< ಕೀರ್ತನೆಗಳು 105 >

1 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ.
ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ; ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
2 ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ; ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
3 ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.
ದೇವರ ಪರಿಶುದ್ಧ ನಾಮವನ್ನು ಹೊಗಳಿರಿ; ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
4 ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ, ಅವರ ಮುಖವನ್ನು ಯಾವಾಗಲೂ ಹುಡುಕಿರಿ.
5 ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು,
ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ, ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
6 ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ.
ದೇವರ ಸೇವಕನಾದ ಅಬ್ರಹಾಮನ ಸಂತತಿಯೇ, ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
7 ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ. ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
8 ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ, ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.
ದೇವರು ತಮ್ಮ ಒಡಂಬಡಿಕೆಯನ್ನೂ, ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
9 ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ತನ್ನ ವಾಗ್ದಾನಗಳನ್ನು ಕೊಟ್ಟನು.
ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ, ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾರೆ.
10 ೧೦ ಅದು ರಾಜಶಾಸನದಂತೆ ಇರುವುದೆಂದು ಇಸ್ರಾಯೇಲನಿಗೂ ಮಾತುಕೊಟ್ಟನು.
ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು; ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
11 ೧೧ ಅವರಲ್ಲಿ ಸ್ವಲ್ಪ ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳಾಗಿ ಇರುವಾಗಲೇ,
“ನಾನು ನಿಮಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
12 ೧೨ ಆತನು, “ನಿಮಗೆ ಈ ದೇಶವನ್ನು ಕೊಡುವೆನು; ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು” ಎಂದು ಹೇಳಿದನು.
ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ, ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
13 ೧೩ ಅವರು ದೇಶದಿಂದ ದೇಶಕ್ಕೂ, ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಾಗ,
ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
14 ೧೪ ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ,
ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು. ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ ಹೀಗೆ ಹೇಳಿದರು:
15 ೧೫ “ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು” ಎಂದು ಹೇಳಿದನು.
“ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.”
16 ೧೬ ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ, ಆಹಾರವನ್ನು ನಾಶಮಾಡಿಬಿಟ್ಟನು.
ದೇವರು ಕ್ಷಾಮವನ್ನು ದೇಶದಲ್ಲಿ ಅನುಮತಿಸಿದರು. ಆಹಾರದ ಒದಗುವಿಕೆಯನ್ನು ಸ್ವಲ್ಪಕಾಲ ನಿಲ್ಲಿಸಿದ್ದರು.
17 ೧೭ ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು; ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
ಆಗ ದೇವರು ಅವರ ಮುಂದೆ ಒಬ್ಬ ಮನುಷ್ಯನನ್ನು ಕಳುಹಿಸಿದರು. ಅವನೇ ದಾಸನಾಗಿ ಮಾರಲಾದ ಯೋಸೇಫನು.
18 ೧೮ ಅವನ ಕಾಲುಗಳು ಬೇಡಿಗಳಿಂದ ಕಟ್ಟಲ್ಪಟ್ಟವು; ಕಬ್ಬಿಣದ ಕೊರಳಪಟ್ಟಿಯಿಂದ ಅವನು ಬಂಧಿತನಾದನು.
ಸಂಕೋಲೆಗಳಿಂದ ಅವನ ಕಾಲನ್ನು ನೋಯಿಸಿದರು; ಅವನನ್ನು ಕಬ್ಬಿಣದ ಬೇಡಿಗಳಲ್ಲಿ ಇರಿಸಿದರು.
19 ೧೯ ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು.
ಯೆಹೋವ ದೇವರ ಮುಂತಿಳಿಸಿದ ವಾಕ್ಯವು ನೆರವೇರುವವರೆಗೆ ಅವನು ದೇವರ ಮಾತಿನಿಂದ ಪರಿಶೋಧಿತನಾದನು.
20 ೨೦ ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು; ಜನಾಧಿಪತಿಯು ಅವನನ್ನು ಬಿಡಿಸಿದನು.
ಅರಸನು ಅವನನ್ನು ಕರೆದು ಸೆರೆಯಿಂದ ಬಿಡಿಸಿದನು. ಹೌದು, ಜನಗಳ ಅಧಿಪತಿಯಿಂದ ಅವನು ಬಿಡುಗಡೆಯಾದನು.
21 ೨೧ ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ, ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು.
ಅರಸನು ಅವನನ್ನು ತನ್ನ ಮನೆಗೆ ಯಜಮಾನನಾಗಿಯೂ, ತನ್ನ ಎಲ್ಲಾ ಆಸ್ತಿಯ ಮೇಲೆ ಅಧಿಪತಿಯಾಗಿಯೂ,
22 ೨೨ ತನ್ನ ಪ್ರಧಾನರನ್ನು ಇಷ್ಟಾನುಸಾರವಾಗಿ ಬಂಧಿಸುವುದಕ್ಕೂ, ತನ್ನ ಮಂತ್ರಿಗಳಿಗೆ ಬುದ್ಧಿಕಲಿಸುವುದಕ್ಕೂ ಅವನಿಗೆ ಅಧಿಕಾರಕೊಟ್ಟನು.
ತನ್ನ ಪ್ರಧಾನರಿಗೆ ತನ್ನ ಇಷ್ಟ ಪ್ರಕಾರ ಶಿಕ್ಷಣ ಕೊಡುವುದಕ್ಕೂ, ತನ್ನ ಜ್ಞಾನವನ್ನು ಮಂತ್ರಿಗಳಿಗೆ ಬೋಧಿಸುವುದಕ್ಕೂ ಯೋಸೇಫನನ್ನು ನೇಮಿಸಿದನು.
23 ೨೩ ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪ್ರವಾಸಿಯಾದನು.
ಅನಂತರ ಇಸ್ರಾಯೇಲನು ಈಜಿಪ್ಟಿಗೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
24 ೨೪ ದೇವರು ತನ್ನ ಜನರನ್ನು ಬಹಳವಾಗಿ ವೃದ್ಧಿಮಾಡಿ, ಅವರು ಶತ್ರುಗಳಿಗಿಂತ ಬಲಿಷ್ಠರಾಗುವಂತೆ ಮಾಡಿದನು.
ದೇವರು ತಮ್ಮ ಜನರನ್ನು ಬಹಳ ಅಭಿವೃದ್ಧಿಗೊಳಿಸಿ, ಅವರನ್ನು ವೈರಿಗಳಿಗಿಂತ ಬಲಿಷ್ಟರನ್ನಾಗಿ ಮಾಡಿದರು.
25 ೨೫ ಆತನು ಆ ದೇಶದವರ ಹೃದಯವನ್ನು ಮಾರ್ಪಡಿಸಿದ್ದರಿಂದ, ಅವರು ಆತನ ಜನರನ್ನು ದ್ವೇಷಿಸಿ, ಆತನ ಸೇವಕರನ್ನು ಕುಯುಕ್ತಿಯಿಂದ ನಡೆಸಿದರು.
ತಮ್ಮ ಜನರನ್ನು ದ್ವೇಷಿಸುವಂತೆಯೂ, ತಮ್ಮ ಸೇವಕರನ್ನು ಕುಯುಕ್ತಿಯಿಂದ ನಡೆಸುವಂತೆಯೂ ದೇವರು ಅವರ ಹೃದಯವನ್ನು ಮಾರ್ಪಡಿಸಿದನು.
26 ೨೬ ಆಗ ಆತನು ತನ್ನ ಸೇವಕನಾದ ಮೋಶೆಯನ್ನೂ, ತಾನು ಆರಿಸಿಕೊಂಡ ಆರೋನನನ್ನೂ ಕಳುಹಿಸಿದನು.
ದೇವರು ತಮ್ಮ ಸೇವಕ ಮೋಶೆಯನ್ನೂ, ಆಯ್ದುಕೊಂಡ ಆರೋನನನ್ನೂ ಕಳುಹಿಸಿದರು.
27 ೨೭ ಅವರು ಹಾಮನ ದೇಶದವರ ಮಧ್ಯದಲ್ಲಿ, ಆತನು ಆಜ್ಞಾಪಿಸಿದ ವಿವಿಧ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದರು.
ಇವರು ದೇವರ ಸೂಚಕಕಾರ್ಯಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.
28 ೨೮ ಆತನು ಕತ್ತಲೆಯನ್ನು ಕಳುಹಿಸಲು ಕತ್ತಲೆಯಾಯಿತು. ಐಗುಪ್ತ್ಯರು ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ.
ದೇವರು ಕತ್ತಲೆಯನ್ನು ಕಳುಹಿಸಿ, ದೇಶವನ್ನೆಲ್ಲಾ ಕತ್ತಲು ಮಾಡಿದರು. ದೇವರ ಮಾತಿಗೆ ಈಜಿಪ್ಟನವರು ವಿರೋಧವಾಗಿ ತಿರುಗಿ ಬಿದ್ದರಲ್ಲವೇ?
29 ೨೯ ಆತನು ಐಗುಪ್ತ್ಯರ ನೀರನ್ನು ರಕ್ತಮಾಡಿ, ಮೀನುಗಳನ್ನು ಸಾಯಿಸಿದನು.
ದೇವರು ಅವರ ನೀರನ್ನು ರಕ್ತವಾಗಿ ಮಾರ್ಪಡಿಸಿದರು. ಅವರ ಮೀನುಗಳನ್ನು ನಾಶಮಾಡಿದರು.
30 ೩೦ ಅವರ ದೇಶದಲ್ಲೆಲ್ಲಾ ಕಪ್ಪೆಗಳು ತುಂಬಿಕೊಂಡವು; ಅರಮನೆಯಲ್ಲಿಯೂ ವ್ಯಾಪಿಸಿಕೊಂಡವು.
ಅವರ ದೇಶವು ಕಪ್ಪೆಗಳಿಂದ ತುಂಬಿಕೊಂಡಿತು; ಅವರ ಅರಸುಗಳ ಕೊಠಡಿಗಳಲ್ಲಿ ಸಹ ಅವು ನುಗ್ಗಿದವು.
31 ೩೧ ಆತನು ಆಜ್ಞಾಪಿಸಲು ಅವರ ಎಲ್ಲಾ ಪ್ರಾಂತ್ಯಗಳಲ್ಲಿ, ವಿಷದ ಹುಳಗಳೂ, ಹೇನುಗಳೂ ಉಂಟಾದವು.
ದೇವರು ಆಜ್ಞಾಪಿಸಲು ನೊಣದ ಗುಂಪುಗಳೂ, ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.
32 ೩೨ ಆತನು ಅವರ ದೇಶದಲ್ಲಿ ಕಲ್ಮಳೆಯನ್ನು, ಅಗ್ನಿಜ್ವಾಲೆಯನ್ನು ಬರಮಾಡಿ,
ದೇವರು ಕಲ್ಮಳೆಯನ್ನೂ, ಅಗ್ನಿ ಜ್ವಾಲೆಗಳನ್ನೂ ಅವರ ದೇಶದಲ್ಲಿ ಬರಮಾಡಿದರು.
33 ೩೩ ಅವರ ದ್ರಾಕ್ಷಾಲತೆಗಳನ್ನು, ಅಂಜೂರದ ಗಿಡಗಳನ್ನು ನಾಶಮಾಡಿ, ಅವರ ಪ್ರಾಂತ್ಯಗಳಲ್ಲಿದ್ದ ಮರಗಳನ್ನು ಮುರಿದುಬಿಟ್ಟನು.
ಅವರ ದ್ರಾಕ್ಷಿಯ ಬಳ್ಳಿ, ಅಂಜೂರದ ಗಿಡಗಳು ಹಾಗೂ ಅವರ ಮೇರೆಗಳ ಮರಗಳು ಮುರಿದು ಬಿದ್ದವು.
34 ೩೪ ಆತನು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದಷ್ಟು ಜಿಟ್ಟೆಹುಳಗಳೂ ಬಂದು,
ದೇವರು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದ ಕಂಬಳಿ ಹುಳುಗಳೂ ಬಂದವು.
35 ೩೫ ಅವರ ದೇಶದಲ್ಲಿದ್ದ ಎಲ್ಲಾ ಪೈರುಗಳನ್ನು, ಭೂಮಿಯ ಬೆಳೆಗಳನ್ನು ತಿಂದುಬಿಟ್ಟವು.
ಅವು ಈಜಿಪ್ಟ್ ದೇಶದಲ್ಲಿ ಎಲ್ಲಾ ಸಸ್ಯಗಳನ್ನು ತಿಂದುಬಿಟ್ಟವು; ಅವರ ಭೂಮಿಯ ಫಲಗಳನ್ನು ಸಹ ತಿಂದುಬಿಟ್ಟವು.
36 ೩೬ ಅವನು ಆ ದೇಶದವರ ವೀರ್ಯಕ್ಕೆ ಪ್ರಥಮಫಲವಾಗಿದ್ದ, ಚೊಚ್ಚಲ ಮಕ್ಕಳನ್ನು ಸಂಹರಿಸಿದನು.
ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲ ಮಕ್ಕಳೂ ಅವರ ಎಲ್ಲಾ ಪ್ರಮುಖರೂ ದೇವರ ಬಾಧೆಗೆ ಒಳಗಾದರು.
37 ೩೭ ಇಸ್ರಾಯೇಲರನ್ನು ಬೆಳ್ಳಿ, ಬಂಗಾರಗಳ ಸಹಿತವಾಗಿ ಹೊರಗೆ ಬರಮಾಡಿದನು; ಅವರ ಕುಲಗಳಲ್ಲಿ ಎಡವುವವನು ಒಬ್ಬನಾದರೂ ಇರಲಿಲ್ಲ.
ದೇವರು ಬೆಳ್ಳಿ ಬಂಗಾರಗಳ ಸಂಗಡ ಇಸ್ರಾಯೇಲರನ್ನು ಹೊರಗೆ ಬರಮಾಡಿದರು. ಅವರ ಗೋತ್ರಗಳಲ್ಲಿ ಬಲಹೀನನಾದ ಒಬ್ಬನೂ ಇರಲಿಲ್ಲ.
38 ೩೮ ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆಯುಳ್ಳವರಾದ್ದರಿಂದ, ಅವರು ಹೊರಟು ಹೋದದ್ದಕ್ಕೆ ಸಂತೋಷಿಸಿದರು.
ಅವರೆಲ್ಲರೂ ಹೊರಗೆ ಹೋಗುವಾಗ ಈಜಿಪ್ಟ್ ದೇಶವು ಸಂತೋಷಿಸಿತು; ಏಕೆಂದರೆ ಈಜಿಪ್ಟಿನವರಿಗೆ ಅವರನ್ನು ಕುರಿತು ಹೆದರಿಕೆ ಇತ್ತು.
39 ೩೯ ಅವರಿಗೆ ಹಗಲಲ್ಲಿ ನೆರಳಿಗೋಸ್ಕರ ಮೋಡವನ್ನು, ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನು ಮೇಲೆ ಹರಡಿದನು.
ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.
40 ೪೦ ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು; ದಿವ್ಯ ಆಹಾರದಿಂದ ಅವರನ್ನು ತೃಪ್ತಿಗೊಳಿಸಿದನು.
ಅವರು ಕೇಳಿದಾಗ ದೇವರು ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ಆಹಾರದಿಂದ ಅವರನ್ನು ತೃಪ್ತಿಪಡಿಸಿದರು.
41 ೪೧ ಆತನು ಬಂಡೆಯನ್ನು ಸೀಳಲು ನೀರು ಚಿಮ್ಮಿ ಬಂದು, ಅರಣ್ಯದಲ್ಲಿ ನದಿಯಾಗಿ ಹರಿಯಿತು.
ದೇವರು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಮರುಭೂಮಿಯಲ್ಲಿ ನದಿಯಾಗಿ ಹರಿಯಿತು.
42 ೪೨ ಹೀಗೆ ಆತನು ತನ್ನ ಪರಿಶುದ್ಧ ವಚನವನ್ನೂ, ತನ್ನ ಸೇವಕನಾದ ಅಬ್ರಹಾಮನನ್ನೂ ನೆನಪುಮಾಡಿಕೊಂಡು
ಹೀಗೆ ದೇವರು ತಮ್ಮ ಪರಿಶುದ್ಧ ವಾಗ್ದಾನವನ್ನೂ, ತಮ್ಮ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕಮಾಡಿಕೊಂಡರು.
43 ೪೩ ತನ್ನ ಪ್ರಜೆಯು ಉಲ್ಲಾಸದಿಂದಲೂ, ತಾನು ಆರಿಸಿಕೊಂಡವರು ಉತ್ಸಾಹಧ್ವನಿಯಿಂದಲೂ ಹೊರಗೆ ಬರುವಂತೆ ಮಾಡಿದನು.
ದೇವರು ತಮ್ಮ ಜನರನ್ನು ಆನಂದದಿಂದಲೂ, ತಾವು ಆಯ್ದುಕೊಂಡವರನ್ನು ಉತ್ಸಾಹದಿಂದಲೂ ಹೊರತಂದರು.
44 ೪೪ ಆತನು ಅವರಿಗೆ ಪರಜನಾಂಗಗಳ ದೇಶವನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು.
ದೇವರು ಜನಾಂಗಗಳ ದೇಶಗಳನ್ನು ಅವರಿಗೆ ಕೊಟ್ಟರು. ಇಸ್ರಾಯೇಲರು ಇತರರ ಕಷ್ಟಾರ್ಜಿತವನ್ನು ತಮಗಾಗಿ ಸ್ವಾಧೀನಮಾಡಿಕೊಂಡರು.
45 ೪೫ ಅವರು ತನ್ನ ವಿಧಿಗಳನ್ನು ಕೈಕೊಂಡು, ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಯೆಹೋವನಿಗೆ ಸ್ತೋತ್ರ!
ದೇವರ ಸೂತ್ರಗಳನ್ನು ಕೈಗೊಂಡು, ಅವರ ನಿಯಮಗಳನ್ನು ಇಸ್ರಾಯೇಲರು ಕಾಯಬೇಕೆಂಬ ಉದ್ದೇಶದಿಂದಲೇ ಹೀಗೆಲ್ಲಾ ಆಯಿತು. ಯೆಹೋವ ದೇವರನ್ನು ಸ್ತುತಿಸಿರಿ.

< ಕೀರ್ತನೆಗಳು 105 >