< ಯೆಹೆಜ್ಕೇಲನು 19 >
1 ೧ “ಇಸ್ರಾಯೇಲಿನ ರಾಜರ ವಿಷಯವಾಗಿ ಈ ಶೋಕ ಗೀತೆಯನ್ನು ಹಾಡು,
“ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನರ ವಿಷಯವಾಗಿ ಈ ಪ್ರಲಾಪವನ್ನೆತ್ತಿ,
2 ೨ ‘ಆಹಾ, ನಿನ್ನ ತಾಯಿಯು ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನ್ನು, ಯುವ ಸಿಂಹಗಳ ನಡುವೆ ವಾಸಿಸಿ.
ಹೀಗೆ ಹೇಳು: “‘ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ತನ್ನ ಮರಿಗಳನ್ನು ಸಾಕಿ, ಯುವ ಸಿಂಹಗಳ ನಡುವೆ ವಾಸಿಸಿತು.
3 ೩ ಅವಳು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ, ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
ಅವಳೂ ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು, ಇದು ಪ್ರಾಯದ ಸಿಂಹವಾಯಿತು. ಇದು ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.
4 ೪ ಜನಾಂಗಗಳು ಈ ವಾರ್ತೆಯನ್ನು ಕೇಳಿ, ಅದಕ್ಕೆ ಗುಂಡಿ ತೋಡಲು ಅದು ಅಲ್ಲಿ ಸಿಕ್ಕಿಬಿದ್ದಿತು; ಅದನ್ನು ಸರಪಣಿಗಳಿಂದ ಬಿಗಿದು ಐಗುಪ್ತ ದೇಶಕ್ಕೆ ಒಯ್ದರು.
ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು, ಅವರ ಗುಂಡಿಯಲ್ಲಿ ಇದನ್ನು ಹಿಡಿದುಕೊಂಡರು. ಸಂಕೋಲೆಗಳಿಂದ ಬಂಧಿಸಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
5 ೫ ಆ ಸಿಂಹಿಣಿಯು ತಾನು ಕಾದುಕೊಂಡಿದ್ದರೂ, ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ, ಪ್ರಾಯಕ್ಕೆ ತಂದಳು.
“‘ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕಳೆದುಕೊಂಡೆನೆಂದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು, ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.
6 ೬ ಅದು ಪ್ರಾಯದ ಸಿಂಹವಾಗಿ, ಸಿಂಹಗಳ ನಡುವೆ ತಿರುಗುತ್ತಾ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
ಅದೂ ಸಿಂಹಗಳ ನಡುವೆ ತಿರುಗಾಡಿ, ಪ್ರಾಯದ ಸಿಂಹವಾಗಿ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಿಬಿಟ್ಟಿತು.
7 ೭ ಅದು ಪಟ್ಟಣಗಳನ್ನು ಹಾಳುಮಾಡಿ, ಬಹಳ ಮಂದಿ ವಿಧವೆಯರಾದವರನ್ನು ಕೆಡಿಸಿತು, ಅದರ ಗರ್ಜನೆಯ ಶಬ್ದಕ್ಕೆ ದೇಶವು ಮತ್ತು ಅದರಲ್ಲಿದ್ದದ್ದೆಲ್ಲವೂ ಕ್ಷೀಣವಾದವು.
ಅವರ ಅರಮನೆಗಳನ್ನು ಹಾಳುಮಾಡಿತು, ಅವರ ನಗರಗಳನ್ನೂ ನಾಶಮಾಡಿತು, ಅದರ ಘರ್ಜನೆಯ ಶಬ್ದದಿಂದಾಗಿ ದೇಶವೂ, ಅದರಲ್ಲಿದ್ದ ಎಲ್ಲರೂ ದಂಗಾದವು.
8 ೮ ಆಗ ಜನಾಂಗಗಳು ಸುತ್ತಲಿನ ರಾಷ್ಟ್ರಗಳಿಂದ ಕೂಡಿ ಬಂದು, ಅದಕ್ಕೆ ವಿರುದ್ಧವಾಗಿ ನಿಂತು, ಬಲೆಯೊಡ್ಡಿ ಗುಂಡಿ ತೋಡಲು, ಅದು ಅಲ್ಲಿ ಸಿಕ್ಕಿಬಿದ್ದಿತು.
ಆಗ ಜನಾಂಗಗಳು ಸುತ್ತಲಿನ ಪ್ರಾಂತಗಳೊಳಗಿಂದ ಕೂಡಿಬಂದು, ಅದಕ್ಕೆ ವಿರೋಧವಾಗಿ ನಿಂತು, ಅದರ ಮೇಲೆ ಬಲೆಯನ್ನೊಡ್ಡಿದರು, ಆಗ ಅದು ಅವರ ಗುಂಡಿಯಲ್ಲಿ ಸಿಕ್ಕಿಬಿದ್ದಿತು.
9 ೯ ಅದನ್ನು ಸರಪಣಿಗಳಿಂದ ಬಿಗಿದು, ಪಂಜರದಲ್ಲಿ ಹಾಕಿ, ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿ ಬಿಟ್ಟವು.
ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಪಂಜರದಲ್ಲಿ ಹಾಕಿ, ಬಾಬಿಲೋನಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾಯೇಲಿನ ಪರ್ವತಗಳ ಮೇಲೆ ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿದರು.
10 ೧೦ “‘ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ನೀರಾವರಿಯಿಂದ ಫಲವತ್ತಾಗಿಯೂ, ಪೊದೆಯಾಗಿಯೂ ಬೆಳೆದಿತ್ತು.
“‘ನಿನ್ನ ತಾಯಿ ನೀರಿನ ಬಳಿಯಲ್ಲಿ ನೆಟ್ಟ ದ್ರಾಕ್ಷಿ ಗಿಡದ ಹಾಗೆ ಇದ್ದಾಳೆ. ಅದು ಸಮೃದ್ಧಿಯಾದ ನೀರಾವರಿಯಿಂದ ಫಲವುಳ್ಳದ್ದಾಗಿಯೂ ಇದೆ.
11 ೧೧ ಅದರಲ್ಲಿ ಆಳುವವರ ರಾಜದಂಡಗಳಿಗೆ ಯೋಗ್ಯವಾದ ಗಟ್ಟಿಕೊಂಬೆಗಳಿದ್ದವು, ಅವುಗಳ ಎತ್ತರವು ಉಳಿದ ರೆಂಬೆಗಳಿಗಿಂತ ಹೆಚ್ಚಾಗಿತ್ತು, ಬಹಳ ರೆಂಬೆಗಳ ಮಧ್ಯದಲ್ಲಿ ಉದ್ದುದ್ದವಾಗಿ ಕಾಣಿಸಿದವು.
ಆಳುವವರ ರಾಜದಂಡಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ. ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ. ಹಾಗೆಯೇ ಅದು ಬಹು ಕೊಂಬೆಗಳ ಮಧ್ಯದಲ್ಲಿ ಎತ್ತರವಾಗಿ ಕಾಣಬರುತ್ತಿದೆ.
12 ೧೨ ಆದರೆ ಆ ಲತೆಯು ರೋಷದಲ್ಲಿ ಕೀಳಲ್ಪಟ್ಟು, ನೆಲದ ಮೇಲೆ ಬಿಸಾಡಲ್ಪಟ್ಟಿತು, ಮೂಡಣ ಗಾಳಿಯು ಅದರ ಫಲವನ್ನು ಬಾಡಿಸಿತು, ಅದರ ಗಟ್ಟಿ ಕೊಂಬೆಗಳು ಮುರಿದು ಒಣಗಿ ಹೋದವು, ಬೆಂಕಿಯು ಅವುಗಳನ್ನು ನುಂಗಿತು.
ಆದರೆ ಆ ಲತೆಯನ್ನು ರೋಷದಲ್ಲಿ ಕಿತ್ತು ನೆಲಕ್ಕೆ ಬಿಸಾಡಿದರು. ಪೂರ್ವದಿಕ್ಕಿನ ಗಾಳಿಯು ಅದರ ಫಲವನ್ನು ಒಣಗಿಸಿತು. ಅದರ ಬಲವಾದ ಬಳ್ಳಿಗಳು ಮುರಿದು ಒಣಗಿಹೋದವು. ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
13 ೧೩ ಈಗ ಅದು ನೀರಿಲ್ಲದೆ ಬೆಂಗಾಡಿನಲ್ಲಿ ನಾಟಿಕೊಂಡಿದೆ.
ಈಗ ಅದು ಮರುಭೂಮಿಯಲ್ಲಿ ಒಣಗಿ, ನೀರಿಲ್ಲದಂಥ ಪ್ರದೇಶದಲ್ಲಿ ನೆಡಲಾಗಿದೆ.
14 ೧೪ ಬೆಂಕಿಯು ಅದರ ಕೊಂಬೆಗಳಿಂದ ಹೊರಟು ಅದರ ಫಲವನ್ನು ನುಂಗಿ ಬಿಟ್ಟಿದೆ. ಆದುದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿ ಕೊಂಬೆಯೂ ಅದರಲ್ಲಿ ಉಳಿದಿಲ್ಲ.’ ಇದು ಶೋಕ ಗೀತೆ, ಶೋಕ ಗೀತೆಯಾಗಿ ವಾಡಿಕೆಯಲ್ಲಿದೆ.”
ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು, ಅದರಲ್ಲಿ ಫಲವನ್ನು ತಿಂದುಬಿಟ್ಟಿದೆ. ಅದರಲ್ಲಿ ಆಳುವುದಕ್ಕೆ ರಾಜದಂಡಕ್ಕಾಗಿ ತಕ್ಕ ಬಲವುಳ್ಳ ಬಳ್ಳಿಯು ಈಗ ಇಲ್ಲ.’ ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.”