< ದಾನಿಯೇಲನು 4 >

1 ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ, ಕುಲ ಭಾಷೆಗಳವರಿಗೆ ರಾಜನಾದ ನೆಬೂಕದ್ನೆಚ್ಚರನ ಪ್ರಕಟನೆ, “ನಿಮಗೆ ಸುಖವು ಹೆಚ್ಚೆಚ್ಚಾಗಲಿ!
ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ, ಜನಾಂಗಗಳಿಗೂ, ಭಾಷೆಯವರಿಗೂ, ನಿಮಗೆ ಶಾಂತಿಯು ಹೆಚ್ಚಾಗಲಿ.
2 ಪರಾತ್ಪರನಾದ ದೇವರು ನನ್ನ ವಿಷಯದಲ್ಲಿ ನಡೆಸಿರುವ ಮಹತ್ತುಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬುವುದು ನನಗೆ ಸ್ಪಷ್ಟವಾಗಿ ತೋರಿಬಂದಿದೆ.
ಮಹೋನ್ನತ ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂದು ನನಗೆ ವಿಹಿತವಾಗಿ ತೋರಿ ಬಂದಿದೆ.
3 ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳ್ವಿಕೆಯು ತಲತಲಾಂತರಕ್ಕೂ ಸ್ಥಿರವಾಗಿ ನಿಲ್ಲುವುದು.”
ಅವರ ಸೂಚಕಕಾರ್ಯಗಳು ಎಷ್ಟೋ ದೊಡ್ಡವುಗಳು!
4 “ನೆಬೂಕದ್ನೆಚ್ಚರನಾದ ನಾನು ನನ್ನ ಆಲಯದಲ್ಲಿ ಹಾಯಾಗಿದ್ದೆನು, ಹೌದು ನನ್ನ ಅರಮನೆಯಲ್ಲಿ ಸುಖವಾಗಿದ್ದೆನು.
ನೆಬೂಕದ್ನೆಚ್ಚರನು ಎಂಬ ನಾನು ನನ್ನ ಅರಮನೆಯಲ್ಲಿ ಸಂತೃಪ್ತನಾಗಿದ್ದೆ ಮತ್ತು ಸಮೃದ್ಧನಾಗಿದ್ದೆ.
5 ಹೀಗಿರಲು ನನ್ನನ್ನು ಹೆದರಿಸುವ ಒಂದು ಕನಸನ್ನು ಕಂಡೆನು; ಹಾಸಿಗೆಯಲ್ಲಿ ನನಗುಂಟಾದ ಯೋಚನೆಗಳೂ, ನನ್ನ ಮನಸ್ಸಿಗೆ ಬಿದ್ದ ಸ್ವಪ್ನಗಳೂ ನನ್ನನ್ನು ಕಳವಳಗೊಳಿಸಿದವು.
ನನ್ನನ್ನು ಭಯಪಡಿಸುವಂಥಹ ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಮಲಗಿದ್ದಾಗ, ನನ್ನ ಮನಸ್ಸಿನಲ್ಲಿ ಹಾದುಹೋದ ಚಿತ್ರಗಳು ಮತ್ತು ದರ್ಶನಗಳು ನನ್ನನ್ನು ಭಯಭೀತಗೊಳಿಸಿದವು.
6 ಆದುದರಿಂದ ಕನಸಿನ ಅರ್ಥವನ್ನು ನನಗೆ ತಿಳಿಸಲಿಕ್ಕೆ ಬಾಬೆಲಿನ ವಿದ್ವಾಂಸರೆಲ್ಲರನ್ನೂ ಕರೆದುತರುವ ಹಾಗೆ ಆಜ್ಞಾಪಿಸಿದೆನು.
ಆದ್ದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವುದಕ್ಕೋಸ್ಕರ ಬಾಬಿಲೋನಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.
7 “ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು, ನನ್ನ ಸಮ್ಮುಖಕ್ಕೆ ಬಂದಾಗ ನಾನು ಆ ಕನಸನ್ನು ತಿಳಿಸಲು ಅವರು ಅದರ ಅಭಿಪ್ರಾಯವನ್ನು ವಿವರಿಸಲಾರದೆ ಹೋದರು.
ಆಗ ಮಂತ್ರಗಾರರು, ಜೋತಿಷ್ಯರು, ಪಂಡಿತರು, ಶಕುನಗಾರರು ಒಳಗೆ ಬಂದರು. ನಾನು ಕನಸನ್ನು ಅವರಿಗೆ ತಿಳಿಸಿದೆನು. ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.
8 ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರನೆಂಬ ಅಡ್ಡಹೆಸರನ್ನು ಹೊಂದಿದವನೂ, ಪರಿಶುದ್ಧದೇವರುಗಳ ಆತ್ಮವುಳ್ಳವನೂ ಆದ ದಾನಿಯೇಲನು ಕಟ್ಟಕಡೆಯಲ್ಲಿ ನನ್ನ ಬಳಿಗೆ ಬರಲು ನಾನು ಆ ಕನಸನ್ನು ಅವನಿಗೆ ಹೀಗೆ ತಿಳಿಸಿದೆನು,
ಕೊನೆಗೆ ದಾನಿಯೇಲನು ನನ್ನ ಬಳಿಗೆ ಬಂದನು. ಅವನು ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರ್ ಎಂಬ ಅಡ್ಡಹೆಸರನ್ನು ಹೊಂದಿದ್ದನು. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿತ್ತು. ಅವನಿಗೆ ನನ್ನ ಕನಸನ್ನು ಹೀಗೆ ತಿಳಿಸಿದೆ.
9 ‘ಬೇಲ್ತೆಶಚ್ಚರನೇ, ಜೋಯಿಸರಲ್ಲಿ ಪ್ರಧಾನನೇ, ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಯಾಗಿದೆ ಎಂದು ತಿಳಿದಿದ್ದೇನೆ, ಯಾವ ರಹಸ್ಯವೂ ನಿನಗೆ ಅಶೋಧ್ಯವಲ್ಲವೆಂಬುದು ನನಗೆ ಗೊತ್ತು; ಆದುದರಿಂದ ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸು.
“ಮಂತ್ರಗಾರರಲ್ಲಿ ಪ್ರಾಮುಖ್ಯನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರುಗಳ ಆತ್ಮವಿರುವುದೆಂದು ನಾನು ಬಲ್ಲೆನು. ಯಾವುದೇ ರಹಸ್ಯವು ನಿನಗೆ ಅಸಾಧ್ಯವಾದದ್ದಲ್ಲ. ಆದ್ದರಿಂದ ನಾನು ಕಂಡ ಕನಸಿನ ದರ್ಶನ, ಅದರ ಅರ್ಥವನ್ನೂ ನೀನು ನನಗೆ ಹೇಳು.
10 ೧೦ ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳು ಇವೇ. ಇಗೋ, ಲೋಕದ ನಡುವೆ ಬಹು ಎತ್ತರವಾದ ಒಂದು ವೃಕ್ಷವನ್ನು ಕಂಡೆನು.
ಹಾಸಿಗೆಯಲ್ಲಿ ಮಲಗಿದ್ದಾಗ ನಾನು ಕಂಡ ದರ್ಶನಗಳು: ನಾನು ನೋಡಲಾಗಿ ಭೂಮಿಯ ಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.
11 ೧೧ ಆ ವೃಕ್ಷವು ಬೆಳೆದು ಬಲಗೊಂಡಿತ್ತು, ಅದರ ತುದಿಯು ಆಕಾಶವನ್ನು ಮುಟ್ಟಿತ್ತು, ಅದು ಭೂಲೋಕದ ಕಟ್ಟಕಡೆಗೂ ಕಾಣಿಸುತ್ತಿತ್ತು.
ಆ ಮರವು ವಿಶಾಲವಾಗಿಯೂ, ಬಲವಾಗಿಯೂ ಬೆಳೆಯಿತು ಹಾಗೂ ಅದು ಆಕಾಶವನ್ನು ಮುಟ್ಟುತ್ತಿತ್ತು. ಭೂಲೋಕದ ಕಟ್ಟಕಡೆಯವರೆಗೆ ಅದು ಕಾಣಿಸುತ್ತಿತ್ತು.
12 ೧೨ ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಆದ್ದರಿಂದ ಎಲ್ಲಕ್ಕೂ ಆಹಾರ, ನೆರಳೂ, ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶ ಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ.
ಅದರ ಎಲೆಗಳು ಅಂದವಾಗಿದ್ದವು. ಅದರ ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರವಿತ್ತು. ಕಾಡುಮೃಗಗಳಿಗೆ ಅದರ ಕೆಳಗೆ ನೆರಳಲ್ಲಿ ಆಶ್ರಯ ದೊರಕುತ್ತಿತ್ತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು. ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ದೊರಕುತ್ತಿತ್ತು.
13 ೧೩ ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸಿನಲ್ಲಿ ನೋಡಲಾಗಿ ದೇವದೂತನು ಆಕಾಶದಿಂದಿಳಿದು ಗಟ್ಟಿಯಾಗಿ ಕೂಗಿ,
“ನನ್ನ ಹಾಸಿಗೆಯ ಮೇಲೆ ಮಲಗಿದ್ದಾಗ, ದರ್ಶನಗಳನ್ನು ನಾನು ನೋಡಲಾಗಿ, ಒಬ್ಬ ದೂತನಾದ ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು.
14 ೧೪ ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ!
ಅವನು ಗಟ್ಟಿಯಾಗಿ ಕೂಗಿ: ‘ಮರವನ್ನು ಕಡಿಯಿರಿ. ಅದರ ಕೊಂಬೆಗಳನ್ನು ಕತ್ತರಿಸಿ, ಅದರ ಎಲೆಗಳನ್ನು ಉದುರಿಸಿ, ಅದರ ಫಲವನ್ನು ಚದುರಿಸಿಬಿಡಿರಿ. ಮೃಗಗಳು ಅದರ ಕೆಳಗಿನಿಂದಲೂ, ಪಕ್ಷಿಗಳು ಅದರ ಕೊಂಬೆಗಳಿಂದಲೂ ಹೋಗಿಬಿಡಲಿ.
15 ೧೫ ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣ, ತಾಮ್ರಗಳ ಪಟ್ಟಿಯನ್ನು ಅದಕ್ಕೆ ಬಿಗಿಯಿರಿ; ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಭೂಮಿಯ ಹುಲ್ಲು ಮೃಗಗಳಿಗೆ ಗತಿಯಾದಂತೆ ಅದಕ್ಕೆ ಗತಿಯಾಗಲಿ.
ಆದರೆ ಅದರ ಬುಡವೂ, ಬೇರೂ, ಕಬ್ಬಿಣ, ಕಂಚಿನ ಕಟ್ಟುಳ್ಳದ್ದಾಗಿ ನೆಲದಲ್ಲಿ ಹೊಲದ ಹುಲ್ಲಿನಲ್ಲಿ ಇರಲಿ. “‘ಅವನು ಆಕಾಶದ ಮಂಜಿನಿಂದ ತೇವವಾಗಲಿ, ಭೂಮಿಯ ಗಿಡಗಳ ಮಧ್ಯದಲ್ಲಿರುವ ಮೃಗಗಳೊಂದಿಗೆ ಅವನು ವಾಸಿಸಲಿ.
16 ೧೬ ಅದಕ್ಕೆ ಮನುಷ್ಯನ ಹೃದಯವು ಹೋಗಿ ಮೃಗದ ಹೃದಯವು ಬರಲಿ; ಹೀಗೆ ಅದಕ್ಕೆ ಏಳು ವರ್ಷ ಕಳೆಯಲಿ.
ಅವನಿಗೆ ಏಳು ವರ್ಷಕಾಲ, ಮನುಷ್ಯ ಹೃದಯ ಹೋಗಿ ಮೃಗದ ಹೃದಯ ಬರಲಿ.
17 ೧೭ ಇದು ಸಾಕ್ಷಿಗಳ ತೀರ್ಮಾನ, ದೇವರ ತೀರ್ಪು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳ್ವಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇಮಿಸುತ್ತಾನೆಂಬುದು ಜೀವಂತರಿಗೆ ತಿಳಿದುಬರಬೇಕೆಂದೇ ಈ ತೀರ್ಮಾನವಾಯಿತು’ ಎಂದು ಸಾರಿದನು.
“‘ಈ ತೀರ್ಮಾನವು ದೂತರಿಂದ ಪ್ರಕಟವಾಯಿತು, ಪರಿಶುದ್ಧರು ಅಂತಿಮ ನಿರ್ಣಯವನ್ನು ಘೋಷಿಸುವರು, ಮಹೋನ್ನತರು ಜನರ ರಾಜ್ಯಗಳ ಮೇಲೆ ಸರ್ವಾಧಿಕಾರಿಯಾಗಿರುವರೆಂದೂ, ರಾಜ್ಯಗಳನ್ನು ತಮ್ಮ ಮನಸ್ಸಿಗೆ ಬಂದವರಿಗೆ ಕೊಡುವರೆಂದೂ, ಅವುಗಳ ಮೇಲೆ ಕೀಳಾದವರನ್ನು ನೇಮಿಸುವರೆಂದೂ ಇದರಿಂದ ಜೀವಿತರು ತಿಳಿದುಕೊಳ್ಳುವರು.’
18 ೧೮ ರಾಜನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು; ಬೇಲ್ತೆಶಚ್ಚರನೇ, ನನ್ನ ರಾಜ್ಯದ ಸಕಲ ವಿದ್ವಾಂಸರಲ್ಲಿ ಯಾರೂ ಅದರ ಅರ್ಥವನ್ನು ತಿಳಿಸಲಾರರು; ನೀನು ಅದನ್ನು ತಿಳಿಸು; ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವುದರಿಂದ ನೀನೇ ಅದಕ್ಕೆ ಶಕ್ತನು.”
“ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೇಲ್ತೆಶಚ್ಚರನೆಂಬ ನೀನು ಅದರ ಅರ್ಥವನ್ನು ಹೇಳು. ಏಕೆಂದರೆ ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿಶುದ್ಧ ದೇವರುಗಳ ಆತ್ಮವು ಇರುವುದರಿಂದ ನೀನು ಹೇಳಲು ಶಕ್ತನು,” ಎಂದನು.
19 ೧೯ ಆಗ ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನು ತನ್ನ ಬುದ್ಧಿಗೆ ತೋರಿದ್ದನ್ನು ಕಂಡು ಭಯಪಟ್ಟು ಸ್ವಲ್ಪ ಸಮಯ ಸ್ತಬ್ಧನಾದನು. ರಾಜನು ಇದನ್ನು ನೋಡಿ, “ಬೇಲ್ತೆಶಚ್ಚರನೇ, ನನ್ನ ಕನಸಾಗಲಿ, ಅದರ ಅರ್ಥವಾಗಲಿ ನಿನ್ನನ್ನು ಹೆದರಿಸದಿರಲಿ” ಎಂದು ಹೇಳಲು ಬೇಲ್ತೆಶಚ್ಚರನು, “ನನ್ನ ಒಡೆಯನೇ, ಆ ಕನಸು ನಿನ್ನ ಶತ್ರುಗಳಿಗೆ ಫಲಿಸಲಿ, ಅದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ!
ಆಗ ಬೇಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ, “ಬೇಲ್ತೆಶಚ್ಚರನೇ, ಕನಸಾದರೂ, ಅದರ ಅರ್ಥವಾದರೂ ನಿನ್ನನ್ನು ಕಳವಳಪಡಿಸದಿರಲಿ,” ಎಂದನು. ಬೇಲ್ತೆಶಚ್ಚರನು ಉತ್ತರವಾಗಿ, “ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ, ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.
20 ೨೦ “ಯಾವ ವೃಕ್ಷವು ಬೆಳೆದು ಬಲಗೊಂಡು ಆಕಾಶದ ತುದಿಯನ್ನು ಮುಟ್ಟುತ್ತಾ,
ನೀನು ಕಂಡ ಮರವು ಬೆಳೆದು, ಬಲಗೊಂಡು ಆಕಾಶದ ತುದಿಯನ್ನು ಮುಟ್ಟಿ, ಇಡೀ ಭೂಮಿಗೆ ಗೋಚರಿಸುತ್ತಿತ್ತು.
21 ೨೧ ಲೋಕದವರೆಲ್ಲರಿಗೂ ಕಾಣಿಸುತ್ತಾ, ಅಂದವಾದ ಎಲೆಗಳನ್ನೂ ಬಹಳ ಹಣ್ಣುಗಳನ್ನೂ ಬಿಡುತ್ತಾ, ಎಲ್ಲಕ್ಕೂ ಆಹಾರವನ್ನು ಒದಗಿಸುತ್ತಾ ತನ್ನ ನೆರಳನ್ನು ಭೂಜಂತುಗಳಿಗೆ ಆಶ್ರಯವಾಗಿಯೂ ತನ್ನ ಕೊಂಬೆಗಳನ್ನು ಆಕಾಶ ಪಕ್ಷಿಗಳಿಗೆ ನೆಲೆಯಾಗಿಯೂ ಮಾಡುತ್ತಾ ಕನಸಿನಲ್ಲಿ ನಿನಗೆ ತೋರಿತೋ,
ಅದರ ಎಲೆಗಳು ಅಂದವಾಗಿದ್ದು, ಫಲವು ಬಹಳವಾಗಿತ್ತು. ಅದರಲ್ಲಿ ಎಲ್ಲರಿಗೂ ಆಹಾರ ಇತ್ತು. ಅದರ ಕೆಳಗೆ ಕಾಡುಮೃಗಗಳು ವಾಸಮಾಡಿದ್ದವು. ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸ ಮಾಡಿದ್ದವು.
22 ೨೨ ಆ ವೃಕ್ಷವು ನೀನೇ; ರಾಜಾ, ನೀನು ಬೆಳೆದು ಬಲಗೊಂಡಿದ್ದೀ, ನಿನ್ನ ಮಹಿಮೆಯು ವೃದ್ಧಿಯಾಗಿ ಆಕಾಶಕ್ಕೆ ಮುಟ್ಟಿದೆ, ನಿನ್ನ ಆಳ್ವಿಕೆಯು ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.
ಅರಸನೇ, ಆ ಮರವು ನೀನೇ ಆಗಿರುವೆ. ನೀನು ಬೆಳೆದು ಬಲವಾಗಿರುವೆ. ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ, ನಿನ್ನ ಅಧಿಕಾರವು ಭೂಮಿಯ ಅಂತ್ಯದವರೆಗೂ ಮುಟ್ಟುವುದು.
23 ೨೩ “ಕಾವಲುಗಾರನಾದ ದೇವದೂತನು ಆಕಾಶದಿಂದಿಳಿದು, ‘ವೃಕ್ಷವನ್ನು ಕಡಿದು ಹಾಳುಮಾಡಿರಿ; ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣ, ತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ, ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಅದಕ್ಕೆ ಏಳು ವರ್ಷ ಕಳೆಯುವ ತನಕ ಕಾಡು ಮೃಗಗಳ ಸಹವಾಸದ ಗತಿಯು ಬರಲಿ’ ಎಂದು ಸಾರುವುದನ್ನು ರಾಜನಾದ ನೀನು ನೋಡಿದಿಯಲ್ಲಾ.
“ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದುಬಂದು, ‘ಮರವನ್ನು ಕಡಿದು ನಾಶಮಾಡಿರಿ. ಆದರೆ ಅದರ ಬೇರಿನ ಮೋಟನ್ನು ನೆಲದಲ್ಲಿ ಉಳಿಸಿ, ಮೋಟನ್ನು ಕಬ್ಬಿಣ ಮತ್ತು ಕಂಚುಗಳಿಂದ ಕಟ್ಟಿ, ಬಯಲಿನ ಎಳೆಯ ಹುಲ್ಲಿನಲ್ಲಿಯೂ, ಬೇರುಗಳನ್ನು ಭೂಮಿಯಲ್ಲಿಯೂ ಬಿಡಿರಿ. ಅವನು ಆಕಾಶದ ಮಂಜಿನಿಂದ ತೇವವಾಗಲಿ. ಏಳು ಕಾಲಗಳು ಕಳೆಯುವ ತನಕ ಅವನು ಕಾಡುಮೃಗಗಳ ಹಾಗೆ ಜೀವಿಸಲಿ, ಎಂದು ಸಾರುವುದನ್ನು ಅರಸನಾದ ನೀನು ನೋಡಿದೆಯಲ್ಲಾ.’
24 ೨೪ “ರಾಜನೇ ಇದರ ತಾತ್ಪರ್ಯವೇನೆಂದರೆ, ಎನ್ನೊಡೆಯನಾದ ಅರಸನಿಗೆ ಉಂಟಾಗಿರುವ ಪರಾತ್ಪರನಾದ ದೇವರ ತೀರ್ಪು ಹೀಗಿದೆ.
“ಅರಸನೇ, ಇದರ ವ್ಯಾಖ್ಯಾನವು ಏನೆಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ:
25 ೨೫ ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ಎತ್ತುಗಳಂತೆ ಹುಲ್ಲು ಮೇಯುವುದೇ ನಿನಗೆ ಗತಿಯಾಗುವುದು, ಆಕಾಶದ ಇಬ್ಬನಿಯು ನಿನ್ನನ್ನು ತೋಯಿಸುವುದು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬುದು ನಿನಗೆ ತಿಳಿದು ಬರುವುದರೊಳಗೆ ಏಳು ವರ್ಷ ಹೀಗೆ ಕಳೆಯುವುದು.
ನಿನ್ನನ್ನು ಮನುಷ್ಯರೊಳಗಿಂದ ಬಹಿಷ್ಕರಿಸಿ ಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವುದು. ಪಶುಗಳಂತೆ ನೀನು ಹುಲ್ಲನ್ನು ತಿನ್ನುವೆ. ಆಕಾಶದ ಮಂಜಿನಿಂದ ನಿನ್ನನ್ನು ತೋಯಿಸುವುದು. ಮಹೋನ್ನತರು ಮನುಷ್ಯರ ರಾಜ್ಯವನ್ನು ಆಳುವರೆಂದೂ, ತಮಗೆ ಬೇಕಾದವರಿಗೆ ಅದನ್ನು ಕೊಡುತ್ತಾರೆಂದೂ ನೀನು ತಿಳಿಯುವವರೆಗೂ, ಆ ಏಳು ಕಾಲಗಳು ಕಳೆದುಹೋಗುವುವು.
26 ೨೬ ವೃಕ್ಷದ ಬುಡದ ಮೋಟನ್ನು ಉಳಿಸಿರಿ ಎಂದು ಅಪ್ಪಣೆಯಾಯಿತಲ್ಲಾ; ಇದರ ತಾತ್ಪರ್ಯವೇನೆಂದರೆ ಪರಲೋಕಕ್ಕೆ ಸರ್ವಾಧಿಕಾರ ಉಂಟೆಂಬುವುದನ್ನು ನೀನು ತಿಳಿದುಕೊಂಡ ನಂತರ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವುದು ಎಂಬುವುದೇ.
ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂಬ ಆಜ್ಞೆಯ ಅರ್ಥ ಏನೆಂದರೆ, ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಪುನಃಸ್ಥಾಪನೆಯಾಗುವುದು.
27 ೨೭ ಆದಕಾರಣ, ಅರಸನೇ, ಈ ನನ್ನ ಬುದ್ಧಿವಾದವು ನಿನಗೆ ಒಪ್ಪಿಗೆಯಾಗಲಿ, ನೀನು ಧರ್ಮವನ್ನು ಆಚರಿಸಿ ನಿನ್ನ ಪಾಪಗಳನ್ನು ನಾಶಗೊಳಿಸು, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು; ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾದೀತು” ಎಂದು ಅರಿಕೆ ಮಾಡಿದನು.
ಆದ್ದರಿಂದ ಅರಸನೇ, ನನ್ನ ಆಲೋಚನೆಯು ನಿನಗೆ ಸರಿಯಾದದ್ದಾಗಿರಲಿ. ಸರಿಯಾದದ್ದನ್ನು ಮಾಡುವುದರಿಂದ ನಿನ್ನ ಪಾಪಗಳನ್ನು ಬಿಟ್ಟುಬಿಡು. ದಬ್ಬಾಳಿಕೆಯಾದವರಿಗೆ ದಯೆ ತೋರುವುದರಿಂದ ನಿನ್ನ ದುಷ್ಟತ್ವವನ್ನು ಬಿಟ್ಟುಬಿಡು. ಹೀಗಾದರೆ ಒಂದು ವೇಳೆ ನಿನ್ನ ಸಮೃದ್ಧಿ ಮುಂದುವರಿಯುವುದು.”
28 ೨೮ ಇದೆಲ್ಲಾ ರಾಜನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು.
ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭವಿಸಿತು.
29 ೨೯ ಹನ್ನೆರಡು ತಿಂಗಳು ಕಳೆದನಂತರ ಅವನು ಬಾಬೆಲಿನ ಅರಮನೆಯ ಮಹಡಿಯ ಮೇಲೆ ತಿರುಗಾಡುತ್ತಾ,
ಹನ್ನೆರಡು ತಿಂಗಳಾದ ಮೇಲೆ ಅರಸನು ಬಾಬಿಲೋನಿನ ರಾಜ್ಯದ ಅರಮನೆಯ ಮೇಲ್ಗಡೆ ತಿರುಗಾಡಿದನು.
30 ೩೦ “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವುದು ಇಗೋ, ಮಹಾ ಪಟ್ಟಣವಾದ ಈ ಬಾಬೆಲ್” ಎಂದು ಕೊಚ್ಚಿಕೊಂಡನು.
ಆಗ ಅರಸನು, “ನಾನು ನನ್ನ ಪರಾಕ್ರಮದ ಬಲದಿಂದಲೂ, ನನ್ನ ಮಹಿಮೆಯ ಕೀರ್ತಿಗಾಗಿಯೂ ಕಟ್ಟಿಸಿದ ಮಹಾ ಬಾಬಿಲೋನು ಇದಲ್ಲವೇ?” ಎಂದನು.
31 ೩೧ ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗ, “ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು;
ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಧ್ವನಿ ಉಂಟಾಯಿತು: “ಅರಸನಾದ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ದೈವೋಕ್ತಿ ಏನೆಂದರೆ: ನಿನ್ನ ರಾಜ್ಯವು ನಿನ್ನಿಂದ ತೆಗೆಯಲಾಗುವುದು.
32 ೩೨ ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ಎತ್ತುಗಳಂತೆ ಹುಲ್ಲು ಮೇಯುವುದೇ ನಿನಗೆ ಗತಿಯಾಗುವುದು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬುದು ನಿನ್ನ ತಿಳಿವಳಿಕೆಗೆ ಬರುವುದರೊಳಗೆ ಏಳು ವರ್ಷ ನಿನಗೆ ಹೀಗೆ ಕಳೆಯುವುದು” ಎಂದು ಆಕಾಶವಾಣಿಯಾಯಿತು.
ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ನೀನು ದನಗಳ ಹಾಗೆ ಹುಲ್ಲನ್ನು ಮೇಯುವೆ. ಮಹೋನ್ನತರು ಮನುಷ್ಯರ ರಾಜ್ಯವನ್ನಾಳುವರೆಂದು ತಮ್ಮ ಮನಸ್ಸಿಗೆ ಸರಿ ಬಂದವರಿಗೆ ಅದನ್ನು ಕೊಡುವೆರೆಂದು ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವುವು,” ಎಂಬುದೇ.
33 ೩೩ ಈ ನುಡಿಯು ನೆಬೂಕದ್ನೆಚ್ಚರನಲ್ಲಿ ತಕ್ಷಣವೇ ನೆರವೇರಿತು; ಅವನು ಮನುಷ್ಯರೊಳಗಿಂದ ತಳ್ಳಲ್ಪಟ್ಟು, ಎತ್ತುಗಳಂತೆ ಹುಲ್ಲು ಮೇಯುತ್ತಾ, ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದನು; ಅವನ ಕೂದಲು ಹದ್ದುಗಳ ಗರಿಯಂತೆಯೂ, ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು.
ಆ ನುಡಿ ಕೂಡಲೆ ನೆರವೇರಿತು. ನೆಬೂಕದ್ನೆಚ್ಚರನು ಸಮಾಜದಿಂದ ಬಹಿಷ್ಕೃತನಾದನು. ದನಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ, ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೆ ಬೆಳೆಯುವವರೆಗೆ ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು.
34 ೩೪ ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.
ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು.
35 ೩೫ ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಶೂನ್ಯರಾಗಿ ಪರಲೋಕ ಸೈನ್ಯದವರಲ್ಲಿಯೂ, ಭೂಲೋಕದವರಲ್ಲಿಯೂ ತನ್ನ ಚಿತ್ತದ ಪ್ರಕಾರ ಮಾಡುತ್ತಾನೆ; ಆತನ ಶಕ್ತಿಯುತ ಕೈಯನ್ನು ತಡೆಹಿಡಿಯಲು ಸಾಧ್ಯವಿಲ್ಲ ‘ನೀನು ಏನು ಮಾಡುತ್ತೀ?’” ಎಂದು ಯಾರೂ ಕೇಳಲಾರರು.
ದೇವರ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರೂ
36 ೩೬ ಅದೇ ಸಮಯದಲ್ಲಿ ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು; ನನ್ನ ಪ್ರಭಾವ ವೈಭವಗಳು ನನಗೆ ಮತ್ತೆ ಲಭಿಸಿ ನನ್ನ ರಾಜ್ಯದ ಕೀರ್ತಿಯು ಪ್ರಕಾಶಿಸಿತು; ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸಮಾಧಾನಪಡಿಸಿದರು; ನನ್ನ ರಾಜ್ಯದಲ್ಲಿ ರಾಜನಾಗಿ ನೆಲೆಗೊಂಡೆನು; ನನ್ನ ಮಹಿಮೆಯು ಅತ್ಯಧಿಕವಾಯಿತು.
ಇದೇ ಸಮಯದಲ್ಲಿ ನನ್ನ ಬುದ್ಧಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ, ನನ್ನ ತೇಜಸ್ಸೂ ತಿರುಗಿ ಬಂದವು. ನನ್ನ ಆಲೋಚನಾಗಾರರೂ, ನನ್ನ ಪ್ರಭುಗಳೂ ನನ್ನನ್ನು ಹುಡುಕಿ ಬಂದರು. ನಾನು ನನ್ನ ರಾಜ್ಯದಲ್ಲಿ ಪುನಃ ನೆಲೆಗೊಂಡೆನು. ಮೊದಲಿಗಿಂತಲೂ ನನಗೆ ಹೆಚ್ಚಿನ ಪ್ರತಿಭೆ ದೊರೆಯಿತು.
37 ೩೭ ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ ಕೀರ್ತಿಸುತ್ತೇನೆ. ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.
ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸರನ್ನು ಸ್ತುತಿಸಿ, ಹೆಚ್ಚಿಸಿ ಘನಪಡಿಸುತ್ತೇನೆ. ಅವರ ಕ್ರಿಯೆಗಳೆಲ್ಲಾ ಸತ್ಯವೇ. ಅವರ ಮಾರ್ಗಗಳು ನ್ಯಾಯವೇ. ಗರ್ವದಲ್ಲಿ ನಡೆಯುವವರನ್ನು ಅವರೇ ತಗ್ಗಿಸಬಲ್ಲರು.

< ದಾನಿಯೇಲನು 4 >