ತ ನನ್ನ ಅಂತರಂಗವೂ ಕಿನ್ನರಿಯಂತೆ ಮಿಡಿಯುತ್ತಾ ದುಃಖಿಸುತ್ತಿದೆ.
12 ೧೨ ಮೋವಾಬ್ಯರು ಸನ್ನಿಧಿಗೆ ಸೇರಿ, ದಿಣ್ಣೆಯಲ್ಲಿನ ಪೂಜೆಯಿಂದ ಬಹಳ ಆಯಾಸಗೊಂಡು ಪ್ರಾರ್ಥನೆಗಾಗಿ ತಮ್ಮ ದೇವಾಲಯಕ್ಕೆ ಬಂದರೂ ಅವರ ಪ್ರಾರ್ಥನೆಯು ಸಫಲವಾಗುವುದಿಲ್ಲ.
ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು, ಅವಳ ದೇವಾಲಯಕ್ಕೆ ಪ್ರಾರ್ಥಿಸುವುದಕ್ಕೆ ಬಂದರೂ ಅದಕ್ಕೆ ಸಫಲವಾಗದು.
13 ೧೩ ಯೆಹೋವನು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತುಗಳು ಇದೇ.
ಯೆಹೋವ ದೇವರು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ:
14 ೧೪ ಆಗ ಯೆಹೋವನು ತಿರುಗಿ ಹೇಳಿದ್ದೇನೆಂದರೆ, “ಮೂರು ವರ್ಷದೊಳಗೆ ಮೋವಾಬಿನ ವೈಭವವು ಕಣ್ಮರೆಯಾಗುವುದು. ಅವರ ದೊಡ್ಡ ಗುಂಪು ನಾಶವಾಗುವುದು ಅವರ ಜನರಲ್ಲಿ, ಉಳಿದವರು ಕೇವಲ ಚಿಕ್ಕ ಗುಂಪಾಗಿ ಬಲಹೀನರಾಗುವರು” ಎಂಬುದೇ.
ಆದರೆ ಈಗ ಯೆಹೋವ ದೇವರು ಮಾತನಾಡಿ, “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರುಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ದೊಡ್ಡ ಜನಸಂಖ್ಯೆಯಲ್ಲಿ ಅಳಿದುಉಳಿಯುವವರು ಬಲಹೀನರಾದ ಕೆಲವು ಜನರಾಗಿರುವರು,” ಎಂದು ಹೇಳಿದ್ದಾರೆ.

< ಯೆಶಾಯನು 16 >