< ಸಮುವೇಲನು - ಪ್ರಥಮ ಭಾಗ 6 >

1 ಯೆಹೋವನ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳ ಕಾಲ ಇತ್ತು.
ಯೆಹೋವ ದೇವರ ಮಂಜೂಷವು ಫಿಲಿಷ್ಟಿಯರ ಸೀಮೆಯಲ್ಲಿ ಏಳು ತಿಂಗಳು ಇದ್ದ ತರುವಾಯ
2 ನಂತರ ಫಿಲಿಷ್ಟಿಯರು ಪೂಜಾರಿಗಳನ್ನೂ, ಕಣಿಹೇಳುವವರನ್ನೂ ಕರೆದು ಅವರಿಗೆ, “ಯೆಹೋವನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಪುನಃ ಅದರ ಸ್ಥಳಕ್ಕೆ ಹೇಗೆ ಕಳುಹಿಸಬೇಕು ತಿಳಿಸಿರಿ” ಅನ್ನಲು
ಫಿಲಿಷ್ಟಿಯರು ಯಾಜಕರನ್ನೂ ಕಣಿಹೇಳುವವರನ್ನೂ ಕರೆದು, “ಯೆಹೋವ ದೇವರ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವುದು ನಮಗೆ ತಿಳಿಸಿರಿ,” ಎಂದರು.
3 ಅವರು, “ನೀವು ಇಸ್ರಾಯೇಲಿನ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು. ಪ್ರಾಯಶ್ಚಿತ್ತದ್ರವ್ಯದೊಡನೆ ಕಳುಹಿಸಿದರೆ ಮಾತ್ರ ಗುಣಹೊಂದುವಿರಿ. ಆತನ ಶಿಕ್ಷಾಹಸ್ತವು ನಿಮ್ಮನ್ನು ಬಾಧಿಸುತ್ತಿರುವುದಕ್ಕೆ ಕಾರಣವು ಗೊತ್ತಾಗುವುದು” ಎಂದು ಹೇಳಿದರು.
ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು,” ಎಂದರು.
4 ಜನರು, “ನಾವು ಪ್ರಾಯಶ್ಚಿತ್ತಾರ್ಥವಾಗಿ ಏನು ಕಳುಹಿಸಬೇಕು?” ಎಂದು ಕೇಳಲು ಅವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ, ಬಂಗಾರದ ಐದು ಇಲಿಗಳನ್ನು ಮಾಡಿಸಬೇಕು.
ಆಗ ಅವರು, “ದೋಷಪರಿಹಾರ ಕಾಣಿಕೆಗಾಗಿ ನಾವು ಅದರ ಸಂಗಡ ಕಳುಹಿಸತಕ್ಕದ್ದೇನು?” ಎಂದರು. ಅದಕ್ಕವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವುದರಿಂದ ಫಿಲಿಷ್ಟಿಯರ ಅಧಿಪತಿಗಳ ಸಂಖ್ಯೆಗೆ ಸರಿಯಾಗಿ ಒಬ್ಬೊಬ್ಬರಿಗೆ ಬಂಗಾರದ ಐದು ಗಡ್ಡೆಗಳನ್ನು ಮತ್ತು ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ.
5 ನೀವು ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಗಡ್ಡೆ ಮತ್ತು ಇಲಿ ಇವುಗಳ ಸ್ವರೂಪಗಳನ್ನು ಚಿನ್ನದಿಂದ ಮಾಡಿಸಿ, ಇಸ್ರಾಯೇಲಿನ ದೇವರಿಗೆ ಅದನ್ನು ಅರ್ಪಿಸಿ ಮಹಿಮೆಯನ್ನು ಸಲ್ಲಿಸಿದರೆ, ಆತನ ಶಿಕ್ಷಾಹಸ್ತವು ನಿಮ್ಮನ್ನೂ, ನಿಮ್ಮ ದೇವತೆಗಳನ್ನೂ, ಪ್ರಾಂತ್ಯಗಳನ್ನೂ ಬಿಟ್ಟುಹೋದೀತು.
ಏಕೆಂದರೆ ನಿಮ್ಮೆಲ್ಲರ ನಾಶಕ್ಕೆ ಕಾರಣವಾದ ಈ ಗಡ್ಡೆಗಳ ಹಾಗು ಇಲಿಗಳ ಸ್ವರೂಪಗಳನ್ನು ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಅವರು ನಿಮ್ಮ ಮೇಲೆಯೂ, ನಿಮ್ಮ ದೇವರುಗಳ ಮೇಲೆಯೂ, ನಿಮ್ಮ ಭೂಮಿಯ ಮೇಲೆಯೂ ಇರುವ ತಮ್ಮ ಕೈಯನ್ನು ತೆಗೆದು ಹಗುರಮಾಡುವರು.
6 ಐಗುಪ್ತರಂತೆಯೂ ಫರೋಹನಂತೆಯೂ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳುವುದೇಕೆ? ಇಸ್ರಾಯೇಲ್ಯರನ್ನು ಕಳುಹಿಸಲೊಲ್ಲದ ಇವರನ್ನು ಯೆಹೋವನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲಾ.
ಈಜಿಪ್ಟಿನವರೂ, ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ, ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವುದೇನು? ದೇವರು ಅವರ ಮಧ್ಯದಲ್ಲಿ ಆಶ್ಚರ್ಯಕರವಾದ ಕ್ರಿಯೆಗಳನ್ನು ನಡಿಸಿದಾಗ, ಅವರು ಇಸ್ರಾಯೇಲರನ್ನು ಅವರು ಹೋಗುವಹಾಗೆ ಕಳುಹಿಸಲಿಲ್ಲವೋ?
7 ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿಸಿರಿ. ಅದಕ್ಕೆ ಹಾಲು ಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿರಿ
“ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ, ನೊಗವನ್ನು ಹಾಕದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು, ಅವುಗಳನ್ನು ಬಂಡಿಗೆ ಕಟ್ಟಿ, ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು,
8 ಆ ಬಂಡಿಯ ಮೇಲೆ ಯೆಹೋವನ ಮಂಜೂಷವನ್ನೂ, ನೀವು ಪ್ರಾಯಶ್ಚಿತ್ತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಟ್ಟು ಕಳುಹಿಸಿಬಿಡಿರಿ.
ಯೆಹೋವ ದೇವರ ಮಂಜೂಷವನ್ನು ಬಂಡಿಯ ಮೇಲೆ ಇಟ್ಟು, ನೀವು ಕಳುಹಿಸಿಕೊಡುವ ನಿಮ್ಮ ದೋಷಪರಿಹಾರ ಕಾಣಿಕೆಯ ಬಂಗಾರದ ವಸ್ತುಗಳನ್ನು ಅದರ ಪಕ್ಕದಲ್ಲಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ, ಅದು ಹೋಗುವಹಾಗೆ ಕಳುಹಿಸಿರಿ.
9 ಅ ಹಸುಗಳು ತಾವಾಗಿ ಸ್ವದೇಶದ ದಾರಿ ಹಿಡಿದು ಬೇತ್ ಷೆಮೆಷಿನ ಕಡೆಗೆ ಹೋದರೆ ಈ ದೊಡ್ಡ ಕೇಡನ್ನು ಬರಮಾಡಿದವನು ಯೆಹೋವನೇ ಎಂದೂ, ಆ ಮಾರ್ಗವನ್ನು ಹಿಡಿಯದಿದ್ದರೆ ಆತನ ಹಸ್ತವು ನಮ್ಮನ್ನು ಬಾಧಿಸಲ್ಲಿಲ್ಲ ಇದು ಆಕಸ್ಮಿಕವಾಗಿ ಬಂದಿದೆ ಎಂದು, ತಿಳಿದುಕೊಳ್ಳಿರಿ” ಅಂದರು.
ಆಗ ನೋಡಿರಿ, ಅದು ತನ್ನ ಮೇರೆಯಾದ ಬೇತ್ ಷೆಮೆಷ್ ಎಂಬ ಮಾರ್ಗವನ್ನು ಹಿಡಿದು ಹೋದರೆ, ಯೆಹೋವ ದೇವರು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾರೆ, ಇಲ್ಲದೆ ಹೋದರೆ ಅವರ ಹಸ್ತವು ನಮ್ಮನ್ನು ಮುಟ್ಟಲಿಲ್ಲ, ಅದು ತಾನಾಗಿಯೇ ನಮಗೆ ಆಯಿತೆಂದು ತಿಳಿದುಕೊಳ್ಳಿರಿ,” ಎಂದರು.
10 ೧೦ ಅದೇ ಪ್ರಕಾರ ಫಿಲಿಷ್ಟಿಯರು ಹಾಲುಕರೆಯುವ ಎರಡು ಹಸುಗಳನ್ನು ಹಿಡಿದುಕೊಂಡು ಬಂಡಿಗೆ ಹೂಡಿ ಅವುಗಳ ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿದರು.
ಅವರು ಆ ಪ್ರಕಾರವೇ ಎರಡು ಹಾಲು ಕರೆಯುವ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು
11 ೧೧ ಯೆಹೋವನ ಮಂಜೂಷವನ್ನೂ, ಚಿನ್ನದ ಇಲಿಗಳೂ, ಗಡ್ಡೆಗಳೂ ಇದ್ದ ಚಿಕ್ಕ ಪೆಟ್ಟಿಗೆಯನ್ನೂ ಬಂಡಿಯ ಮೇಲಿಟ್ಟರು.
ಯೆಹೋವ ದೇವರ ಮಂಜೂಷವನ್ನೂ, ಬಂಗಾರದ ಇಲಿಗಳನ್ನೂ, ತಮ್ಮ ಗಡ್ಡೆರೋಗದ ರೂಪಗಳನ್ನೂ ಇಟ್ಟಿರುವ ಚಿಕ್ಕ ಪೆಟ್ಟಿಗೆಯನ್ನೂ ಆ ಬಂಡಿಯ ಮೇಲಿಟ್ಟರು.
12 ೧೨ ಕೂಡಲೆ ಆ ಹಸುಗಳು ಬೇತ್ ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಕೂಗುತ್ತಾ ನೆಟ್ಟಗೆ ಮುಂದೆ ನಡೆದವು; ಎಡಬಲಕ್ಕೆ ತಿರುಗಲಿಲ್ಲ. ಫಿಲಿಷ್ಟಿಯ ಪ್ರಭುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು.
ಆಗ ಹಸುಗಳು ಕೂಗುತ್ತಾ ಬೇತ್ ಷೆಮೆಷ್ ಕಡೆಗೆ ಹೋಗುವ ಮಾರ್ಗವನ್ನು ಹಿಡಿದು, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ ಹೆದ್ದಾರಿಯಲ್ಲಿ ಹೋದವು. ಫಿಲಿಷ್ಟಿಯರ ಅಧಿಪತಿಗಳು ಬೇತ್ ಷೆಮೆಷ್ ಊರಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.
13 ೧೩ ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ಯೆಹೋವನ ಮಂಜೂಷವನ್ನು ನೋಡಿ ಬಹು ಸಂತೋಷಪಟ್ಟರು.
ಬೇತ್ ಷೆಮೆಷ್ ಊರಿನವರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು, ಅದನ್ನು ಕಂಡದ್ದಕ್ಕೆ ಸಂತೋಷಪಟ್ಟರು.
14 ೧೪ ಬಂಡಿಯು ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ದೊಡ್ಡ ಕಲ್ಲಿನ ಬಳಿಯಲ್ಲಿ ಬಂದು ನಿಂತಿತು. ಆಗ ಅವರು ಹೋಗಿ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಆ ಹಸುಗಳನ್ನು ಯೆಹೋವನಿಗೆ ಯಜ್ಞಮಾಡಿದರು.
ಆ ಬಂಡಿಯು ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು. ಅಲ್ಲಿ ಒಂದು ದೊಡ್ಡ ಬಂಡೆ ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಹಸುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಿದರು.
15 ೧೫ ಲೇವಿಯರು ಯೆಹೋವನ ಮಂಜೂಷವನ್ನೂ, ಚಿನ್ನದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್ ಷೆಮೆಷಿನವರು ಅದೇ ದಿನ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಮತ್ತು ಯಜ್ಞಗಳನ್ನೂ ಸಮರ್ಪಿಸಿದರು.
ಲೇವಿಯರು ಯೆಹೋವ ದೇವರ ಮಂಜೂಷವನ್ನೂ, ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳಿದ್ದ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ, ಆ ದೊಡ್ಡ ಬಂಡೆಯ ಮೇಲಿಟ್ಟುಕೊಂಡರು. ಬೇತ್ ಷೆಮೆಷ್ ಊರಿನವರು ಆ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸಮರ್ಪಣೆಗಳನ್ನೂ ಅರ್ಪಿಸಿದರು.
16 ೧೬ ಇದನ್ನೆಲ್ಲಾ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ಪ್ರಭುಗಳು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.
ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ಕಂಡು, ಅದೇ ದಿನದಲ್ಲಿ ತಿರುಗಿ ಎಕ್ರೋನಿಗೆ ಹೋದರು.
17 ೧೭ ಫಿಲಿಷ್ಟಿಯರು ಯೆಹೋವನಿಗೆ ಸಮರ್ಪಿಸಿದ ಚಿನ್ನದ ಗಡ್ಡೆಗಳು ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಊರು, ಎಕ್ರೋನ್ ಎಂಬ ಅವರ ಸಂಸ್ಥಾನಗಳ ಸಂಖ್ಯೆಗಳಿಗೂ
ಫಿಲಿಷ್ಟಿಯರು ದೋಷಪರಿಹಾರ ಕಾಣಿಕೆಗಾಗಿ, ಗಡ್ಡೆರೋಗದ ಬಂಗಾರ ಸ್ವರೂಪಗಳನ್ನು ಅಷ್ಡೋದಿನಿಂದ ಒಂದೂ, ಗಾಜನಿಂದ ಒಂದೂ, ಅಷ್ಕೆಲೋನದಿಂದ ಒಂದೂ, ಗತ್‌ನಿಂದ ಒಂದೂ, ಎಕ್ರೋನಿನಿಂದ ಒಂದೂ ಯೆಹೋವ ದೇವರಿಗೆ ಅರ್ಪಿಸಿದರು.
18 ೧೮ ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅರಸುಗಳ ಅಧೀನದಲ್ಲಿದ್ದ ಎಲ್ಲಾ ಗ್ರಾಮ ನಗರಗಳ ಸಂಖ್ಯೆಗಳಿಗೂ ಸರಿಯಾಗಿದ್ದವು. ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಇರುವ ಯೆಹೋವನ ಮಂಜೂಷವೂ ಇಡಲ್ಪಟ್ಟ ಆ ದೊಡ್ಡ ಕಲ್ಲೇ ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಇದೆ.
ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ ಲೆಕ್ಕಕ್ಕೆ ಸರಿಯಾಗಿದ್ದವು. ಯೆಹೋವ ದೇವರ ಮಂಜೂಷವನ್ನಿಟ್ಟ ದೊಡ್ಡ ಬಂಡೆಯು ಇಂದಿನವರೆಗೂ ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಸಾಕ್ಷಿಯಾಗಿದೆ.
19 ೧೯ ಬೇತ್ ಷೆಮೆಷಿನವರು ಯೆಹೋವನ ಮಂಜೂಷದಲ್ಲಿ ಇಣಕಿ ನೋಡಿದ್ದರಿಂದ ಯೆಹೋವನು ಅವರಲ್ಲಿ ಎಪ್ಪತ್ತು ಮಂದಿಯನ್ನು ಸಾಯಿಸಿದನು. ಯೆಹೋವನು ತಮ್ಮಲ್ಲಿ ಮಹಾನಾಶನವನ್ನು ಉಂಟುಮಾಡಿದ್ದರಿಂದ ಬೇತ್ ಷೆಮೆಷಿನವರು ಗೋಳಾಡಿದರು.
ಬೇತ್ ಷೆಮೆಷ್ ಊರಿನ ಜನರು ಯೆಹೋವ ದೇವರ ಮಂಜೂಷದೊಳಗೆ ಇಣಿಕಿ ನೋಡಿದ್ದರಿಂದ, ಯೆಹೋವ ದೇವರು ಅವರೊಳಗೆ ಎಪ್ಪತ್ತು ಮಂದಿಯನ್ನು ಕಠಿಣವಾಗಿ ದಂಡಿಸಿದರು.
20 ೨೦ ಪರಿಶುದ್ಧ ದೇವರಾದ ಯೆಹೋವನ ಮುಂದೆ ಯಾರು ನಿಂತಾರು? ನಮ್ಮನ್ನು ಬಿಟ್ಟು ಈತನು ಹೋಗತಕ್ಕ ಸ್ಥಳ ಯಾವುದು ಎಂದು ಮಾತನಾಡಿಕೊಂಡು
ಯೆಹೋವ ದೇವರು ತಮ್ಮಲ್ಲಿ ದೊಡ್ಡ ನಾಶನಮಾಡಿದ್ದರಿಂದ, ಬೇತ್ ಷೆಮೆಷ್ ಊರಿನವರು ದುಃಖಪಟ್ಟು, “ಈ ಪರಿಶುದ್ಧ ದೇವರಾದ ಯೆಹೋವ ದೇವರ ಮುಂದೆ ನಿಲ್ಲತಕ್ಕವನ್ಯಾರು? ಇಲ್ಲಿಂದ ಮಂಜೂಷವು ಎಲ್ಲಿಗೆ ಹೋಗುವುದು?” ಎಂದು ಹೇಳಿದರು.
21 ೨೧ ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ಫಿಲಿಷ್ಟಿಯರು ಯೆಹೋವನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿರಿ” ಎಂದು ಹೇಳಿದರು.
ಅವರು ಕಿರ್ಯತ್ ಯಾರೀಮಿನ ನಿವಾಸಿಗಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರು ಯೆಹೋವ ದೇವರ ಮಂಜೂಷವನ್ನು ತಿರುಗಿ ಕಳುಹಿಸಿದ್ದಾರೆ, ನೀವು ಬಂದು ಅದನ್ನು ನಿಮ್ಮ ಬಳಿಗೆ ತೆಗೆದುಕೊಂಡು ಹೋಗಿರಿ,” ಎಂದು ಹೇಳಿದರು.

< ಸಮುವೇಲನು - ಪ್ರಥಮ ಭಾಗ 6 >